ಕನ್ನಡ ಲಿಪಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಲಿಪಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಡಿಸೆಂಬರ್ 03, 2011

ಲಿಪಿ ಸರಳಿಸುವಿಕೆ - ಬಿಡಿ ೨




ಹೋದ ಭಾನುವಾರ(27 ನವೆಂಬರ್ 2011) ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಾವಾದ ಡಾ ಉದಯರವಿ ಶಾಸ್ತ್ರಿ ಅವರ ಬರಹಕ್ಕೆ ಪ್ರತಿಕ್ರಿಯೆ -

ಬರಹಗಾರರು ’ಇಂದಿನಿಂದ ಋ ಎಂಬ ಅಕ್ಷರವನ್ನು ಶಾಲೆಗಳಲ್ಲಿ ಬೋದಿಸಬಾರದು, ಪಠ್ಯದಲ್ಲಿ ಸೇರಿಸಬಾರದು’ ಎಂಬಂತಹ ಆಜ್ಞೆಗಳನ್ನು ಹೊರಡಿಸಲು ಬರುವುದಿಲ್ಲ’ ಎಂದು ಹೇಳುತ್ತಾರೆ.ಆದರೆ ಈಗ ಇರುವ ಹೊಸಗನ್ನಡದ ಅಕ್ಷರಮಾಲೆಯಲ್ಲಿ ಇಂತಿಶ್ಟೆ ಅಕ್ಷರಗಳು ಇರಬೇಕು. ಅದರಲ್ಲಿ ಇಶ್ಟೆ ಸ್ವರಗಳು, ಇಶ್ಟೆ ವ್ಯಂಜನಗಳು ಇರಬೇಕು ಎಂದು ಸೆಲವು/ಆಜ್ಞೆ ಹೊರಡಿಸಿದವರು ಯಾರು? ಹಳೆಗನ್ನಡದಲ್ಲಿರದ ’ಋ’, ’ಷ’ ಎಂಬ ಅಕ್ಷರಗಳನ್ನು ಹೊಸಗನ್ನಡಕ್ಕೆ ’ಯಾವುದೊ ಒಂದು ದಿನ’ ಆಜ್ಞೆ ಹೊರಡಿಸರಲೇ ಬೇಕಲ್ಲವೆ? ಹೊರಡಿಸಿದ್ದಾರೆ. ಅಂದ ಮೇಲೆ ಮಹಾಪ್ರಾಣ, ಋ, ಷ, ಃ - ಇವುಗಳನ್ನು ಕನ್ನಡ ಬರಹದಿಂದ ಕೈ ಬಿಡಿಲಾಗಿದೆ ಎಂದು ಆಜ್ಞೆ ಯಾಕೆ ಹೊರಡಿಸಲು ಬರುವುದಿಲ್ಲ ಎಂದು ಉದಯರವಿಯವರೇ ತಿಳಿಸಬೇಕು.
ದಿಟವಾಗಲೂ ಯಾವುದೇ ನುಡಿಗೆ ಆಗಲಿ ಯಾವುದೊ ಒಂದು ಕಾಲಗಟ್ಟದಲ್ಲಿ ಎಶ್ಟು ಅಕ್ಷರಗಳು ಆ ನುಡಿಗೆ ಬೇಕು. ಅದರ ರೂಪುರೇಶೆಗಳೇನು ಎಂದು ನಿಗದಿಪಡಿಸಲೇಬೇಕಾಗುತ್ತದೆ. ಇದು ಎಲ್ಲ ನುಡಿಗಳಲ್ಲೂ ನಡೆಯುತ್ತದೆ. ಪ್ರೆಂಚಿಗೆ ಅಕೆಡಿಮಿಯ ಪ್ರಾಂಕ್ ಇದೆ, ಬೇರೆ ಬೇರೆ ಭಾಷೆಗಳಿಗೆ ಅವುಗಳದೇ ಆದ ಭಾಷಾ ಸಂಬಂಧಿಸಿದ ಸಂಸ್ಥೆಗಳಿವೆ. ಆದರೆ ಆ ನುಡಿಯ ಮಾತು ಇಲ್ಲವೆ ಉಲಿಕೆಯರಿಮೆಯನ್ನು ಬಿಡಿಯರಸಿ ಒಂದು ಬರಹವನ್ನು ಸಿದ್ದಪಡಿಸಿದರೆ ಅದು(ಲಿಪಿ) ವೈಜ್ಞಾನಿಕವಾಗಿರುತ್ತದೆ. ಅಲ್ಲದೆ ಅಂತಹ ಬರಹ ಆ ನುಡಿಯಾಡುವ ಮಂದಿಗೆ ಹೆಚ್ಚು ಬಳಕೆಗೆ ಬರುತ್ತದೆ.

