ಶನಿವಾರ, ಮೇ 21, 2016

ಎತ್ತೆತ್ತಲ್...

ಹತ್ತಿ ಮರವ ಕಿತ್ತ ಹಣ್ಣನು
ಕಚ್ಚಿ ತಿನದಿದ್ದೊಡೆ
ಎತ್ತಿ ಮುದ್ದಾಡಲ್ ಮನೆಯೊಳ್
ಹೆತ್ತ ಮಕ್ಕಳ್ ಇಲದಿದ್ದೊಡೆ
ಮತ್ತೆಂತಯ್ಯ ನನ್ನ ಕಾಣ್ಕೆ ಮತ್ತಿತಾಳಯ್ಯ
ಎತ್ತೆತ್ತಲ್ ನಿನ್ನ ಕಾಣದಿದ್ದೊಡೆ

ಶನಿವಾರ, ಏಪ್ರಿಲ್ 30, 2016

’ರಾಶ್ಟ್ರೀಯತೆ’ಯ ಬಗೆಗಿನ ಚರ‍್ಚೆಗಳು - ಒಂದು ಸೀಳುನೋಟ

ಇತ್ತೀಚೆಗೆ ಕೆಲವು ಚಿಂತಕರು ’ರಾಶ್ಟ್ರೀಯತೆ’ ಎಂಬುದನ್ನು ಈ ನೆಲದ ಬೇರ‍್ಮೆ(Diversity)ಗಳಲ್ಲಿ ಹುಡುಕಲು ನೋಡುತ್ತಿದ್ದಾರೆ. ಹಾಗೆ ಮಾಡುವಾಗ ಇಂಡಿಯಾದ ನೆಲದಲ್ಲಿರುವ ಹಲವು ತೆರನಾದ ಬೇರ‍್ಮೆಗಳನ್ನು ಅವರು ಬರಹಕ್ಕಿಳಿಸುತ್ತಾ ಹೋಗುತ್ತಾರೆ. ಹೀಗೆ ಬೇರ‍್ಮೆಗಳನ್ನು ಬರಹಕ್ಕೆ ಇಳಿಸುವುದರಿಂದ ಅವುಗಳನ್ನು ಗುರುತಿಸಿದ ಹಾಗೆ ಆಗುತ್ತದೆಯೇ ಹೊರತು ’ರಾಶ್ಟ್ರೀಯತೆ’ಯನ್ನು ವಿವರಿಸಲಾಗುವುದಿಲ್ಲ. ಆದ್ದರಿಂದ ಬೇರ‍್ಮೆಗಳ ಮೂಲಕ ’ರಾಶ್ಟ್ರೀಯತೆ’ಯನ್ನು ಕಲ್ಪಿಸಿಕೊಳ್ಳುವುದು ಮಂದಿಗೆ ತೊಡಕು ತೊಡಕಾಗಿದೆ. ಅಲ್ಲದೆ ’ದೇಶ’ ಮತ್ತು ’ರಾಶ್ಟ್ರ’ ಎಂಬ ಪದಗಳನ್ನು ಒಂದರ ಬದಲು ಇನ್ನೊಂದನ್ನು ಸಲೀಸಾಗಿ ಬಳಸುವುದರಿಂದ ಚಿಂತನೆಗಳಲ್ಲಿ ಗೊಂದಲಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ರಾಶ್ಟ್ರೀಯತೆಯನ್ನು ಸರಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ.

ಮೊದಲನೆಯದಾಗಿ, ’ದೇಶ’ ಎಂಬುದನ್ನು ’country’ ಎಂಬುದಕ್ಕೂ, ’ರಾಶ್ಟ್ರ’ ಎಂಬುದನ್ನು ’Nation’ ಎಂಬುದಕ್ಕೂ ಬಳಸುವುದು ಸರಿ. ಅಲ್ಲದೆ ’ದೇಶ’ ಮತ್ತು ’ರಾಶ್ಟ್ರ’ ಎಂಬೆರಡು ಪದಗಳಲ್ಲಿರುವ ಬೇರೆತನವನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ದೇಶ ಎಂಬುದು ಆ ’ನೆಲ’ವನ್ನಶ್ಟೆ ಸೂಚಿಸುತ್ತದೆ ಆದರೆ ’ರಾಶ್ಟ್ರ’ ಅಂದರೆ ’ನೇಶನ್’ ಎಂಬುದು ಸೂಚಿಸುವುದು ನೆಲವನ್ನಲ್ಲ. ಅದರ ಗುರಿಗಳು ಬೇರೆಯೇ ಆಗಿವೆ.

ಎರಡೆನೆಯದಾಗಿ, ನೇಶನ್ ಎಂಬುದಕ್ಕೆ ಕನ್ನಡವೂ ಸೇರಿದಂತೆ ಇಂಡಿಯಾದ ಇತರೆ ನುಡಿಗಳಲ್ಲಿ ಸರಿಯಾದ ಪದವೇ ಇಲ್ಲ. ಅಂದರೆ ಈ ತಿಳುವಳಿಕೆ ಇಂಡಿಯ ದೇಶದಲ್ಲಿ/ನೆಲದಲ್ಲಿ ಹುಟ್ಟಿದ್ದಲ್ಲ; ಇದು ಹುಟ್ಟಿದ್ದು ಯೂರೋಪಿನ ನೆಲದಲ್ಲಿ. ಈ ತಿಳುವಳಿಕೆಯನ್ನು ಎರವಲು ಪಡೆದುಕೊಂಡು ಸಂಸ್ಕ್ರುತದ ’ರಾಶ್ಟ್ರ’ ಎಂಬ ಪದವನ್ನು ’ನೇಶನ್’ ಎಂಬುದಕ್ಕೆ ಸಾಟಿಯಾಗಿ ಬಳಸುವ ಪರಿಪಾಟ ಬೆಳೆದು ಬಂದಿದೆ. ಯೂರೋಪಿನಲ್ಲಿ ಹುಟ್ಟಿ ಬೆಳೆದ ಈ ನೇಶನ್ ಎಂಬುದನ್ನು ಒಂದು ನೆಮ್ಮು(religion), ಒಂದು ಜಾತಿ, ಒಂದು ನಡವಳಿ, ಒಂದು ಹಳಮೆ, ಒಂದು ನುಡಿಯನ್ನು ನೆಚ್ಚಿಕೊಂಡು ವಿವರಿಸಲು ಆಗುವುದಿಲ್ಲ. ಹಾಗೆ ವಿವರಿಸಲು ಹೋದರೆ ಇವತ್ತಿನ ಇಂಡಿಯ ಸೇರಿದಂತೆ ಹಲವು ’ನೇಶನ್’ಗಳ ಏರ್ಪಾಟುಗಳನ್ನು ಹೇಗೆ ವಿವರಿಸುತ್ತೀರಿ?
ಆದ್ದರಿಂದ ನೇಶನ್ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ನಾವು ರಬೀಂದ್ರನಾತ್ ಟಾಕೂರ್ ಅವರ ಚಿಂತನೆಗಳ ಮೊರೆ ಹೋಗಬೇಕಾಗುತ್ತದೆ. ಅವರು ತಮ್ಮ ’ನ್ಯಾಶನಾಲಿಸಮ್’[Nationalism - Rabindranath Tagore, 1917] ಎಂಬ ಹೊತ್ತಗೆಯಲ್ಲಿ ಹೀಗೆ ಹೇಳಿದ್ದಾರೆ - ’When this organization of politics and commerce, whose other name is Nation’ . ಇದರಲ್ಲಿ ನಮಗೆ ನೇಶನ್ ಎಂಬುದರ ಸರಿಯಾದ ಹುರುಳು ಸಿಗುತ್ತದೆ. ಅದೇನೆಂದರೆ ಆಳ್ಮೆ(ರಾಜಕೀಯ) ಮತ್ತು ಕೊಳುಕೊಡೆ(ವಾಣಿಜ್ಯ)ಗಳ ಒಂದು ಕೂಟಗೆಯೇ ನೇಶನ್ ಎಂಬುದನ್ನು ಇಲ್ಲಿ ಮನಗಾಣಬಹುದು. [ಇಲ್ಲಿ ’ಕೊಳುಕೊಡೆ’ ಎಂಬ ಪದವನ್ನು ಹಣಕಾಸಿನಿಂದ ನಡೆಯುವ ಸರಕುಗಳ ’ಮಾರಾಟ ಮತ್ತು ಅದರ ಏರ‍್ಪಾಟು’ ಎಂದು ತಿಳಿದುಕೊಳ್ಳಬೇಕು]

ಮೂರನೆಯದಾಗಿ, ನೇಶನ್ ಎಂಬುದರ ಗುರಿ ಈ ಎರಡು ಎಂಜಿನ್ಗಳಾದ ಅಂದರೆ ಆಳ್ಮೆ ಮತ್ತು ಕೊಳುಕೊಡೆಗಳನ್ನು ಹೇಗೆ ಚೆನ್ನಾಗಿ ನಡೆಸುವುದು ಎಂಬುದೇ ಆಗಿರುತ್ತದೆ. ಇದರಲ್ಲಿ ನೇರವಾಗಿ ಮಾನವೀಯ ಅಂಶಗಳಾದ ನುಡಿ, ನಡವಳಿ ಇವುಗಳಿಗೆ ಬೆಲೆಯಿಲ್ಲ. ಇಂಡಿಯಾದಲ್ಲಿ ಈ ಎರಡು ಎಂಜಿನ್ಗಳನ್ನು ದೆಹಲಿಯ ಆಳ್ವಿಕೆಯು ತನ್ನ ಅಂಕೆಯಲ್ಲಿಟ್ಟುಕೊಂಡಿದೆ. ರಾಜ್ಯಗಳ ಆಳ್ವಿಕೆಗಳು ಅವುಗಳನ್ನು ಪಾಲನೆ ಮಾಡುವುದಕ್ಕಶ್ಟೆ ಇರುವಂತೆ ಇವೆ. ಆಳ್ಮೆ ಮತ್ತು ಹಣಕಾಸಿಗೆ ನಂಟಿರುವ ಯಾವುದೇ ಕಟ್ಟಲೆಗಳನ್ನು ಕಟ್ಟುವುದರಲ್ಲಿ ಮತ್ತು ಅವುಗಳನ್ನು ರೂಪಿಸುವಲ್ಲಿ ಹೆಚ್ಚಾಗಿ ದೆಹಲಿ (ನೇಶನ್ ಎಂಬುದರ ಕೇಂದ್ರ) ಆಳ್ವಿಕೆಯ ಕಯ್ವಾಡವಿದೆ. ಸಂವಿದಾನದ ಪ್ರಕಾರವಾಗಿ ಇಂಡಿಯ ಎಂಬುದನ್ನು ಒಂದು ಒಪ್ಪುಕೂಟವೆಂದು ಹೇಳಿದ್ದರೂ ಒಪ್ಪುಕೂಟದ ಗುಣಗಳನ್ನು ಅದು ಹೊಂದಿಲ್ಲ.ಅದರ ಬದಲು ಹೆಚ್ಚಾಗಿ ’ನೇಶನ್’ ಎಂಬುದರ ಗುಣಗಳನ್ನು ಹೊಂದಿದೆ. ಅಂದರೆ ಆಳ್ಮೆ ಮತ್ತು ಕೊಳುಕೊಡೆಗಳನ್ನು ಒಂದು ಕೇಂದ್ರ ತಾಣದಿಂದ ನಿಯಂತ್ರಿಸಲಾಗುತ್ತಿದೆ.

ಯುವ ಚಿಂತಕರಾದ ಕಿರಣ್ ಬಾಟ್ನಿಯವರು ತಮ್ಮ ’The Pyramid of Corruption’ [Kiran Batni, 2014] ಎಂಬ ಹೊತ್ತಗೆಯಲ್ಲಿ ಬ್ರಿಟಿಶರು ಬರುವುದಕ್ಕೆ ಮುಂಚೆ ’ಇಂಡಿಯ’ ಎಂಬ ನೇಶನ್ ಇರಲಿಲ್ಲ. ಬ್ರಿಟಿಶರು ತಮ್ಮ ಗಳಿಕೆಗಾಗಿ ಈ ’ಇಂಡಿಯನ್ ನೇಶನ್’ ಎಂಬುದನ್ನು ಹುಟ್ಟುಹಾಕಿದರು ಎಂದು ಹೇಳುತ್ತಾರೆ. ಈ ನೇಶನ್ ಎಂಬುದು ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುವ ಹಲವು ಕಾಯ್ದೆ-ಕಾನೂನುಗಳನ್ನು ಅವರು ಮಾಡಿದರು. ಅಲ್ಲದೆ ಈ ನೇಶನ್ ಚೆನ್ನಾಗಿ ಕೆಲಸ ಮಾಡಿದಶ್ಟು ಹೆಚ್ಚು ಗಳಿಕೆ ಬ್ರಿಟಿಶರಗೆ ಆಗುತ್ತಿತ್ತಲ್ಲದೆ ಈ ನೆಲದ ಸಾಮಾನ್ಯ ಮಂದಿಯ ಏಳಿಗೆಯಲ್ಲ. ಈಗಲೂ ಹಾಗೆಯೇ ಆಗಿದೆ; ಆದರೆ ಬ್ರಿಟಿಶರ ಜಾಗಕ್ಕೆ ದೆಹಲಿ ಆಳ್ವಿಕೆ ನಡೆಸುತ್ತಿರುವವರು ಬಂದು ಕೂತಿದ್ದಾರೆ. ದೆಹಲಿ ಆಳ್ವಿಕೆಯಲ್ಲಿ ಯಾರ ಕಯ್ ಮೇಲಾಗಿದಿಯೋ ಅವರಿಗೆ ಈ ನೇಶನ್ನಿನಿಂದ ಬಳಕೆ ಮತ್ತು ಗಳಿಕೆಗಳೆರಡೂ ಇವೆ. ಹಾಗೆ ನೋಡಿದರೆ ದೆಹಲಿಯ ಆಳ್ವಿಕೆಯಲ್ಲಿ ಕನ್ನಡಿಗರ ಪಾಲು ತುಂಬಾ ಕಡಿಮೆ.

ಆದರೆ ಈ ನೇಶನ್ ಎಂಬುದನ್ನು ಇಂಡಿಯದಂತಹ ಹಲತನವಿರುವ, ಬೇರ‍್ಮೆಯಿರುವ ನೆಲದಲ್ಲಿ ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಅದರ ಸ್ವರೂಪವೂ ಹೇಗಿರಬೇಕು ಎಂಬುದರ ಬಗ್ಗೆ ಚರ‍್ಚೆಗಳು ನಡೆಯಬೇಕಾಗಿದೆ. ಯೂರೋಪಿನಲ್ಲಿ ನುಡಿಯನ್ನು ಮುನ್ನೆಲೆಯಲ್ಲಿರಿಸಿ ಕಟ್ಟಿರುವ ನೇಶನ್ಗಳು ನಮ್ಮ ಕಣ್ಣಿಗೆ ರಾಚುತ್ತವೆ. ಅವುಗಳಿಂದ ನಾವು ಕಲಿತುಕೊಳ್ಳಬೇಕಾದುದು ಬಹಳಶ್ಟಿದೆ. ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತ ಮುಂದೆ ಮುಂದೆ ನೋಡುತ್ತಾ ನಮ್ಮ ನಾಳೆಗಳನ್ನು ಕಟ್ಟಿಕೊಳ್ಳಬೇಕಾಗಿದೆ.

ಬುಧವಾರ, ಮಾರ್ಚ್ 09, 2016

...ಎಡೆಬಿಡದೆ

ಬರತನ್ ಎಂಬರ್ ಎನ್ನ
ಅರಿತಮನ್ ಅಗೆಯುತಿರುವೆನ್
ಇರಿತಮನ್ ಬಗೆಯಲಾರೆನ್
ಹಿರಿತನದಿಂ ಅನಿಸುಂಗಳ ಅರುಹುವೆನ್
ಸಿರಿತನಮ್ ಅರಿದಲ್ಲಮ್ ಎನಗೆ
ಒರೆತನಮ್ ಹಿರಿದೆನಗೆ ಅರಿವಿನ
ಕೊರತೆಯನ್ ನೀಗಿಸಲ್ ದೂಸರಿನ
ಒರತೆಯನ್ ಅರಸುತಿರುವೆನ್
...................ಎಡೆಬಿಡದೆ

ಶನಿವಾರ, ಫೆಬ್ರವರಿ 06, 2016

'ಕಾವ್ಯ'ದ ಬಗೆಗಿನ ವಾದ

ಸಾಹಿತಿಗಳಲ್ಲಿ ಇಲ್ಲವೆ ಸಾಹಿತ್ಯ ವಲಯದಲ್ಲಿ ಈ ಬಗೆಯ ಒಂದು ವಾದವಿದೆ:-
'ಕಾವ್ಯ' ಎಂಬುದು ಸುಲಬದಲ್ಲಿ ದಕ್ಕುವ ಹಾಗೆ ಇರಬಾರದು. ಅದನ್ನು ಅರ್ತ ಮಾಡಿಕೊಳ್ಳುವುದಕ್ಕೆ ಆ ಕಾವ್ಯದ ಓದುಗನು ಹೆಣಗಾಡಬೇಕು. ಆದ್ದರಿಂದ ಸಂಸ್ಕ್ರುತದ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟು ಆ ಕಾವ್ಯವು ಕಶ್ಟವಾಗುತ್ತಾ ಹೋಗುತ್ತದೆ. ಆದ್ದರಿಂದ ಕಾವ್ಯದ 'ಕಾವ್ಯಾತ್ಮಕ' ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.
ಇದಕ್ಕೆ ನನ್ನ ಉತ್ತರ:-
ಈ ವಾದವನ್ನೇ ಮುಂದುವರೆಸಿ ಹೇಳುವುದಾದರೆ, ಬರೀ ಸಂಸ್ಕ್ರುತ ಪದಗಳನ್ನೇ ಬಳಸಿ ಕನ್ನಡದಲ್ಲಿ ಕಾವ್ಯವನ್ನು ಕಟ್ಟಿದರೆ ಅದನ್ನು ಅರ್ತ ಮಾಡಿಕೊಳ್ಳಲು ಕನ್ನಡಿಗರಿಗೆ ಆಗುವುದೇ ಇಲ್ಲ. ಆದ್ದರಿಂದ ಯಾವ ಕಾವ್ಯವು ಕನ್ನಡಿಗರಿಗೆ ತಿಳಿಯುವುದಿಲ್ಲವೊ/ಮುಟ್ಟುವುದಿಲ್ಲವೊ ಅದೇ 'ಕಾವ್ಯ' ಅನಿಸಿಕೊಳ್ಳುತ್ತದೆ. ಹಾಗಾಗಿ ಮೇಲಿನ ವಾದದಲ್ಲಿರುವ ವಿಪರ್ಯಾಸವನ್ನು ನಾವು ಗಮನಿಸಬಹುದು.
ಸಮಾದಾನವಾಗಿ ಹೇಳುವುದಾದರೆ, ಹವ್ದು - ಸಾಹಿತಿಗಳ ಮೇಲಿನ ವಾದದಲ್ಲಿ ಕೊಂಚ ಮಟ್ಟಿಗೆ ಹುರುಳಿದೆ. ಅಂದರೆ ಕಾವ್ಯ ಎನ್ನುವುದು ನಮ್ಮನ್ನು ಕಾಡಬೇಕು. ಅದರಲ್ಲೇನೊ ಒಂದು ವಿಶಯವು ಗುಟ್ಟಾಗಿರಬೇಕು. ಅದು ಕಶ್ಟವಾಗಿದ್ದಶ್ಟು ನಮಗೆ ಸವಾಲನ್ನು ಒಡ್ಡುತ್ತದೆ. ಆದರೆ ಇಂತಹವು ಕಾವ್ಯದ ಒಂದು ಬಗೆಯಶ್ಟೇ. ಇಂತಹ ಬಗೆಯೊಂದೇ 'ಕಾವ್ಯ'ವಲ್ಲ ಎಂಬುದನ್ನು ಗಮನಿಸಬಹುದು.
ಅಲ್ಲದೆ, ಈ ಬಗೆಯ ಕಾವ್ಯಕ್ಕೆ ಸಂಸ್ಕ್ರುತ ಪದಗಳ ಮೊರೆ ಹೋಗಬೇಕೆನ್ನುವುದು ಅಶ್ಟು ಸರಿಯಲ್ಲ. ಅದನ್ನು ನಾವು ಕನ್ನಡದ ಪದಗಳನ್ನೇ ಹೊಸ ಬಗೆಯಲ್ಲಿ ದುಡಿಸಿಕೊಳ್ಳುವ ಚಳಕಗಳನ್ನು ಕಂಡುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬಹುದು.
ಕೆಲವು ಸಾಹಿತಿಗಳು ಹೇಳುವಂತೆ ಸಿನಿಮಾ ಹಾಡುಗಳಿಗೆ ಅಂತಹ 'ಕಾವ್ಯಾತ್ಮಕ' ಗುಣವಿರುವುದಿಲ್ಲ. ಹವ್ದು -ಅದು ಅಲ್ಲಿ ಬೇಕಾಗಿಲ್ಲ, ಯಾಕಂದರೆ ಅದಕ್ಕೆ 'ಸಿನಿಮಾ'ದ ಬೆಂಬಲವಿದೆ. ಅದು ಆ ಹೊತ್ತಿಗೆ ನೋಡುಗನನ್ನು ತಣಿಸಿದರೆ ಸಾಕು.
ಕಾವ್ಯದ ಎಲ್ಲ ಬಗೆಗಳೂ/ರೂಪಗಳೂ ನಮಗೆ ಬೇಕು.

ಗುರುವಾರ, ಫೆಬ್ರವರಿ 04, 2016

ನಲ್ಗೊಳದ ಮೊಗದೊಳ್...

ನಲ್ಗೊಳದ ಮೊಗದೊಳ್
ನಸುಗೆಂಪಿನ ನನೆಹಲ್ಮರೆಯ
ನುಣ್ಣಿಂಪಿನ ಬಂಡನು ನೆನೆ
ನೆನೆದು ಬಗೆ ಸೊಂಪಾಗಿರಲ್

ಕೊಳಮೊಗದ ಚೆಲುವನೀರಲಿ
ಅಲೆನಗುವು ಮೆಲ್ಲಗೇಳುತಿರಲ್
ಒಲುಮೆ ಹೆರೆಯನು ಮಾರ‍್ವೊಳೆದು
ಬಳುಕುವನು ಸುಂಯ್ಯೆಲರ್ ಬೀಸುತಿರಲ್

ಶುಕ್ರವಾರ, ಜನವರಿ 08, 2016

Palatalization of *k- to c- in Tamil



From Dravidian Etymological Dictionary. 
PDr *k- is palatalized in Tamil before front vowels (an approximate statement); Tamil, therefore, in many forms has the initial phoneme c- when the reconstructed PDr form would have k-.

From the following table, its evident that Kannada preseves Proto Dravidian's (PDr) *k- as it is whereas Tamil has switched to 'c-'



However, when 'k' is followed by pattern [front vowel][retroflex], switching to 'c-' doesn't occur in Tamil.

Kannada  Tamil   English
kēḷ            kēḷ       to ask, to hear

Here ē is front vowel
        ḷ is a retroflex

ಮಂಗಳವಾರ, ನವೆಂಬರ್ 03, 2015

ನೆಲದ ಸೊಗಡು

ಮರಾಟಿನಾಡಿನಲ್ಲೊಂದು ಮನೆಯ ಮಾಡಿ ಮರಾಟಿ ಕಲಿಯದಿದ್ದೊಡೆ ಅದೆಂತಯ್ಯ?
ತಮಿಳುನಾಡಿನಲ್ಲೊಂದು ಮನೆಯ ಮಾಡಿ ತಮಿಳು ಕಲಿಯದಿದ್ದೊಡೆ ಅದೆಂತಯ್ಯ?
ಕನ್ನಡನಾಡಿನಲ್ಲೊಂದು ಮನೆಯ ಮಾಡಿ ಕನ್ನಡ ಕಲಿಯದಿದ್ದೊಡೆ ಅದೆಂತಯ್ಯ?
ಆಯ ನೆಲದ ಸೊಗಡಿಗೆ ಹೊಂದಿಕೊಂಡು ಬಾಳದ ಆ ಬಾಳು ಆ ಬದುಕು ಎಂತಯ್ಯ
ನಿಮ್ಮ ಆಣೆ! ಆ ಬದುಕಿಗೆ ಬೆಂಕಿ ಹಚ್ಚಯ್ಯ ಮತ್ತಿತಾಳಯ್ಯ
(ಅಕ್ಕನವರ ಸೂಳ್ನುಡಿಯನ್ನು ಬಳಸಿಕೊಂಡು...)

ಅರಿವು-ಮರೆತ

ಅರಿಯುವುದು ಮರೆಯುವುದಕ್ಕಲ್ಲವೆ?
ಮರೆಯುವುದು ಅರಿಯುವುದಕ್ಕಲ್ಲವೆ?
ಅರಿತು ಮರೆವ ಮರೆತು ಅರಿವ ಈ
ಪರಿಗೆ ಬೆರಗಾದೆ ಕಾಣಾ
ನೆರೆಯರಿತು-ಮರೆವ ಮರುಪಾಳಿಯಲಿ
ನಲುಗಬೇಕಲ್ಲವೆ?
ನಲುಗಿ ನಿಲ್ಲಬೇಕಲ್ಲವೆ ಮತ್ತಿತಾಳಯ್ಯ

"ನೆನೆವುದೆನ್ನ ಮನಂ ಬನವಾಸಿ ದೇಸಮಂ" - ಇದರ ಬಗ್ಗೆ

"ನೆನೆವುದೆನ್ನ ಮನಂ ಬನವಾಸಿ ದೇಸಮಂ" - ಇದರ ಬಗ್ಗೆ
------------------------------------------------------
ದೇಸಮಂ ಅನ್ನುವುದನ್ನು 'ದೇಸಮಮ್' ಎಂದು ಹಲವರು ಓದುತ್ತಾರೆ. ಆದರೆ ಅದು 'ದೇಸಮಮ್' ಅಲ್ಲ, 'ದೇಸಮನ್'
'ದೇಸಮನ್' ಬಿಡಿಸಿದರೆ 'ದೇಸಮ್+ಅನ್' ಅಂದರೆ ಹೊಸಗನ್ನಡದಲ್ಲಿ 'ದೇಸವನ್ನು' ಎಂದಾಗುತ್ತದೆ.
ಹೊಸಗನ್ನಡ: ಎನ್ನ ಮನವು ಬನವಾಸಿ ದೇಸವನ್ನು ನೆನೆಯುವುದು


ತೀರಮೆಗಳು:-
೧. ಹೊಸಗನ್ನಡದ 'ಅನ್ನು' ಎಂಬ ಪತ್ತುಗೆ ಒಟ್ಟು (ವಿಬಕ್ತಿ ಪ್ರತ್ಯಯ) ಹಳೆಗನ್ನಡದಲ್ಲಿ 'ಅನ್' ಎಂದಾಗಿತ್ತು.
೨. ಹಳಗನ್ನಡದಲ್ಲಿ '೦' ಎನ್ನು 'ನ್' ಎಂದು ಬರೆಯುವುದಕ್ಕೂ ಬಳಸಲಾಗಿದೆ.
ಹಳಗನ್ನಡದ 'ಅಮ್' ಎನ್ನುವುದು ಹೊಸಗನ್ನಡದಲ್ಲಿ 'ಅನ್ನು' ಆಗಿದೆ ಎಂದು ಕೆಲವರು ಹೇಳುತ್ತಾರೆ.
ಆದರೆ ಹಳಗನ್ನಡದ 'ಅನ್' ಎಂಬುದೇ ಹೊಸಗನ್ನಡದಲ್ಲಿ 'ಅನ್ನು' ಆಗಿರುವ ಸಾದ್ಯತೆ ಹೆಚ್ಚು ಕಾಣುತ್ತಿದೆ.
ಅನ್ (ಹ) -> ಅನ್ನು (ಹೊ) - ಇದಕ್ಕೆ ಹಲವು ಎತ್ತುಗೆಗಳನ್ನು ಕೊಡಬಹುದು.
ಕಣ್ (ಹ) -> ಕಣ್ಣು (ಹೊ)
ಪೊನ್(ಹ) -> ಹೊನ್ನು(ಹೊ)
ಕೊಲ್ (ಹ) -> ಕೊಲ್ಲು(ಹೊ)
ಹಳಗನ್ನಡಲ್ಲಿ ಅದು 'ಅಮ್' ಆಗಿದ್ದರೆ ಹೊಸಗನ್ನಡದಲ್ಲಿ ಅದು 'ಅಮ್ಮು' ಆಗಬೇಕಿತ್ತು

'ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿ

ತಮಿಳಿನ ’ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿಯಲ್ಲಿರುವ ಹಲವು ಪದಗಳು ಅದೇ ಹುರುಳಿನಲ್ಲಿ ಬಳಕೆಯಾಗಿವೆ. ಆದರೆ ಅಲ್ಲೆಲ್ಲ ತಮಿಳಿನ ಆಡುನುಡಿಯಲ್ಲಿರುವ ಪದಗಳು ಬಳಕೆಯಾಗಿಲ್ಲ. ತಮಿಳಿನ ಮೇಲೆ ಹಳಗನ್ನಡ ಒತ್ತು(influence) ಇತ್ತೇ ಎಂಬ ಕೇಳ್ವಿ ಇದರಿಂದ ಏಳುವುದು.
ಎತ್ತುಗೆಗೆ (ನನಗೆ ಕಂಡವು ಇಶ್ಟು..ಹುಡುಕಿದರೆ ಇನ್ನೂ ಸಿಗಬಹುದು):-
೧. ಮಕ್ಕಳ್ - ಇಂದಿನ ಕನ್ನಡದ ಆಡುನುಡಿಯಲ್ಲಿ ಇದನ್ನು ’children' ಎಂಬ ಹುರುಳಲ್ಲಿ ಬಳಸಲಾಗುತ್ತದೆ. ಇದೇ ಪದ ತಮಿಳಿನಲ್ಲಿ ’people' ಎಂಬ ಹುರುಳಿನಲ್ಲಿ ಇಂದು ಬಳಕೆಯಾಗುತ್ತಿದೆ. ಆದರೆ ತಿರುವಳ್ಳುವರ್ ಚಿಕ್ಕಮಕ್ಕಳ ಬಗ್ಗೆ ಮಾತು ಬಂದಾಗಲೆಲ್ಲಾ ಬಳಸುವುದು ’ಮಕ್ಕಳ್’ ಎಂದೇ.
೨ ಮನೆ - ಇಂದಿಗೂ ಕನ್ನಡದಲ್ಲಿ ’house/home' ಎಂಬ ಹುರುಳಿನಲ್ಲಿ ಬಳಕೆಯಲ್ಲಿದೆ. ಆದರೆ ತಮಿಳಿನ ಆಡುನುಡಿಯಲ್ಲಿ ’ವೀಟ್ಟು’ ಬಳಕೆಯಲ್ಲಿದೆ. ಆದರೆ ತಿರುವಳ್ಳುವರ್ ಬಳಸುವುದು ’ಮನೈ’ ಎಂದೇ.
೩. ನೀರ್ - ಇಂದಿಗೂ ಕನ್ನಡದಲ್ಲಿ ’water' ಎಂಬ ಹುರುಳಿನಲಿ ಬಳಕೆಯಲ್ಲಿದೆ. ಆದರೆ ತಮಿಳಿನಲ್ಲಿ ಇದಕ್ಕೆ ’ತಣ್ಣಿ’ ಎನ್ನುತ್ತಾರೆ. ಆದರೆ ತಿರುವಳ್ಳುವವರು ಬಳಸುವುದು ’ನೀರ್’ ಎಂದೇ.

ಹಿಂದೆ ತಿಳಿಸಿದಂತೆ ಮತ್ತಶ್ಟು ಸಿಕ್ಕ ಪದಗಳು:-
೪. ಕೆಯ್/ಗೆಯ್(ಮಾಡು) - ತಿರುವಳ್ಳುವರ್ ಬಳಸುವುದು ಇದಕ್ಕೆ ಸಾಟಿಯಾದ ತಮಿಳು ರೂಪ 'ಶೆಯ್'( ತೆಲುಗಿನ ಚೆಯ್/ಚೆಯ್ಯಿ). ತಪ್ಪಿಯೂ ತಿರುವಳ್ಳುವರ್ ಇವತ್ತಿನ ತಮಿಳಿನಲ್ಲಿ ಬಳಸುವ 'ಪಣ್' ಬಳಸುವುದೇ ಇಲ್ಲ. ಆದರೆ ಕನ್ನಡದಲ್ಲಿ ಇಂದಿಗೂ 'ಗೆಯ್',ಗೆಯ್ಮೆ, ಕೇಮೆ(ಕ್ಯಾಮೆ) ಬಳಸಲಾಗುತ್ತಿದೆ.
೫. ತಿನ್, ಉಣ್ - ತಿರುವಳ್ಳುವರ್ 'ತಿನ್' ಒಮ್ಮೆ ಮತ್ತು 'ಉಣ್' ಎಂಬುದನ್ನು ಹಲವು ಕಡೆ ಬಳಸಿದ್ದಾರೆ. ಇವತ್ತಿನ ತಮಿಳಿನಲ್ಲಿ 'ಸಾಪಟ್' ಹೆಚ್ಚಾಗಿ ಬಳಕೆಯಲ್ಲಿದೆ. ಆದರೆ ಕನ್ನಡದಲ್ಲಿ 'ಉಂಡ್ಯ', ತಿಂದ್ಯ, ಉಣ್ಣು (> ಊಟ), ತಿನ್ನು(>ತಿಂಡಿ, ತಿನಿಸು) ಬಳಕೆಗಳು ಹೆಚ್ಚಾಗಿ ಬಳಕೆಯಲ್ಲಿವೆ.

ಸೋಮವಾರ, ಅಕ್ಟೋಬರ್ 05, 2015

ಇಲ್ಲಮೆ


ನೀನು ಇಲ್ಲಿಲ್ಲವೆಂದರು
ನೀನು ಅಲ್ಲಿಲ್ಲವೆಂದರು
ನೀನು ಎಲ್ಲಿಯೂ ಇಲ್ಲವೆಂದರು
ಇಲ್ಲಮೆಯಲ್ಲಿ ಇರುವೆಯೆಂದು
ಅಲ್ಲಮನು ಉಲಿದು ಎಲ್ಲರ ಬಾಯ್ಹೊಲಿದ ಕಾಣಾ ಮತ್ತಿತಾಳಯ್ಯ

ಗುರುವಾರ, ಅಕ್ಟೋಬರ್ 01, 2015

ಕೂರ್ ಬಲ್ಲಾತನ್

ಎಲ್ಲರಿವ ಕೂರ್ ಬಲ್ಲಾತನ್
ಅಲ್ಲದುವ ಕಿರು ಮಾಳ್ಪೊಡೆ
ಬೆಲ್ಲವು ಜಾರಿ ಬಚ್ಚಲೊಳಿದ್ದಂತೆ ಮತ್ತಿತಾಳಯ್ಯ
-

ಕೂರ್ = ಚೂಪು ( ಸೂಕ್ಶ್ಮ)

ಸೋಮವಾರ, ಜೂನ್ 01, 2015

ಸೂಳ್ನುಡಿಯ ಚಳವಳಿಯೇ ಮೊದಲ ತನ್ಮದಿಪು ಚಳವಳಿ

ಈಗಾಗಲೇ ಗೊತ್ತಿರುವಂತೆ ತಮಿಳುನಾಡಿನಲ್ಲಿ ಇಪ್ಪತ್ತನೇ ನೂರೇಡಿನಲ್ಲಿ ನಡೆದ ಚಳವಳಿಯನ್ನೇ ಮೊದಲ ’ತನ್ಮದಿಪು ಚಳವಳಿ’(Self-respect Movement) ಎಂದು ಬಗೆಯಲಾಗಿದೆ. ಅಲ್ಲದೆ, ತನ್ಮದಿಪು ಚಳವಳಿಯನ್ನು ಬರೀ ತಮಿಳುನಾಡಿಗೆ ತಳುಕು ಹಾಕಲಾಗುತ್ತದೆ. ಇದನ್ನು ದ್ರಾವಿಡ ಚಳವಳಿಯ ಒಂದು ಬಾಗವಾಗಿ ನೋಡಲಾಗುತ್ತದೆ. ಆದರೆ ಇದಕ್ಕೂ ಮುಂಚೆಯೇ ಕನ್ನಡನಾಡಿನಲ್ಲಿ ’ತನ್ಮದಿಪು ಚಳವಳಿ’ ನಡೆದಿತ್ತೆಂಬುದನ್ನು ಹೆಚ್ಚಿನ ಕೂಡಣದರಿಗರು ಗಮನಿಸಿದಂತಿಲ್ಲ. ಅಂದರೆ ಹನ್ನೆರಡನೇ ನೂರೇಡಿನಲ್ಲಿ ನಡೆದ ’ಸೂಳ್ನುಡಿ ಚಳವಳಿ’(ವಚನ ಚಳವಳಿ) ಯನ್ನು ಒಂದು ತನ್ಮದಿಪಿನ ಚಳವಳಿಯಾಗಿ ಬಗೆದ ಸೀಳುನೋಟಗಳು ಸಿಗುವುದಿಲ್ಲ.

ತಮಿಳುನಾಡಿನಲ್ಲಿ ಜರುಗಿದ ತನ್ಮದಿಪು ಚಳವಳಿಯ ಮುಕ್ಯ ಗುರಿಗಳಲ್ಲಿ ತಮಿಳು ಕೂಡಣದಲ್ಲಿ ಎಲ್ಲರನ್ನು ಸಮಾನರನ್ನಾಗಿ ಕಾಣುವುದು, ವ್ಯಕ್ತಿಯ ಹುಟ್ಟಿನಿಂದ ಏರ‍್ಪಟ್ಟ ಮೇಲು-ಕೀಳುಗಳನ್ನು ತೊಡೆದು ಹಾಕಿ ಸಾಮಾನ್ಯ ಮಂದಿಯನ್ನೂ ಚಿಂತನೆಗೆ ಒಡ್ಡಿ ಅವರವರ ಅರಿವಿಗೆ ತಕ್ಕಂತೆ ಬಾಳಲು ಅನುವು ಮಾಡಿಕೊಡುವುದೇ ಆಗಿತ್ತು. ತನ್ಮದಿಪು ಚಳವಳಿಯ ಮುಂದಾಳಾಗಿದ್ದ ಕನ್ನಡಿಗ ಪೆರಿಯಾರ್ ಅವರು ಈ ಚಳವಳಿಯನ್ನು ’ಅರಿವು ವಿಡುದಲಯ್ ಇಯಕ್ಕಂ’(ಅರಿವು ಬಿಡುಗಡೆಯ ಚಳವಳಿ) ಎಂದು ಕರೆದರು. ಪೆರಿಯಾರ್ ಅವರಿಗೆ ಗಾಂದಿ-ನೆಹರು ನಂಬಿದ್ದ ರಾಜಕೀಯ ಬಿಡುಗಡೆ(ಸ್ವರಾಜ್) ಗಿಂತ ’ಅರಿವಿನ ಬಿಡುಗಡೆ’ಯೇ ಮುಕ್ಯವಾಗಿತ್ತು. ಪ್ರತಿಯೊಬ್ಬ ಮನುಶ್ಯನು ತನ್ನ ಅರಿವನ್ನು ಬಳಸಿಕೊಂಡು ಕೂಡಣದಲ್ಲಿ ಗವ್ರವದಿಂದ ಬಾಳ್ವೆ ಮಾಡುವಂತಾಗಬೇಕೆಂಬುದೇ ಅವರ ಬಯಕೆಯಾಗಿತ್ತು. ತಮಿಳರ ಮದುವೆಗಳಿಂದ ಹಾರುವರನ್ನು ಮತ್ತು ಅವರು ಹೇಳುವ ಸಂಸ್ಕ್ರುತ ಮಂತ್ರಗಳನ್ನು ತೆಗೆದುಹಾಕಲಾಯಿತು. ಇದಲ್ಲದೆ ಬೇರೆ ಬೇರೆ ಜಾತಿಯ ಗಂಡು-ಹೆಣ್ಣುಗಳಿಗೆ ಮದುವೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡಲಾಯಿತು. ಗಂಡು-ಹೆಣ್ಣು, ಉಳ್ಳವ-ಇಲ್ಲದವ, ಮೇಲ್ಜಾತಿ-ಕೀಳ್ಜಾತಿ, ಹೀಗೆ ಎಲ್ಲ ತೆರನಾದ ಅಸಮಾನತೆಯನ್ನು ತೊಡೆದು ಹಾಕುವುದೇ ಈ ಚಳವಳಿಯ ಅಡಿಕಟ್ಟಲೆಗಳಾದವು. ಮಂದಿಯಲ್ಲಿ ಎಚ್ಚರಿಕೆ ಮೂಡಿಸಲು ತಮಿಳು ನುಡಿಯನ್ನು ಚೆನ್ನಾಗಿ ಬಳಸಿಕೊಳ್ಳಲಾಯಿತೆಂಬುದನ್ನು ಇಲ್ಲಿ ಗಮನಿಸಬಹುದು.

ಈಗ ಕನ್ನಡನಾಡಿನ ಹನ್ನೆರಡನೇ ನೂರೇಡಿಗೆ ಬರೋಣ. ಆಗ ನಡೆದ ಸೂಳ್ನುಡಿಯ ಚಳವಳಿ ಕನ್ನಡದ ಕೂಡಣದಲ್ಲಿ ಒಂದು ದೊಡ್ಡ ಅರಿವಿನ ಅಲೆಯನ್ನು ಎಬ್ಬಿಸಿತು. ಈ ಚಳವಳಿಯಲ್ಲಿ ಮುಕ್ಯವಾಗಿ ಸಂಸ್ಕ್ರುತ ಮತ್ತು ಸಂಸ್ಕ್ರುತದ ಸಾಹಿತ್ಯ ಪರಂಪರೆಯನ್ನು ದಿಕ್ಕರಿಸಿ ಕನ್ನಡದ್ದೇ ಆದ ’ಸೂಳ್ನುಡಿ’ ಬರಹಗಳನ್ನು ಮಾಡಲಾಯಿತು. ಇದರ ಮೂಲಕ ಹೊಸದೊಂದು ’ಸೂಳ್ನುಡಿಯ ವಾಡಿಕೆ’ಯನ್ನು ಹುಟ್ಟು ಹಾಕಲಾಯಿತು. ಅನುಬವ ಮಂಟಪವನ್ನು ಏರ‍್ಪಡಿಸಿ ಅದರ ಮೂಲಕ ಗಂಡು-ಹೆಣ್ಣು, ಉಳ್ಳವ-ಇಲ್ಲದವ, ಮೇಲ್ಜಾತಿ-ಕೀಳ್ಜಾತಿ ಎಂದೆಣಿಸದೇ ಎಲ್ಲರಿಗೂ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳುವ ಮತ್ತು ಚರ‍್ಚಿಸುವ ಅವಕಾಶವನ್ನು ಮಾಡಿಕೊಡಲಾಯಿತು. ಹಾಗಾಗಿ ಅನುಬವ ಮಂಟಪವು ಹೊಸಗಾಲದ ಮಂದಿಯಾಳ್ವಿಕೆಯ ಗುಣಲಕ್ಶಣಗಳನ್ನು ಹೊಂದಿತ್ತು ಎಂದು ಹೇಳಬಹುದು. ಜಾತಿಯೇರ‍್ಪಾಟಿನಿಂದ ಉಂಟಾದ ಮೇಲು-ಕೀಳನ್ನು ತೊಡೆದು ಹಾಕಲು ಬೇರೆ ಬೇರೆ ಜಾತಿಯ ಹೆಣ್ಣು-ಗಂಡುಗಳ ಮದುವೆಗೆ ಅನುವು ಮಾಡಿಕೊಡಲಾಯಿತು. ದೇಗುಲ ಸಂಸ್ಕ್ರುತಿಯನ್ನು ದಿಕ್ಕರಿಸಿ ’ದೇಹವನ್ನೇ ದೇಗುಲ’ವನ್ನಾಗಿ ಮಾಡಿ ಪ್ರತಿಯೊಬ್ಬ ಮನುಶ್ಯನ ತನ್ಮದಿಪನ್ನು(ಆತ್ಮಗವ್ರವ) ಎತ್ತಿ ಹಿಡಿಯಲಾಯಿತು. ದಾಸೋಹವನ್ನು ವಾಡಿಕೆಗೆ ತಂದು ಉಳ್ಳವ-ಇಲ್ಲದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲಾಯಿತು. ಅರಿವೇ ಗುರು, ಮಾತೆಂಬುದು ಜ್ಯೋತಿರ‍್ಲಿಂಗ ಎಂಬ ನುಡಿಗಟ್ಟುಗಳು ಮೊಳಗಿದವು.

ಹೀಗೆ ಸೂಳ್ನುಡಿಗಳನ್ನು ಅಡಿಗಲ್ಲಾಗಿ ನಿಲ್ಲಿಸಿ ಕಟ್ಟಿದ ಚಳವಳಿ ಕೂಡಣದ, ತನ್ನರಿಮೆಯ ಮತ್ತು ಹಣಕಾಸಿನ ಸುದಾರಣೆಗಳನ್ನು ನೇರವಾಗಿ ಇಲ್ಲವೆ ನೇರವಲ್ಲದ ತೆರದಲ್ಲಿ ತಂದು ಸಮಾನತೆಯ ಕೂಡಣವನ್ನು ಕಟ್ಟುವೆಡೆಗೆ ಹೆಜ್ಜೆ ಇಟ್ಟಿತು.
ಹಾಗಾಗಿ, ಹತ್ತು-ಹಲವು ಬಗೆಗಳಲ್ಲಿ ತಮಿಳುನಾಡಿನ ’ತನ್ಮದಿಪು ಚಳವಳಿ’ ಕನ್ನಡನಾಡಿನ ’ಸೂಳ್ನುಡಿ ಚಳವಳಿ’ಯನ್ನೇ ಹೋಲುತ್ತದೆಯಲ್ಲದೆ ನೇರವಾಗಿ ಇಲ್ಲವೆ ನೇರವಲ್ಲದ ತೆರದಲ್ಲಿ ಸೂಳ್ನುಡಿ ಚಳವಳಿಯ  ಪ್ರಬಾವಕ್ಕೆ ಒಳಗಾಗಿದೆಯೆಂಬುದನ್ನು ಮನಗಾಣಬಹುದು.  ಆದರೆ ಈ ಎರಡು ಚಳವಳಿಗಳಲ್ಲಿ ವ್ಯತ್ಯಾಸಗಳೂ ಇದ್ದವು ಎಂಬುದನ್ನು ಗಮನಿಸಬೇಕಾಗುತ್ತದೆ. ಸೂಳ್ನುಡಿಯ ಚಳವಳಿಯು ಎಲ್ಲರನ್ನು ಒಳಗೊಳ್ಳುವ ಮತ್ತು ಎಲ್ಲ ಜಾತಿಯ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಚಳವಳಿಯಾಗಿತ್ತು. ಆದರೆ ತಮಿಳುನಾಡಿನ ಚಳವಳಿ ಒಂದು ಹಂತದಲ್ಲಿ ಹಾರುವರನ್ನು ವಿರೋದಿಸುವ ಚಳವಳಿಯಾಗಿ ಮಾರ‍್ಪಟ್ಟಿತು. ಆದರೆ ಕನ್ನಡನಾಡಿನಲ್ಲಿ ಹೀಗಾಗಲಿಲ್ಲ ಎಂಬುದನ್ನು ಗಮನಿಸಬಹುದು.

ತೀರಮೆಗಳು
ಸಾಮಾನ್ಯವಾಗಿ ವಚನ ಚಳವಳಿಯನ್ನು ಕೇವಲ ಲಿಂಗಾಯಿತ/ವೀರಶಯ್ವಕ್ಕೆ ತಳುಕು ಹಾಕಲಾಗುತ್ತದೆ. ಆದರೆ ವಚನ ಚಳವಳಿಯು ಇದನ್ನು ಮೀರಿ ಬೆಳೆದಿತ್ತು ಬದಲಾಗಿ ಹೊಸದೊಂದು ಕೂಡಣವನ್ನು ಕಟ್ಟಿಕೊಳ್ಳುವೆಡೆಗೆ ನಡೆದಿತ್ತು ಎಂಬುದನ್ನು ಮನಗಾಣಬೇಕಾಗಿದೆ.  ಕನ್ನಡನಾಡಿನ ಸೂಳ್ನುಡಿಯ ಚಳವಳಿಯು ತೆಂಕಣದ ಅರಿವಿನ ಮರುಹುಟ್ಟಿಗೆ(renaissance) ಮುನ್ನುಡಿ ಬರೆಯಿತು ಎಂದರೆ ತಪ್ಪಾಗಲಾರದು. ಕೂಡಣದರಿಗರು ಮತ್ತು ಸೀಳ್ನೋಟಗಾರರು ’ಸೂಳ್ನುಡಿ ಚಳವಳಿ’ ಮತ್ತು ’ತನ್ಮದಿಪು ಚಳವಳಿ’ಗಳನ್ನು ಹೋಲಿಸಿ ಹೆಚ್ಚು ಹೆಚ್ಚು ಮರು ಓದಿಗೆ ಒಳಪಡಿಸಬೇಕಾಗಿದೆ. ಇದರಿಂದ ಹೊರಬರುವ ತೀರಮೆಗಳು ತೆಂಕಣದ ನಾಡಿನ ಕೂಡಣಗಳಲ್ಲಿ ಹೊಸ ಹೊಳಹುಗಳಿಗೆ ದಿಕ್ಕು ತೋರಬಲ್ಲವಾಗಿವೆ.
(ಮಾಹಿತಿ ಸೆಲೆ: http://en.wikipedia.org/wiki/Self-Respect_Movement)


ಭಾನುವಾರ, ಮಾರ್ಚ್ 24, 2013

Why 'Simpallaag Ond Love story' is a hit?

Everybody is talking about the Simpallaag Ond Love Story's (SOLS) success and generally reasons attributed for its sucess are youthfulness, dialogues etc etc. But these are the reasons at the surface level, I think there are much deeper reasons for the 'resounding success' of SOLS.

    There is a glaring absence of the 'nation state' (or its machinaries like courts, police, law, army and central government) in the storyline of the movie, however the private organisation like FM Radio channel is very much part of the movie. On the one hand one would wonder how one can weave a story like this and still be successful, on the other hand does this mean that the Kannadigas liked the way 'nation state' is portrayed in SOLS? Story line completely ignores the 'nation state' - Does it means that there is a strong disapproval of 'nation state' from Kannadigas?  The story revolves within Karnataka and never goes outside. The moment the character (one of the shade in protagonist's character) starts thinking of leaving Karnataka by applying for passport(which represents the nation state), that's the end of character in the movie!! . Viewers don't even come to know happens to that character in the movie eventually.

For all these questions, the answer would be 'yes' because the current political scenario in Karnataka justifies the 'strong disapproval' sentiments of Kannadigas towards 'nation state'. Central government hasn't helped Karnataka in the recent Kaveri issue neither did it give importance in the railways budget.  Incidentally, at the same time Karnataka is witnessing the rise of Regional Political parties to fulfill the aspirations of Kannadigas and Karnataka. This is in consistent with sucess of SOLS. The movie doesn't go out of Karnataka even in the song sequences and hence its trying to paint a Kannada world either devoid of 'nation state' or its complete absence and this has been applauded by Kannadigas emptatically with the commercial success of the movie.

 ----
NOTE: It wouldn't have been possible to do the above analysis had I not read this book of MK Raghavendra
http://ybhava.blogspot.in/2011/10/review-of-book-bipolar-identiy-region.html

ಶನಿವಾರ, ಫೆಬ್ರವರಿ 16, 2013

ಹುರುಳರಿಮೆಯ ಕಣ್ಣಿನಲ್ಲಿ ಕನ್ನಡದ ಒಟ್ಟುಗಳು

ಸಾಮಾನ್ಯವಾಗಿ ಕನ್ನಡದ ಒಟ್ಟುಗಳು ಬೇರೆ ಪದಗಳೊಂದಿಗೆ ಹೇಗೆ ಸೇರಿಕೆ ಆಗುತ್ತದೆ ಎಂಬುದನ್ನು ವಿವರಿಸಲಾಗುತ್ತದೆ. ಅಂದರೆ ಆ ಒಟ್ಟುಗಳು ಈಗಾಗಲೆ ಹೆಸರು ಪದದೊಂದಿಗೋ, ಎಸಕಪದದೊಂದಿಗೋ ಸೇರುವ ಒಲವುಗಳ ಬಗ್ಗೆ ಹೇಳಲಾಗುತ್ತದೆ. ಹೀಗೆ ಸೊಲ್ಲರಿಮೆಯ ಮೂಲಕ ಬೇರೆ ಪದಗಳೊಂದಿಗೆ ಒಟ್ಟುಗಳ ಸೇರಿಕೆಯನ್ನು ವಿವರಿಸಲಾಗುತ್ತದೆ. ಆದರೆ ಈ ವಿವರಣೆ ಹೊಸ ಪದಗಳನ್ನು ಕಟ್ಟುವಾಗ ಯಾವ ಯಾವ ಕುಳ್ಳಿಹ(ಸಂದರ್ಬ)ಗಳಲ್ಲಿ ಯಾವ ಯಾವ ಒಟ್ಟನ್ನು ಬಳಸಬೇಕು ಎಂಬುದರ ಬಗೆಗಿರುವ ಗೊಂದಲವನ್ನು ಕಡಿಮೆ ಮಾಡುವುದಿಲ್ಲ. ಹಾಗಾಗಿ ಹೊಸ ಪದಗಳನ್ನು ಕಟ್ಟುವ ಕೆಲಸ ತೊಡಕಾಗಿಯೇ ಉಳಿಯುತ್ತದೆ.

ಹಾಗಾಗಿ ಹೊಸ ಪದಗಳನ್ನು ಕಟ್ಟುವಾಗ ಒಟ್ಟುಗಳ ಬಳಕೆಯಲ್ಲಿನ ಗೊಂದಲವನ್ನು ಇಲ್ಲದಂತೆ ಮಾಡಲು ಹುರುಳರಿಮೆಯ ಮೊರೆ ಹೋದರೆ ಕಡಿಮೆ ಮಾಡಬಹುದೆಂದು ತೋರುತ್ತದೆ. ಇಲ್ಲಿ ಹುರುಳರಿಮೆಯ ಜೊತೆ ಜೊತೆಗೆ ಕಟ್ಟುತ್ತಿರುವ ಪದದ ಬಳಕೆಯ ಕುಳ್ಳಿಹ(ಸಂದರ್ಬ)ವನ್ನು ಗಮನದಲ್ಲಿಟ್ಟುಕೊಂಡರೆ ಹೊಸದಾಗಿ ಕಟ್ಟುವ ಪದ ಹೆಚ್ಚು ಮಂದಿ ಬಳಸತಕ್ಕುದಾಗುತ್ತದೆ.

ಇಲ್ಲಿ ’ಗಾರ’ ಮತ್ತು ’ಇಗ’ ಎಂಬ ಒಟ್ಟುಗಳನ್ನು ಎತ್ತುಗೆಯಾಗಿ ಬಳಸಲಾಗಿದೆ. ಕನ್ನಡದಲ್ಲಿ ಈಗಾಗಲೆ ’ಗಾರ’ ಎಂಬ ಪದ ಹೇಗೆ ಬಳಕೆಯಲ್ಲಿದೆ ಮತ್ತು ಯಾವ ಯಾವ ಕುಳ್ಳಿಹಗಳಲ್ಲಿ ಬಳಸಲಾಗುತ್ತದೆ ಎಂಬುದನ್ನು ಗಮನಿಸಿ ಈ ತೀರ್ಮೆಗಳಿಗೆ ಬರಲಾಗಿದೆ.

ಹೆಸರು ಪದದೊಂದಿಗೆ 'ಗಾರ' ಎಂಬುದನ್ನು ಬಳಸಲು
೧. ಹೆಸರು ಪದಕ್ಕೆ ಸಂಬಂದಿಸಿದ ಎಸಕವನ್ನು ಮತ್ತೆ ಮತ್ತೆ ಮಾಡುತ್ತಿರಬೇಕು (ಮರುಕಳಿಕೆ-repeatability)
೨. ಹೆಸರು ಪದಕ್ಕೆ ಸಂಬಂದಿಸಿದ ಎಸಕದ ಪರಿಚೆ ಒಂದೇ ತರನಾಗಿರಬೇಕು ( ಒಮ್ಮಿಕೆ-consistency)
೩. ಎಸಕದಲ್ಲಿ ಪಳಗಿಕೆ ಹೊಂದಿರಬೇಕು (ಪಳಗಿಕೆ-experience)
೪. ಕೂಡಣದಲ್ಲಿ ಹೆಸರು ಪದಕ್ಕೆ ಸಂಬಂದಿಸಿದ ಎಸಕವು ಒಂದು ಕಸುಬು/ದುಡಿಮೆಯಾಗಿ ತನ್ನ ಇರ್ಕೆಯನ್ನು(ಸ್ತಾನವನ್ನು) ಪಡೆದಿರಬೇಕು.(ಕಸುಬು-proffession)
ಮೇಲಿನ ನಾಲ್ಕೂ ಬೊಟ್ಟುಗಳಲ್ಲಿ ಯಾವುದಾದರೊಂದು ಇಲ್ಲವೆ ಎಲ್ಲವೂ ಒಪ್ಪುವ ತರದಲ್ಲಿದ್ದಾಗ ’ಗಾರ’ಎಂಬ ಒಟ್ಟನ್ನು ಬಳಸಲು ಬರುತ್ತದೆ.

ಎತ್ತುಗೆಗೆ :-
 ೧. ಹೂಗಾರ, ಜಲಗಾರ, ಮಣೆಗಾರ(ಮಣಿಹಗಾರ),ಬಳೆಗಾರ - ಈ ಎತ್ತುಗೆಗಳಲ್ಲಿ ಮೇಲಿನ ನಾಲ್ಕೂ ಬೊಟ್ಟುಗಳು ಒಪ್ಪುತ್ತವೆ ಅಂದರೆ ಇಲ್ಲಿ ಹೂಗಾರಿಕೆ, ಜಲಗಾರಿಕೆ, ಮಣೆಗಾರಿಕೆ, ಬಳಗಾರಿಕೆ ಎಂಬುದು ಕೂಡಣದಲ್ಲಿ  ಒಂದೊಂದು ಕಸುಬುಗಳಾಗಿ(ದುಡಿಮೆಗಳಾಗಿ) ತಮ್ಮ ಇರ್ಕೆಗಳನ್ನು ಪಡೆದಿವೆ.
 ೨. ಮಾತುಗಾರ, ಕೆಲಸಗಾರ, ಚಲಗಾರ - ಈ ಎತ್ತುಗೆಗಳಲ್ಲಿ ಮೊದಲ ಮೂರು ಬೊಟ್ಟುಗಳು ಒಪ್ಪುತ್ತವೆ ಆದರೆ ನಾಲ್ಕನೆಯದು ಒಪ್ಪುವುದಿಲ್ಲ ಯಾಕಂದರೆ ಮಾತುಗಾರಿಕೆ,ಕೆಲಸಗಾರಿಕೆ, ಚಲಗಾರಿಕೆ ಇವು ಒಂದೊಂದು ನಿರ್ದಿಶ್ಟ ಕಸುಬು(ದುಡಿಮೆ)ಗಳಾಗಿ ಇರ್ಕೆಗಳನ್ನು ಪಡೆದಿಲ್ಲ ಬದಲಾಗಿ ಯಾವುದೇ ಆಳಿನ ಪರಿಚೆಗಳನ್ನು(character) ಬಣ್ಣಿಸಲು ಈ ಪದಗಳನ್ನು ಬಳಸಲಾಗುತ್ತದೆ.

ಇದಕ್ಕೆ ಹೊರತಾಗಿ ಗಾಣಿಗ, ಲೆಕ್ಕಿಗ, ಉಪ್ಪಲಿಗ, 'ಬಡಿಗ'(>ಬಡಗಿ) ಎಂಬ ಕಸುಬುಗಳೂ ಇವೆ. ಕಸುಬುಗಳಿಗೂ ನಂಟಿರುವ ಪದಗಳಾದರೂ ’ಗಾರ’ ಎಂಬ ಒಟ್ಟನ್ನು ಬಳಸಲಾಗಿಲ್ಲ, ಬದಲಾಗಿ ’ಇಗ’ಎಂಬ ಪದವನ್ನು ಬಳಸಲಾಗಿದೆ.
ಈಗ ’ಇಗ’ ಎಂಬ ಒಟ್ಟಿನ ಬಳಕೆಯ ಎತ್ತುಗೆಗಳ ನೆರವಿನಿಂದ ಬಗ್ಗೆ ನೋಡೋಣ
ಅಡಿಗ     (a man of seller's caste)
ಹಾವಾಡಿಗ  (a man of snake catcher's caste)
ಕನ್ನಡಿಗ   (a man of Kannada country)
ಗವರಿಗ (a man of the basket- and mat-maker caste)
ಸಾಲಿಗ  (a weaver caste)
ಸೋಲಿಗ ( soliga tribe)
ಪರಳಿಗ  ( paramour)
ಮಾವುಲಿಗ ( hunter tribe)
ಮಾದಿಗ    ( cobbler, chuckler)
ಆಡಿಗ      ( ಅಲೆಮಾರಿ, ನಟ)
ಈಡಿಗ     ( man of the toddy-drawers caste)
ಅಂಬಿಗ   ( man who rows a boat, boatman caste)
ಅಗಸಿಗ   ( washerman caste)
ಅಳವಿಗ   (friend)
ಒಕ್ಕಲಿಗ   (husbandman, farmer)
ಕಬ್ಬಿಲಿಗ   (boatman, fisherman)
ಕಾಡಿಗ     (a troublesome man)
ಕೇಡಿಗ     (one who ruins or is ruined)
ಕೊಬ್ಬಿಗ    (a proud man)
ಚನ್ನಿಗ       a handsome, fine man
ಸಾಲಿಗ      a debtor, creditor
ತೋಟಿಗ (ತೋಟಗಾರ)  a gardener
ನಾಡಿಗ  (village superintendent in the service of a smārta guru)
ಪದುಳಿಗ ( a happy man)
ಹಾದರಿಗ (adulterer)
ಹೊರಬಿಗ  (stranger, alien )
ಹೆಣ್ಣಿಗ       (impotent man, coward)
ಮಬ್ಬಿಗ    (a creature of darkness), Asura or Rākṣasa
ಮೊದಲಿಗ   (a chief, headman)
ಬೇಂಟಿಗ( ಬೇಟೆಗಾರ)  (hunter)

ಆದರೆ 'ಇಗ', ಎಂಬುದು ಹೆಸರು ಪದದೊಂದಿಗೆ ಎಸಕದ 'ಆಗು'ವಿಕೆಗೆ ಸಂಬಂದಿಸಿದೆ. ಇಲ್ಲಿ ಮತ್ತೆ ಮತ್ತೆ ಮಾಡುವಿಕೆಯು ಕಡ್ಡಾಯವಾಗಿ ಬೇಕಾಗಿಲ್ಲ. ಕನ್ನಡ+ಇಗ= ಕನ್ನಡಿಗ (ಇಲ್ಲಿ ಕನ್ನಡಿಗ ಎಂಬುವಲ್ಲಿ ಕನ್ನಡಿಗನಾಗಿ 'ಹುಟ್ಟು'ವ ಆಗುವಿಕೆ ಇದೆ. ಆದರೆ ಇದುವರೆವಿಗೂ ಕನ್ನಡಗಾರ ಎಂಬ ಬಳಕೆ ಆಗಿಲ್ಲ.

ಮೇಲೆ ಗಾಣಿಗ, ಲೆಕ್ಕಿಗ, ಉಪ್ಪಲಿಗ ಎಂಬುವಲ್ಲಿ ಕೂಡ 'ಕುಲ ಕಸುಬಿ'ನ ನೆರಳು ಕಾಣುತ್ತದೆ. ಇವತ್ತು 'ಗಾಣಿಗ',ಒಕ್ಕಲಿಗ ಕೆಲಸವನ್ನು ಮಾಡದೇ ಇರುವವರಿಗೂ 'ಗಾಣಿಗ', ಒಕ್ಕಲಿಗ ಎಂದು ಗುರುತಿಸುವುದು ಅವರ ಗಾಣಿಗ ಹುಟ್ಟಿನಿಂದಲೇ ಹೊರತು ಗಾಣಿಗತನಕ್ಕೆ ಸಂಬಂದಿಸಿದ ಮಾಡುವಿಕೆಯಿಂದಲ್ಲ. ಕೆಲವು ಎತ್ತುಗೆಗಳಲ್ಲಿ ಗಾರ ಮತ್ತು ಇಗ ಎಂಬ ಎರಡೂ ಒಟ್ಟುಗಳು ಬಳಕೆಯಲ್ಲಿವೆ. ಎತ್ತುಗೆಗೆ: ತೋಟಿಗ-ತೋಟಗಾರ, ಬೇಂಟಿಗ-ಬೇಟೆಗಾರ
ಮೊದಮೊದಲು ಮಾಡುಗತನದ ಕಾರಣದಿಂದ’ಗಾರ’ದಿಂದಲೇ ಸುರುವಾದ ಪದಗಳು ಆಮೇಲೆ ಹುಟ್ಟಿನ ಆಗುವಿಕೆಯಿಂದಾಗಿ’ಇಗ’ಕ್ಕೆ ಮಾರ್ಪಾಟಾಗಿವೆ ಎಂದು ಹೇಳಬಹುದು. ಅದಕ್ಕೆ ಮೇಲಿನ ಎತ್ತುಗೆಗಳೇ ಕಯ್ಗನ್ನಡಿ ಹಿಡಿದಂತೆ ತೋರುತ್ತಿದೆ. ಹಾಗಾಗಿ ಇಗ ಮತ್ತು ಗಾರ ಎಂಬ ಒಟ್ಟುಗಳು ಆಗುವಿಕೆ ಮತ್ತು ಮಾಡುವಿಕೆಗಳ ಮೇಲೆ ನಿಂತಿದೆ ಎಂದು ಹೇಳಬಹುದು

ಶನಿವಾರ, ಜನವರಿ 26, 2013

ಮಂದಿಯಾಳ್ವಿಕೆಗೆ ಏಕೆ ಬೆಲೆ ಕೊಡಬೇಕು?

ಹೊಸಗಾಲದ ಮಾನವನ ಕಂಡುಕೊಳ್ಳುವಿಕೆಗಳಲ್ಲಿ ಬಲು ಅರಿದಾದುದು ಈ ಮಂದಿಯಾಳ್ವಿಕೆ. ಹಲವಾರು ವರುಶಗಳಿಂದ ಮಾನವನು ಪರಿಸರದ ಕಟ್ಟಲೆಯನ್ನೇ ಒಪ್ಪಿಕೊಂಡು ತನ್ನ ಬದುಕನ್ನು ಸಾಗಿಸುತ್ತಿದ್ದ. ಆಮೇಲೆ ಕಾರಣಾಂತರಗಳಿಂದ ಅರಸರಾಳ್ವಿಕೆಯನ್ನು ಒಪ್ಪಿಕೊಳ್ಳಬೇಕಾಯಿತು. ಈಗ ಮಂದಿಯಾಳ್ವಿಕೆಯ ಹೊತ್ತು ಬಂದು ನಿಂತಿದೆ. ಹಾಗಾದರೆ ಪರಿಸರದ ಕಟ್ಟಲೆ, ಅರಸರ ಕಟ್ಟಲೆ ಇವನ್ನೆಲ್ಲ ತೊರೆದು ಮಂದಿಯಾಳ್ವಿಕೆಗೇ ಯಾಕೆ ಮಾನವ ಬಂದು ನಿಂತಿದ್ದಾನೆ? ಮಂದಿಯಾಳ್ವಿಕೆಗೂ ಮುಂಚೆ ಇದ್ದ ಏರ್ಪಾಟುಗಳಲ್ಲಿ ಇದ್ದ ಕೊರತೆಗಳೇನು ಎಂಬುದನ್ನು ಇಲ್ಲಿ ಅರಿತುಕೊಳ್ಳಬೇಕಾಗುತ್ತದೆ.
     ಮಾನವನನ್ನೇ ಎತ್ತುಗೆಯಾಗಿ ತೆಗೆದುಕೊಂಡರೆ, ಪರಿಸರದ ಕಟ್ಟಲೆಯಲ್ಲಿ ಸಾಟಿತನ ಇಲ್ಲವಾಗಿದೆ ಯಾಕಂದರೆ ಕೆಲವರು ಹುಟ್ಟಿನಿಂದಲೇ ಒಳ್ಳೆಯ ಮಯ್ ಕಟ್ಟನ್ನು ಪಡೆದುಕೊಂಡಿರುತ್ತಾರೆ; ಕೆಲವರು ಪಡೆದುಕೊಂಡಿರುವುದಿಲ್ಲ. ಇನ್ನು ಕೆಲವರು ಹುಟ್ಟಿನಿಂದಲೇ ಹೆಚ್ಚು ಬುದ್ದಿಶಕ್ತಿಯನ್ನು ಇಲ್ಲವೆ ಸಿರಿತನವನ್ನು ಹೊಂದಿರುತ್ತಾರೆ. ಹಾಗಾಗಿ ಮಯ್ಕಟ್ಟನ್ನು ಹೊಂದಿರುವವರು ಇಲ್ಲವೆ ಬುದ್ದಿಶಕ್ತಿಯನ್ನು ಹೊಂದಿರುವವರು ಇಲ್ಲದಿರುವವರಗಿಂತ ಮುಂದಿರುತ್ತಾರೆ. ಹಾಗಾಗಿ ಪರಿಸರದ ಕಟ್ಟಲೆಯಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ನಡೆಸಬಹುದಾಗಿದೆ ಅಂದರೆ ಇಲ್ಲದವರು ಇರುವವರ ಅಡಿಯಾಳಾಗಿ ಬದುಕಬೇಕಾಗುತ್ತದೆ. ಪರಿಸರದ ಕಟ್ಟಲೆಯಲ್ಲಿ ಇಲ್ಲವೆ ಅರಸರ ಆಳ್ವಿಕೆಯಲ್ಲಿ ಇದು ಎಶ್ಟರ ಮಟ್ಟಿಗೆ ಹೋಗಿತ್ತೆಂದರೆ ಇಲ್ಲದವರು ಇರುವವರ ಅಡಿಯಾಳಾಗಿ ಇರುವುದೇ ಅವರ ದರ್ಮ ಎಂದು ಹೇಳಲಾಗುತ್ತಿತ್ತು!! ಹಾಗಾಗಿ ಇಲ್ಲದವರ ಪಾಡು ಹೇಳತೀರದಾಗಿತ್ತು.

