ಭಾನುವಾರ, ಡಿಸೆಂಬರ್ 24, 2006

ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada

ದೋಷ ನಿಯಂತ್ರಣ ಸಾಂಕೇತತ್ವ
-------------------------
ಮಾನವನ ಆವಿಷ್ಕಾರಗಳಲ್ಲಿ ಮಾಹಿತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಿಶ್ವಸನೀಯವಾಗಿ ರವಾನಿಸುವುದು ಕ್ರಾಂತಿಕಾರಕ ಮತ್ತು ಅತ್ಯಂತ ಮಹತ್ವಪೂರ್ಣವಾದುದು. ಏಕೆಂದರೆ ಇದು ಇಂದು ಬೃಹದಾಅಕಾರವಾಗಿ ಬೆಳೆದು ನಿಂತಿರುವ ಮಾಹಿತಿ ತಂತ್ರಜ್ನಾನದ ತಳಹದಿ. ಮಾಹಿತಿಯನ್ನು ದೋಷಮುಕ್ತವಾಗಿ ರವಾನಿಸುವುದಕ್ಕೆ ಬಹು ಮಟ್ಟಿಗೆ ಕಾರಣವಾದುದು ದೋಷ ನಿಯಂತ್ರಣ ತತ್ವಗಳು. ಆಧುನಿಕ ದೋಷ ನಿಯಂತ್ರಣ ತತ್ವಗಳನ್ನು ಶತಮಾನಗಳಿಗಿಂತಲು ಹಳೆಯದಾದ ಗಣಿತದ ಸಿದ್ಧಾಂತಗಳ ತಳಹದಿಯ ಮೇಲೆ ಬೆಳೆಸಲಾಗಿದೆ. ಈ ತತ್ವಗಳ ಕೆಲಸ ನಲವತ್ತರ ದಶಕದಲ್ಲಿ ಪ್ರಾರಂಭವಾಯಿರಾದರೂ ೫೦ ರಿಂದ ೭೦ರ ದಶಕಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳಾಯಿತು.

ಇತಿಹಾಸ
--------
೧೯೪೮ರಲ್ಲಿ ಕ್ಲಾಡ್ ಶಾನನ್ ಮಾಹಿತಿ ಸಾಮರ್ಥ್ಯ ಸಿದ್ಧಾಂತವನ್ನು ಮಂಡಿಸಿದ.
"ಮಾಹಿತಿಯ ಪ್ರಮಾಣ ಅದರ ವಾಹಿನಿಯ ಸಾಮರ್ಥ್ಯಕ್ಕಿಂತ ಕಡಿಮೆ ಇದ್ದಲ್ಲಿ, ಉಳಿದ (ಮಾಹಿತಿಯ) ಸಾಮರ್ಥ್ಯವನ್ನು ಉಪಯೋಗಿಸಿ ದೋಷ ನಿಯಂತ್ರಣ ಸಂಕೇತಗಳನ್ನು ಕಳುಹಿಸುವ ಮೂಲಕ ಸಂದೇಶದ ಸಮಗ್ರತೆಯನ್ನು ಉತ್ತಮಪಡಿಸಬಹುದು",

