ಮಂಗಳವಾರ, ನವೆಂಬರ್ 03, 2015

ನೆಲದ ಸೊಗಡು

ಮರಾಟಿನಾಡಿನಲ್ಲೊಂದು ಮನೆಯ ಮಾಡಿ ಮರಾಟಿ ಕಲಿಯದಿದ್ದೊಡೆ ಅದೆಂತಯ್ಯ?
ತಮಿಳುನಾಡಿನಲ್ಲೊಂದು ಮನೆಯ ಮಾಡಿ ತಮಿಳು ಕಲಿಯದಿದ್ದೊಡೆ ಅದೆಂತಯ್ಯ?
ಕನ್ನಡನಾಡಿನಲ್ಲೊಂದು ಮನೆಯ ಮಾಡಿ ಕನ್ನಡ ಕಲಿಯದಿದ್ದೊಡೆ ಅದೆಂತಯ್ಯ?
ಆಯ ನೆಲದ ಸೊಗಡಿಗೆ ಹೊಂದಿಕೊಂಡು ಬಾಳದ ಆ ಬಾಳು ಆ ಬದುಕು ಎಂತಯ್ಯ
ನಿಮ್ಮ ಆಣೆ! ಆ ಬದುಕಿಗೆ ಬೆಂಕಿ ಹಚ್ಚಯ್ಯ ಮತ್ತಿತಾಳಯ್ಯ
(ಅಕ್ಕನವರ ಸೂಳ್ನುಡಿಯನ್ನು ಬಳಸಿಕೊಂಡು...)

ಅರಿವು-ಮರೆತ

ಅರಿಯುವುದು ಮರೆಯುವುದಕ್ಕಲ್ಲವೆ?
ಮರೆಯುವುದು ಅರಿಯುವುದಕ್ಕಲ್ಲವೆ?
ಅರಿತು ಮರೆವ ಮರೆತು ಅರಿವ ಈ
ಪರಿಗೆ ಬೆರಗಾದೆ ಕಾಣಾ
ನೆರೆಯರಿತು-ಮರೆವ ಮರುಪಾಳಿಯಲಿ
ನಲುಗಬೇಕಲ್ಲವೆ?
ನಲುಗಿ ನಿಲ್ಲಬೇಕಲ್ಲವೆ ಮತ್ತಿತಾಳಯ್ಯ

"ನೆನೆವುದೆನ್ನ ಮನಂ ಬನವಾಸಿ ದೇಸಮಂ" - ಇದರ ಬಗ್ಗೆ

"ನೆನೆವುದೆನ್ನ ಮನಂ ಬನವಾಸಿ ದೇಸಮಂ" - ಇದರ ಬಗ್ಗೆ
------------------------------------------------------
ದೇಸಮಂ ಅನ್ನುವುದನ್ನು 'ದೇಸಮಮ್' ಎಂದು ಹಲವರು ಓದುತ್ತಾರೆ. ಆದರೆ ಅದು 'ದೇಸಮಮ್' ಅಲ್ಲ, 'ದೇಸಮನ್'
'ದೇಸಮನ್' ಬಿಡಿಸಿದರೆ 'ದೇಸಮ್+ಅನ್' ಅಂದರೆ ಹೊಸಗನ್ನಡದಲ್ಲಿ 'ದೇಸವನ್ನು' ಎಂದಾಗುತ್ತದೆ.
ಹೊಸಗನ್ನಡ: ಎನ್ನ ಮನವು ಬನವಾಸಿ ದೇಸವನ್ನು ನೆನೆಯುವುದು