ಇನ್ನು ಲಿಪಿ ಸರಳಿಸುವಿಕೆಯನ್ನು ’ಪ್ರಿಸ್ಕ್ರಿಪ್ಟಿವ್’ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ದಿಟವಾಗಲು ನೋಡಿದರೆ ಲಿಪಿ ಸರಳಿಸುವಿಕೆ ಒಂದು ’ಡಿಸ್ಕ್ರಿಪ್ಟಿವ್’ ಪ್ರಯತ್ನವೇ ಹೊರತು ಪ್ರಿಸ್ಕ್ರಿಪ್ಟಿವ್ ಆಗಲಾರದು ಯಾಕಂದರೆ ಈಗಿರುವ ಬರಹದಲ್ಲಿರುವ ’ಷ’,ಮಹಾಪ್ರಾಣ, ಃ, ಋ ಇವುಗಳೆಲ್ಲ ಕನ್ನಡದ ಮಾತಿನಲ್ಲಿಲ್ಲ. ಆದರೂ ಅಕ್ಷರಮಾಲೆಯನ್ನು ಸಿದ್ದಪಡಿಸುವಾಗ ಇದನ್ನು ’ಪ್ರಿಸ್ಕ್ರಿಪ್ಟಿವ್’ ಆಗಿ ಹೇರಲಾಯಿತು. ಅಂದರೆ ಸಂಸ್ಕೃತದಲ್ಲಿರುವ ಋ, ಷ ಮತ್ತು ಮಹಾಪ್ರಾಣ ಕನ್ನಡದ್ದಲ್ಲಿರಲೇಬೇಕು ಎಂಬ ತಪ್ಪು ತಿಳುವಳಿಕೆಯೇ ಇದಕ್ಕೆ ಕಾರಣ. ಆದರೆ ಇದರಿಂದ ಕನ್ನಡ ಬರಹದಲ್ಲಿ ಗೊಂದಲ ಉಂಟಾಗಿದೆ. ಇದಕ್ಕೆ ಲಿಪಿ ಸರಳಿಸುವಿಕೆ ಬೇಕು. ಇನ್ನು ಗಣಿತದ ಲೆಕ್ಕಕ್ಕೆ ಅನುಗುಣವಾಗಿ ಕನ್ನಡ ಅಕ್ಷರಗಳಿರಬೇಕೆ? ಕಡಿಮೆ ಅಕ್ಷರಗಳು ಇಲ್ಲವೆ ಹೆಚ್ಚು ಅಕ್ಷರಗಳಿರಬೇಕು ಎನ್ನುವ ವಾದ ಸರಿಯಿಲ್ಲ. ಇದರಿಂದ ಕನ್ನಡ ಬರಹವನ್ನು ನಿರ್ದರಿಸಲಾಗುವುದಿಲ್ಲ. ನಿರ್ದರಿಸಲೂ ಬಾರದು. ಕನ್ನಡ ಉಲಿಕೆಯರಿಮೆಯೇ (phonetics) ಕನ್ನಡ ಬರಹಕ್ಕೆ ಅಡಿಪಾಯವಾಗಬೇಕು.
’ಭಾಷೆಗೆ ತನ್ನದೇ ಆದ ಧಾರಣ ಶಕ್ತಿ ಇರುತ್ತದೆ..ಅದು ತಾನಾಗಿಯೇ ಸ್ವೀಕಾರ -ತಿರಸ್ಕಾರಗಳನ್ನು ನಿರ್ದರಿಸುತ್ತದೆ" ಎಂದು ಅವರು ಹೇಳಿದ್ದಾರೆ. ಇದು ಅವರು ಭಾಷೆಯನ್ನು ಮಾತು ಎಂಬ ಅರ್ಥದಲ್ಲಿ ಹೇಳಿದ್ದರೆ ಸರಿ. ಆದರೆ ಭಾಷೆ ಎಂದರೆ ಬರಹ ಎಂಬ ಅರ್ಥವೂ ಇರುವುದರಿಂದ ಅದಕ್ಕೆ ಈ ಮೇಲಿನ ಹೇಳಿಕೆ ಹೊಂದುವುದಿಲ್ಲ. ಯಾವುದೇ ಭಾಷೆಗೆ ಒಂದು ಬರಹವನ್ನು ನಿರ್ಧರಿಸುವುದು/ನಿಗದಿಪಡಿಸುವುದು ಒಂದು ಗುಂಪೇ. ಈಗಿರುವ ಕನ್ನಡಕ್ಕೆ ಬರಹವನ್ನು ನಿಗದಿಪಡಿಸಿದ್ದು ಒಂದು ಗುಂಪೇ. ನಡುಗನ್ನಡ ಬರಹದಲ್ಲಿ ’ಱ’/ೞ ಎಂಬ ಅಕ್ಶರಗಳನ್ನು ಮೊದಲು ಬಿಟ್ಟಿದ್ದು ಹರಿಹರನೊಬ್ಬನೇ. ಆದರೆ ಮಾತಿನಲ್ಲಾಗುವ ಬದಲಾವಣೆಗೆ ಕಡಿವಾಣ ಹಾಕಲಾಗುವುದಿಲ್ಲ. ಸಾಮಾನ್ಯ ಮಂದಿಗೆ ಸಂಸ್ಕ್ರುತಜನ್ಯ ಮತ್ತು ಕನ್ನಡದ್ದೇ ಆದ ಪದಗಳಲ್ಲಿರುವ ಬೇರೆತನ ಗುರುತಿಸಲಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಸಂಸ್ಕ್ರುತಜನ್ಯ ಪದಗಳು ಸಂಸ್ಕ್ರುತದಲ್ಲಿರುವ ಹಾಗೆ ನಮ್ಮ ಕನ್ನಡ ಮಾತಿನಲ್ಲಿರುವುದಿಲ್ಲ. ಉದಾಹರಣೆಗೆ ಸಂಸ್ಕೃತದ ಮಹಾಪ್ರಾಣಗಳು ಕನ್ನಡಿಗರ ಮಾತಿನಲ್ಲಿ ಅಲ್ಪಪ್ರಾಣವಾಗುತ್ತದೆ. ಇದು ಕನ್ನಡದ ಮಾತಿನ ಹರಿವು.
ಕೊನೆಗೆ, ಕನ್ನಡದ ಒಳನುಡಿಗಳು ಕನ್ನಡವನ್ನು ಒಡೆಯುತ್ತವೆ ಎಂಬ ಅಭಿಪ್ರಾಯದಲ್ಲಿ ಅವರು ಹೇಳಿದ್ದಾರೆ. ಒಳನುಡಿಗಳಲ್ಲಿ ಬೇರೆತನವಿರುವುದು ಕೊರತೆಯಲ್ಲ ಇಲ್ಲವೆ ತಪ್ಪಲ್ಲ. ಇದೇ ಕಾರಣ ಒಡ್ಡಿ ಕನ್ನಡದ ಒಳನುಡಿಗಳಿಂದ ದೂರ ಸರಿಯುವುದು ಕೂಡ ಸರಿಯಿಲ್ಲ. ಎಲ್ಲ ಒಳನುಡಿಗಳಿಗೂ ಕಾಮನ್ ಆಗಿರುವ ಒಂದು ಕನ್ನಡ(ಬರಹಗನ್ನಡ) ನುಡಿ ಇದ್ದೇ ಇರುತ್ತದೆ. ಇದೆ. ಅದು ಕೆಲವರಿಗೆ ಹತ್ತಿರವಿರಬಹುದು ಕೆಲವರಿಗೆ ಸೊಲ್ಪ ದೂರವಿರಬಹುದು. ಆದರೆ ಸಂಸ್ಕೃತದ ಹಾಗೆ ಇಲ್ಲವೆ ಇಂಗ್ಲಿಶಿನ ಹಾಗೆ ತುಂಬ ದೂರವಿಲ್ಲ..... ನಮ್ಮ ನಮ್ಮ ಕನ್ನಡಗಳಲ್ಲಿ ಬೇರೆತನವಿದೆಯೆಂದು ತೀರ ದೂರದಲ್ಲಿರುವ ಸಂಸ್ಕೃತದ ಇಲ್ಲವೆ ಇಂಗ್ಲಿಶಿನ ಸೊಲ್ಲರಿಮೆ/ವ್ಯಾಕರಣವನ್ನು ಹೇರುವುದು ಎಶ್ಟು ಸರಿ? ಮೈಸೂರಿನವರಿಗೆ ಹುಬ್ಬಳ್ಳಿಯ ಕನ್ನಡದಲ್ಲಿ ಮಾತಾಡಿದರೆ ಅರ್ಥವಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮಾತಾಡಿದರೆ ಮೈಸೂರಿನವರಿಗಾಗಲಿ , ಹುಬ್ಬಳ್ಳಿಯವರಿಗಾಗಲಿ ಅರ್ಥವಾಗುವುದೇ ಇಲ್ಲ. ಮೈಸೂರಿನವರಿಗೆ ಹುಬ್ಬಳ್ಳಿಯ ಕನ್ನಡ ಸಂಸ್ಕೃತಕ್ಕಿಂತ ಹತ್ತಿರವಿದೆ. ಹಾಗಾಗಿ ’ಕಾಮನ್’ ಆಗಿರುವ ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡದ ಒಳನುಡಿಗಳಿಗೆ ಒಗ್ಗಿಸುವುದೇ ನಮಗಿರುವ ದಾರಿ. ಅದಕ್ಕೆ ಹೆಚ್ಚು ಹೆಚ್ಚು ಕನ್ನಡದ ಒಳನುಡಿಗಳ ಸಂಶೋಧನೆ ಮತ್ತು ಓದು ನಡೆಯಬೇಕಿದೆ. ಈ ಸಂಶೋಧನೆಗಳಿಂದ ಕಲೆ ಹಾಕಿದ ಅರಿವನ್ನು ಮಕ್ಕಳ ಕಲಿಸುವಾಗ ಬಳಸಿಕೊಳ್ಳಬಹುದು. ಇದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಮಾತಿನಲ್ಲಾಗುವ ಬದಲಾವಣೆಗೆ ಯಾರ ಹಿಡಿತವೂ ಇಲ್ಲ. ಆದರೆ ಬರಹದಲ್ಲಾಗುವ ಬದಲಾವಣೆಗೆ ಹಿಡಿತವಿದ್ದೇ ಇರುತ್ತದೆ. ಈಗ ಬಳಸುತ್ತಿರುವ ಬರಹಕ್ಕೂ ಒಂದು ಕಾಲಗಟ್ಟದಲ್ಲಿ ’ಲಿಪಿ’ಯನ್ನು ಯಾರೊ ಒಬ್ಬರು ಇಲ್ಲವೆ ಒಂದು ಚಿಕ್ಕ ಗುಂಪೇ ನಿರ್ದರಿಸಿದೆ.

ಭಾನುವಾರ, ನವೆಂಬರ್ 27, 2011

ಕನ್ನಡ ಲಿಪಿ ಸರಳಿಸುವಿಕೆ - ಒಂದು ಪ್ರತಿಕ್ರಿಯೆ



ವಿಜಯ ಕರ್ನಾಟಕದಲ್ಲಿ ೨೦ ನವೆಂಬರ್ ೨೦೧೧ ರಂದು ಪ್ರಕಟವಾದ ಶ್ರೀ ಎಮ್.ಆರ್.ಪಿ. ರವಿಕಿರಣ್ ಅವರ ’ಲಿಪಿ ಸರಳೀಕರಣ: ಅತಿರೇಕದ ಮುನ್ಸೂಚನೆ’(ಅದರ ಪ್ರತಿ ಈ ಮಿಂಚೆಯೊಂದಿಗೆ ಅಂಟಿಸಲಾಗಿದೆ) ಈ ಬರಹಕ್ಕೆ ಪ್ರತಿಕ್ರಿಯೆ.

ಮೊದಲಿಗೆ, ರವಿಕಿರಣ್ ಅವರೇ ಹೇಳುವಂತೆ ಅವರಿಗೆ ನುಡಿಯ ಬಗೆಗಿನ ಹುರುಪು, ಆಸಕ್ತಿ ತೀರ ಇತ್ತೀಚಿನದು. ಆದ್ದರಿಂದ ಅವರ ಬರಹದಲ್ಲಿ ತಾನಾಗಿಯೇ ಆಗಿರುವ ಹಲವು ತಪ್ಪುಗಳನ್ನು ಎತ್ತಿ ತೋರಬೇಕಾಗಿದೆ.
ಇದಲ್ಲದೆ ಅವರು ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಲು ಯಾವ ನುಡಿಯರಿಗರ/ಭಾಷಾವಿಜ್ಞಾನಿಗಳ ಯಾವ ಕೆಲಸವನ್ನು ಉದಾಹರಿಸಿಲ್ಲ. ಇದರಿಂದಲೇ ಗೊತ್ತಾಗುವುದು ಅವರು ತಮ್ಮದೇ ಲೋಕದಲ್ಲಿ ಓಡಾಡುತ್ತಿದ್ದಾರೆ ಅಂತ.
ಇರಲಿ, ಕನ್ನಡದಲಿ ಲಿಪಿ ಸರಳಿಸುವಿಕೆಗೆ ತಮಿಳಿನ ’ಮಾದರಿ’ಯಾಗಿ ತೆಗೆದುಕೊಳ್ಳಲಾಗುವುದಿಲ್ಲ. ಲಿಪಿ ಸರಳ ಮಾಡಬೇಕೆನ್ನುವವರು ಕೂಡ ಅದನ್ನು ಯಾರೂ ಮಾದರಿಯಾಗಿ ತೆಗೆದುಕೊಂಡಿಲ್ಲ. ಯಾವುದೇ ಲಿಪಿ ಸರಳಿಸುವಿಕೆ ಆ ನುಡಿಯಾಡುವ ಮಂದಿಯ ’ಉಲಿಕೆ’ಯ ಓದಿನ ಮೇಲೆ ನಿಂತಿರುತ್ತದೆ. ಉಲಿಕೆಯಲ್ಲಿಲ್ಲದ/ಉಚ್ಚಾರಣೆಯಲ್ಲಿಲ್ಲದ ಆದರೆ ಬರವಣಿಗೆಯಲ್ಲಿರುವ ಅಕ್ಷರಗಳು ಹೊರೆಯಾಗುತ್ತದೆ. ಯಾಕಂದರೆ ಆ ನುಡಿಯಾಡುವವರು ಅದನ್ನು ಮಾತಿನಲ್ಲಿ ಎಂದು ಬಳಸುವುದೇ ಇಲ್ಲ. ಮೊದಲು ಹೊರೆಯಾಗಿ ಇದು ಕಂಡರೂ ಮುಂದೆ ಇದು ಹಲವು ಗೊಂದಲಕ್ಕೆಡೆ ಮಾಡುತ್ತವೆ. ಉದಾಹರಣೆಗೆ: ಕನ್ನಡಿಗರಲ್ಲಿ ಹೆಚ್ಚಿನವರು ಮಹಾಪ್ರಾಣ ಮತ್ತು ಅಲ್ಪಪ್ರಾಣವನ್ನು ತಮ್ಮ ಉಲಿಕೆಯಲ್ಲಿರುವ ಬೇರೆತನವನ್ನು ತೋರಿಸುವುದಿಲ್ಲ. ಆದ್ದರಿಂದ ಅವರ ಬರವಣಿಗೆಯಲ್ಲಿ ’ತಪ್ಪು’ಗಳು ಕಂಡುಬರುತ್ತದೆ. ಇದರಿಂದ ಹೆಚ್ಚಿನ ಕನ್ನಡಿಗರಿಗೆ ಇಂದಿನ ಬರಹವು ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಚೆನ್ನಾಗಿ ಮಾತು ಬಲ್ಲವರನ್ನು ಕೂಡ ’ಓಲೆ ಬರೆಯಿರಿ’ ಎಂದು ಹೇಳಿದಾಗ ದಿಗಿಲಿಗೆ ಒಳಗಾಗುತ್ತಾರೆ. ಇದಕ್ಕೆ ಈಗಿನ ಕನ್ನಡ ಬರಹದಲ್ಲಿರುವ ಹಲವು ಗೊಂದಲಗಳು ಮುಖ್ಯ ಕಾರಣ.

ಇನ್ನು ರವಿಕಿರಣ್ ಅವರು ಹೇಳುತ್ತಾರೆ: " ಸನ್ನಿಧಿ, ಮಂಟಪ, ಕೃಪಾನಿಧಿ, ಸೂರ್ಯ, ಸುಧಾ - ಇವುಗಳನ್ನು ಕನ್ನಡದಲ್ಲಿ ಹೇಗೆ ಉಚ್ಚರಿಸುತ್ತೇವೆಯೋ ಹಾಗೆ ಬರೆಯುತ್ತೇವೆ" - ಈ ವಾಕ್ಯದಲ್ಲಿ ತಪ್ಪಿದೆ. ದಿಟವಾಗಲೂ ಕನ್ನಡಿಗರೂ ಇದನ್ನು ಉಚ್ಚರಿಸುವುದು ಸನ್ನಿದಿ , ಮಣ್ಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ ಅಂತ. ಹಾಗಾಗಿ ನಾವು ಉಚ್ಚರಿಸಿದಂತೆ ಕನ್ನಡದಲ್ಲಿ ಬರೆಯುತ್ತಿಲ್ಲ. ಆದರೆ ಈ ತೊಂದರೆಯಿರುವುದು ಸಂಸ್ಕೃತ ಪದಗಳಿಗೆ ಮಾತ್ರ. ಕೆಲವು ಕಡೆ ಹೊರತುಪಡಿಸಿ ಕನ್ನಡದಲ್ಲಿ ಕನ್ನಡದ್ದೇ ಆದ ಪದಗಳನ್ನು ಉಚ್ಚರಿಸಿದಂತೆ ಬರೆಯಲಾಗುತ್ತಿದೆ. ಉದಾಹರಣೆಗೆ ಕನ್ನಡದಲ್ಲಿ ಅನುನಾಸಿಕಗಳನ್ನು ’೦’ ಗುರುತಿಸುವ ಅಭ್ಯಾಸ ಮೊದಲಿನಿಂದಲೂ ನಡೆದುಬಂದಿದೆ. ’ಗಣ್ಡ’ ಎಂದು ಉಲಿದರೂ ’ಗಂಡ’ ಎಂದೇ ಬರೆಯುವುದು. ’ಮಞ್ಚ’ ಎಂದು ಉಲಿದರೂ ’ಮಂಚ’ ಎಂದೇ ಬರೆಯುವುದು. ಆದರೆ ಇಲ್ಲಿ ಉಚ್ಚರಿಸದಂತೆ ಬರೆಯದಿರುವುದು, ಬರವಣಿಗೆಯನ್ನು ಸುಲಭ ಮಾಡುವುದೇ ಗುರಿಯಾಗಿದೆ. ಆದರೆ ಮಹಾಪ್ರಾಣಗಳು(ಖ,ಘ,ಛ,ಝ,ಠ,ಢ,ಥ,ಧ,ಫ,ಭ) ಮತ್ತು ಷ, ಃ, ಇವುಗಳು ಉಲಿಕೆಯಿಲ್ಲಿಲ್ಲದಿದ್ದರೂ ಅದನ್ನು ಬರವಣಿಗೆಯಲ್ಲಿ ಇಟ್ಟಿಕೊಂಡಿರುವುದೇಕೆ ಎಂಬ ಕೇಳ್ವಿ ಹಾಕಿಕೊಂಡರೆ, ಆಗ ತಿಳಿಯುವುದು ಇದು ಸಂಸ್ಕೃತ ಪದಗಳನ್ನು ಎರಡು ಸಾವಿರ ವರ್ಷಗಳ ಹಿಂದೆ ಹೇಗೆ ಬರೆಯಲಾಗುತ್ತಿತ್ತೊ ಅದನ್ನ ಹಾಗೆ ಉಳಿಸಿಕೊಳ್ಳಲು ಕನ್ನಡದ ಬರೆವಣಿಗೆಯ ಮೇಲೆ ಹೇರಿರುವ ಬೇಕಿಲ್ಲದ ಕಟ್ಟಲೆ ಎಂದು.

