ಮಂಗಳವಾರ, ಮಾರ್ಚ್ 22, 2011

ಆಂಡಯ್ಯನ ಕಬ್ಬಿಗರ ಕಾವನ್-ಇದರಲ್ಲಿ ಬಳಕೆಯಾಗಿರುವ ಅಣ್ಣೆಗನ್ನಡ ಪದಗಳು

ಮಿಳಿರ್ = flourish, prosper = ಏಳಿಗೆ, ಬಲ
ಜಗುೞ್ (ಜಗುಳ್) = slip, move off, slip, drop down,= ಜಾರು,
ಚೂಟಿ = ಸೂಟಿ = quick,smart
ನೀರಾ = Handsome Man
ನೀರೆ = beautiful woman, ಕಡುನೀಱೆ ( most beautiful woman)
ಪೊಣೆ = bond, bail
ಸುಸಿಲ್ = sexual embrace
ಸುಂದು = to lie down, repose, sleep
ಕಣ್ಮಲರ್ = ಕಣ್+ಮಲರ್ = ಕಣ್+ಹೂವು = ಹೂವಿನಂತ ಕಣ್ಣುಗಳು,
ಪೊಣರ್ = union
ದುಗುಲ = ನೆಯ್ದ ರೇಶಿಮೆ, woven silk, or fine cloth
ಅೞವೆ = mouth of a river in which the tide ebbs and flows, bar ( ತುಳು: ಅಲುವೆ )
ಸೇಸೆ = ಅಕ್ಶತೆ
ಮೇಲೂರ್ = ಸ್ವರ್ಗ
ಸಿರಿವೆಣ್ = ಲಕುಮಿ
ಬೆಂಚೆ = ಚಿಕ್ಕ ಕೊಳ
ಓವು = to take care of, protect
ಇರ್ಕೆವನೆ =ವಾಸದ ಮನೆ
ಪಗಲಾಣ್ಮ = ನೇಸರ, ಸೂರ್ಯ, sun
ಪಾಂಗು = ರೀತಿ
ಮಸಕ = passion, vehement emotion
ಮುನ್ನೀರ್ = ಕಡಲು

ಮಂಗಳವಾರ, ಮಾರ್ಚ್ 15, 2011

ಯಾವ ಬಾಶೆಯೂ ಕೊಲೆಗಡುಕ ಅಲ್ಲ

ಶ್ರೀ ಜಿ.ವೆಂಕಟಸುಬ್ಬಯ್ಯನವರು ಪದೆ ಪದೆ ಇಂಗ್ಲಿಶ್ ’ಕೊಲೆಗಡುಕ’(ಇವತ್ತಿನ, ೧೫-೩-೨೦೧೧ ವರದಿಯ ಕೊಂಡಿ) ಭಾಷೆ ಎಂದು ಹೇಳುತ್ತಿರುವುದು ಸರಿಯಲ್ಲ. ಯಾಕಂದರೆ:-

ದಿಟವಾಗಲೂ ಯಾವುದೇ ನುಡಿ ತನ್ನಿಂತಾನೆ ಕೊಲೆಗಡುಕ ಬಾಶೆ ಆಗುವುದಿಲ್ಲ. ಈವೊತ್ತು ಇಂಗ್ಲಿಶಿಗೆ ಹೆಚ್ಚಿನ ಗೌರವ, ಮನ್ನಣೆ ಸಿಗುತ್ತಿರುವುದು ಕೇವಲ ಆ ಬಾಶೆಯಿಂದಲ್ಲ ಬದಲಾಗಿ ಅದರ ಮೂಲಕ ಹುಟ್ಟುತ್ತಿರುವ ಹೊಸ ಹೊಸ ಅರಿವಿನ ಪ್ರಕಾರಗಳಿಂದ.
ಇಂದು ಅರಿಮೆ ಮತ್ತು ಹೊಚ್ಚ ಹೊಸ ತಂತ್ರದರಿಮೆಗಳು ಹೆಚ್ಚಿನವು ಇಂಗ್ಲಿಶಿನಲ್ಲಿವೆ, ಹಾಗಾಗಿ ಈ ಆದುನಿಕ ಯುಗದಲ್ಲಿ ಇಂಗ್ಲಿಶ್ ಕಲಿತರೆ ಸುಲಬವಾಗಿ ಕೆಲಸ ಸಿಗುತ್ತದೆ ಮತ್ತು ಅದರಿಂದ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು. ಇದೊಂದೆ ಅಲ್ಲದೆ ಕೆಲವರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಇಂಗ್ಲಿಶ್ ಬಾಶೆ ಗೊತ್ತಿರುವವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಹೊಗಳಿಕೆ ದೊರೆಯುತ್ತಿದೆ. ನಾವು ನಮ್ಮ ಕನ್ನಡ ನುಡಿಯಲ್ಲಿ ಇವತ್ತಿನ ಜಗತ್ತಿಗೆ ಬೇಕಾದ ಹೊಸ ಹೊಸ ಅರಿವಿನ ಪ್ರಕಾರಗಳನ್ನು ಹುಟ್ಟು ಹಾಕದೆ ಇನ್ನು ಸಾಹಿತ್ಯ ಮತ್ತು ಕವನಕ್ಕೆ ಕನ್ನಡವನ್ನು ಸೀಮಿತಗೊಳಿಸಿ ತಪ್ಪು ಮಾಡುತ್ತಿದ್ದೇವೆ. ಹಾಗಾಗಿ ಇಂಗ್ಲಿಶ್ ನಮ್ಮ ಬದುಕಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಾ ಇದೆ. ಇದಕ್ಕಿರುವ ಉಪಾಯವೆಂದರೆ ಕನ್ನಡವನ್ನು ತಂತ್ರಗ್ನಾನದ ಮತ್ತು ಮಾರುಕಟ್ಟೆಯ ನುಡಿಯಾಗಿ ನಾವು ಬೆಳಸಬೇಕಾಗಿದೆ. ಹೊಸ ಜಗತ್ತಿನ ’ಬೇಕು’(ಅಗತ್ಯ)ಗಳಿಗೆ ನಾವು ಕನ್ನಡವನ್ನು ಅಣಿಗೊಳಿಸದೆ ಬರಿ ಇಂಗ್ಲಿಶನ್ನು ದೂರುವುದು ಸರಿಯಲ್ಲ. ನಾವು ಮಾಡಿದ ತಪ್ಪುಗಳಿಗೆಲ್ಲಾ ಇಂಗ್ಲಿಶನ್ನು ಹೊಣೆಯಾಗಿಸಿ ಅದರ ಮೇಲೆ ಗೂಬೆ ಕೂರಿಸುವುದು ಯಾವ ರೀತಿಯಲ್ಲೂ ಒಪ್ಪತಕ್ಕದ್ದಲ್ಲ.

[ಇದೇ ಬರಹ ಓಲೆಯಾಗಿ ೧೮ ಮಾರ್ಚ್ ೨೦೧೧ ಪ್ರಜಾವಾಣಿಯ ’ವಾಚಕರವಾಣಿ’ಯಲ್ಲಿ ಬಂದಿದೆ]

ಮಿಂಬಲೆ

internet ಎಂಬ ಪದಕ್ಕೆ ಈಗ ಕನ್ನಡದಲ್ಲಿ ಬಳಕೆಯಲ್ಲಿರುವ ಪದ ’ಅಂತರ್ಜಾಲ’/ಅಂತರಜಾಲ. ಇದು ಸಂಸ್ಕ್ರುತ ಪದ.ಅದರ ಬದಲು ಕನ್ನಡದ್ದೇ ಆದ ’ಮಿಂಬಲೆ’ ಎಂಬ ಪದ ಬಳಸಬಹುದು. ಈಗಾಗಲೆ ಅದನ್ನ ಕೆಲವರು ಬಳಸುತ್ತಿದ್ದಾರೆ.

ಅದೇನೆಂದರೆ
ಮಿನ್+ಬಲೆ = ಮಿಂಬಲೆ

ಯಾಕಂದ್ರೆ
ಮಿನ್ ಎಂಬ ಪದದಿಂದ ಮಿಂ-ಚು, ಮಿನು-ಗು (ಮಿನ್ ಅಂದರೆ ಹೊಳೆಯುವುದು ಎಂಬ ತಿರುಳಿದೆ)
ಕೆನ್ ಎಂಬ ಪದದಿಂದ ಕೆಂ-ಚು (ಕೆನ್ ಅಂದರೆ ಕೆಂಪು)
ಹೆಣೆ ಎಂಬ ಪದದಿಂದ ಹೆಂ-ಚು (ಹೆಂಚುಗಳು ಒಂದಕ್ಕೊಂದು ಹೆಣೆದುಕೊಂಡಿರುವುದರಿಂದಲೇ ಅದಕ್ಕೆ ಆ ಪದ ಹುಟ್ಟಿರುವುದು)
ಕೀರ್ ಎಂಬ ಪದದಿಂದ್ ಕಿರ್-ಚು=ಕಿಚ್ಚು (ಬೆಂಕಿ) ಬಳಕೆ: ಕಡ್ಡಿ ಕೀರಿ ಒಲೆ ಹಚ್ಚಿದಳು

