ಶುಕ್ರವಾರ, ಜುಲೈ 27, 2012

ಕನ್ನಡಿಗರು ಯಾಕೆ ಗರ ಮತ್ತು ಅರಿಲುಗಳಿಗೆ(ನಕ್ಶತ್ರ) ಹೆಸರಿಡಲಿಲ್ಲ?

ಹಿಂದೊಮ್ಮೆ ಪಂಡಿತರೊಬ್ಬರು ’ಕನ್ನಡಿಗರೇಕೆ ಗ್ರಹ ಮತ್ತು ನಕ್ಶತ್ರಗಳಿಗೆ ಹೆಸರು ಕೊಡಲಿಲ್ಲ?" ಎಂದು ಕೇಳ್ವಿ ಎಸೆದಿದ್ದರು. ಅದಕ್ಕೆ ಸೂಕ್ತವಾದ ಮಾರುಲಿಯನ್ನು ನಾನು ಅರಸುತ್ತಲೇ ಇದ್ದೆ. ಹಾಗೆ ಎಡೆಬಿಡದ ಪದಗಳ ಅರಕೆ ಮಾಡುವಾಗ ಕೆಲವು ಗಮನಿಕೆಗಳು ಮತ್ತು ಅದರಿಂದ ದೊರೆತ ತೀರ್ಮೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಕನ್ನಡದಲ್ಲಿ ’ನನ್’ ಎಂಬ ಪದಬೇರಿದೆ. ಅದರಿಂದ ಪದಗಳು ಯಾವುವು ಎಂಬುದನ್ನ ನೋಡೋಣ:-

ನನ್ + ಪು = ನಂಬು , ನಂಬು+ಇಕೆ = ನಂಬಿಕೆ (belief)
ನನ್+ ನಿ = ನನ್ನಿ (truth)
ನನ್+ಟ = ನಂಟ (relative)
ನಣ್+ಪು = ನಣ್ಪು (friendship)

ನಂಟರು ಎಂಬುದಕ್ಕೆ ನಾವು ಆಡುಮಾತಿನಲ್ಲಿ ’ಹತ್ತಿರ’ದವರು ಎಂದೂ ಕರೆಯುತ್ತೇವೆ. ಹತ್ತಿರದವರೇ ನಮಗೆ ಆಪ್ತರು,ಒಲವಿಗರು ಮತ್ತು ನೋವು-ನಲಿವಿನಲ್ಲಿ ಜೊತೆಯಿರುವವರು. ಅಂದರೆ ’ನಂಬಿಕೆ’ಗೆ ಪಾತ್ರರಾದವರು. ಈ ಮೇಲಿನ ಎಲ್ಲ ಪದಗಳಲ್ಲೂ ನನ್/ನಣ್ ಎಂಬುದು ’near' ಎಂಬ ಬೇರು ಹುರುಳೇ ಆಗಿದೆ. ಅಂದರೆ ಕನ್ನಡದಲ್ಲಿ ಮೊದಲಿನಿಂದಲೂ ’ಹತ್ತಿರ’ ಎಂಬುದನ್ನು ’ದಿಟ’(truth) ಎಂಬುದಕ್ಕೆ ತಳುಕು ಹಾಕುವ ಇಲ್ಲವೆ ಬೆಸೆಯುವ ಒಂದು ಸಂಪ್ರದಾಯ ಇದೆ. ಅದಕ್ಕೇ ಇರಬೇಕು ದೂರದಲ್ಲಿರುವ ವಸ್ತು ವಿಶಯಗಳು ಹಿಂದಿನ ಕನ್ನಡಿಗರನ್ನು ಅಶ್ಟು ಕಾಡಲಿಲ್ಲ. ಬಹುಶಹ ಅದರ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ದೂರದಲ್ಲಿರುವ ವಸ್ತುಗಳಾದ ಗ್ರಹ, ಅರಿಲುಗಳ ಗೋಜಿಗೆ ಕನ್ನಡಿಗರು ಹೋಗಲಿಲ್ಲ. ನಂಬಿಕೆಯೇ ಇಲ್ಲದ ವಸ್ತು-ವಿಶಯಗಳ ಬಗ್ಗೆ ಮಾತಾಡಿ/ಉಂಕಿಸಿ ಬಳಕೆಯೇನು? ಹಾಗಾಗಿ ದೂರದಲ್ಲಿ ಎಲ್ಲೋ ಇರುವ ಗ್ರಹ ಮತ್ತು ಅರಿಲುಗಳಿಗೆ ಹೆಸರು ಕೊಡುವುದಕ್ಕಿಂತ ಆಗ ತಲೆಮೆಯೆ ವಿಶಯಗಳು ಅವರಿಗೆ ಹೇರಳವಾಗಿದ್ದವು ಎಂಬುದು ನನ್ನ ಎಣಿಕೆ.
ಇಲ್ಲಿ ಇನ್ನೊಂದು ವಿಶಯ ತಿಳಿಯುವುದೇನೆಂದರೆ ಹೇಗೆ ನಮ್ಮ ಪದದ ಹುಟ್ಟುಗಳು/ಗುಟ್ಟುಗಳು ನಮ್ಮ ಅರಿಮೆಯ ಹೊನಲನ್ನು ಹರಿಯುವ ಬಗೆಯನ್ನು ತೀರ್ಮಾನಿಸುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಹಾಗಾಗಿ ನಮ್ಮ ಪದಗಳು ನಮ್ಮ ಹಿನ್ನಡವಳಿಗೆ ಕಯ್ ಹಿಡಿದಂತೆ. ಅದಕ್ಕಾಗಿಯೇ ಪದಗಳಲ್ಲಿರುವ ಒಳಗುಟ್ಟನ್ನು ಅರಿಯುವ ಬಗೆ(ಮನಸ್ಸು) ಮತ್ತು ಮೊಗಸು ಎರಡೂ ಮಾಡಬೇಕಾಗಿದೆ.

3 ಕಾಮೆಂಟ್‌ಗಳು:

hamsanandi ಹೇಳಿದರು...

>>ದೂರದಲ್ಲಿರುವ ವಸ್ತು ವಿಶಯಗಳು ಹಿಂದಿನ ಕನ್ನಡಿಗರನ್ನು ಅಶ್ಟು ಕಾಡಲಿಲ್ಲ. ಬಹುಶಹ ಅದರ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ದೂರದಲ್ಲಿರುವ ವಸ್ತುಗಳಾದ ಗ್ರಹ,
>>ಅರಿಲುಗಳ ಗೋಜಿಗೆ ಕನ್ನಡಿಗರು ಹೋಗಲಿಲ್ಲ. ನಂಬಿಕೆಯೇ ಇಲ್ಲದ ವಸ್ತು-ವಿಶಯಗಳ ಬಗ್ಗೆ ಮಾತಾಡಿ/ಉಂಕಿಸಿ ಬಳಕೆಯೇನು? ಹಾಗಾಗಿ ದೂರದಲ್ಲಿ ಎಲ್ಲೋ ಇರುವ ಗ್ರಹ
>>ಮತ್ತು ಅರಿಲುಗಳಿಗೆ ಹೆಸರು ಕೊಡುವುದಕ್ಕಿಂತ ಆಗ ತಲೆಮೆಯೆ ವಿಶಯಗಳು ಅವರಿಗೆ ಹೇರಳವಾಗಿದ್ದವು ಎಂಬುದು ನನ್ನ ಎಣಿಕೆ.

ಮೊದಲಿಗೆ "ನಕ್ಷತ್ರ" ಅನ್ನೋದಕ್ಕೆ, ಬಳಸಬೇಕೆಂದವರಿಗೆ ಚಿಕ್ಕೆ ಅನ್ನೋ ಹೆಸರಿದ್ದೇ ಇದೆ. ಶುಕ್ರಕ್ಕೆ ಬೆಳ್ಳಿ ಚಿಕ್ಕೆ ಅನ್ನುವುದನ್ನು ನೀವು ಕೇಳೇ ಇರುತ್ತೀರ. ಹಾಗೇ ಧೂಮಕೇತುವಿಗೆ ಬಾಲಚಿಕ್ಕೆ ಅನ್ನೋ ಹೆಸರು ಇದೆ. ಇನ್ನು ಒರೈಯನ್ ಗೆ - ಅಜ್ಜಿ ಮಂಚದ ಕೆಳಗೆ ಮೂರು ಕಳ್ಳರು, ಅನ್ನೋ ಹೆಸರಿದೆಯಂತೆ.

ಇನ್ನು ಇಪ್ಪತ್ತೇಳು ನಕ್ಷತ್ರಗಳಿಗೂ ಆಶ್ವಿನಿ ಭರಣಿ ಮೊದಲಾದ ಹೆಸರುಗಳನ್ನೇ ತಮ್ಮದೇ ಹೆಸರಾಗಿಸಿಕೊಂಡೇ ಅವು ಗಾದೆಗಳಲ್ಲೂ ಹಾಸುಹೊಕ್ಕಾಗಿರುವಾಗ ಆ ಹೆಸರುಗಳು ಕನ್ನಡದ್ದಲ್ಲ ಅಂತ ಹೇಳುವುದೇ ಸರಿಯಲ್ಲ ಅನ್ನುವುದು ನನ್ನೆಣಿಕೆ. (ಕೆಳಗಿನ ಗಾದೆಗಳು ಕಣಜದಿಂದ ತೆಗೆದುಕೊಂಡದ್ದು)

’ಉತ್ರಿ ಜ್ವಾಳಾ ಬಿತ್ರಿ’
’ಆದರೆ ಹಸ್ತ ಆಗದಿದ್ದರೆ ಹುಲ್ಲಕಿಸ್ತಾ’
’ಸ್ವಾತಿ ಮಳಿ ಹೇತೀನಂದ್ರ ಬಿಡಲಿಲ್ಲಂತ’
’ಮೃಗಾ ಮಿಂಚಬಾರ್ದು, ಆರಿದ್ರ ಗದ್ದರಿಸಬಾರದು’
’ಆದರೆ ಮಗಿ, ಆಗದಿದ್ದರೆ ಹೊಗಿ’
’ರೋಣಿ ಮಳಿ ಬಂದರೆ ಓಣೆಲ್ಲಾ ಜ್ವಾಳ’

ರೈತರಿಗೆ ಮಳೆಗಿಂತ ಹತ್ತಿರದ ವಿಷಯವಿದೆಯೆ? ಅದಕ್ಕೇ ಮೇಲಿನ ವಿಚಾರ ಸರಣಿ ಮೇಲ್ನೋಟಕ್ಕೆ ಸರಿ ಇರಬಹುದೆನ್ನಿಸಬಹುದಾದರೂ, ಯೋಚಿಸಿ ನೋಡಿದಾಗ ಇದು ಸರಿಯಿಲ್ಲ ಅನ್ನಲೇಬೇಕಾಗುತ್ತೆ! ಇಲ್ಲ, ಇದಕ್ಕೆ ಚೆನ್ನಾಗಿ ಪರಿಚಿತವಾದ ಹೆಸರೇ ಇರುವಾಗ, ಅದರ ಬಗ್ಗೆ ಹೊಸದಾಗಿ ಯೋಚಿಸಿ, ಬೇರೆ ಅಚ್ಚಕನ್ನಡದ ಹೆಸರು ಕೊಡುವುದು ಬೇಕಾಗಿಲ್ಲ ಅನ್ನುವುದು ಅವರ ಎಣಿಕೆ ಆಗಿದ್ದಿರಬಹುದೇನೋ.

Unknown ಹೇಳಿದರು...

Hamsanandi Haasana,

ತಮ್ಮ ಮಾರುಲಿಗೆ ನನ್ನಿ:-

ಮೊದಲಿಗೆ ಚುಕ್ಕಿ , ಚಿಕ್ಕೆ ಇದು ಅರಿಲು ಎಂಬುದಕ್ಕೆ ಆಯಿತು. ಆದರೆ ಎಶ್ಟೊಂದು ಅರಿಲುಗಳಿವಿಯೆಲ್ಲ?? ಅವುಗಳಿಗೆ ಹೆಸರು ಇಲ್ಲ.
ಇನ್ನು 'ಅಜ್ಜಿ ಮಂಚದ ಕೆಳಗೆ...." ಇವೆಲ್ಲ ಅರಿಮೆಗಳೇ? ನಗೆಗೋಸ್ಕರ ಹೇಳಿರಬಹುದು

ನೀವು ಹೇಳಿರುವ ಗಾದೆಗಳು ಆಮೇಲೆ ಅಂದರೆ ಸಕ್ಕದಿಗರು-ಕನ್ನಡಿಗರು ಬೆರೆತ ಮೇಲೆ ಹುಟ್ಟಿದವು ಯಾಕಂದರೆ ಅದರಲ್ಲಿ ಹಲವು ಸಕ್ಕದದ ಪದಗಳು ಇವೆ. ನಾನು ಇಲ್ಲಿ ಮಾತಾಡುತ್ತಿರುವುದು ಸಕ್ಕದಿಗರ ಸೋಂಕಿಗೆ ಬರದ ಕನ್ನಡಿಗರ ಬಗ್ಗೆ.

ಕನ್ನಡದ್ದೇ ಆದ ಮರಗಳ ಹೆಸರುಗಳು(ಅರಳಿ, ಬೂರುಗ), ಗಿಡಗಳ ಹೆಸರುಗಳು(ಮಲ್ಲಿಗೆ, ತುಂಬೆ), ದೇವರುಗಳ(ಮಾರಮ್ಮ, ಕೆಂಪ, ನಂಜಯ್ಯ) ಹೆಸರುಗಳು ಇರಲಿಲ್ಲವೇ ಹಾಗೆ.

hamsanandi ಹೇಳಿದರು...

>> ಆದರೆ ಎಶ್ಟೊಂದು ಅರಿಲುಗಳಿವಿಯೆಲ್ಲ?? ಅವುಗಳಿಗೆ ಹೆಸರು ಇಲ್ಲ

ಹಾಗೆ ನೋಡಿದರೆ ಎಷ್ಟೋ ನಕ್ಷತ್ರಗಳಿಗೆ ಹೆಸರು ಇಲ್ಲ (ಯಾವುದೇ ಭಾಷೆಯನ್ನು ಬೇಕಾದರೂ ತೆಗೆದುಕೊಳ್ಳಬಹುದು! ಬರಿಗಣ್ಣಿಗೆ ಕಾಣುವ ಎಲ್ಲ ನಕ್ಷತ್ರಗಳಿಗೂ ಹೆಸರು ಇದ್ದೇಇದೆ ಅಂತಿಲ್ಲ.

ಇನ್ನು (ಬೇರೆ ಭಾಷೆಯಲ್ಲಿ ಹೆಸರಿರುವ) ನಕ್ಷತ್ರಗಳಿಗೂ ಆ ಹೆಸರುಗಳು ಯಾಕೆ ಬಂತು ಅನ್ನೋದನ್ನ ಗಮನಿಸಿದ್ದರೆ " ಇವೆಲ್ಲ ಅರಿಮೆಗಳೇ? ನಗೆಗೋಸ್ಕರ ಹೇಳಿರಬಹುದು" - ಅಂತ ನೀವೆನ್ನುತ್ತಿರಲಿಲ್ಲ! ಅಜ್ಜಿ ಮಂಚದ ಕೆಳಗೆ ... ಆದರೂ ಬೆಲ್ಟ್ ಆಫ್ ಒರೈಯನ್ ಅಂದರೂ, ಎರಡೂ ಏನೋ ಕಥೆಗಳಿಂದ ಮಾತ್ರವೇ ಬಂದಿರುವುದು. ಒಟ್ಟಿನಲ್ಲಿ ಏನೋ ಒಂದು ಗುರುತು ಅಷ್ಟೇ.