ಇನ್ನು " ೧. ತಮಿಳಿನಲ್ಲಿ ಮಹಾಪ್ರಾಣ ಬಿಟ್ಟರು. ನಾವು ಅದನ್ನೂ ಬಿಡಬಹುದು" ಎಂಬುದು ಹೇಗೆ ಹೇಳಿದರೊ ತಿಳಿದಿಲ್ಲ. ಕನ್ನಡದಲ್ಲೇ(ಮಾತಿನ) ಆಗಲಿ, ತಮಿಳಿನಲ್ಲೇ ಆಗಲಿ ಎಂದೂ ಮಹಾಪ್ರಾಣ ಇರಲಿಲ್ಲ, ಇನ್ನು ಬಿಡುವುದೆಲ್ಲಿಂದ ಬಂತು? ಇಲ್ಲಿ ಬರಹಗಾರರು ’ಮಾತು ಮತ್ತು ಬರಹ’ ನಡುವೆ ತುಂಬ ಗೊಂದಲಗೊಂಡಿದ್ದಾರೆ ಎನ್ನುವುದು ತಿಳಿಯದೇ ಇರದು. ಒಂದು ನುಡಿ/ಭಾಷೆಯೆಂದರೆ ಅದನ್ನ ’ಮಾತು’ ಎಂಬ ಅರ್ಥದಲ್ಲಿ ತೆಗೆದುಕೊಳ್ಳುವುದು ಸರಿ ಎಂದು ನುಡಿಯರಿಗರು ಹೇಳುತ್ತಾರೆ. ಮಾತಿಗೆ ಹೋಲಿಸಿದರೆ ’ಬರಹ’ ತೀರ ಇತ್ತೀಚಿನದು. ಅಲ್ಲದೆ ಮಾತಿಗಿರುವ ಸ್ವಾಭಾವಿಕತೆ ಬರಹಕ್ಕೆ ಇಲ್ಲ. ಬರಹ ಎಂದಿಗೂ ಕೃತಕ. ಹಾಗಾಗಿ ಒಂದು ನುಡಿಯನ್ನು ಚೆನ್ನಾಗಿ ಅರಿಯಬೇಕಿದ್ದರೆ ’ಮಾತಿನ’ ಬಗ್ಗೆ ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ಈ ಮಾತಿನ ಬಗೆಗಿನ ಸಂಶೋಧನೆಯಿಂದ ಹೊರ ಹೊಮ್ಮಿರುವುದೇ ಕನ್ನಡ ’ಲಿಪಿಕ್ರಾಂತಿ’ ಇಲ್ಲವೆ ’ಲಿಪಿ ಸರಳಿಸುವಿಕೆ’. ಲಿಪಿ ಸುದಾರಣೆ ಮಾಡಿದರೆ ಇವರು ಕೊಟ್ಟಿರುವ ಪದಗಳನ್ನು ಹೀಗೆ ಬರೆಯಬಹುದು :- ಸನ್ನಿದಿ, ಮಂಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ’. ಅದ್ದರಿಂದ ಇದು ಮಾತಿಗೆ ಹೆಚ್ಚು ಹತ್ತಿರವಾಗಿದೆಯಲ್ಲದೆ ಕೃತಕತೆಯು ಮಾಯವಾಗಿದೆ. ’೦’ ಅನ್ನು ಹೇಗೆ ಉಲಿಯಬೇಕೆಂಬುದು ಅದರ ಮುಂದಿನ ಅಕ್ಷರ ನಿರ್ಧರಿಸಿರುವುದರಿಂದ ಎಲ್ಲ ಅನುನಾಸಿಕ/ಮೂಗುಲಿಗಳಿಗೆ (ಪದದ ಮೊದಲು ಬರದಿದ್ದರೆ) ಅದನ್ನು ಬಳಸಲಾಗುತ್ತಿದೆ. (ಗಣ್ಡ = ಗಂಡ, ಹೆಞ್ಚು= ಹೆಂಚು, ಶಙ್ಕರ=ಶಂಕರ). ಈ ಸೊನ್ನೆಯನ್ನು (೦) ಹಾಗೆ ಉಳಿಸಿಕೊಳ್ಳಬೇಕೆಂದು ನುಡಿಯರಿಗರು ಹೇಳುತ್ತಾರೆ ಯಾಕಂದರೆ ಇದರಿಂದ ಕನ್ನಡ ಬರಹ ಸುಲಬವಾಗಿದೆ.
ಹಾಗೇನೆ ಮಹಾಪ್ರಾಣಗಳನ್ನು , ಷ, ಃ, ಇವುಗಳನ್ನು ಕೂಡ ಬಿಡಬಹುದು. ಇದರಿಂದ ಕನ್ನಡ ಬರಹ ಹೆಚ್ಚು ಸುಲಬ ಮತ್ತು ಗೊಂದಲರಹಿತವಾಗುತ್ತದೆ.


ಒತ್ತಕ್ಷರದ ಬಗ್ಗೆ ’ಲಿಪಿ ಸರಳಿಸುವಿಕೆ’ಯನ್ನು ಹಿಂದೆ ಬಿ.ಎಮ್.ಶ್ರೀಯವರು ಮೊದಲು ’ಕನ್ನಡ ಬಾವುಟ’ ಎಂಬ ಪುಸ್ತಕದಲ್ಲಿ ಬರೆದಿದ್ದರು. ಅದರ ಗುರಿ ಪುಸ್ತಕಗಳನ್ನು ’ಅಚ್ಚು’ ಮಾಡುವುದನ್ನು ಸುಲಬಗೊಳಿಸುವುದಲ್ಲದೇ ಬೇರೆ ಏನೂ ಇರಲಿಲ್ಲ. ಆದರೆ ಈಗ ಕಂಪ್ಯೂಟರ್ ಮತ್ತು ಪ್ರಿಂಟರ್ ತುಂಬ ಮುಂದುವರೆದಿರುವುದರಿಂದ ಆ ತೊಂದರೆಗಳಾವುವು ಇಲ್ಲ. ಹಾಗಾಗಿ ಒತ್ತಕ್ಷರಗಳನ್ನು ಉಳಿಸಿಕೊಳ್ಳುವುದಕ್ಕೇ ಯಾವುದೇ ಅಡ್ಡಿಯಿಲ್ಲ.

ಇನ್ನು ಕನ್ನಡ ತಮಿಳಿನಿಂದ ಬೇರ್ಪಟ್ಟು ಸಂಸ್ಕೃತದ ಕಡೆಗೆ ಹೋಗಿದೆ ಎನ್ನುವುದಕ್ಕೆ ಬರಹಗಾರರು ಯಾವುದೇ ಉಲಿಕೆಯರಿಮೆ(phonetics), ನುಡಿಯರಿಮೆ(Linguistics) ಮತ್ತು ಸೊಲ್ಲರಿಮೆ(grammar)ಗಳ ಪುರಾವೆಗಳನ್ನು ಒದಗಿಸಿಲ್ಲ. ಕೇವಲ ಕನ್ನಡ ಬರಹಗಳಲ್ಲಿ ಸಂಸ್ಕೃತ ಪದಗಳನ್ನು ಎರವಲು ಪಡೆದುದನ್ನು ನೋಡಿ ಹಾಗೆ ಅವರು ತಿಳಿದುಕೊಂಡಂತಿದೆ. ಮೊದಲೇ ಹೇಳಿದಂತೆ ಯಾವುದೇ ನುಡಿ/ಭಾಷೆಗೆ ’ಮಾತೇ’ ಆಧಾರ. ಹಾಗೆ ನೋಡಿದರೆ ಕನ್ನಡದ ಸೊಲ್ಲರಿಮೆ/ವ್ಯಾಕರಣ ಸಂಸ್ಕ್ರುತಕ್ಕಿಂತ ತಮಿಳಿಗೆ ಹತ್ತಿರವಾಗಿದೆ.

