ಬುಧವಾರ, ಜನವರಿ 23, 2013

ಕನ್ನಡ, ಇರ್ನುಡಿತನ ಮತ್ತು ಕೂಡಣ

ಇತ್ತೀಚಿನ ದಿನಗಳಲ್ಲಿ ಮಂದಿಯ ಇರ್ನುಡಿತನದಲ್ಲಿರುವ  ಹೆಚ್ಚುಗಾರಿಕೆಯ ಬಗ್ಗೆ ಮಾತನಾಡಲಾಗುತ್ತಿದೆ ಯಾಕಂದರೆ ಇರ್ನುಡಿತನದಿಂದ ಮಂದಿಯ ಅರಿವಿನ ಮತ್ತು ಕಲಿಯುವ ಚಳಕಗಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ ಎಂಬುದನ್ನು ಅರಕೆಗಳ ಮೂಲಕ ತೋರಿಸಿಕೊಡಲಾಗಿದೆ. ಹಾಗಾಗಿ ಇರ್ನುಡಿತನವು ಕಲಿಯುವ ಮಕ್ಕಳಿಗೆ ಒಳ್ಳೆಯದು ಎಂದು ತೀರ್ಮಾನಿಸಲಾಗಿದೆ. ಮಿಂಬಲೆಯಲ್ಲಿ ಹುಡುಕಿದರೆ ಇದರ ಬಗ್ಗೆ ಹೆಚ್ಚಿನ ತಿಳಿವು ಸಿಗುತ್ತದೆ.

      ಆದರೆ ದಿಟವಾಗಲೂ ಯಾವುದೇ ಒಂದು ಕೂಡಣದಲ್ಲಿ ಸಂಪೂರ್ಣವಾಗಿ ಇರ್ನುಡಿತನದ ಪರಿಸರವು ಇರುವುದಿಲ್ಲ. ಒಂದು ಕೂಡಣದಲ್ಲಿ ಅಂದರೆ ಕನ್ನಡದಂತಹ(ಕರ್ನಾಟಕದಂತಹ) ಕೂಡಣದಲ್ಲಿ ಎಲ್ಲರೂ ಇರ್ನುಡಿಗರಾಗಿರುವುದಿಲ್ಲ. ಹಾಗೆ ಎಲ್ಲರೂ ಇರ್ನುಡಿಗರಾಗಬೇಕೆಂದು ನಾವು ಬಯಸುವುದು ಕೂಡ ತಪ್ಪಾಗುತ್ತದೆ ಯಾಕಂದರೆ ಯಾರೇ ಆದರೂ ಇರ್ನುಡಿಗರಾಗಬೇಕಾದರೆ ಎರಡನೇ ನುಡಿಯ ಪರಿಸರ ಬೇಕಾಗುತ್ತದೆ. ಎಲ್ಲರಿಗೂ ಇರ್ನುಡಿಯ ಪರಿಸರ ಇರುವುದಿಲ್ಲ. ಒಂದು ಊಹೆಯ ಪ್ರಕಾರ ಕನ್ನಡದಲ್ಲಿ ಇರ್ನುಡಿತನವು ಹೀಗೆ ಇರಬಹುದು.