     ಮೇಲಿನಿಂದ ತಿಳಿಯುವುದೇನೆಂದರೆ ಪರಿಸರದಾಳ್ವಿಕೆಯಾಗಲಿ , ಅರಸರಾಳ್ವಿಕೆಯಾಗಲಿ ತುಂಬು ಸಾಟಿತನಕ್ಕೆ ಇಂಬು ಕೊಡುವುದಿಲ್ಲ. ಇದೇ ಈ ಏರ್ಪಾಟುಗಳ ಬಲು ದೊಡ್ಡ ಕೊರತೆ. ತುಂಬು ಸಾಟಿತನವಿಲ್ಲದಿದ್ದರೆ ಅಲ್ಲಿ ಇಲ್ಲದವರು ಗವ್ರವದ ಬದುಕನ್ನು ಬಾಳಲಾಗುವುದಿಲ್ಲ. ಹಾಗಾದರೆ ಮಂದಿಯಾಳ್ವಿಕೆ ತುಂಬು ಸಾಟಿತನವನ್ನು ನೀಡುವುದೇ ಎಂಬ ಕೇಳ್ವಿಯು ಮುಂದೆ ಬರುವುದು. ಮಂದಿಯಾಳ್ವಿಕೆ ತುಂಬು ಸಾಟಿತನವನ್ನು ನೀಡದಿದ್ದರು ಆ ಕಡೆಗೆ ಒಂದು ದೊಡ್ಡ ಹೆಜ್ಜೆಯನ್ನು ಇಡುತ್ತದೆ. ಆ ಹೆಜ್ಜೆಯ ನೆರವಿನಿಂದ ಮಂದಿಯಾಳ್ವಿಕೆಯೆಂಬ ಏರ್ಪಾಟನ್ನು ಸರಿಪಡಿಸಿಕೊಳ್ಳುತ್ತಾ ತುಂಬು ಸಾಟಿತನವನ್ನು ಪಡೆಯುವುದು ಹೊಸಗಾಲದ ಮಾನವನ ಮೇಲಿರುವ ಹೊಣೆಯಾಗಿದೆ. ಹಾಗಾಗಿ ಮಾನವ ಸಾಟಿತನವನ್ನು ಅರಸುತ್ತಾ ಇಂದು ಮಂದಿಯಾಳ್ವಿಕೆಯ ಹೊಸ್ತಿಲಲ್ಲಿ ಬಂದು ನಿಂತಿದ್ದಾನೆ. ಹೀಗೆ ಮಂದಿಯಾಳ್ವಿಕೆಗೆ ಬಂದು ನಿಂತಿರುವುದನ್ನು ನೋಡಿದರೆ ಮಾನವ ಹೆಚ್ಚು ಹೆಚ್ಚು ಮಾನವೀಯತೆಯನ್ನು ಮಯ್ಗೂಡಿಸಿಕೊಳ್ಳಬೇಕೆಂಬ ಹುರುಪು ತೋರುತ್ತಿದ್ದಾನೆ ಎಂದು ತಿಳಿಯಬಹುದು.

 ಮಂದಿಯಾಳ್ವಿಕೆಯಿಂದ ಎಲ್ಲ ಬಗೆಯ ಮನುಶ್ಯರಿಗೂ ಸಮನಾದ ಗಳಿಕೆಯಿದೆ. ಅವುಗಳೇನೆಂದರೆ
   ೧. ಹುಟ್ಟಿನಿಂದ ಏನೇ ಪಡೆದುಕೊಂಡರೂ ಎಲ್ಲರಿಗೂ ಒಂದೇ ಮಟ್ಟದ ಸಾಟಿತನ
   ೨. ಮಂದಿಯೊಲವಿಗೆ ಮನ್ನಣೆ
   ೩. ಹಲತನಕ್ಕೆ ಮನ್ನಣೆ ಮತ್ತು ಅವುಗಳ ನಡುವೆ ಹೊಂದಾಣಿಕೆಗೆ ಒತ್ತು
   ೪. ಎಲ್ಲರಿಗೂ ಬೇರು ಮಟ್ಟದ ಈಳಿಗೆ(ಸ್ವಾತಂತ್ರ್ಯ) ಮತ್ತು ಹಕ್ಕುಗಳು ಎತ್ತುಗೆಗೆ: ಯಾವ ಹೆದರಿಕೆಯಿಲ್ಲದೆ ಮಾತನಾಡುವ ಹಕ್ಕು
   ೫. ಯಾರೇ ಆದರೂ ನೆಮ್ಮದಿಯ ಮೂಲಕ ಮಂದಿಯ ಒಳಿತಿಗೆ ಕೂಡಣದಲ್ಲಿ ಮರ್ಪಾಟುಗಳನ್ನು ತರಬಹುದಾದ ಹಕ್ಕು

ಮಂದಿಯಾಳ್ವಿಕೆ ಹಿಂದಿದ್ದ ಏರ್ಪಾಟುಗಳಲ್ಲಿರುವ ಕೊರತೆಯನ್ನು ನೀಗಿಸುವ ಬರವಸೆಯನ್ನು ತೋರುತ್ತದೆ. ಮಂದಿಯಾಳ್ವಿಕೆಗಿಂತ ಚೆನ್ನಾಗಿರುವ ಏರ್ಪಾಟು ಸದ್ಯಕ್ಕಂತು ಕಾಣುತ್ತಿಲ್ಲ. ಮಂದಿಯಾಳ್ವಿಕೆಯ ಏರ್ಪಾಟನ್ನು ಗಟ್ಟಿಗೊಳಿಸುವುದರ ಮೂಲಕ ಎಲ್ಲರ ಹಿತವನ್ನು ಕಾಪಾಡಬಹುದಾಗಿದೆ. ಹಾಗಾಗಿ ಮಂದಿಯಾಳ್ವಿಕೆಗೆ ಬೆಲೆ ಕೊಡಬೇಕು ಮತ್ತು ಮಂದಿಯಾಳ್ವಿಕೆ ಎಂದರೆ ಅಯ್ದು ವರುಶಕ್ಕೊಮ್ಮೆ ವೋಟು ಕೊಟ್ಟು ಸುಮ್ಮನೆ ಕೂತುಕೊಳ್ಳುವುದಲ್ಲ, ಬದಲಾಗಿ ಮಂದಿಯಾಳ್ವಿಕೆಯ ಚಿಂತನೆಗಳನ್ನು ತಮ್ಮ ದಯ್ನಂದಿನ ಕೆಲಸಗಳಲ್ಲಿ ಜಾರಿಗೆ ತರಬೇಕು.

ಹೆಚ್ಚಿನ ಓದಿಗೆ ಈ ಕೆಳಗಿನ ಹೊತ್ತಗೆಯನ್ನು ಓದಬಹುದು:-
  Democracy: 80 Questions and Answers  - David Beetham & Kevin Boyle, National Book Trust, India

ಗುರುವಾರ, ಜನವರಿ 24, 2013

ಕನ್ನಡದ್ದೇ ಆದ ಪದಗಳನ್ನು ಏಕೆ ಕಟ್ಟಬೇಕು ?

     ಇತ್ತೀಚೆಗೆ ನಡೆದ ಒಂದು ಒಸಗೆಯಲ್ಲಿ ಸುದ್ದಿಯಾಳೊಬ್ಬರು ಮಾತಾಡುತ್ತಾ ಕನ್ನಡ ಸಾಹಿತ್ಯವನ್ನು ಹೆಚ್ಚು ಮಂದಿ ಅದರಲ್ಲೂ ಹಳ್ಳಿಯ ಮಂದಿ ಓದಿಲ್ಲ ಇಲ್ಲವೆ ಓದುತ್ತಿಲ್ಲ, ಆದರೂ ಅವರು ಕನ್ನಡವನ್ನೇ ಉಸಿರಾಗಿಸಿಕೊಂಡವರು, ಕನ್ನಡದಲ್ಲೇ ದುಡಿಮೆ ಮತ್ತು ಬದುಕನ್ನು ಕಟ್ಟಿಕೊಂಡವರು ಎಂದು ಹೇಳಿದರು. ಇಂತಹ ದಿಟಗನ್ನಡಿಗರಿಂದ ಕನ್ನಡ ಸಾಹಿತ್ಯ ದೂರವಾದುದು ಏಕೆ ಎಂಬ ಕೇಳ್ವಿ ನನ್ನನ್ನು ಆಗ ಕಾಡಿತು. ಹೆಚ್ಚಿನ ಮಂದಿಗೆ ಅನ್ನಿಸುವಂತೆ ಹಳ್ಳಿಗರು ಎಂದರೆ ಅಕ್ಶರ ಗೊತ್ತಿಲ್ಲದವರು ಇಲ್ಲವೆ ತಿಳಿವಳಿಕೆ ಇಲ್ಲದವರು, ಅವರ ಅರಿವಿಗೆ ಕನ್ನಡ ಸಾಹಿತ್ಯ ಎಟುಕಲಾರದು ಅಂತ ನನಗೆ ಅನ್ನಿಸಲಿಲ್ಲ. ಬದಲಾಗಿ ಕನ್ನಡ ಸಾಹಿತ್ಯದಲ್ಲೇ ಕೊರತೆ ಇಲ್ಲವೆ ತೊಡಕಿರಬೇಕೆಂದು ನನಗನ್ನಿಸಿತು. ಇದನ್ನು ಇನ್ನೂ ಆಳವಾಗಿ ಬಿಡಿನೋಟಕ್ಕೆ ಒಳಪಡಿಸಿದಾಗ ಈ ಅನಿಸಿಕೆ ದಿಟವೆಂದು ನಿಕ್ಕಿಯಾಯಿತು.

     ಇವತ್ತಿನ ಇಲ್ಲವೆ ಹೊಸಗನ್ನಡದ ಹೊತ್ತಿನಲ್ಲಿ ಉಂಟಾದ ಸಾಹಿತ್ಯ ತೊಡಕು ತೊಡಕಾದ ಪದಗಳನ್ನು ಬಳಸುತ್ತಿರುವುದರಿಂದ ಅದು ಸಾಮಾನ್ಯ ಕನ್ನಡಿಗನಿಗೆ ದೂರವಾಗಿಯೇ ಉಳಿದಿದೆ. ಬರಹದಲ್ಲಿ ಸಂಸ್ಕ್ರುತದ ಪದಗಳ ಬಳಕೆ ಎಲ್ಲೆ ಮೀರಿದೆ. ಎಶ್ಟರ ಮಟ್ಟಿಗೆ ಅಂದರೆ ಹೆಚ್ಚಿನ ಕನ್ನಡಿಗರಿಗೆ ಸಾಹಿತ್ಯ ಎಂಬ ಪದದ ಹುರುಳೇ ತಿಳಿದಿಲ್ಲ,  ಆದರೆ ಇದು ಕನ್ನಡಿಗರ ತಪ್ಪಲ್ಲ ಬದಲಾಗಿ ಇಂತಹ ತಿಳಿಯದ ಸಂಸ್ಕ್ರುತದ ಪದಗಳನ್ನು ಬಳಕೆಗೆ ತಂದವರದೇ ತಪ್ಪು. ಬರವಣಿಗೆ, ನಲ್ಬರಹ ಎಂಬ ಸುಲಬವಾದ ಪದಗಳಿರುವಾಗ ಬೇಡದಿದ್ದರೂ ಈ ರೀತಿ ಸಂಸ್ಕ್ರುತ ಪದಗಳ ಬಳಕೆ ಕನ್ನಡದ ಬರಹಗಳನ್ನು ಕಬ್ಬಿಣದ ಕಡಲೆಯನ್ನಾಗಿಸಿದೆ. ಹಾಗಾಗಿ ಸಲೀಸಾದ ಕನ್ನಡದ್ದೇ ಆದ ಪದಗಳನ್ನು ಕಟ್ಟಬೇಕಾಗಿದೆ. ಅವನ್ನು ಹೆಚ್ಚು ಹೆಚ್ಚು ಬರಹಗಳಲ್ಲಿ ಬಳಸಬೇಕಾಗಿದೆ. ಇಂತಹ ಬರಹಗಳನ್ನು ಹೆಚ್ಚಿನ ಮಂದಿಗೆ ತಲುಪಿಸಬೇಕಾಗಿದೆ. ಯಾವುದೇ ಬರಹಗಾರನಿಗೆ ತನ್ನ ಬರಹವು ಹೆಚ್ಚು ಹೆಚ್ಚು ಮಂದಿ ತಲುಪಬೇಕೆಂಬ ಗುರಿ ಇರುತ್ತದೆ ಏಕೆಂದರೆ ಆ ಬರಹದಲ್ಲಿ ಹೇಳಿರುವ ವಿಶಯಗಳನ್ನು ಹೆಚ್ಚಿನ ಮಂದಿಗೆ ತಿಳಿಸಬೇಕಾಗಿರುತ್ತದೆ. ಸುದ್ದಿಹಾಳೆಗಳನ್ನು ನಡೆಸುವವರ ಗುರಿಯೂ ಕೂಡ ಹೆಚ್ಚಿನ ಮಂದಿಗೆ ಬರಹಗಳ ಮೂಲಕ ಸುದ್ದಿಯನ್ನು ಮುಟ್ಟಿಸುವುದು, ತಮ್ಮ ಸುತ್ತಮುತ್ತ ಆಗುತ್ತಿರುವ ಆಗುಹಗಳ ಬಗ್ಗೆ ಮಂದಿಯಲ್ಲಿ ಅರಿವನ್ನು ಮೂಡಿಸುವುದೇ ಆಗಿದೆ. ಹಾಗಾಗಿ ಆದಶ್ಟೂ ಬರಹಗಳು ಸಲೀಸಾಗಿ ಓದುವಂತೆಯೂ, ತಿಳಿಯುವಂತೆಯೂ ಇರಬೇಕಾಗುತ್ತದೆ. ಇದಕ್ಕೆ ಕನ್ನಡದ್ದೇ ಆದ ಪದಕಟ್ಟಣೆ ನೆರವಿಗೆ ಬರುತ್ತದೆ.
ಪದಕಟ್ಟಣೆಯ ಗುರಿಗಳು:
     ಮೊದಲಿಗೆ, ಕನ್ನಡದ್ದೇ ಆದ ಪದಕಟ್ಟಣೆಯ ಗುರಿಯು ಇಂತಹ ಒಂದು ಕಟ್ಟಣೆಯ ಸಾದ್ಯತೆಯನ್ನು ತೋರಿಸಿಕೊಡುವುದೇ ಆಗಿದೆ. ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ಓದಿಕೊಂಡವರು, ದೊಡ್ಡ ದೊಡ್ಡ ಬರಹಗಾರರು ಕೂಡ ಇಂಗ್ಲಿಶಿನಲ್ಲಿರುವ ಅರಿಮೆಯ ಹಲವು ಪದಗಳಿಗೆ ಕನ್ನಡದ್ದೇ ಆದ ಪದಗಳನ್ನು ಕಟ್ಟಲು ಆಗುವುದೇ ಇಲ್ಲವೆಂದು ನಂಬಿದ್ದಾರೆ. ಈ ನಂಬಿಕೆಯನ್ನು ಪದ ಕಟ್ಟುವುದರ ಮೂಲಕ ಹುಸಿಗೊಳಿಸಬೇಕಾಗಿದೆ.  ಇಲ್ಲಿಯವರೆಗೆ ಪದ ಕಟ್ಟಣೆ ದೊಡ್ಡ ಮಟ್ಟದಲ್ಲಿ ಆಗದಿರುವುದಕ್ಕೆ ಕಾರಣ ಕನ್ನಡ ನುಡಿಯಲ್ಲಿರುವ ಕೊರತೆಯಲ್ಲ, ಬದಲಾಗಿ ಕನ್ನಡಿಗರಲ್ಲಿರುವ ಕನ್ನಡದ ಬಗೆಗಿನ ಅರಿವಿನ ಕೊರತೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.  ಕನ್ನಡದಲ್ಲಿ ಹೆಚ್ಚು ಹೆಚ್ಚು ಅರಿಮೆಯ ಪದಗಳು ಉಂಟಾದರೆ ಅದನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಅರಿಮೆಯ ಬರಹಗಳನ್ನು ಬರೆಯಲು ಬರುತ್ತದೆ. ಒಟ್ಟಿನಲ್ಲಿ ಹೊಸ ಹೊಸ ಅರಿಮೆಗಳನ್ನು ಈ ಮೂಲಕ ಕನ್ನಡಕ್ಕೆ ತರಬಹುದಾಗಿದೆ.
     ಎರಡನೆಯದಾಗಿ, ಯಾವುದೇ ನುಡಿಯ ಮೇಲ್ಮೆಗಳಲ್ಲಿ ಅರಿದಾದುದು ಆ ನುಡಿಯ ಪದಸಿರಿ ಎಂದು ಹೇಳಬಹುದು. ಈ ಪದಸಿರಿಯು ಹೆಚ್ಚು ಹೆಚ್ಚು ಕನ್ನಡದ್ದೇ ಆದರೆ ಕನ್ನಡ ಕನ್ನಡವಾಗಿಯೇ ಉಳಿಯುತ್ತದೆ. ಕನ್ನಡವು ಕನ್ನಡವಾಗಿಯೇ ಉಳಿದರೆ ಕನ್ನಡಿಗರಲ್ಲಿ ಉಳಿದ ಬಾರತೀಯರಿಗಿಂತ ತಾವು ಬೇರೆ ಮತ್ತು ತಮ್ಮ ನುಡಿ ಬೇರೆ ಎಂಬ ಅರಿವು ಬಲವಾಗುತ್ತದೆ. ಈ ಅರಿವು ಆಳ್ಮೆಯ(ರಾಜಕೀಯ) ಅಂಗಳದಲ್ಲಿ ನೆಲೆ ನಿಂತರೆ ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಹೆಚ್ಚು ಗಟ್ಟಿಯಾಗಬಹುದಾಗಿದೆ. ಈ ಗಟ್ಟಿತನದಿಂದ ಕನ್ನಡಿಗರು ತಮ್ಮ ಹಕ್ಕು, ತಮ್ಮ ಈಳಿಗೆ ಮತ್ತು ತಮ್ಮತನವನ್ನು ಉಳಿಸಿ ಬೆಳೆಸಿಕೊಳ್ಳಬಹುದಾಗಿದೆ. ಯಾವ ಜನಾಂಗ ತನ್ನತನವನ್ನು ಬಿಟ್ಟುಕೊಡುವುದಿಲ್ಲವೊ ಆ ಜನಾಂಗ ಕೆಚ್ಚಿನ(ಸ್ವಾಬಿಮಾನದ) ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ. ಈ ಕೆಚ್ಚಿನ ಬದುಕಿನಿಂದ ಕನ್ನಡಿಗರು ಹೆಚ್ಚಿನದನ್ನು ಸಾದಿಸಲು ಬರುತ್ತದೆ.
     ಕೊನೆಯದಾಗಿ, ಹೊಸದಾಗಿ ಕಟ್ಟಿದ ಪದಗಳನ್ನು ಮಂದಿಯ ಮುಂದಿಡಲು ಮತ್ತು ಅದನ್ನು ಬಳಕೆಗೆ ತರಲು ಸುದ್ದಿಹಾಳೆಗಳು ನೆರವೀಯಬಲ್ಲುವು. ಇಂತಹ ಹೊಸ ಆರಯ್ಕೆಗಳಿಗೆ(ಪ್ರಯೋಗಗಳಿಗೆ) ಸುದ್ದಿಹಾಳೆಗಳು ಬೆಂಬಲ ಕೊಡುವುದರಿಂದ ಪದ ಕಟ್ಟುವವರಿಗೆ ಹುರುಪು ತುಂಬಿದಂತಾಗುತ್ತದೆ. ಪದ ಕಟ್ಟುವವರು ಮತ್ತು ಪದ ಬಳೆಕೆ ಮಾಡುವವರ ನಡುವೆ ಸುದ್ದಿಹಾಳೆಯು ಕೊಂಡಿಯಂತೆ ಕೆಲಸ ಮಾಡಬಹುದಾಗಿದೆ. ಇದರಿಂದ ಕನ್ನಡದ ಕಸುವನ್ನು ಇನ್ನು ಚೆನ್ನಾಗಿ ದುಡಿಸಿಕೊಳ್ಳಲು ಬರುತ್ತದೆ. ಇದರಿಂದ ಹೆಚ್ಚಿನ ಮಂದಿಯ ಅರಿವಿನ ಮಟ್ಟ ಮೇಲೇರುತ್ತದೆ. ಮೇಲ್ಮಟ್ಟದ ಅರಿವನ್ನು ಹೊಂದಿರುವ ಕೂಡಣದ ಏಳಿಗೆ ತಾನಾಗಿಯೇ ಆಗುತ್ತದೆ.

ಪದಪಟ್ಟಿ
 ಒಸಗೆ - occasion
 ಆರಯ್ಕೆ - experiment
 ಅರಿದು - important
 ಕೆಚ್ಚು   - pride
 ಸುದ್ದಿಯಾಳು - press reporter
 ಆಳ್ಮೆ - politics

ಬುಧವಾರ, ಜನವರಿ 23, 2013

ಕನ್ನಡ, ಇರ್ನುಡಿತನ ಮತ್ತು ಕೂಡಣ

ಇತ್ತೀಚಿನ ದಿನಗಳಲ್ಲಿ ಮಂದಿಯ ಇರ್ನುಡಿತನದಲ್ಲಿರುವ  ಹೆಚ್ಚುಗಾರಿಕೆಯ ಬಗ್ಗೆ ಮಾತನಾಡಲಾಗುತ್ತಿದೆ ಯಾಕಂದರೆ ಇರ್ನುಡಿತನದಿಂದ ಮಂದಿಯ ಅರಿವಿನ ಮತ್ತು ಕಲಿಯುವ ಚಳಕಗಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ ಎಂಬುದನ್ನು ಅರಕೆಗಳ ಮೂಲಕ ತೋರಿಸಿಕೊಡಲಾಗಿದೆ. ಹಾಗಾಗಿ ಇರ್ನುಡಿತನವು ಕಲಿಯುವ ಮಕ್ಕಳಿಗೆ ಒಳ್ಳೆಯದು ಎಂದು ತೀರ್ಮಾನಿಸಲಾಗಿದೆ. ಮಿಂಬಲೆಯಲ್ಲಿ ಹುಡುಕಿದರೆ ಇದರ ಬಗ್ಗೆ ಹೆಚ್ಚಿನ ತಿಳಿವು ಸಿಗುತ್ತದೆ.

      ಆದರೆ ದಿಟವಾಗಲೂ ಯಾವುದೇ ಒಂದು ಕೂಡಣದಲ್ಲಿ ಸಂಪೂರ್ಣವಾಗಿ ಇರ್ನುಡಿತನದ ಪರಿಸರವು ಇರುವುದಿಲ್ಲ. ಒಂದು ಕೂಡಣದಲ್ಲಿ ಅಂದರೆ ಕನ್ನಡದಂತಹ(ಕರ್ನಾಟಕದಂತಹ) ಕೂಡಣದಲ್ಲಿ ಎಲ್ಲರೂ ಇರ್ನುಡಿಗರಾಗಿರುವುದಿಲ್ಲ. ಹಾಗೆ ಎಲ್ಲರೂ ಇರ್ನುಡಿಗರಾಗಬೇಕೆಂದು ನಾವು ಬಯಸುವುದು ಕೂಡ ತಪ್ಪಾಗುತ್ತದೆ ಯಾಕಂದರೆ ಯಾರೇ ಆದರೂ ಇರ್ನುಡಿಗರಾಗಬೇಕಾದರೆ ಎರಡನೇ ನುಡಿಯ ಪರಿಸರ ಬೇಕಾಗುತ್ತದೆ. ಎಲ್ಲರಿಗೂ ಇರ್ನುಡಿಯ ಪರಿಸರ ಇರುವುದಿಲ್ಲ. ಒಂದು ಊಹೆಯ ಪ್ರಕಾರ ಕನ್ನಡದಲ್ಲಿ ಇರ್ನುಡಿತನವು ಹೀಗೆ ಇರಬಹುದು.

ಕನ್ನಡದ ಕೂಡಣ

ಚಿತ್ರದಲ್ಲಿ ಕಾಣುವಂತೆ ಕನ್ನಡದ ಕೂಡಣವನ್ನು ಎರಡು ಪದರಗಳಲ್ಲಿ ತೋರಿಸಲಾಗಿದೆ. ಹೊರಪದರದಲ್ಲಿ ಇರ್ನುಡಿತನವಿದೆ ಅಂದರೆ ಕನ್ನಡಿಗರಲ್ಲಿ ಕೆಲವು ಮಂದಿ ಮಾತ್ರ ಕನ್ನಡ ಮತ್ತು ಇಂಗ್ಲಿಶ್ ನುಡಿಗಳಲ್ಲಿ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ನುಡಿಚಳಕವನ್ನು ಹೊಂದಿದ್ದಾರೆ. ಆದರೆ ಹಲವು ಮಂದಿ ಇನ್ನು ಒರ್ನುಡಿಗರಾಗಿಯೇ ಉಳಿದಿದ್ದಾರೆ. ಇಲ್ಲಿ ಒರ್ನುಡಿಗರ(ಕನ್ನಡವೊಂದನ್ನೇ ಓದಿ, ಬರೆದು, ಮಾತನಾಡಬಲ್ಲವರು) ಮತ್ತು ಇರ್ನುಡಿಗರ(ಕನ್ನಡ ಮತ್ತು ಇಂಗ್ಲಿಶ್ ಎರಡನ್ನೂ ಓದಿ, ಬರೆದು, ಮಾತನಾಡಬಲ್ಲವರು)ಎಣಿಕೆ ಎಶ್ಟೆಶ್ಟಿದೆ ಎಂದು ನಿಶ್ಚಿತವಾಗಿ ಹೇಳಲಾಗದಿದ್ದರೂ  ಒರ್ನುಡಿಗರ ಎಣಿಕೆ ಇರ್ನುಡಿಗರ ಎಣಿಕೆಗಿಂತ ತುಂಬ ಹೆಚ್ಚಿದೆ ಎಂದು ನಿಶ್ಚಿತವಾಗಿ ಹೇಳಬಹುದು. ಕನ್ನಡದ ಕೂಡಣದಲ್ಲಿ ಇನ್ನು ಹಲವು ನುಡಿಗಳು (ತುಳು, ಕೊಂಕಣಿ ಇತರೆ) ಇದ್ದರೂ ಕರ್ನಾಟಕದಲ್ಲಿ ಕಲಿಕೆಯ ಒಯ್ಯುಗೆಯಾಗಿ ಹೆಚ್ಚಾಗಿ ಕನ್ನಡ ಮತ್ತು ಅದನ್ನು ಬಿಟ್ಟರೆ ಇಂಗ್ಲಿಶ್ ನುಡಿಯನ್ನು ಬಳಸಲಾಗುತ್ತಿದೆ. ಹಾಗಾಗಿ ಈ ಬರಹದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡು ನುಡಿಗಳನ್ನು ಮಾತ್ರ ಪರಿಗಣಿಸಲಾಗಿದೆ. 
        ಮೇಲೆ ತೋರಿಸಿದಂತೆ ಕನ್ನಡದ ಕೂಡಣದಲ್ಲಿ ಇರ್ನುಡಿತನದ ಒತ್ತರ ಕಡಿಮೆ ಇರುವಾಗ ಹೆಚ್ಚಿನ ಕನ್ನಡಿಗರ (ಒರ್ನುಡಿಗರ) ಅರಿಮೆ ಮತ್ತು ಚಳಕಗಳು ಮೇಲ್ಮೆಯನ್ನು ಪಡೆಯಲಾರದು ಎಂದು ಹೇಳುವವರು ಇದ್ದಾರೆ. ಅದು ದಿಟವಾದರೆ ಕನ್ನಡದ ಕೂಡಣವನ್ನು ಒಮ್ಮಿಂದೊಮ್ಮೆಗೆ ಇರ್ನುಡಿತನದೆಡೆಗೆ ಕೊಂಡೊಯ್ಯಬೇಕೆ? ಇದಕ್ಕೆ ಬಗೆಹರಿಕೆಗಳೇನು?  ಎಂಬ ಕೇಳ್ವಿಯು ನಮ್ಮ ಮುಂದೆ ಬರುತ್ತದೆ.
       ಎಲ್ಲ ಕಡೆಗಳಿಂದ ಅಳೆದು, ತೂಗಿ ನೋಡಿದರೂ ಎಲ್ಲ ಕನ್ನಡಿಗರು ಸಂಪೂರ್ಣವಾಗಿ ಒರ್ನುಡಿಗರಾಗಿಯೇ ಉಳಿಯಬೇಕಾಗಿಲ್ಲ ಇಲ್ಲವೆ ಎಲ್ಲರೂ ಇರ್ನುಡಿಗರಾಗಬೇಕಾಗಿಯೂ ಇಲ್ಲ ಯಾಕಂದರೆ ಎರಡೂ ಕೂಡ ವಿರುದ್ದ ದಿಕ್ಕಿನಲ್ಲಿ ವಿಪರೀತ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುತ್ತವೆಯತ್ತ ಹೊರತು ಒಂದು ಸಮನ್ವಯ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುವುದಿಲ್ಲ. ಈ ಸಮನ್ವಯ ಸ್ತಿತಿಯಿಂದ ಮಾತ್ರ ಕೂಡಣದ ಏಳಿಗೆ ಸಾದ್ಯ ಎಂಬುದನ್ನು ಇಲ್ಲಿ ಮನಗಾಣಬಹುದಾಗಿದೆ.
       ಹಾಗಾದರೆ ಇಂತಹ ಸಮನ್ವಯ ಸ್ತಿತಿಯತ್ತ ಕನ್ನಡದ ಕೂಡಣವನ್ನು ಕೊಂಡೂಯ್ಯುವುದು ಹೇಗೆ? - ಇದಕ್ಕೆ ಉತ್ತರ ಹೀಗಿದೆ- ಕನ್ನಡದ ಕೂಡಣವನ್ನು ಒಂದು ಸಮನ್ವಯ ಸ್ತಿತಿಯತ್ತ ಕೊಂಡೊಯ್ಯಲು ಒರ್ನುಡಿಗರ ಏಳಿಗೆಗೆ ಬೇಕಾದ ಎಲ್ಲ ಅರಿಮೆಗಳು ಕನ್ನಡದಲ್ಲಿಯೇ ದೊರಯುವಂತಾಗಬೇಕು ಯಾಕಂದರೆ ಒರ್ನುಡಿಗರ ಕಲಿಕೆಯು ಕನ್ನಡದಲ್ಲಿಯೇ ಆಗುತ್ತಿರುತ್ತದೆ. ಒರ್ನುಡಿಗರಿಗೆ ಕನ್ನಡದಲ್ಲಿ ಕಲಿಕೆ ಆದರೇನೆ ಅವರ ಕಲಿಕೆ ಚೆನ್ನಾಗಿ ನಡೆಯಬಲ್ಲುದು. ಕನ್ನಡದಲ್ಲೇ ಎಲ್ಲ ಅರಿಮೆಗಳು ದೊರೆಯಬೇಕಾದರೆ ಇರ್ನುಡಿಗರ ಮೇಲೆ ಕೆಲವು ಹೊಣೆಗಾರಿಕೆಗಳು ಬೀಳುತ್ತವೆ. ಇರ್ನುಡಿಗರು ತಮ್ಮ ಚಳಕಗಳನ್ನು ಬಳಸಿಕೊಂಡು ಇಂಗ್ಲಿಶಿನಲ್ಲಿರುವ ಎಲ್ಲ ಅರಿಮೆಗಳನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಇದನ್ನು ಒರ್ನುಡಿಗರು ಬಳಸಿಕೊಂಡು ತಮ್ಮ ಅರಿವನ್ನು ಮತ್ತು ಮಾಡುಗತನವನ್ನು ಹೆಚ್ಚಿಸಿಕೊಂಡು ಅದನ್ನು ಕಲಿಕೆಯಲ್ಲಿ ಮತ್ತು ದುಡಿಮೆಯಲ್ಲಿ ಬಳಸಿಕೊಳ್ಳಬಹುದು. ಇದಲ್ಲದೆ ಒರ್ನುಡಿಗರು ತಮ್ಮ ಕಲಿಕೆಯಲ್ಲಿ ಇಲ್ಲವೆ ದುಡಿಮೆಯಲ್ಲಿ ಪಡೆದ ’ಕಂಡುಕೊಳ್ಳುವಿಕೆ’ಗಳನ್ನು ಪ್ರಪಂಚಕ್ಕೆ ಮುಟ್ಟಿಸಲು ಇರ್ನುಡಿಗರ ನೆರವನ್ನು ಪಡೆದುಕೊಳ್ಳಬಹುದು. ಹೀಗೆ ಅವರು ತಮ್ಮ ಒರ್ನುಡಿತನವನ್ನು ಉಳಿಸಿಕೊಂಡು  ಇರ್ನುಡಿತನದ ಇಲ್ಲದಿರುವ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇದು ಚೆನ್ನಾಗಿ ನಡೆಯಲು ಇರ್ನುಡಿಗರ ಮತ್ತು ಒರ್ನುಡಿಗರ ನಡುವೆ ಪಾಲುದಾರಿಕೆ ಏರ್ಪಡಬೇಕಾಗುತ್ತದೆ. ಸರ್ಕಾರದವರು ಇಲ್ಲವೆ ಕಾಸಗಿ ಸಂಗ/ಸಂಸ್ತೆಗಳು ಈ ಪಾಲುದಾರಿಕೆ ಏರ್ಪಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಪಾಲುದಾರಿಕೆಯು ಕನ್ನಡದ ಕೂಡಣದ ಒಳಗೆಯೇ ನಡೆಯುವುದರಿಂದ ಇದು ಪರಿಣಾಮಕಾರಿಯಾಗಬಲ್ಲುದು ಯಾಕಂದರೆ ಕನ್ನಡದ ಕೂಡಣದ ಒಳಗೆಯೇ ಒಗ್ಗಟ್ಟನ್ನು ಸಾದಿಸುವುದು ಅಶ್ಟು ಕಶ್ಟವಲ್ಲ. ಕನ್ನಡದ ಕೂಡಣವನ್ನು ಹಿಡಿದಿಟ್ಟಿರುವುದು ’ಕನ್ನಡ’ ನುಡಿಯೇ ಅಲ್ಲವೆ?
      ಒರ್ನುಡಿತನವೂ ಬೇಕು , ಇರ್ನುಡಿತನವೂ ಬೇಕು ಆದರೆ ಒರ್ನುಡಿತನಕ್ಕೆ ಇಂಬು ಕೊಡುವಂತೆ ಇರ್ನುಡಿತನ ಇರಬೇಕೇ ಹೊರತು ಒರ್ನುಡಿತನವನ್ನು ನುಂಗಿಹಾಕುವ ಇರ್ನುಡಿತನವು ಕಂಡಿತ ಕನ್ನಡದ ಕೂಡಣಕ್ಕೆ ಬೇಡ ಅಂದರೆ ಕನ್ನಡವನ್ನು ನುಂಗಿ ಹಾಕುವಶ್ಟರ ಮಟ್ಟಿಗೆ ಇಂಗ್ಲಿಶಿನ ಅವಶ್ಯಕತೆ ಕನ್ನಡದ ಕೂಡಣಕ್ಕಿಲ್ಲ.

ಪದಪಟ್ಟಿ
ಒರ್ನುಡಿತನ - Monolingualism
ಇರ್ನುಡಿತನ - Bilingualism
ಒಯ್ಯುಗೆ      - Medium
ಮಿಂಬಲೆ     - Internet
ಕೂಡಣ      - Society

ಶುಕ್ರವಾರ, ಜನವರಿ 18, 2013

’ವ್’ ಮುಚ್ಚುಲಿಯ ಬೀಳುವಿಕೆ


ಆಡುಗನ್ನಡದಲ್ಲಿ ’ವ’ ಇಂದ ಸುರುವಾಗುವ ಪದಗಳಲ್ಲಿ ಒಂದು ಉಲಿಯೊಲವನ್ನು ಗಮನಿಸಿಬಹುದು. ಇಲ್ಲಿ ’ವ’ಇಂದ ಸುರುವಾಗುವ ಕೆಲವು ಪದಗಳನ್ನು ಕೊಡಲಾಗಿದೆ.

ಬರಹಗನ್ನಡ  ಆಡುಗನ್ನಡ              ಬಿಡಿಸಿಕೆ
ವಿರೋದ         ಇರೋದ              ವ್+ಇ           (’ವ್’ ಬೀಳುವಿಕೆ ಆಗಿದೆ)
 ವೀರ             ಈರ                   ವ್+ಈ             (’ವ್’ ಬೀಳುವಿಕೆ ಆಗಿದೆ)
 ವೆಟ್ಟೆ             ಎಟ್ಟೆ(ಯೆಟ್ಟೆ)            ವ್+ಎ           ( ’ವ್’ ಬೀಳುವಿಕೆ ಆಗಿದೆ)
(Heat)     
 ವೆಂಕಟ         ಎಂಕಟ(ಯಂಕಟ)       ವ್+ಎ         (’ವ್’ ಬೀಳುವಿಕೆ ಆಗಿದೆ)
ವೇಶ             ಏಸ(ಯಾಸ)            ವ್+ಏ           (’ವ್’ ಬೀಳುವಿಕೆ ಆಗಿದೆ)

ಈ ಮೇಲಿನ ಪದಗಳಲ್ಲಿನ ಬಿಡಿಸಿಕೆ ನೋಡಿದಾಗ ’ವ್’ ಎಂಬ ಮುಚ್ಚುಲಿಯು ’ಯ್’ ಗುಂಪಿನ ತೆರೆಯುಲಿಯೊಂದಿಗೆ ಸೇರಿ ವಿ, ವೀ, ವೆ, ವೇ ಎಂಬ ’ಉಲಿಕಂತೆ’ಗಳುಂಟಾಗಿದೆ. ಹಾಗಾಗಿ ’ವ್’ಬೀಳುವಿಕೆಗೂ ಮತ್ತು ಅದರ ಮುಂದಿರುವ ತೆರೆಯುಲಿಗೂ ನಂಟಿದೆ ಎಂದು ಹೇಳಬಹುದು.

ಉಲಿಯೊಲವಿನ ಹೇಳಿಕೆ: 
       "ಯಾವಾಗ ’ವ್’ ಮುಚ್ಚುಲಿಯು ’ಯ್’ ಗುಂಪಿನ ತೆರೆಯುಲಿಯೊಂದಿಗೆ(ಇ, ಈ, ಎ, ಏ) ಸೇರಿಕೆಯಾಗುವುದೋ ಆಗ ಆಡುಗನ್ನಡದಲ್ಲಿ ’ವ್’ ಮುಚ್ಚುಲಿಯು ಬಿದ್ದು ಹೋಗುತ್ತದೆ’

ಬರಹಗನ್ನಡ     ಆಡುಗನ್ನಡ           ಬಿಡಿಸಿಕೆ
೧ ವರಸೆ           ವರಸೆ                  ವ್+ಅ        (’ವ್’ ಬೀಳುವಿಕೆ ಆಗಿಲ್ಲ)
೨ ವಾಲು           ಓಲು                   ವ್+ಆ        (’ವ್’ ಬೀಳುವಿಕೆ ಆಗಿಲ್ಲ)
೩ ವೊಲ್           ಒಲ್                   ವ್+ಒ        (’ವ್’ ಬೀಳುವಿಕೆ ಆಗಿಲ್ಲ)
೪ ವೋಮ         ಓಮ                   ವ್+ಓ        (’ವ್’ ಬೀಳುವಿಕೆ ಆಗಿಲ್ಲ)
 (weed)

ಮೇಲಿನ ’ವ್’ ಎಂಬ ಮುಚ್ಚುಲಿಯು ’ವ್’ ಗುಂಪಿನ ತೆರೆಯುಲಿಗಳೊಂದಿಗೆ(ಅ,ಆ,ಒ,ಓ) ಸೇರಿಕೆಯಾಗಿ ಉಲಿಕಂತೆಗಳುಂಟಾಗಿವೆ.

೩, ೪ ರಲ್ಲಿ  ವೊ->ಒ, ವೋ->ಓ ಎಂಬ ಎತ್ತುಗೆಯನ್ನು ನೋಡಿದಾಗ ಅಲ್ಲಿ ’ವ್’ಮುಚ್ಚುಲಿಯ ಬೀಳುವಿಕೆಯಾಗಿರುವಂತೆ ಕಂಡರೂ ಅಲ್ಲಿ ದಿಟವಾಗಲೂ ಬೀಳುವಿಕೆಯಾಗಿಲ್ಲ. ಬದಲಾಗಿ  ಒ ಮತ್ತು ಓ ’ವ್’ ಗುಂಪಿನ ತೆರೆಯುಲಿಗಳೇ ಆಗಿರುವುದರಿಂದ ಒಂದರ ಬದಲು ಬೇರೊಂದು(ಒ<->ವ, ಓ<->ವೋ(ವಾ)) ಬದಲಾಗುವುದು ಇತರ ಕನ್ನಡದ ಪದಗಳಲ್ಲೂ ಕಾಣಬಹುದು

ಓಟ <->ವಾಟ
ಒತ್ತು <->ವತ್ತು (ವೊತ್ತು)
ಓಲೆ <->ವಾಲೆ

ತಿರುಳು:  ಕನ್ನಡ ಉಲಿಯೊಲವನ್ನು ಗುರುತಿಸುವ ಮತ್ತು ಅದರ ಬಗ್ಗೆ ಬಿಡಿನೋಟಗಳನ್ನು ಬರೆದಿಡಬೇಕಾಗಿದೆ. ಅಂತಹ ಮೊಗಸಿನಲ್ಲಿ ಈ ಮೇಲಿನ ’ವ್’ ಮುಚ್ಚುಲಿಯ ಬೀಳುವಿಕೆಯನ್ನು ವಿವರಿಸಲಾಗಿದೆ.