ಆದರೆ ಶಾನನ್, ಸಂಕೇತಗಳನ್ನು ಹೇಗೆ ಕಳುಹಿಸುವುದು ಮತ್ತು ಅದರ ಉಪಯೋಗವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಎನೂ ಹೇಳಲಿಲ್ಲ. ೫೦ ರ ದಶಕದ ಪೂರ್ವಾರ್ಧದಲ್ಲಿ ಮೊದಲ ಬಾರಿಗೆ ಒಂದು ಬಿಟ್( ಮಾಹಿತಿಯ ಮೂಲಮಾನ) ದೋಷ ಸರಿಪಡಿಸಬಹುದಾದ ಹ್ಯಾಮಿಂಗ್ ಸಾಂಕೇತಗಳನ್ನು ಕಂಡು ಹಿಡಿಯಲಾಯಿತು. ನಂತರ ಉತ್ತರಾರ್ಧದಲ್ಲಿ ರೀಡ್-ಸಾಲೋಮನ್ ಸಾಂಕೇತಗಳು ಜನ್ಮ ತಾಳಿದವು. ಈ ಸಂಕೇತಗಳು ಪ್ರತಿ ಬಿಟ್ ಗಳ ಮೇಲೆ ಅವಲಂಬಿಸದೆ ಇಂತಹ ಹಲವು ಬಿಟ್ ಗಳಿಂದಾದ ಚಿಹ್ನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗೆ ದೋಷ ನಿಯಂತ್ರಣ ತತ್ವಗಳು ಎರಡು ಕವಲಾದವು. ಒಂದು ಬಿಟ್ ಆಧಾರಿತ ಮತ್ತೊಂದು ಚಿಹ್ನೆ ಆಧಾರಿತ. ಮುಂದಿನ ದಿನಗಳಲ್ಲಿ ಈ ಸಾಂಕೇತಗಳನ್ನು ಕಾರ್ಯ ರೂಪಕ್ಕೆ ತರುವ ವಿಧಾನಗಳ ಮೇಲೆ ಸಂಶೋಧನೆಗಳು ನಡೆದವು. ಮತ್ತೊಂದು ಕಡೆ ಇದಕ್ಕೆ ಸಮನಾಂತರವಾಗಿ ೫೦ ರ ದಶಕದಲ್ಲಿ ಕನ್ವೊಲ್ಯುಶನ್ ಸಾಂಕೇತಗಳು ಮುಖ್ಯಧಾರೆಗೆ ಬಂದವು.ಇದರ ವಿಶೇಷತೆಯೇನೆಂದರೆ ಸಾಂಕೇತೀಕರಣ/ನಿಸ್ಸಾಂಕೇತೀಕರಣಗೊಳಿಸುವ ಮೊದಲು ಮಾಹಿತಿಯನ್ನು ನಿರ್ದಿಷ್ಟ ಪ್ರಮಾಣಕ್ಕೆ ರೂಪಂತಿರಿಸುವ ಅವಶ್ಯಕತೆಯಿರಲಿಲ್ಲ. ೧೯೬೨ರಲ್ಲಿ ವಿಟರ್ಬಿ ರೂಪಿಸಿದ 'ಗರಿಷ್ಥ ಸಂಭಾವ್ಯತೆ" ಎನ್ನುವ ವಿಧಾನ ಪ್ರಖ್ಯಾತಿಯನ್ನು ಪಡೆಯಿತು. ೮೦ ರ ದಶಕದಲ್ಲಿ ಮಾಹಿತಿ ಮಾರ್ಪಡಿಸುವ ಕ್ರಿಯೆಯಲ್ಲಿ ಕನ್ವೊಲ್ಯೂಶನ್ ಸಾಂಕೇತಗಳು ಉಪಯೋಗಕ್ಕೆ ಬಂದವು. ನಂತರ ಮಾಹಿತಿ ಮಾರ್ಪಡಿಸುವ ಕ್ರಿಯೆ ಮತ್ತು ದೋಷ ನಿಯಂತ್ರಣ ಸಾಂಕೇತೀಕರಣ ಕ್ರಿಯೆಗಳು ಸಂಯೋಜನೆಗೊಂಡು ಅವುಗಳಿಗಿದ್ದ ಅಂತರವು ಕನಿಷ್ಥಗೊಂಡಿತು. ಅಂದರೆ ಒಂದೆ ಬಾಣದಲ್ಲಿ ಎರಡು ಹಕ್ಕಿಗಳನ್ನು ಕೊಲ್ಲುವ ಹಾಗೆ.

ಉಪಸಂಹಾರ
--------
ಈ ದಿನಗಳಲ್ಲಿ 'ಟರ್ಬೊ' ಸಾಂಕೇತಗಳ ಮೇಲೆ ತಂತ್ರಜ್ನರು ಗಮನವನ್ನು ಕೇಂದ್ರೀಕರಿಸಿದ್ದಾರೆ ಏಕೆಂದರೆ ಟರ್ಬೊ ಸಂಕೇತಗಳು, ದೋಷ ನಿಯಂತ್ರಣ ತತ್ವಗಳಿಂದ ನಾವು ಏನನ್ನು ಸಾಧಿಸಬಹುದು ಅದರ ಸೈದ್ಧಾಂತಿಕ ಮಿತಿಗೆ ಕೊಂಡೊಯ್ಯುತ್ತವೆ ಎಂಬುದು ಅವರ ಅಂಬೋಣ.

ಕಾಮೆಂಟ್‌ಗಳಿಲ್ಲ: