ಬುಧವಾರ, ಜೂನ್ 29, 2011

ಕರಿಯನ ನೆನೆ

ಕೂದಲನ್ ಇವ ತುರುಕಾರ್ತಿಯರ ಕಾದಲನ್
ಕೂರ್ಪನ್ ಇವ ತಾಯ(ಯಸೋದೆಯ) ಕಾಡುತಿರ್ಪನ್
ಕರುಗೊಲ್ಲನ್ ಇವನೇ ಇವನೇ ಕರಿಯನ್

ಮಂಗಳವಾರ, ಜೂನ್ 28, 2011

ಮೊರೆ- ಇದರಿಂದಾದ ಪದಗಳು

ಮದುಮೊರೆಗ = ಬೀಗ
ಮದುಮೊರೆಗ್ತಿ = ಬೀಗ್ತಿ
ಮದುಮೊರೆಯವರು = ಬೀಗರು
ಮದುಮೊರೆ(ಮೆ) = ಬೀಗತನ
ಮೊರೆ=ನಂಟು=ಸಂಬಂದ

ಕಬ್ಬಾಳಮ್ಮ - ಯಾರು?

ಎಶ್ಟೊಂದು ಟ್ಯಾಕ್ಸಿಗಳ ಮುಂದೆ ಕಡೆ ’ಕಬ್ಬಾಳಮ್ಮನ ಕ್ರುಪೆ’ ಅಂತ ಹಾಕಿಕೊಂಡಿರುತ್ತಾರೆ.

ಕಬ್ಬಾಳ = ಕರು+ಪಾಳಮ್ಮ = ಕರ್ಬಾಳಮ್ಮ = ಕಬ್ಬಾಳಮ್ಮ

ಕರು=ದೊಡ್ಡ, ಮಹಾ
ಪಾಳಮ್ಮ = ಪಾಳ್ಯದಮ್ಮ = ಹಳ್ಳಿಯಮ್ಮ = ಗ್ರಾಮದೇವತೆ

ಮಹಾ ಗ್ರಾಮದೇವತೆ = ಕಬ್ಬಾಳಮ್ಮ :)

’ಆಱಿಲ್’/ಆರಿಲ್ ಪದದ ಬೆನ್ನು ಹತ್ತಿ...

ನಾನು ಮೊದಲು ’ಅರಿಲ್’= ನಕ್ಶತ್ರ= star ಎಂಬ ಪದ ಆಂಡಯ್ಯನ ’ಕಬ್ಬಿಗರ ಕಾವನ್’ನಲ್ಲಿ ಕೇಳಿದಾಗ ಇದು ಹಳೆಗನ್ನಡದ ಪದ ಹೇಗೆ ಬಿಡಿಸುವುದು ಅಂತ ತುಂಬ ಒದ್ದಾಡಿದೆ.

ಆದರೆ ನೆನ್ನೆ ’ಕಬ್ಬಿಗರ ಕಾವನ್’ ನ್ನು ಮತ್ತೆ ಓದುತ್ತಿದಾಗ ಆಂಡಯ್ಯ ಅದನ್ನು ಬಳಸಿರುವ ಪದಕಂತೆ ಹೀಗಿತ್ತು - ’ತಳ್ತಾಱಿಲ್’ (ತಳ್ತು + ಆರಿಲ್= ಹೊಳೆಯುವ ನಕ್ಶತ್ರ) ಹಾಗಾಗಿ ಅದು ’ಅರಿಲ್’ ಅಲ್ಲ ’ಆರಿಲ್’(ತಳ್ತಾ ಅಂತ ’ಆ’ ಬಂದಿರುವುದರಿಂದ) ಎಂಬುದು ಮನದಟ್ಟಾಯಿತು ಯಾಕಂದ್ರೆ ಕನ್ನಡದಲ್ಲಿರುವುದು ಲೋಪ ಸಂದಿ.( ’ಉ’ಕಾರ ಲೋಪವಾಗಿ ’ಆ’ ಕಾರ ಬಂದಿದೆ)

ಆಱ್(ಆರ್)= ಇದಕ್ಕಿರುವ ಅರ್ಥಗಳನ್ನು ಗಮನಿಸಿ, Ka. āṟ (ārt-) to be or become strong, be powerful, able, or competent, be possible, can, may, be adequate, be able for, be able to endure; āṟu power, daring, self-will; ārpu might, force, daring, valour; āke power, valour; āpa being strong, being able, being possible

ಆರ್(power, capable)+ಇಲ್(place, ಜಾಗ) = ಆರಿಲ್ ....ಇದೇ ಇದಕ್ಕೆ ಸರಿಯಾದ ಬಿಡಿಸಿಕೆ ಅಂತ ಅನ್ಕೊಂಡೆ. ಹಾಗಾಗಿ ಆರ್ ಗೆ ಇರುವ ಅರಿತಗಳೆಲ್ಲ ’power/energy/capable' ಹೀಗೆ...ಆಂಡಯ್ಯನು ಹುಟ್ಟಿಸಿರುವ ಈ ಪದ ವೈಜ್ಞಾನಿಕವಾಗಿಯೂ ಸರಿ ಯಾಕಂದ್ರೆ ಬರೀ ಆರಿಲ್ ಗಳು ಬೆಳೆಕನ್ನು ತನ್ನಿಂತಾನೆ ಉಂಟುಮಾಡಿಕೊಳ್ಳಬಲ್ಲವು. ಆದರೆ ಗ್ರಹಗಳಿಗೆ ಇದು ಆಗಲ್ಲ. ಹಾಗಾಗಿ ಆರಿಲ್ಗಳು ತಮ್ಮಿಂತಾನೆ ಮಿನುಗುತ್ತವೆ ಆದರೆ ಗ್ರಹಗಳು ತನ್ನಿಂತಾನೆ ಮಿನುಗುವುದಿಲ್ಲ, ಆರಿಲ್ಗಳ ಬೆಳಕನ್ನು ಮಾತ್ರ ಮಾರ್ಪೊಳೆಪಿ( ಪ್ರತಿಫಲನ)ಸುತ್ತವೆ.


ಸಂಸ್ಕ್ರುತದ ’ನಕ್ಷತ್ರ’ ಕೂಡ ಹೆಚ್ಚು ಕಡಿಮೆ ಇದೇ ಅರಿತ ಇದೆ ಅನ್ಸುತ್ತೆ. - ksatra (p. 077) [ ksha-trá ] n. sg. & pl. dominion, power; powers that be, ನ-ಕ್ಶತ್ರ ...Stars are celestial bodies whose power doesnt get exhausted ಅಂತ ಅನ್ಸುತ್ತೆ. ಸಂಸ್ಕ್ರುತದ ಬಿಡಿಸುವಿಕೆಗೆ ಸರಿಯೋ ತಪ್ಪೊ ನನಗೆ ಅಶ್ಟು ಸರಿಯಾಗಿ ಗೊತ್ತಿಲ್ಲ.

ಇಶ್ಟೆಲ್ಲಾ ಬರೆದುದರ ತಿರುಳೇನೆಂದರೆ ಆರಿಲ್ ಇವತ್ತಿಗೂ ಪ್ರಸ್ತುತವಾಗಿರುವ ಮತ್ತು ಸುಲಭವಾಗಿ ಅರ್ಥವಾಗುವ ಪದ..!!

Manjunatha K.S - ಒಳ್ಳೆಯ ಯೋಚನಾಧಾಟಿ. ಇಂಥ ಚರ್ಚೆ ಯಾವಾಗಲೂ ನುಡಿಯರಿಮೆಯನ್ನು ಹೆಚ್ಚುಹೆಚ್ಚು ಸೂಕ್ಷ್ಮಗೊಳಿಸುತ್ತದೆ.