ತೀರಮೆಗಳು:-
೧. ಹೊಸಗನ್ನಡದ 'ಅನ್ನು' ಎಂಬ ಪತ್ತುಗೆ ಒಟ್ಟು (ವಿಬಕ್ತಿ ಪ್ರತ್ಯಯ) ಹಳೆಗನ್ನಡದಲ್ಲಿ 'ಅನ್' ಎಂದಾಗಿತ್ತು.
೨. ಹಳಗನ್ನಡದಲ್ಲಿ '೦' ಎನ್ನು 'ನ್' ಎಂದು ಬರೆಯುವುದಕ್ಕೂ ಬಳಸಲಾಗಿದೆ.
ಹಳಗನ್ನಡದ 'ಅಮ್' ಎನ್ನುವುದು ಹೊಸಗನ್ನಡದಲ್ಲಿ 'ಅನ್ನು' ಆಗಿದೆ ಎಂದು ಕೆಲವರು ಹೇಳುತ್ತಾರೆ.
ಆದರೆ ಹಳಗನ್ನಡದ 'ಅನ್' ಎಂಬುದೇ ಹೊಸಗನ್ನಡದಲ್ಲಿ 'ಅನ್ನು' ಆಗಿರುವ ಸಾದ್ಯತೆ ಹೆಚ್ಚು ಕಾಣುತ್ತಿದೆ.
ಅನ್ (ಹ) -> ಅನ್ನು (ಹೊ) - ಇದಕ್ಕೆ ಹಲವು ಎತ್ತುಗೆಗಳನ್ನು ಕೊಡಬಹುದು.
ಕಣ್ (ಹ) -> ಕಣ್ಣು (ಹೊ)
ಪೊನ್(ಹ) -> ಹೊನ್ನು(ಹೊ)
ಕೊಲ್ (ಹ) -> ಕೊಲ್ಲು(ಹೊ)
ಹಳಗನ್ನಡಲ್ಲಿ ಅದು 'ಅಮ್' ಆಗಿದ್ದರೆ ಹೊಸಗನ್ನಡದಲ್ಲಿ ಅದು 'ಅಮ್ಮು' ಆಗಬೇಕಿತ್ತು

'ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿ

ತಮಿಳಿನ ’ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿಯಲ್ಲಿರುವ ಹಲವು ಪದಗಳು ಅದೇ ಹುರುಳಿನಲ್ಲಿ ಬಳಕೆಯಾಗಿವೆ. ಆದರೆ ಅಲ್ಲೆಲ್ಲ ತಮಿಳಿನ ಆಡುನುಡಿಯಲ್ಲಿರುವ ಪದಗಳು ಬಳಕೆಯಾಗಿಲ್ಲ. ತಮಿಳಿನ ಮೇಲೆ ಹಳಗನ್ನಡ ಒತ್ತು(influence) ಇತ್ತೇ ಎಂಬ ಕೇಳ್ವಿ ಇದರಿಂದ ಏಳುವುದು.
ಎತ್ತುಗೆಗೆ (ನನಗೆ ಕಂಡವು ಇಶ್ಟು..ಹುಡುಕಿದರೆ ಇನ್ನೂ ಸಿಗಬಹುದು):-
೧. ಮಕ್ಕಳ್ - ಇಂದಿನ ಕನ್ನಡದ ಆಡುನುಡಿಯಲ್ಲಿ ಇದನ್ನು ’children' ಎಂಬ ಹುರುಳಲ್ಲಿ ಬಳಸಲಾಗುತ್ತದೆ. ಇದೇ ಪದ ತಮಿಳಿನಲ್ಲಿ ’people' ಎಂಬ ಹುರುಳಿನಲ್ಲಿ ಇಂದು ಬಳಕೆಯಾಗುತ್ತಿದೆ. ಆದರೆ ತಿರುವಳ್ಳುವರ್ ಚಿಕ್ಕಮಕ್ಕಳ ಬಗ್ಗೆ ಮಾತು ಬಂದಾಗಲೆಲ್ಲಾ ಬಳಸುವುದು ’ಮಕ್ಕಳ್’ ಎಂದೇ.
೨ ಮನೆ - ಇಂದಿಗೂ ಕನ್ನಡದಲ್ಲಿ ’house/home' ಎಂಬ ಹುರುಳಿನಲ್ಲಿ ಬಳಕೆಯಲ್ಲಿದೆ. ಆದರೆ ತಮಿಳಿನ ಆಡುನುಡಿಯಲ್ಲಿ ’ವೀಟ್ಟು’ ಬಳಕೆಯಲ್ಲಿದೆ. ಆದರೆ ತಿರುವಳ್ಳುವರ್ ಬಳಸುವುದು ’ಮನೈ’ ಎಂದೇ.
೩. ನೀರ್ - ಇಂದಿಗೂ ಕನ್ನಡದಲ್ಲಿ ’water' ಎಂಬ ಹುರುಳಿನಲಿ ಬಳಕೆಯಲ್ಲಿದೆ. ಆದರೆ ತಮಿಳಿನಲ್ಲಿ ಇದಕ್ಕೆ ’ತಣ್ಣಿ’ ಎನ್ನುತ್ತಾರೆ. ಆದರೆ ತಿರುವಳ್ಳುವವರು ಬಳಸುವುದು ’ನೀರ್’ ಎಂದೇ.

ಹಿಂದೆ ತಿಳಿಸಿದಂತೆ ಮತ್ತಶ್ಟು ಸಿಕ್ಕ ಪದಗಳು:-
೪. ಕೆಯ್/ಗೆಯ್(ಮಾಡು) - ತಿರುವಳ್ಳುವರ್ ಬಳಸುವುದು ಇದಕ್ಕೆ ಸಾಟಿಯಾದ ತಮಿಳು ರೂಪ 'ಶೆಯ್'( ತೆಲುಗಿನ ಚೆಯ್/ಚೆಯ್ಯಿ). ತಪ್ಪಿಯೂ ತಿರುವಳ್ಳುವರ್ ಇವತ್ತಿನ ತಮಿಳಿನಲ್ಲಿ ಬಳಸುವ 'ಪಣ್' ಬಳಸುವುದೇ ಇಲ್ಲ. ಆದರೆ ಕನ್ನಡದಲ್ಲಿ ಇಂದಿಗೂ 'ಗೆಯ್',ಗೆಯ್ಮೆ, ಕೇಮೆ(ಕ್ಯಾಮೆ) ಬಳಸಲಾಗುತ್ತಿದೆ.
೫. ತಿನ್, ಉಣ್ - ತಿರುವಳ್ಳುವರ್ 'ತಿನ್' ಒಮ್ಮೆ ಮತ್ತು 'ಉಣ್' ಎಂಬುದನ್ನು ಹಲವು ಕಡೆ ಬಳಸಿದ್ದಾರೆ. ಇವತ್ತಿನ ತಮಿಳಿನಲ್ಲಿ 'ಸಾಪಟ್' ಹೆಚ್ಚಾಗಿ ಬಳಕೆಯಲ್ಲಿದೆ. ಆದರೆ ಕನ್ನಡದಲ್ಲಿ 'ಉಂಡ್ಯ', ತಿಂದ್ಯ, ಉಣ್ಣು (> ಊಟ), ತಿನ್ನು(>ತಿಂಡಿ, ತಿನಿಸು) ಬಳಕೆಗಳು ಹೆಚ್ಚಾಗಿ ಬಳಕೆಯಲ್ಲಿವೆ.

ಸೋಮವಾರ, ಅಕ್ಟೋಬರ್ 05, 2015

ಇಲ್ಲಮೆ


ನೀನು ಇಲ್ಲಿಲ್ಲವೆಂದರು
ನೀನು ಅಲ್ಲಿಲ್ಲವೆಂದರು
ನೀನು ಎಲ್ಲಿಯೂ ಇಲ್ಲವೆಂದರು
ಇಲ್ಲಮೆಯಲ್ಲಿ ಇರುವೆಯೆಂದು
ಅಲ್ಲಮನು ಉಲಿದು ಎಲ್ಲರ ಬಾಯ್ಹೊಲಿದ ಕಾಣಾ ಮತ್ತಿತಾಳಯ್ಯ

ಗುರುವಾರ, ಅಕ್ಟೋಬರ್ 01, 2015

ಕೂರ್ ಬಲ್ಲಾತನ್

ಎಲ್ಲರಿವ ಕೂರ್ ಬಲ್ಲಾತನ್
ಅಲ್ಲದುವ ಕಿರು ಮಾಳ್ಪೊಡೆ
ಬೆಲ್ಲವು ಜಾರಿ ಬಚ್ಚಲೊಳಿದ್ದಂತೆ ಮತ್ತಿತಾಳಯ್ಯ
-

ಕೂರ್ = ಚೂಪು ( ಸೂಕ್ಶ್ಮ)

ಸೋಮವಾರ, ಜೂನ್ 01, 2015

ಸೂಳ್ನುಡಿಯ ಚಳವಳಿಯೇ ಮೊದಲ ತನ್ಮದಿಪು ಚಳವಳಿ

ಈಗಾಗಲೇ ಗೊತ್ತಿರುವಂತೆ ತಮಿಳುನಾಡಿನಲ್ಲಿ ಇಪ್ಪತ್ತನೇ ನೂರೇಡಿನಲ್ಲಿ ನಡೆದ ಚಳವಳಿಯನ್ನೇ ಮೊದಲ ’ತನ್ಮದಿಪು ಚಳವಳಿ’(Self-respect Movement) ಎಂದು ಬಗೆಯಲಾಗಿದೆ. ಅಲ್ಲದೆ, ತನ್ಮದಿಪು ಚಳವಳಿಯನ್ನು ಬರೀ ತಮಿಳುನಾಡಿಗೆ ತಳುಕು ಹಾಕಲಾಗುತ್ತದೆ. ಇದನ್ನು ದ್ರಾವಿಡ ಚಳವಳಿಯ ಒಂದು ಬಾಗವಾಗಿ ನೋಡಲಾಗುತ್ತದೆ. ಆದರೆ ಇದಕ್ಕೂ ಮುಂಚೆಯೇ ಕನ್ನಡನಾಡಿನಲ್ಲಿ ’ತನ್ಮದಿಪು ಚಳವಳಿ’ ನಡೆದಿತ್ತೆಂಬುದನ್ನು ಹೆಚ್ಚಿನ ಕೂಡಣದರಿಗರು ಗಮನಿಸಿದಂತಿಲ್ಲ. ಅಂದರೆ ಹನ್ನೆರಡನೇ ನೂರೇಡಿನಲ್ಲಿ ನಡೆದ ’ಸೂಳ್ನುಡಿ ಚಳವಳಿ’(ವಚನ ಚಳವಳಿ) ಯನ್ನು ಒಂದು ತನ್ಮದಿಪಿನ ಚಳವಳಿಯಾಗಿ ಬಗೆದ ಸೀಳುನೋಟಗಳು ಸಿಗುವುದಿಲ್ಲ.

ತಮಿಳುನಾಡಿನಲ್ಲಿ ಜರುಗಿದ ತನ್ಮದಿಪು ಚಳವಳಿಯ ಮುಕ್ಯ ಗುರಿಗಳಲ್ಲಿ ತಮಿಳು ಕೂಡಣದಲ್ಲಿ ಎಲ್ಲರನ್ನು ಸಮಾನರನ್ನಾಗಿ ಕಾಣುವುದು, ವ್ಯಕ್ತಿಯ ಹುಟ್ಟಿನಿಂದ ಏರ‍್ಪಟ್ಟ ಮೇಲು-ಕೀಳುಗಳನ್ನು ತೊಡೆದು ಹಾಕಿ ಸಾಮಾನ್ಯ ಮಂದಿಯನ್ನೂ ಚಿಂತನೆಗೆ ಒಡ್ಡಿ ಅವರವರ ಅರಿವಿಗೆ ತಕ್ಕಂತೆ ಬಾಳಲು ಅನುವು ಮಾಡಿಕೊಡುವುದೇ ಆಗಿತ್ತು. ತನ್ಮದಿಪು ಚಳವಳಿಯ ಮುಂದಾಳಾಗಿದ್ದ ಕನ್ನಡಿಗ ಪೆರಿಯಾರ್ ಅವರು ಈ ಚಳವಳಿಯನ್ನು ’ಅರಿವು ವಿಡುದಲಯ್ ಇಯಕ್ಕಂ’(ಅರಿವು ಬಿಡುಗಡೆಯ ಚಳವಳಿ) ಎಂದು ಕರೆದರು. ಪೆರಿಯಾರ್ ಅವರಿಗೆ ಗಾಂದಿ-ನೆಹರು ನಂಬಿದ್ದ ರಾಜಕೀಯ ಬಿಡುಗಡೆ(ಸ್ವರಾಜ್) ಗಿಂತ ’ಅರಿವಿನ ಬಿಡುಗಡೆ’ಯೇ ಮುಕ್ಯವಾಗಿತ್ತು. ಪ್ರತಿಯೊಬ್ಬ ಮನುಶ್ಯನು ತನ್ನ ಅರಿವನ್ನು ಬಳಸಿಕೊಂಡು ಕೂಡಣದಲ್ಲಿ ಗವ್ರವದಿಂದ ಬಾಳ್ವೆ ಮಾಡುವಂತಾಗಬೇಕೆಂಬುದೇ ಅವರ ಬಯಕೆಯಾಗಿತ್ತು. ತಮಿಳರ ಮದುವೆಗಳಿಂದ ಹಾರುವರನ್ನು ಮತ್ತು ಅವರು ಹೇಳುವ ಸಂಸ್ಕ್ರುತ ಮಂತ್ರಗಳನ್ನು ತೆಗೆದುಹಾಕಲಾಯಿತು. ಇದಲ್ಲದೆ ಬೇರೆ ಬೇರೆ ಜಾತಿಯ ಗಂಡು-ಹೆಣ್ಣುಗಳಿಗೆ ಮದುವೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡಲಾಯಿತು. ಗಂಡು-ಹೆಣ್ಣು, ಉಳ್ಳವ-ಇಲ್ಲದವ, ಮೇಲ್ಜಾತಿ-ಕೀಳ್ಜಾತಿ, ಹೀಗೆ ಎಲ್ಲ ತೆರನಾದ ಅಸಮಾನತೆಯನ್ನು ತೊಡೆದು ಹಾಕುವುದೇ ಈ ಚಳವಳಿಯ ಅಡಿಕಟ್ಟಲೆಗಳಾದವು. ಮಂದಿಯಲ್ಲಿ ಎಚ್ಚರಿಕೆ ಮೂಡಿಸಲು ತಮಿಳು ನುಡಿಯನ್ನು ಚೆನ್ನಾಗಿ ಬಳಸಿಕೊಳ್ಳಲಾಯಿತೆಂಬುದನ್ನು ಇಲ್ಲಿ ಗಮನಿಸಬಹುದು.

ಈಗ ಕನ್ನಡನಾಡಿನ ಹನ್ನೆರಡನೇ ನೂರೇಡಿಗೆ ಬರೋಣ. ಆಗ ನಡೆದ ಸೂಳ್ನುಡಿಯ ಚಳವಳಿ ಕನ್ನಡದ ಕೂಡಣದಲ್ಲಿ ಒಂದು ದೊಡ್ಡ ಅರಿವಿನ ಅಲೆಯನ್ನು ಎಬ್ಬಿಸಿತು. ಈ ಚಳವಳಿಯಲ್ಲಿ ಮುಕ್ಯವಾಗಿ ಸಂಸ್ಕ್ರುತ ಮತ್ತು ಸಂಸ್ಕ್ರುತದ ಸಾಹಿತ್ಯ ಪರಂಪರೆಯನ್ನು ದಿಕ್ಕರಿಸಿ ಕನ್ನಡದ್ದೇ ಆದ ’ಸೂಳ್ನುಡಿ’ ಬರಹಗಳನ್ನು ಮಾಡಲಾಯಿತು. ಇದರ ಮೂಲಕ ಹೊಸದೊಂದು ’ಸೂಳ್ನುಡಿಯ ವಾಡಿಕೆ’ಯನ್ನು ಹುಟ್ಟು ಹಾಕಲಾಯಿತು. ಅನುಬವ ಮಂಟಪವನ್ನು ಏರ‍್ಪಡಿಸಿ ಅದರ ಮೂಲಕ ಗಂಡು-ಹೆಣ್ಣು, ಉಳ್ಳವ-ಇಲ್ಲದವ, ಮೇಲ್ಜಾತಿ-ಕೀಳ್ಜಾತಿ ಎಂದೆಣಿಸದೇ ಎಲ್ಲರಿಗೂ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳುವ ಮತ್ತು ಚರ‍್ಚಿಸುವ ಅವಕಾಶವನ್ನು ಮಾಡಿಕೊಡಲಾಯಿತು. ಹಾಗಾಗಿ ಅನುಬವ ಮಂಟಪವು ಹೊಸಗಾಲದ ಮಂದಿಯಾಳ್ವಿಕೆಯ ಗುಣಲಕ್ಶಣಗಳನ್ನು ಹೊಂದಿತ್ತು ಎಂದು ಹೇಳಬಹುದು. ಜಾತಿಯೇರ‍್ಪಾಟಿನಿಂದ ಉಂಟಾದ ಮೇಲು-ಕೀಳನ್ನು ತೊಡೆದು ಹಾಕಲು ಬೇರೆ ಬೇರೆ ಜಾತಿಯ ಹೆಣ್ಣು-ಗಂಡುಗಳ ಮದುವೆಗೆ ಅನುವು ಮಾಡಿಕೊಡಲಾಯಿತು. ದೇಗುಲ ಸಂಸ್ಕ್ರುತಿಯನ್ನು ದಿಕ್ಕರಿಸಿ ’ದೇಹವನ್ನೇ ದೇಗುಲ’ವನ್ನಾಗಿ ಮಾಡಿ ಪ್ರತಿಯೊಬ್ಬ ಮನುಶ್ಯನ ತನ್ಮದಿಪನ್ನು(ಆತ್ಮಗವ್ರವ) ಎತ್ತಿ ಹಿಡಿಯಲಾಯಿತು. ದಾಸೋಹವನ್ನು ವಾಡಿಕೆಗೆ ತಂದು ಉಳ್ಳವ-ಇಲ್ಲದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲಾಯಿತು. ಅರಿವೇ ಗುರು, ಮಾತೆಂಬುದು ಜ್ಯೋತಿರ‍್ಲಿಂಗ ಎಂಬ ನುಡಿಗಟ್ಟುಗಳು ಮೊಳಗಿದವು.

ಹೀಗೆ ಸೂಳ್ನುಡಿಗಳನ್ನು ಅಡಿಗಲ್ಲಾಗಿ ನಿಲ್ಲಿಸಿ ಕಟ್ಟಿದ ಚಳವಳಿ ಕೂಡಣದ, ತನ್ನರಿಮೆಯ ಮತ್ತು ಹಣಕಾಸಿನ ಸುದಾರಣೆಗಳನ್ನು ನೇರವಾಗಿ ಇಲ್ಲವೆ ನೇರವಲ್ಲದ ತೆರದಲ್ಲಿ ತಂದು ಸಮಾನತೆಯ ಕೂಡಣವನ್ನು ಕಟ್ಟುವೆಡೆಗೆ ಹೆಜ್ಜೆ ಇಟ್ಟಿತು.
ಹಾಗಾಗಿ, ಹತ್ತು-ಹಲವು ಬಗೆಗಳಲ್ಲಿ ತಮಿಳುನಾಡಿನ ’ತನ್ಮದಿಪು ಚಳವಳಿ’ ಕನ್ನಡನಾಡಿನ ’ಸೂಳ್ನುಡಿ ಚಳವಳಿ’ಯನ್ನೇ ಹೋಲುತ್ತದೆಯಲ್ಲದೆ ನೇರವಾಗಿ ಇಲ್ಲವೆ ನೇರವಲ್ಲದ ತೆರದಲ್ಲಿ ಸೂಳ್ನುಡಿ ಚಳವಳಿಯ  ಪ್ರಬಾವಕ್ಕೆ ಒಳಗಾಗಿದೆಯೆಂಬುದನ್ನು ಮನಗಾಣಬಹುದು.  ಆದರೆ ಈ ಎರಡು ಚಳವಳಿಗಳಲ್ಲಿ ವ್ಯತ್ಯಾಸಗಳೂ ಇದ್ದವು ಎಂಬುದನ್ನು ಗಮನಿಸಬೇಕಾಗುತ್ತದೆ. ಸೂಳ್ನುಡಿಯ ಚಳವಳಿಯು ಎಲ್ಲರನ್ನು ಒಳಗೊಳ್ಳುವ ಮತ್ತು ಎಲ್ಲ ಜಾತಿಯ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಚಳವಳಿಯಾಗಿತ್ತು. ಆದರೆ ತಮಿಳುನಾಡಿನ ಚಳವಳಿ ಒಂದು ಹಂತದಲ್ಲಿ ಹಾರುವರನ್ನು ವಿರೋದಿಸುವ ಚಳವಳಿಯಾಗಿ ಮಾರ‍್ಪಟ್ಟಿತು. ಆದರೆ ಕನ್ನಡನಾಡಿನಲ್ಲಿ ಹೀಗಾಗಲಿಲ್ಲ ಎಂಬುದನ್ನು ಗಮನಿಸಬಹುದು.

ತೀರಮೆಗಳು
ಸಾಮಾನ್ಯವಾಗಿ ವಚನ ಚಳವಳಿಯನ್ನು ಕೇವಲ ಲಿಂಗಾಯಿತ/ವೀರಶಯ್ವಕ್ಕೆ ತಳುಕು ಹಾಕಲಾಗುತ್ತದೆ. ಆದರೆ ವಚನ ಚಳವಳಿಯು ಇದನ್ನು ಮೀರಿ ಬೆಳೆದಿತ್ತು ಬದಲಾಗಿ ಹೊಸದೊಂದು ಕೂಡಣವನ್ನು ಕಟ್ಟಿಕೊಳ್ಳುವೆಡೆಗೆ ನಡೆದಿತ್ತು ಎಂಬುದನ್ನು ಮನಗಾಣಬೇಕಾಗಿದೆ.  ಕನ್ನಡನಾಡಿನ ಸೂಳ್ನುಡಿಯ ಚಳವಳಿಯು ತೆಂಕಣದ ಅರಿವಿನ ಮರುಹುಟ್ಟಿಗೆ(renaissance) ಮುನ್ನುಡಿ ಬರೆಯಿತು ಎಂದರೆ ತಪ್ಪಾಗಲಾರದು. ಕೂಡಣದರಿಗರು ಮತ್ತು ಸೀಳ್ನೋಟಗಾರರು ’ಸೂಳ್ನುಡಿ ಚಳವಳಿ’ ಮತ್ತು ’ತನ್ಮದಿಪು ಚಳವಳಿ’ಗಳನ್ನು ಹೋಲಿಸಿ ಹೆಚ್ಚು ಹೆಚ್ಚು ಮರು ಓದಿಗೆ ಒಳಪಡಿಸಬೇಕಾಗಿದೆ. ಇದರಿಂದ ಹೊರಬರುವ ತೀರಮೆಗಳು ತೆಂಕಣದ ನಾಡಿನ ಕೂಡಣಗಳಲ್ಲಿ ಹೊಸ ಹೊಳಹುಗಳಿಗೆ ದಿಕ್ಕು ತೋರಬಲ್ಲವಾಗಿವೆ.
(ಮಾಹಿತಿ ಸೆಲೆ: http://en.wikipedia.org/wiki/Self-Respect_Movement)