ಕನ್ನಡದ ಕೂಡಣ

ಚಿತ್ರದಲ್ಲಿ ಕಾಣುವಂತೆ ಕನ್ನಡದ ಕೂಡಣವನ್ನು ಎರಡು ಪದರಗಳಲ್ಲಿ ತೋರಿಸಲಾಗಿದೆ. ಹೊರಪದರದಲ್ಲಿ ಇರ್ನುಡಿತನವಿದೆ ಅಂದರೆ ಕನ್ನಡಿಗರಲ್ಲಿ ಕೆಲವು ಮಂದಿ ಮಾತ್ರ ಕನ್ನಡ ಮತ್ತು ಇಂಗ್ಲಿಶ್ ನುಡಿಗಳಲ್ಲಿ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ನುಡಿಚಳಕವನ್ನು ಹೊಂದಿದ್ದಾರೆ. ಆದರೆ ಹಲವು ಮಂದಿ ಇನ್ನು ಒರ್ನುಡಿಗರಾಗಿಯೇ ಉಳಿದಿದ್ದಾರೆ. ಇಲ್ಲಿ ಒರ್ನುಡಿಗರ(ಕನ್ನಡವೊಂದನ್ನೇ ಓದಿ, ಬರೆದು, ಮಾತನಾಡಬಲ್ಲವರು) ಮತ್ತು ಇರ್ನುಡಿಗರ(ಕನ್ನಡ ಮತ್ತು ಇಂಗ್ಲಿಶ್ ಎರಡನ್ನೂ ಓದಿ, ಬರೆದು, ಮಾತನಾಡಬಲ್ಲವರು)ಎಣಿಕೆ ಎಶ್ಟೆಶ್ಟಿದೆ ಎಂದು ನಿಶ್ಚಿತವಾಗಿ ಹೇಳಲಾಗದಿದ್ದರೂ  ಒರ್ನುಡಿಗರ ಎಣಿಕೆ ಇರ್ನುಡಿಗರ ಎಣಿಕೆಗಿಂತ ತುಂಬ ಹೆಚ್ಚಿದೆ ಎಂದು ನಿಶ್ಚಿತವಾಗಿ ಹೇಳಬಹುದು. ಕನ್ನಡದ ಕೂಡಣದಲ್ಲಿ ಇನ್ನು ಹಲವು ನುಡಿಗಳು (ತುಳು, ಕೊಂಕಣಿ ಇತರೆ) ಇದ್ದರೂ ಕರ್ನಾಟಕದಲ್ಲಿ ಕಲಿಕೆಯ ಒಯ್ಯುಗೆಯಾಗಿ ಹೆಚ್ಚಾಗಿ ಕನ್ನಡ ಮತ್ತು ಅದನ್ನು ಬಿಟ್ಟರೆ ಇಂಗ್ಲಿಶ್ ನುಡಿಯನ್ನು ಬಳಸಲಾಗುತ್ತಿದೆ. ಹಾಗಾಗಿ ಈ ಬರಹದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡು ನುಡಿಗಳನ್ನು ಮಾತ್ರ ಪರಿಗಣಿಸಲಾಗಿದೆ. 
        ಮೇಲೆ ತೋರಿಸಿದಂತೆ ಕನ್ನಡದ ಕೂಡಣದಲ್ಲಿ ಇರ್ನುಡಿತನದ ಒತ್ತರ ಕಡಿಮೆ ಇರುವಾಗ ಹೆಚ್ಚಿನ ಕನ್ನಡಿಗರ (ಒರ್ನುಡಿಗರ) ಅರಿಮೆ ಮತ್ತು ಚಳಕಗಳು ಮೇಲ್ಮೆಯನ್ನು ಪಡೆಯಲಾರದು ಎಂದು ಹೇಳುವವರು ಇದ್ದಾರೆ. ಅದು ದಿಟವಾದರೆ ಕನ್ನಡದ ಕೂಡಣವನ್ನು ಒಮ್ಮಿಂದೊಮ್ಮೆಗೆ ಇರ್ನುಡಿತನದೆಡೆಗೆ ಕೊಂಡೊಯ್ಯಬೇಕೆ? ಇದಕ್ಕೆ ಬಗೆಹರಿಕೆಗಳೇನು?  ಎಂಬ ಕೇಳ್ವಿಯು ನಮ್ಮ ಮುಂದೆ ಬರುತ್ತದೆ.
       ಎಲ್ಲ ಕಡೆಗಳಿಂದ ಅಳೆದು, ತೂಗಿ ನೋಡಿದರೂ ಎಲ್ಲ ಕನ್ನಡಿಗರು ಸಂಪೂರ್ಣವಾಗಿ ಒರ್ನುಡಿಗರಾಗಿಯೇ ಉಳಿಯಬೇಕಾಗಿಲ್ಲ ಇಲ್ಲವೆ ಎಲ್ಲರೂ ಇರ್ನುಡಿಗರಾಗಬೇಕಾಗಿಯೂ ಇಲ್ಲ ಯಾಕಂದರೆ ಎರಡೂ ಕೂಡ ವಿರುದ್ದ ದಿಕ್ಕಿನಲ್ಲಿ ವಿಪರೀತ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುತ್ತವೆಯತ್ತ ಹೊರತು ಒಂದು ಸಮನ್ವಯ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುವುದಿಲ್ಲ. ಈ ಸಮನ್ವಯ ಸ್ತಿತಿಯಿಂದ ಮಾತ್ರ ಕೂಡಣದ ಏಳಿಗೆ ಸಾದ್ಯ ಎಂಬುದನ್ನು ಇಲ್ಲಿ ಮನಗಾಣಬಹುದಾಗಿದೆ.
       ಹಾಗಾದರೆ ಇಂತಹ ಸಮನ್ವಯ ಸ್ತಿತಿಯತ್ತ ಕನ್ನಡದ ಕೂಡಣವನ್ನು ಕೊಂಡೂಯ್ಯುವುದು ಹೇಗೆ? - ಇದಕ್ಕೆ ಉತ್ತರ ಹೀಗಿದೆ- ಕನ್ನಡದ ಕೂಡಣವನ್ನು ಒಂದು ಸಮನ್ವಯ ಸ್ತಿತಿಯತ್ತ ಕೊಂಡೊಯ್ಯಲು ಒರ್ನುಡಿಗರ ಏಳಿಗೆಗೆ ಬೇಕಾದ ಎಲ್ಲ ಅರಿಮೆಗಳು ಕನ್ನಡದಲ್ಲಿಯೇ ದೊರಯುವಂತಾಗಬೇಕು ಯಾಕಂದರೆ ಒರ್ನುಡಿಗರ ಕಲಿಕೆಯು ಕನ್ನಡದಲ್ಲಿಯೇ ಆಗುತ್ತಿರುತ್ತದೆ. ಒರ್ನುಡಿಗರಿಗೆ ಕನ್ನಡದಲ್ಲಿ ಕಲಿಕೆ ಆದರೇನೆ ಅವರ ಕಲಿಕೆ ಚೆನ್ನಾಗಿ ನಡೆಯಬಲ್ಲುದು. ಕನ್ನಡದಲ್ಲೇ ಎಲ್ಲ ಅರಿಮೆಗಳು ದೊರೆಯಬೇಕಾದರೆ ಇರ್ನುಡಿಗರ ಮೇಲೆ ಕೆಲವು ಹೊಣೆಗಾರಿಕೆಗಳು ಬೀಳುತ್ತವೆ. ಇರ್ನುಡಿಗರು ತಮ್ಮ ಚಳಕಗಳನ್ನು ಬಳಸಿಕೊಂಡು ಇಂಗ್ಲಿಶಿನಲ್ಲಿರುವ ಎಲ್ಲ ಅರಿಮೆಗಳನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಇದನ್ನು ಒರ್ನುಡಿಗರು ಬಳಸಿಕೊಂಡು ತಮ್ಮ ಅರಿವನ್ನು ಮತ್ತು ಮಾಡುಗತನವನ್ನು ಹೆಚ್ಚಿಸಿಕೊಂಡು ಅದನ್ನು ಕಲಿಕೆಯಲ್ಲಿ ಮತ್ತು ದುಡಿಮೆಯಲ್ಲಿ ಬಳಸಿಕೊಳ್ಳಬಹುದು. ಇದಲ್ಲದೆ ಒರ್ನುಡಿಗರು ತಮ್ಮ ಕಲಿಕೆಯಲ್ಲಿ ಇಲ್ಲವೆ ದುಡಿಮೆಯಲ್ಲಿ ಪಡೆದ ’ಕಂಡುಕೊಳ್ಳುವಿಕೆ’ಗಳನ್ನು ಪ್ರಪಂಚಕ್ಕೆ ಮುಟ್ಟಿಸಲು ಇರ್ನುಡಿಗರ ನೆರವನ್ನು ಪಡೆದುಕೊಳ್ಳಬಹುದು. ಹೀಗೆ ಅವರು ತಮ್ಮ ಒರ್ನುಡಿತನವನ್ನು ಉಳಿಸಿಕೊಂಡು  ಇರ್ನುಡಿತನದ ಇಲ್ಲದಿರುವ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇದು ಚೆನ್ನಾಗಿ ನಡೆಯಲು ಇರ್ನುಡಿಗರ ಮತ್ತು ಒರ್ನುಡಿಗರ ನಡುವೆ ಪಾಲುದಾರಿಕೆ ಏರ್ಪಡಬೇಕಾಗುತ್ತದೆ. ಸರ್ಕಾರದವರು ಇಲ್ಲವೆ ಕಾಸಗಿ ಸಂಗ/ಸಂಸ್ತೆಗಳು ಈ ಪಾಲುದಾರಿಕೆ ಏರ್ಪಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಪಾಲುದಾರಿಕೆಯು ಕನ್ನಡದ ಕೂಡಣದ ಒಳಗೆಯೇ ನಡೆಯುವುದರಿಂದ ಇದು ಪರಿಣಾಮಕಾರಿಯಾಗಬಲ್ಲುದು ಯಾಕಂದರೆ ಕನ್ನಡದ ಕೂಡಣದ ಒಳಗೆಯೇ ಒಗ್ಗಟ್ಟನ್ನು ಸಾದಿಸುವುದು ಅಶ್ಟು ಕಶ್ಟವಲ್ಲ. ಕನ್ನಡದ ಕೂಡಣವನ್ನು ಹಿಡಿದಿಟ್ಟಿರುವುದು ’ಕನ್ನಡ’ ನುಡಿಯೇ ಅಲ್ಲವೆ?
      ಒರ್ನುಡಿತನವೂ ಬೇಕು , ಇರ್ನುಡಿತನವೂ ಬೇಕು ಆದರೆ ಒರ್ನುಡಿತನಕ್ಕೆ ಇಂಬು ಕೊಡುವಂತೆ ಇರ್ನುಡಿತನ ಇರಬೇಕೇ ಹೊರತು ಒರ್ನುಡಿತನವನ್ನು ನುಂಗಿಹಾಕುವ ಇರ್ನುಡಿತನವು ಕಂಡಿತ ಕನ್ನಡದ ಕೂಡಣಕ್ಕೆ ಬೇಡ ಅಂದರೆ ಕನ್ನಡವನ್ನು ನುಂಗಿ ಹಾಕುವಶ್ಟರ ಮಟ್ಟಿಗೆ ಇಂಗ್ಲಿಶಿನ ಅವಶ್ಯಕತೆ ಕನ್ನಡದ ಕೂಡಣಕ್ಕಿಲ್ಲ.

ಪದಪಟ್ಟಿ
ಒರ್ನುಡಿತನ - Monolingualism
ಇರ್ನುಡಿತನ - Bilingualism
ಒಯ್ಯುಗೆ      - Medium
ಮಿಂಬಲೆ     - Internet
ಕೂಡಣ      - Society

ಕಾಮೆಂಟ್‌ಗಳಿಲ್ಲ: