ಗುರುವಾರ, ಜನವರಿ 24, 2013

ಕನ್ನಡದ್ದೇ ಆದ ಪದಗಳನ್ನು ಏಕೆ ಕಟ್ಟಬೇಕು ?

     ಇತ್ತೀಚೆಗೆ ನಡೆದ ಒಂದು ಒಸಗೆಯಲ್ಲಿ ಸುದ್ದಿಯಾಳೊಬ್ಬರು ಮಾತಾಡುತ್ತಾ ಕನ್ನಡ ಸಾಹಿತ್ಯವನ್ನು ಹೆಚ್ಚು ಮಂದಿ ಅದರಲ್ಲೂ ಹಳ್ಳಿಯ ಮಂದಿ ಓದಿಲ್ಲ ಇಲ್ಲವೆ ಓದುತ್ತಿಲ್ಲ, ಆದರೂ ಅವರು ಕನ್ನಡವನ್ನೇ ಉಸಿರಾಗಿಸಿಕೊಂಡವರು, ಕನ್ನಡದಲ್ಲೇ ದುಡಿಮೆ ಮತ್ತು ಬದುಕನ್ನು ಕಟ್ಟಿಕೊಂಡವರು ಎಂದು ಹೇಳಿದರು. ಇಂತಹ ದಿಟಗನ್ನಡಿಗರಿಂದ ಕನ್ನಡ ಸಾಹಿತ್ಯ ದೂರವಾದುದು ಏಕೆ ಎಂಬ ಕೇಳ್ವಿ ನನ್ನನ್ನು ಆಗ ಕಾಡಿತು. ಹೆಚ್ಚಿನ ಮಂದಿಗೆ ಅನ್ನಿಸುವಂತೆ ಹಳ್ಳಿಗರು ಎಂದರೆ ಅಕ್ಶರ ಗೊತ್ತಿಲ್ಲದವರು ಇಲ್ಲವೆ ತಿಳಿವಳಿಕೆ ಇಲ್ಲದವರು, ಅವರ ಅರಿವಿಗೆ ಕನ್ನಡ ಸಾಹಿತ್ಯ ಎಟುಕಲಾರದು ಅಂತ ನನಗೆ ಅನ್ನಿಸಲಿಲ್ಲ. ಬದಲಾಗಿ ಕನ್ನಡ ಸಾಹಿತ್ಯದಲ್ಲೇ ಕೊರತೆ ಇಲ್ಲವೆ ತೊಡಕಿರಬೇಕೆಂದು ನನಗನ್ನಿಸಿತು. ಇದನ್ನು ಇನ್ನೂ ಆಳವಾಗಿ ಬಿಡಿನೋಟಕ್ಕೆ ಒಳಪಡಿಸಿದಾಗ ಈ ಅನಿಸಿಕೆ ದಿಟವೆಂದು ನಿಕ್ಕಿಯಾಯಿತು.

     ಇವತ್ತಿನ ಇಲ್ಲವೆ ಹೊಸಗನ್ನಡದ ಹೊತ್ತಿನಲ್ಲಿ ಉಂಟಾದ ಸಾಹಿತ್ಯ ತೊಡಕು ತೊಡಕಾದ ಪದಗಳನ್ನು ಬಳಸುತ್ತಿರುವುದರಿಂದ ಅದು ಸಾಮಾನ್ಯ ಕನ್ನಡಿಗನಿಗೆ ದೂರವಾಗಿಯೇ ಉಳಿದಿದೆ. ಬರಹದಲ್ಲಿ ಸಂಸ್ಕ್ರುತದ ಪದಗಳ ಬಳಕೆ ಎಲ್ಲೆ ಮೀರಿದೆ. ಎಶ್ಟರ ಮಟ್ಟಿಗೆ ಅಂದರೆ ಹೆಚ್ಚಿನ ಕನ್ನಡಿಗರಿಗೆ ಸಾಹಿತ್ಯ ಎಂಬ ಪದದ ಹುರುಳೇ ತಿಳಿದಿಲ್ಲ,  ಆದರೆ ಇದು ಕನ್ನಡಿಗರ ತಪ್ಪಲ್ಲ ಬದಲಾಗಿ ಇಂತಹ ತಿಳಿಯದ ಸಂಸ್ಕ್ರುತದ ಪದಗಳನ್ನು ಬಳಕೆಗೆ ತಂದವರದೇ ತಪ್ಪು. ಬರವಣಿಗೆ, ನಲ್ಬರಹ ಎಂಬ ಸುಲಬವಾದ ಪದಗಳಿರುವಾಗ ಬೇಡದಿದ್ದರೂ ಈ ರೀತಿ ಸಂಸ್ಕ್ರುತ ಪದಗಳ ಬಳಕೆ ಕನ್ನಡದ ಬರಹಗಳನ್ನು ಕಬ್ಬಿಣದ ಕಡಲೆಯನ್ನಾಗಿಸಿದೆ. ಹಾಗಾಗಿ ಸಲೀಸಾದ ಕನ್ನಡದ್ದೇ ಆದ ಪದಗಳನ್ನು ಕಟ್ಟಬೇಕಾಗಿದೆ. ಅವನ್ನು ಹೆಚ್ಚು ಹೆಚ್ಚು ಬರಹಗಳಲ್ಲಿ ಬಳಸಬೇಕಾಗಿದೆ. ಇಂತಹ ಬರಹಗಳನ್ನು ಹೆಚ್ಚಿನ ಮಂದಿಗೆ ತಲುಪಿಸಬೇಕಾಗಿದೆ. ಯಾವುದೇ ಬರಹಗಾರನಿಗೆ ತನ್ನ ಬರಹವು ಹೆಚ್ಚು ಹೆಚ್ಚು ಮಂದಿ ತಲುಪಬೇಕೆಂಬ ಗುರಿ ಇರುತ್ತದೆ ಏಕೆಂದರೆ ಆ ಬರಹದಲ್ಲಿ ಹೇಳಿರುವ ವಿಶಯಗಳನ್ನು ಹೆಚ್ಚಿನ ಮಂದಿಗೆ ತಿಳಿಸಬೇಕಾಗಿರುತ್ತದೆ. ಸುದ್ದಿಹಾಳೆಗಳನ್ನು ನಡೆಸುವವರ ಗುರಿಯೂ ಕೂಡ ಹೆಚ್ಚಿನ ಮಂದಿಗೆ ಬರಹಗಳ ಮೂಲಕ ಸುದ್ದಿಯನ್ನು ಮುಟ್ಟಿಸುವುದು, ತಮ್ಮ ಸುತ್ತಮುತ್ತ ಆಗುತ್ತಿರುವ ಆಗುಹಗಳ ಬಗ್ಗೆ ಮಂದಿಯಲ್ಲಿ ಅರಿವನ್ನು ಮೂಡಿಸುವುದೇ ಆಗಿದೆ. ಹಾಗಾಗಿ ಆದಶ್ಟೂ ಬರಹಗಳು ಸಲೀಸಾಗಿ ಓದುವಂತೆಯೂ, ತಿಳಿಯುವಂತೆಯೂ ಇರಬೇಕಾಗುತ್ತದೆ. ಇದಕ್ಕೆ ಕನ್ನಡದ್ದೇ ಆದ ಪದಕಟ್ಟಣೆ ನೆರವಿಗೆ ಬರುತ್ತದೆ.
ಪದಕಟ್ಟಣೆಯ ಗುರಿಗಳು:
     ಮೊದಲಿಗೆ, ಕನ್ನಡದ್ದೇ ಆದ ಪದಕಟ್ಟಣೆಯ ಗುರಿಯು ಇಂತಹ ಒಂದು ಕಟ್ಟಣೆಯ ಸಾದ್ಯತೆಯನ್ನು ತೋರಿಸಿಕೊಡುವುದೇ ಆಗಿದೆ. ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ಓದಿಕೊಂಡವರು, ದೊಡ್ಡ ದೊಡ್ಡ ಬರಹಗಾರರು ಕೂಡ ಇಂಗ್ಲಿಶಿನಲ್ಲಿರುವ ಅರಿಮೆಯ ಹಲವು ಪದಗಳಿಗೆ ಕನ್ನಡದ್ದೇ ಆದ ಪದಗಳನ್ನು ಕಟ್ಟಲು ಆಗುವುದೇ ಇಲ್ಲವೆಂದು ನಂಬಿದ್ದಾರೆ. ಈ ನಂಬಿಕೆಯನ್ನು ಪದ ಕಟ್ಟುವುದರ ಮೂಲಕ ಹುಸಿಗೊಳಿಸಬೇಕಾಗಿದೆ.  ಇಲ್ಲಿಯವರೆಗೆ ಪದ ಕಟ್ಟಣೆ ದೊಡ್ಡ ಮಟ್ಟದಲ್ಲಿ ಆಗದಿರುವುದಕ್ಕೆ ಕಾರಣ ಕನ್ನಡ ನುಡಿಯಲ್ಲಿರುವ ಕೊರತೆಯಲ್ಲ, ಬದಲಾಗಿ ಕನ್ನಡಿಗರಲ್ಲಿರುವ ಕನ್ನಡದ ಬಗೆಗಿನ ಅರಿವಿನ ಕೊರತೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.  ಕನ್ನಡದಲ್ಲಿ ಹೆಚ್ಚು ಹೆಚ್ಚು ಅರಿಮೆಯ ಪದಗಳು ಉಂಟಾದರೆ ಅದನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಅರಿಮೆಯ ಬರಹಗಳನ್ನು ಬರೆಯಲು ಬರುತ್ತದೆ. ಒಟ್ಟಿನಲ್ಲಿ ಹೊಸ ಹೊಸ ಅರಿಮೆಗಳನ್ನು ಈ ಮೂಲಕ ಕನ್ನಡಕ್ಕೆ ತರಬಹುದಾಗಿದೆ.
     ಎರಡನೆಯದಾಗಿ, ಯಾವುದೇ ನುಡಿಯ ಮೇಲ್ಮೆಗಳಲ್ಲಿ ಅರಿದಾದುದು ಆ ನುಡಿಯ ಪದಸಿರಿ ಎಂದು ಹೇಳಬಹುದು. ಈ ಪದಸಿರಿಯು ಹೆಚ್ಚು ಹೆಚ್ಚು ಕನ್ನಡದ್ದೇ ಆದರೆ ಕನ್ನಡ ಕನ್ನಡವಾಗಿಯೇ ಉಳಿಯುತ್ತದೆ. ಕನ್ನಡವು ಕನ್ನಡವಾಗಿಯೇ ಉಳಿದರೆ ಕನ್ನಡಿಗರಲ್ಲಿ ಉಳಿದ ಬಾರತೀಯರಿಗಿಂತ ತಾವು ಬೇರೆ ಮತ್ತು ತಮ್ಮ ನುಡಿ ಬೇರೆ ಎಂಬ ಅರಿವು ಬಲವಾಗುತ್ತದೆ. ಈ ಅರಿವು ಆಳ್ಮೆಯ(ರಾಜಕೀಯ) ಅಂಗಳದಲ್ಲಿ ನೆಲೆ ನಿಂತರೆ ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಹೆಚ್ಚು ಗಟ್ಟಿಯಾಗಬಹುದಾಗಿದೆ. ಈ ಗಟ್ಟಿತನದಿಂದ ಕನ್ನಡಿಗರು ತಮ್ಮ ಹಕ್ಕು, ತಮ್ಮ ಈಳಿಗೆ ಮತ್ತು ತಮ್ಮತನವನ್ನು ಉಳಿಸಿ ಬೆಳೆಸಿಕೊಳ್ಳಬಹುದಾಗಿದೆ. ಯಾವ ಜನಾಂಗ ತನ್ನತನವನ್ನು ಬಿಟ್ಟುಕೊಡುವುದಿಲ್ಲವೊ ಆ ಜನಾಂಗ ಕೆಚ್ಚಿನ(ಸ್ವಾಬಿಮಾನದ) ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ. ಈ ಕೆಚ್ಚಿನ ಬದುಕಿನಿಂದ ಕನ್ನಡಿಗರು ಹೆಚ್ಚಿನದನ್ನು ಸಾದಿಸಲು ಬರುತ್ತದೆ.
     ಕೊನೆಯದಾಗಿ, ಹೊಸದಾಗಿ ಕಟ್ಟಿದ ಪದಗಳನ್ನು ಮಂದಿಯ ಮುಂದಿಡಲು ಮತ್ತು ಅದನ್ನು ಬಳಕೆಗೆ ತರಲು ಸುದ್ದಿಹಾಳೆಗಳು ನೆರವೀಯಬಲ್ಲುವು. ಇಂತಹ ಹೊಸ ಆರಯ್ಕೆಗಳಿಗೆ(ಪ್ರಯೋಗಗಳಿಗೆ) ಸುದ್ದಿಹಾಳೆಗಳು ಬೆಂಬಲ ಕೊಡುವುದರಿಂದ ಪದ ಕಟ್ಟುವವರಿಗೆ ಹುರುಪು ತುಂಬಿದಂತಾಗುತ್ತದೆ. ಪದ ಕಟ್ಟುವವರು ಮತ್ತು ಪದ ಬಳೆಕೆ ಮಾಡುವವರ ನಡುವೆ ಸುದ್ದಿಹಾಳೆಯು ಕೊಂಡಿಯಂತೆ ಕೆಲಸ ಮಾಡಬಹುದಾಗಿದೆ. ಇದರಿಂದ ಕನ್ನಡದ ಕಸುವನ್ನು ಇನ್ನು ಚೆನ್ನಾಗಿ ದುಡಿಸಿಕೊಳ್ಳಲು ಬರುತ್ತದೆ. ಇದರಿಂದ ಹೆಚ್ಚಿನ ಮಂದಿಯ ಅರಿವಿನ ಮಟ್ಟ ಮೇಲೇರುತ್ತದೆ. ಮೇಲ್ಮಟ್ಟದ ಅರಿವನ್ನು ಹೊಂದಿರುವ ಕೂಡಣದ ಏಳಿಗೆ ತಾನಾಗಿಯೇ ಆಗುತ್ತದೆ.

ಪದಪಟ್ಟಿ
 ಒಸಗೆ - occasion
 ಆರಯ್ಕೆ - experiment
 ಅರಿದು - important
 ಕೆಚ್ಚು   - pride
 ಸುದ್ದಿಯಾಳು - press reporter
 ಆಳ್ಮೆ - politics

2 ಕಾಮೆಂಟ್‌ಗಳು:

ಪಂಡಿತಾರಾಧ್ಯ ಹೇಳಿದರು...

'ಪರಪಂಚ ಇರೊಗಂಟ ಕನ್ನಡ ಪದಗೋಳ್ ನುಗ್ಲಿ' ಎಂದ ರತ್ನ 'ಪರಪಂಚ' 'ರತ್ನ'ಗಳಿಗೆ ಹಳಗನ್ನಡ ಪದಗಳನ್ನು ಹುಡುಕಲಿಲ್ಲ. ಬಳಕೆಯಲ್ಲಿಲ್ಲದ ಆದ್ದರಿಂದ ತನ್ನ ಭಾಷೆಯಲ್ಲಿ ಬಳಕೆಯಲ್ಲಿರುವ ಆನ್ಯ ಭಾಷೆಯ ಪದಗಳನ್ನು ತನ್ನ ಭಾಷೆಯ ವ್ಯಾಕರಣದ ಜಾಯಮಾನದಲ್ಲಿ ಬಳಸಿದ. ಆದರೆ 'ಬ್ಲಾಗು'ತ್ತ ಇರು ಎನ್ನುವುದು ಆಂಥ ಪ್ರಯೋಗವಲ್ಲ. ಇಂಗ್ಲಿಷಿನ ವೆಬ್ ನ ಬ್ ಮತ್ತು ಲಾಗ್ ಸೇರಿ ಅಗಿರುವ ಬ್ಲಾಗ್ ಆನ್ನು ಬ್ಲಾಗುತ್ತಾ ಇರು ಎಂದು ಬಳಸಿ ಧನ್ಯತೆಯನ್ನು ಆನುಭವಿಸುವುದಕ್ಕಿಂತ ಪದದ ಆರ್ಥದ ರಚನೆಯನ್ನು ಗಮನಿಸಿ ಕನ್ನಡದಲ್ಲಿ ಈಗ ಬಳಕೆಯಲ್ಲಿರುವ ಪದಗಳಿಂದಲೇ ಆರ್ಥಪೂರ್ಣ ಕನ್ನಡ ಪದ ಸೃಷ್ಟಿಸುವುದು ೀಗ ಆಗಬೇಕಾಗಿದೆ.

ಕುಕೂಊ.. ಹೇಳಿದರು...

ಒಳ್ಳೆಯ ಬರಹ