ತುಳುವಿನ ಕೆಲವು ನಿಬ್ಬರಗಳು

ತುಳುವಿನ ಕೆಲವು ನಿಬ್ಬರಗಳು:-
ತುಳುನಾಡಿನಲ್ಲಿ ಸೇಡಿಯಾಪು ಎಂಬ ಊರಿದೆ ಅನ್ಸುತ್ತೆ ( ’ಸೇಡಿಯಾಪು ಕೃಷ್ಣಬಟ್ಟ’ರು ಹೆಸರಿನಲ್ಲಿರುವಂತೆ)
ಸೇಡಿಯಾಪು = ಸೇಡಿ+ಕಾಪು = ಜೇಡಿ+ಕಾಪು ಅಂದರೆ ಜೇಡಿ ಮಣ್ಣಿನಿಂದ ಮಾಡಿದ ಕಾವಲು/ತಡೆ.

ಇಲ್ಲಿ ಪದಗಳ ಸೇರಿಕೆಯಾದ ಮೇಲೆ ’ಕ’ ಕಾರ ’ಯ’ಕಾರ ವಾಗಿರುವುದನ್ನ ಗಮನಿಸಿ. ಇದು ತುಳುವಿನ ನಿಬ್ಬರ.
ಕನ್ನಡದ ಸೇರಿಕೆ ಕಟ್ಟಿನ ಪ್ರಕಾರ ಅದು ಸೇಡಿಗಾಪು ಆಗಬೇಕಿತ್ತು.

ಅದೇ ತರ ತುಳುವಿನಲ್ಲಿ ಮಳೆ(ರೆ)+ಕಾಲ => ಮರ್ಯಾಲ ಆಗುತ್ತೆ ಹೊರತು ಮಳೆಗಾಲ ಆಗಲ್ಲ.

ತುಳು ಗೊತ್ತಿರುವವರು ಈ ತರ ಹೆಚ್ಚಿನ ಪದಗಳು ಗೊತ್ತಿದ್ದರೆ ತಿಳಿಸಿ

ಭಾನುವಾರ, ಮಾರ್ಚ್ 06, 2011

ಮರುಸೊಳ್ಳು/ಮರುಸೊಡರು ಅಂದರೇನು?

’ಮರ್ಸೊಳ್ಳು’, ’ಮರುಸೊಳ್ಳು’, ’ಮರುಸೊಡರು’ ಎಂಬ ಪದ ನಮ್ಮ ಕಡೆ ( ಮಯ್ಸೂರ್, ಮಂಡ್ಯ, ಚಾ.ನಗರ) ಬಳಕೆಯಲ್ಲಿದೆ.
ಮೊದಲೆಲ್ಲ ಮದುವೆ, ಹೆಸರಿಡುವುದು,ತೊಟ್ಟಿಲು ತರುವುದು ಮತ್ತಿತರ ಒಳ್ಳೆ ಕೆಲಸಗಳನ್ನು ಮನೆಯಲ್ಲೇ ನಡೆಸಲಾಗುತ್ತಿತ್ತು. ಆಗ ಮನೆಯಲ್ಲೇ ಆ ಹಬ್ಬದ ಇಲ್ಲವೆ ಒಳ್ಳೆಯ ಕೆಲಸದ ಹಗಲಿನಲ್ಲೂ ’ಸೊಡರು’/ದೀಪವನ್ನು (ಇದನ್ನು ದೀಪಾಲೆ ಕಂಬ ಅಂತನೂ ಹೇಳುತ್ತಾರೆ)ಹಚ್ಚಲಾಗುತ್ತಿತ್ತು.

ಒಳ್ಳೆ ದಿನದ(ಮದುವೆ ಇಲ್ಲವೆ ಹೆಸರಿಡುವುದು ಇಲ್ಲವೆ ತೊಟ್ಟಿಲು ತರುವುದು) ಮರುದಿನ ಕೆಲವು ಕಟ್ಟುಪಾಡುಗಳನ್ನು ನಮ್ಮ ಹಳ್ಳಿಯ ಮಂದಿ ಪಾಲಿಸುತ್ತಾರೆ. ಅವುಗಳಲ್ಲಿ
೧. ಆ ಒಳ್ಳೆಯ ಕೆಲಸದ ಮುಕ್ಯವಾದ ವ್ಯಕ್ತಿಗಳು ಅಂದರೆ ಮದುಮಕ್ಕಳು
೨. ತೊಟ್ಟಿಲು ತಂದ ಹಬ್ಬವಾದರೆ ಆ ಮಗುವು

’ಮರುಸೊಡರ’ನ್ನು ನೋಡಬಾರದು ಎಂಬ ನಂಬಿಕೆ ಇದೆ. ಅಂದರೆ ಸೊಡರು ಹಚ್ಚಿದ ದಿನದ ಮಾರನೆ ದಿನ ಆ ಸೊಡರು ಹಚ್ಚಿದ ಮನೆಯಲ್ಲಿ ಇರಬಾರದು ಅಂತ. ಹಾಗಾಗಿ ’ಮರುಸೊಡರು ನಾಳು’/ ಮರುಸೊಳ್ಳು/ಮರ್ಸೊಳ್ಳು ಎಂಬ ಪದ ಬಳಕೆಯಲ್ಲಿದೆ.

ಈವೊತ್ತಿನ ಸಾಪ್ತಾಹಿಕ ಪುರವಣಿಯಲ್ಲಿರುವ ತಪ್ಪುಗಳು/ಗೊಂದಲಗಳು

ಈವೊತ್ತಿನ((೬-೩-೨೦೧೧) ಸಾಪ್ತಾಹಿಕ ಪುರವಣಿಯಲ್ಲಿ ಬಂದಿರುವ ಬರಹಗಳಲ್ಲಿ ಆಗಿರುವ ತಪ್ಪುಗಳು ಮತ್ತು ಗೊಂದಲಗಳು ಎತ್ತಿ ತೋರಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ.

ಯು.ಬಿ.ಪವನಜ ಅವರ ಬರಹ(ನಮ್ಮ ಭಾಷೆಗೆ e ಭಾಷ್ಯ)ದಲ್ಲಿ " ಒಂದು ಭಾಷೆಯನ್ನು ವೈಜ್ಞಾನಿಕವಾಗಿ ವಿಂಗಡಿಸುವ ಸೂತ್ರವನ್ನು ಪ್ರಪಂಚದ ಯಾವುದೇ ಭಾಷೆಗೆ ಪ್ರಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ."
ಮೊದಲಿಗೆ, ಇಲ್ಲಿ ’ಪ್ರಪ್ರಥಮ’ ಎಂಬ ಪದದ ಬಳಕೆಯೇ ತಪ್ಪು ಯಾಕಂದರೆ ’ಪ್ರಥಮ’ ಇದು ಸಂಸ್ಕೃತ ಮೂಲದ ಪದ. ಕನ್ನಡದಲ್ಲಿ ಇರುವ ಪದಬಳಕೆಗಳಾದ ’ಮೊತ್ತಮೊದಲು’, ’ತುತ್ತತುದಿ’, ’ಕಟ್ಟಕಡೆ’ ಇವುಗಳಲ್ಲಿರುವ ಮೊದಲು, ಕಡೆ, ತುದಿ ಇವೆಲ್ಲ ಕನ್ನಡ ಬೇರಿನ ಪದಗಳು ಅದರ ನಿರುಕ್ತವನ್ನು ಹೀಗೆ ಬಿಡಿಸಬಹುದು.
ಮೊದಲು + ಮೊದಲು = ಮೊದಮೊದಲು ( ಇದನ್ನೇ ಒತ್ತಿ ಹೇಳಬೇಕಾದರೆ) => ಮೊತ್-ಮೊದಲು= ಮೊತ್ತಮೊದಲು. ಇಲ್ಲಿ ’ದ್’(ಕೊರಲಿಸಿದ)ಕ್ಕೆ ಬದಲಾಗಿ ಅದೇ ಗುಂಪಿನ ’ತ್’(ಕೊರಲಿಸದ) ಅಕ್ಷರವು ಬಂದಿದೆ. ಇದು ಕನ್ನಡದ್ದೇ ಆದ ಪದಗಳಿಗೆ ಒಗ್ಗುವ ಪದಬಳಕೆ. ಆದರೆ ಈ ಚಳಕ ಸಂಸ್ಕೃತ ಪದಗಳಾದ ’ಪ್ರಥಮ’ ಎಂಬುದಕ್ಕೆ ಒಗ್ಗುವುದಿಲ್ಲ. ಒಂದು ವೇಳೆ ಅದನ್ನ ಬಳಸಿದರೆ ಕನ್ನಡವೂ ಅಲ್ಲದ ಸಂಸ್ಕೃತವೂ ಅಲ್ಲದ ’ಎಡಬಿಡಂಗಿ’/’ತ್ರಿಶಂಕು’ ಪದಗಳೆಂದು ಕರೆಯಬೇಕಾಗುತ್ತದೆ.

ಎರಡನೆಯದಾಗಿ, ಇಲ್ಲಿ ’ವೈಙ್ಞಾನಿಕ ವಿಂಗಡಣೆ’ ಅಂದರೆ ಏನು ಎಂಬುದನ್ನ ಬರಹಗಾರರು ಹೇಳಿಲ್ಲ. ವೈಙ್ಞಾನಿಕವಾಗಿ ನೋಡಿದರೆ ಪಾಣಿನಿಯು ಬರೆದಿರುವ ವ್ಯಾಕರಣದಲ್ಲಿ ಲಿಂಗ ನಿರ್ಧರಿಸುವ ವಿಧಾನ ಸರಿಯಿಲ್ಲ. ದಾರಾ( ಹೆಂಡತಿ) ಎಂಬ ಪದ ’ಪುಲ್ಲಿಂಗ’ ಎಂದು ಹೇಳಲಾಗಿದೆ. (dara (p. 115) [ 2. dârá ] m. (gnly.) pl. wife: dârân pra kri, marry a wife). ಇದೇ ರೀತಿ ಸಂಸ್ಕೃತದ ವ್ಯಾಕರಣದಲ್ಲಿ ಆಗಿರುವ ಎಡವಟ್ಟುಗಳು ಹಲವಿವೆ. ಯಾವ ರೀತಿಯಲ್ಲಿ ಇದು ವೈಙ್ಞಾನಿಕ ?
ಹಾಗಾಗಿ ಆಯ ಭಾಷೆಯ ವ್ಯಾಕರಣ ಆ ಭಾಷೆಯ ಮಟ್ಟಿಗೆ ಸರಿಯಿರಬಹುದು. ಆದ್ದರಿಂದ ’ಒಂದು ಭಾಷೆಯನ್ನು ವೈಙ್ಜಾನಿಕವಾಗಿ ವಿಂಗಡಿಸುವ ಸೂತ್ರವನ್ನು ಯಾವುದೇ ಭಾಷೆಗೆ ಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ’ ಎಂದು ಹೇಳುವುದು ತಪ್ಪಾಗುತ್ತದೆ ಮತ್ತು ಹಲವು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ.

ಮೂರನಯದಾಗಿ, "ಆತನಿಗೆ ‘ಸಹಜಭಾಷಾ ಸಂಸ್ಕರಣೆ ಕ್ಷೇತ್ರದ ಜನಕ’ ಎಂಬ ಹೆಸರೂ ಇದೆ. "
ಪಾಣಿನಿಗೆ Natural Language Processing ಎಂದರೇನು ಎಂಬುದೇ ಗೊತ್ತಿರಲಿಲ್ಲ. ಇತ್ತೀಚೆಗೆ ಸುಮಾರು ೧೯೫೦ ರ ದಶಕದಲ್ಲಿ ಈ ಅರಿಮೆಯು ಅಂಬೆಗಾಲಿಡುತ್ತಿದ್ದುದನ್ನು ನಾವು wiki (http://en.wikipedia.org/wiki/Natural_language_processing) ಯಿಂದ ತಿಳಿದುಕೊಳ್ಳಬಹುದು. ಬರಹಗಾರರು ಹೇಗೆ ಪಾಣಿನಿಯನ್ನು ’ಸಂಸ್ಕರಣೆ ಕ್ಷೇತ್ರದ ಜನಕ’ ಎಂದು ಹೇಳಿದ್ದಾರೊ ತಿಳಿಯದು. ಇದಕ್ಕೆ ಅವರು ತಕ್ಕ ಪುರಾವೆಗಳನ್ನು ನೀಡಿಲ್ಲ.
ಇನ್ನು ಡಾ ಎ. ಸತ್ಯನಾರಾಯಣ ಅವರ ’ ಕನ್ನಡೀಕರಣ: ಆಗಿರುವುದೇನು? ಆಗಬೇಕಿರುವುದೇನು?’ ಎಂಬ ತಲೆಬರಹದಲ್ಲಿರುವ ’ಕನ್ನಡೀಕರಣ’ ಎಂಬ ಪದವೂ ತ್ರಿಶಂಕು/ಎಡಬಿಡಂಗಿ ಪದವಾಗಿದೆ.

ಕನ್ನಡ (ಕನ್ನಡದ್ದೇ ಆದ ಪದ) + ಕರಣ (ಸಂಸ್ಕೃತದ್ದೇ ಆದ ಪದ) => ಕನ್ನಡೀಕರಣ ಹೇಗೆ ಆಗುತ್ತದೆ? ಇದು ಯಾವ ಸಂಧಿ ಯಾರಿಗೆ ಗೊತ್ತು? ಇದರ ಬದಲು ಕನ್ನಡ+ಇಸು = ಕನ್ನಡಯಿಸು => ಕನ್ನಡಯ್ಸು=>ಕನ್ನಡಸು ಎಂಬ ಕನ್ನಡಕ್ಕೆ ಒಗ್ಗುವ ಪದವನ್ನು ಬಳಸಬಹುದು.
ಇದೇ ರೀತಿ ಇನ್ನೊಂದು ಪದ ಈಗಾಗಲೆ ಕನ್ನಡದಲ್ಲಿ ಬಳಕೆಯಲ್ಲಿದೆ , ಉದಾ: ಸೊಗ+ಇಸು = ಸೊಗಯಿಸು = ಸೊಗಸು

ಅನಂತ ಮೂರ್ತಿಯವರ ’ಅನುಸಂಧಾನ’ಕ್ಕೆ ಮಾರುಲಿ

ಮಾನ್ಯ ಶ್ರೀ ಅನಂತ ಮೂರ್ತಿಯವರು ಇತ್ತೀಚೆಗೆ ನಡೆದ ರಾಜ್ಯಸಬೆಯ ಚುನಾವಣೆಯಲ್ಲಿ ಕೆ.ಮರುಳಸಿದ್ದಪ್ಪನವರು ಸ್ಪರ್ದಿಸಿದುದನ್ನು ಸೆಕ್ಯುಲರ್ ಮಚ್ಚೆ, ಮಂಕುಬೂದಿ, ಚೇಶ್ಟೆ ಅಂತ ಪ್ರಜಾವಾಣಿಯ ’ಅನುಸಂಧಾನ’ ಎಂಬ ಅಂಕಣದಲ್ಲಿ ಹೀಗಳೆದಿದ್ದಾರೆ

ಆದರೆ ಕೆ.ಮರುಳಸಿದ್ದಪ್ಪನವರು ಒಬ್ಬ ಪಕ್ಶೇತರ ಅಭ್ಯರ್ತಿಯಾಗಿ ಸ್ಪರ್ದಿಸಿದ್ದರೆ ಹೊರತು ಕಾಂಗ್ರೆಸ್-ಜೆಡಿಎಸ್ ಪಕ್ಶಗಳಿಂದಲ್ಲ ಎಂಬುದನ್ನ ನಾವು ಗಮನಿಸಬೇಕು. ಅಲ್ಲದೆ ಒಕ್ಕೂಟ ವ್ಯವಸ್ತೆಯನ್ನು ಒಪ್ಪಿರುವ ನಾವು ರಾಜ್ಯಸಭೆಗೆ ಆಯ್ಕೆಯಾಗುವವರು
ಆಯ ರಾಜ್ಯದವರೇ ಆದ ಬುದ್ದಿ ಜೀವಿಗಳು ಇಲ್ಲವೆ ಆಯ ರಾಜ್ಯದ ನುಡಿ, ಸಂಸ್ಕೃತಿ ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರಿತವರು ಅಯ್ಕೆ ಆಗಿ ಬರಲಿ ಎಂಬುದು ಪ್ರಜಾಪ್ರಬುತ್ವದ ಸಿದ್ದಾಂತ ಮತ್ತು ಸಂವಿದಾನದ ಆಶಯ ಕೂಡ ಆಗಿರುವಾಗ ಮರುಳಸಿದ್ದಪ್ಪನವರು ಕಣಕ್ಕೆ ಇಳಿದದ್ದು ಸಮರ್ತನೀಯ. ರಾಶ್ಟ್ರೀಯ ಪಕ್ಶಗಳು ಒಕ್ಕೂಟ ವ್ಯವಸ್ತೆಯ ಆಶಯ ಮತ್ತು ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದಾಗ ಅದನ್ನು ವಿರೋದಿಸಿ ಮರುಳಸಿದ್ದಪ್ಪನವರು ಸೈದ್ದಾಂತಿಕ ನೆಲೆಯಲ್ಲಿ ಸ್ಪರ್ಧಿಸಿದರೆ ಹೊರತು ಚೇಶ್ಟೆಗಾಗಿ ಅಲ್ಲ. ಇಲ್ಲಿ ಸೋಲು-ಗೆಲುವು ಮುಕ್ಯವಲ್ಲ ಒಕ್ಕೂಟ ವ್ಯವಸ್ತೆಯ ಸೈದ್ದಾಂತಿಕ ನಿಲುವುಗಳನ್ನು ಎತ್ತಿ ಹಿಡಿಯುವ ಮತ್ತು ರಾಷ್ಟ್ರೀಯ ಪಕ್ಷಗಳ ’ಪ್ರಾದೇಶಿಕ ಆಶಯ’ಗಳ ವಿರೋಧಿ ನಿಲುವನ್ನು ಖಂಡಿಸುವ ವಿದಾನವಾಗಿ ಮರುಳಸಿದ್ದಪ್ಪನವರ ಸ್ಪರ್ಧೆಯನ್ನು ನಾವು ನೋಡಬೇಕಾಗುತ್ತದೆ. ಶಾಸಕರು ಕೂಡ ’ಮೊದಲು’ ಕನ್ನಡಿಗರೇ ಅಲ್ಲವೆ, ಆಮೇಲೆ ತಾನೆ ಬಿಜೆಪಿ ಇಲ್ಲವೆ ಕಾಂಗ್ರೆಸ್ಸಿನ ಪಕ್ಷದವರು; ಹಾಗಾಗಿ ’ಆತ್ಮಸಾಕ್ಶಿ’ ಆದಾರಿತ ವೋಟುಗಳನ್ನು ಕೇಳುವುದು ಕೆಟ್ಟ ರಾಜಕಾರಣವಾಗಲ್ಲ, ಅಲ್ಲದೆ ಇನ್ನೂ ’ಪ್ರಾದೇಶಿಕ ಆಶಯ’ದ ಮೇಲೆ ನಿಂತ ರಾಜಕಾರಣವಾಗಿ ಪ್ರಜಾಪ್ರಬುತ್ವದ ಮತ್ತು ಒಕ್ಕೂಟ ವ್ಯವಸ್ತೆಯ ಮೌಲ್ಯಗಳನ್ನು ಹೆಚ್ಚು ಗಟ್ಟಿಗೊಳಿಸುತ್ತದೆ.
ಇನ್ನು ಮುಂದಾದರೂ ರಾಶ್ಟ್ರೀಯ ಪಕ್ಶಗಳು ರಾಜ್ಯಸಬೆಗೆ ಅಭ್ಯರ್ತಿಗಳನ್ನು ಆರಿಸುವಾಗ ಎಚ್ಚರದಿಂದಿರಲಿ ಮತ್ತು ಒಕ್ಕೂಟ ವ್ಯವಸ್ತೆಗೆ ಬದ್ದವಾಗಿರಲಿ ಎನ್ನುವ ಎಚ್ಚರವನ್ನ ಮರುಳಸಿದ್ದಪ್ಪನವರು ಸ್ಪರ್ದಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಬಹುದು.

’ಪಡೆ’ದದ್ದು ಸಾಕು ಇನ್ಮೇಲೆ ’ಕೊಡೋ’ಣ

’ಇನ್ಪೋಸಿಸ್’ ಕಟ್ಟಿದ ಶ್ರೀ ನಾರಾಯಣ ಮೂರ್ತಿಯವರನ್ನು ’ವಿಶ್ವ ಕನ್ನಡ ಸಮ್ಮೇಳನ’ವನ್ನು ಉದ್ಘಾಟಕರನ್ನಾಗಿಸಿದ ವಿಷಯವನ್ನು ಇತ್ತೀಚೆಗೆ ತೀವ್ರ ಚರ್ಚೆಗೆ ಒಡ್ದಲಾಗಿದೆ. ಇದರ ಬಗ್ಗೆ ಒಂದೆರಡು ಮಾತು. ಮೂರ್ತಿಯವರು ಜಾಗತೀಕರಣದಿಂದಾಗುವ ಹೊಸ ಸಾಧ್ಯತೆಗಳನ್ನು ಚೆನ್ನಾಗಿ ಬಳಸಿಕೊಂಡು ಅರಿವಿನ ಮೇಲೆ(knowledge based) ಕಂಪನಿಗಳನ್ನ ಕಟ್ಟಿಜನರ ಹಣಕಾಸಿನ ಮಟ್ಟವನ್ನ ಹೆಚ್ಚಿಸಬಹುದೆಂದೂ ಅದರ ಮೂಲಕ ಬದುಕಿನ ಮಟ್ಟವನ್ನು ಸುಧಾರಿಸಬಹುದೆಂದು ತೋರಿಸಿಕೊಟ್ಟವರಲ್ಲಿ ಪ್ರಮುಖರು. ಇದಕ್ಕಾಗಿ ಅವರು ಅಬಿನಂದನಾರ್ಹರಲ್ಲದೆ ಇತರರಿಗೂ ಸ್ಪೂರ್ತಿಯ ಸೆಲೆಯಾಗಬಲ್ಲವರು. ಇದರಿಂದಾಗಿಯೇ ಮೂರ್ತಿಯವರು ಜಾಗತೀಕರಣದಿಂದ ಏನೆಲ್ಲ ’ಪಡೆ’ದು(ಇಂಗ್ಲಿಶ್, ಸಾಪ್ಟ್ ವೇರ್, ತಾಂತ್ರಿಕತೆ ಬಗೆಗಿನ ಅರಿವು ಇತ್ಯಾದಿ) ಕೊಳ್ಳಬಹುದೆಂದು ಚೆನ್ನಾಗಿ ತೋರಿಸಿಕೊಟ್ಟರು. ಈಗಲೂ ಹೆಚ್ಚಿನ ಜನರೂ ಜಾಗತೀಕರಣದಿಂದ ಆಗುವ ಬಳಕೆ ಇದೊಂದೆ ಅಂದರೆ ’ಪಡೆ’ಯುವುದೊಂದೇ ಎಂದು ತಿಳಿದಿದ್ದಾರೆ. ಅಂದರೆ ಇಂಗ್ಲಿಶಿನಿಂದಲೇ ನಮ್ಮ ಏಳಿಗೆ ಇಲ್ಲದಿದ್ದರೆ ನಾವು ಏಳಿಗೆ ಹೊಂದಲಾರೆವು ಎಂಬುದನ್ನ ’ಪಡೆ’ಯುವ ಗುಂಪಿನವರು ತಿಳಿದಿರುವಂತಿದೆ. ಆದರೆ ಜಾಗತೀಕರಣದಲ್ಲಿ ’ಕೊಡು’ವುದಕ್ಕೂ ಅಶ್ಟೆ ಅವಕಾಶಗಳಿವೆ ಎಂಬುದನ್ನ ನಾವು ಹೆಚ್ಚಾಗಿ ಗುರುತಿಸಿಲ್ಲ. ಇವತ್ತಿಗೂ ಜರ್ಮನಿ, ಜಪಾನ್ ಮತ್ತು ಇಸ್ರೇಲ ದೇಶಗಳು ತಮ್ಮಲ್ಲಿರುವ ಅರಿವನ್ನು ಇಂಗ್ಲಿಶಿನ ನೆರವಿಲ್ಲದೆ ತಮ್ಮ ತಮ್ಮ ತಾಯ್ನುಡಿಗಳ ಮೂಲಕ ಕಲಿತು
ಹೆಚ್ಚಿಸಿಕೊಂಡು ಇಡೀ ಪ್ರಪಂಚಕ್ಕೆ ಹೊಸ ಹೊಸ ಉತ್ಪನ್ನಗಳನ್ನ ’ಕೊಟ್ಟು’ ತಾಂತ್ರಿಕ ಹೆಚ್ಚುಗಾರಿಕೆಯನ್ನು ತೋರುತ್ತಿವೆ. ನಾವು (ಬಾರತ) ಇನ್ನು ಜಾಗತೀಕರಣದಿಂದ ’ಪಡೆ’ದುಕೊಳ್ಳುವುದರಲ್ಲಿ ಇದ್ದೀವೆಯೆ ಹೊರತು ’ಕೊಡು’ವುದಕ್ಕೆ ಮನಸ್ಸು ಮಾಡಿಲ್ಲ. ಹಾಗಾಗಿ ಮೂರ್ತಿಯವರು ಸಮ್ಮೇಳನದ ಉದ್ಗಾಟನೆ ಮಾಡುವ ನೆಪದಲ್ಲಾದರೂ ಸಾರ್ವಜನಿಕ ವಲಯದಲ್ಲಿ ಜಾಗತೀಕರಣಕ್ಕೆ ’ಕೊಡು’ವುದರ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಲಿ ಬಯಸುತ್ತೇನೆ