ಇಂಗ್ಲಿಶಿನಲ್ಲಿರುವ ’ಸ್ಪೆಲ್ಲಿಂಗ್’ ತೊಡಕು ಇಂದು ಆಳವಾಗಿ ಹಲವರನ್ನು ಕಾಡುತ್ತಿದೆ. ಅಮೆರಿಕಾದಲ್ಲಿ ಸ್ಪೆಲ್ಲಿಂಗ್ ಸಮಸ್ಯೆಯನ್ನು ಕಡಿಮೆ ಮಾಡಲು ಹಲವು ಸಂಶೋದನೆಗಳನ್ನು ಮಾಡಲಾಗುತ್ತಿದೆ. ಇವತ್ತು ಇಂಗ್ಲಿಶನ್ನು ಚೆನ್ನಾಗಿ ಓದಲು, ಬರೆಯಲು ಬೇಕೆಂದರೆ ಸುಮಾರು ೧೩೦೦೦ ಪದಗಳ ಸ್ಪೆಲ್ಲಿಂಗನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ ಆದರೆ ಫಿನ್ನಿಶ್(Finnish) ನುಡಿಯನ್ನು ಕಲಿಯಲು ಒಂದೇ ಒಂದು ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳಬೇಕಾಗಿಲ್ಲ. ಅಶ್ಟು ಚೆನ್ನಾಗಿ ಫಿನ್ನಿಶ್ ಬರಹವನ್ನು ಮಾಡಲಾಗಿದೆ. ಈ ಕಾರಣದಿಂದ ಪಿನ್ ಲ್ಯಾಂಡಿನಲ್ಲಿ ಜಗತ್ತಿನಲ್ಲೇ ಅತ್ಯುತ್ತಮವಾದ ’ಕಲಿಕೆ ವ್ಯವಸ್ಥೆ’ ಇದೆ. ರಾಜಕೀಯ, ಸಾಮಾಜಿಕ ಕಾರಣಗಳಿಂದ ಇಂಗ್ಲಿಶ್ ಬರಹ ಇಂದು ಹೆಚ್ಚು ಚಲಾವಣೆಯಲ್ಲಿರುವ ನುಡಿಯಾಗಿದ್ದರೂ ಅದರ ಬರಹ ವೈಜ್ಞಾನಿಕವಾಗಿಲ್ಲ ಎಂದು ಇದರಿಂದ ತಿಳಿಯಬಹುದು.

ಕೊನೆಗೆ ಬರಹಗಾರರು ಕನ್ನಡವನ್ನು ಬಲಪಡಿಸಬೇಕೆಂದು ಹೇಳುತ್ತಾರೆ ಅಲ್ಲದೆ ಲಿಪಿ ಸರಳಗೊಳಿಸುವುದರಿಂದ ’ಘನ’ವಾದುದನ್ನು ಕಳೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಹೇಗೆ ಬಲಪಡಿಸುವುದು ಎಂದು ಹೇಳುವುದಿಲ್ಲ. ಈಗಾಗಲೆ ಕನ್ನಡ ಬಲವಾಗಿದ್ದರೆ ಯಾಕೆ ಕನ್ನಡದಲ್ಲಿ ಹೊಸ ಅರಿವುಗಳು, ಹೊಸ ತಂತ್ರಜ್ಞಾನಗಳು ಹುಟ್ಟುತ್ತಿಲ್ಲ ? ಯಾವ ’ಘನ’ವನ್ನು ಕಳೆದುಕೊಳ್ಳುತ್ತೇವೆ ಎಂದು ಅವರು ಹೇಳುವುದಿಲ್ಲ. ಕನ್ನಡವನ್ನು ಬಲಪಡಿಸುವುದು ಅಂದರೆ ಕನ್ನಡದ್ದೇ ಸೊಗಡನ್ನು ಬಲಪಡಿಸುವುದು. ಕನ್ನಡದ್ದೇ ಆದ ಸೊಲ್ಲರಿಮೆಯನ್ನು/ವ್ಯಾಕರಣವನ್ನು ಗಮನಿಸಿವುದು ಮತ್ತು ಅದಕ್ಕೆ ಇಂಬು ಕೊಡುವುದು , ಹೊಸ ಹೊತ್ತಿಗೆ ಬೇಕಾದ ಕನ್ನಡದ್ದೇ ಆದ ಪದಗಳನ್ನುಂಟು ಮಾಡುವುದು ಅದರಿಂದ ಕಲಿಕೆಯನ್ನು ಇನ್ನು ಹೆಚ್ಚು ಚೆನ್ನಾಗಿ ಮಾಡುವುದು. ಕಲಿಕೆ ಚೆನ್ನಾಗಿ ಆದಾಗ ಜನರಿಗೂ ಕೂಡ ಹೊಸದನ್ನು ಸಾಧಿಸುವುದಕ್ಕಾಗುತ್ತದೆ. ಇದರಿಂದ ನಾಡ ಏಳಿಗೆ ಆಗುವುದರಲ್ಲಿ ಎರಡು ಮಾತಿಲ್ಲ.