ಶುಕ್ರವಾರ, ಜುಲೈ 27, 2012

ಕನ್ನಡಿಗರು ಯಾಕೆ ಗರ ಮತ್ತು ಅರಿಲುಗಳಿಗೆ(ನಕ್ಶತ್ರ) ಹೆಸರಿಡಲಿಲ್ಲ?

ಹಿಂದೊಮ್ಮೆ ಪಂಡಿತರೊಬ್ಬರು ’ಕನ್ನಡಿಗರೇಕೆ ಗ್ರಹ ಮತ್ತು ನಕ್ಶತ್ರಗಳಿಗೆ ಹೆಸರು ಕೊಡಲಿಲ್ಲ?" ಎಂದು ಕೇಳ್ವಿ ಎಸೆದಿದ್ದರು. ಅದಕ್ಕೆ ಸೂಕ್ತವಾದ ಮಾರುಲಿಯನ್ನು ನಾನು ಅರಸುತ್ತಲೇ ಇದ್ದೆ. ಹಾಗೆ ಎಡೆಬಿಡದ ಪದಗಳ ಅರಕೆ ಮಾಡುವಾಗ ಕೆಲವು ಗಮನಿಕೆಗಳು ಮತ್ತು ಅದರಿಂದ ದೊರೆತ ತೀರ್ಮೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಕನ್ನಡದಲ್ಲಿ ’ನನ್’ ಎಂಬ ಪದಬೇರಿದೆ. ಅದರಿಂದ ಪದಗಳು ಯಾವುವು ಎಂಬುದನ್ನ ನೋಡೋಣ:-

ನನ್ + ಪು = ನಂಬು , ನಂಬು+ಇಕೆ = ನಂಬಿಕೆ (belief)
ನನ್+ ನಿ = ನನ್ನಿ (truth)
ನನ್+ಟ = ನಂಟ (relative)
ನಣ್+ಪು = ನಣ್ಪು (friendship)

ನಂಟರು ಎಂಬುದಕ್ಕೆ ನಾವು ಆಡುಮಾತಿನಲ್ಲಿ ’ಹತ್ತಿರ’ದವರು ಎಂದೂ ಕರೆಯುತ್ತೇವೆ. ಹತ್ತಿರದವರೇ ನಮಗೆ ಆಪ್ತರು,ಒಲವಿಗರು ಮತ್ತು ನೋವು-ನಲಿವಿನಲ್ಲಿ ಜೊತೆಯಿರುವವರು. ಅಂದರೆ ’ನಂಬಿಕೆ’ಗೆ ಪಾತ್ರರಾದವರು. ಈ ಮೇಲಿನ ಎಲ್ಲ ಪದಗಳಲ್ಲೂ ನನ್/ನಣ್ ಎಂಬುದು ’near' ಎಂಬ ಬೇರು ಹುರುಳೇ ಆಗಿದೆ. ಅಂದರೆ ಕನ್ನಡದಲ್ಲಿ ಮೊದಲಿನಿಂದಲೂ ’ಹತ್ತಿರ’ ಎಂಬುದನ್ನು ’ದಿಟ’(truth) ಎಂಬುದಕ್ಕೆ ತಳುಕು ಹಾಕುವ ಇಲ್ಲವೆ ಬೆಸೆಯುವ ಒಂದು ಸಂಪ್ರದಾಯ ಇದೆ. ಅದಕ್ಕೇ ಇರಬೇಕು ದೂರದಲ್ಲಿರುವ ವಸ್ತು ವಿಶಯಗಳು ಹಿಂದಿನ ಕನ್ನಡಿಗರನ್ನು ಅಶ್ಟು ಕಾಡಲಿಲ್ಲ. ಬಹುಶಹ ಅದರ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ದೂರದಲ್ಲಿರುವ ವಸ್ತುಗಳಾದ ಗ್ರಹ, ಅರಿಲುಗಳ ಗೋಜಿಗೆ ಕನ್ನಡಿಗರು ಹೋಗಲಿಲ್ಲ. ನಂಬಿಕೆಯೇ ಇಲ್ಲದ ವಸ್ತು-ವಿಶಯಗಳ ಬಗ್ಗೆ ಮಾತಾಡಿ/ಉಂಕಿಸಿ ಬಳಕೆಯೇನು? ಹಾಗಾಗಿ ದೂರದಲ್ಲಿ ಎಲ್ಲೋ ಇರುವ ಗ್ರಹ ಮತ್ತು ಅರಿಲುಗಳಿಗೆ ಹೆಸರು ಕೊಡುವುದಕ್ಕಿಂತ ಆಗ ತಲೆಮೆಯೆ ವಿಶಯಗಳು ಅವರಿಗೆ ಹೇರಳವಾಗಿದ್ದವು ಎಂಬುದು ನನ್ನ ಎಣಿಕೆ.
ಇಲ್ಲಿ ಇನ್ನೊಂದು ವಿಶಯ ತಿಳಿಯುವುದೇನೆಂದರೆ ಹೇಗೆ ನಮ್ಮ ಪದದ ಹುಟ್ಟುಗಳು/ಗುಟ್ಟುಗಳು ನಮ್ಮ ಅರಿಮೆಯ ಹೊನಲನ್ನು ಹರಿಯುವ ಬಗೆಯನ್ನು ತೀರ್ಮಾನಿಸುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಹಾಗಾಗಿ ನಮ್ಮ ಪದಗಳು ನಮ್ಮ ಹಿನ್ನಡವಳಿಗೆ ಕಯ್ ಹಿಡಿದಂತೆ. ಅದಕ್ಕಾಗಿಯೇ ಪದಗಳಲ್ಲಿರುವ ಒಳಗುಟ್ಟನ್ನು ಅರಿಯುವ ಬಗೆ(ಮನಸ್ಸು) ಮತ್ತು ಮೊಗಸು ಎರಡೂ ಮಾಡಬೇಕಾಗಿದೆ.