ಆಱ್+ಇಲ್ = ಆಱಿಲ್ = ನಕ್ಷತ್ರ, being power-houses ಅನ್ನೋದು ಒಳ್ಳೆಯ ಪದವೇ. ನಕ್ಷತ್ರವನ್ನು ಹಾಗೆ ಕರೆಯಬಹುದೇನೋ (ಅಥವ ಅದಕ್ಕಿಂತ ಹೆಚ್ಚಾಗಿ ವಿದ್ಯುತ್ ಕಾರ್ಖಾನೆಗಳನ್ನು). ಆದರೆ ಆಂಡಯ್ಯ ಹೀಗೆ ಯೋಚಿಸಿ ಈ ಹೊಸಪದ ಹುಟ್ಟಿಹಾಕಿರಬಹುದೇ ಅನ್ನುವ ಊಹೆಗೆ ಅನೇಕ ಬಾಧೆಗಳಿವೆ. ಮೊದಲಾಗಿ ನಕ್ಷತ್ರಗಳಿಗೆ ಸ್ವಂತ ಬೆಳಕು/ಶಕ್ತಿಯಿದೆ ಆದರೆ ಗ್ರಹಗಳಿಗಿಲ್ಲ ಅನ್ನುವ ಅರಿವು ಇವತ್ತಿನದು, ಆಂಡಯ್ಯನ ಕಾಲದ್ದಲ್ಲ. ನಕ್ಷತ್ರಗಳು powerhouseಗಳೇ ಆದರೂ ನಮಗಲ್ಲ; ನಮ್ಮ powerhouse/ನಕ್ಷತ್ರವಾದ ಸೂರ್ಯನೂ (ಮತ್ತೆ ಉಪಗ್ರಹವಾದ ಚಂದ್ರನೂ) ನಮಗೆ ಗ್ರಹವೇ! ನಾವು ಗುರುತಿಸುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಸೂರ್ಯ ಒಂದಲ್ಲ. ಹೀಗಿರುವಾಗ ಅದೆಲ್ಲೋ ಮಿನುಗುವ ನಕ್ಷತ್ರಗಳು (ಸಾಮಾನ್ಯನ ಕಣ್ಣಿಗೆ ಅವು ಗ್ರಹಗಳೋ ನಕ್ಷತ್ರಗಳೋ ಅನ್ನೋದು ಕೂಡ ತಿಳಿಯದು), ಆಂಡಯ್ಯನಿಗೆ ಆರಿಲ್ಲುಗಳಾದುವೇ? ಯೋಚಿಸಬೇಕಾದ್ದು. ಹಾಗೊಂದುವೇಳೆ ಬಳಕೆಯಲ್ಲಿರುವ ಚುಕ್ಕೆಯೋ ಮತ್ತೊಂದೋ ಪದವನ್ನು ಬಿಟ್ಟು ಆರಿಲ್ ಎಂದೇ ಬಳಸಬೇಕಾದರೆ ಅದಕ್ಕೊಂದು ಕಾವ್ಯದ ಜರೂರು ಇರಬೇಕು. ನೀವು ತಿಳಿಸಿರುವ ಸಾಲಿನಲ್ಲಿ ನಕ್ಷತ್ರಗಳನ್ನು powerhouse ಅನ್ನುವ ಸಂದರ್ಭವೇನಾದರೂ ಇದೆಯೇ?

ಬದಲಿಗೆ, ಕವಿಯು ನಕ್ಷತ್ರಕ್ಕೆ ಅರಿಲ್ ಅನ್ನುವ ಬಳಕೆಯಲ್ಲಿರುವ ಪದವನ್ನೇ ಬಳಸಿದ್ದಾನೆ ಅನ್ನುವುದು ಸ್ಪಷ್ಟ. ಅಱಿಲ್ = ಅಱಲ್ = ಅಱಲು = ನಕ್ಷತ್ರ ಅನ್ನುತ್ತದೆ ಕಿಟೆಲ್ ನುಡಿಗಂಟು, ಮತ್ತು ಶಬ್ದಮಣಿದರ್ಪಣ (ಪ್ರಯೋಗಸಾರಂ).

ಮತ್ತೆ ಈ ಅಱಿಲ್ ಅನ್ನುವುದು ಆಱಿಲ್ ಅನ್ನುವುದರ ತಪ್ಪುರೂಪವಿರಬಹುದೇ ಎಂದರೆ ಅಲ್ಲವೆಂದೇ ಹೇಳಬೇಕಾಗುತ್ತದೆ, ಏಕೆಂದರೆ ಅಱಿಲ್ => ಅಱಲ್ ಅನ್ನುವುದಕ್ಕೂ ಬೇರನ್ನು ಹಿಡಿಯಬಹುದು, ಹೀಗೆ: ಅಱ ಎಂಬ ಪದಕ್ಕಿರುವ ಬಹು ಅರ್ಥಗಳಲ್ಲೊಂದು, ಅಂಬರ. ಅಂಬರಕ್ಕೆ ಬಟ್ಟೆ ಮತ್ತು ಆಕಾಶ ಎನ್ನುವ ಎರಡರ್ಥವಿದೆ. ಆಕಾಶ = ಅಲರ್ವಟ್ಟೆ - ಅಲರ್ ಬಟ್ಟೆ - (ಕಿಟ್ಟೆಲ್; ತೋಟಾದಾರ್ಯರ ಶಬ್ದಮಂಜರಿ). ಹೂವಿನ ಅರಳು (ಅರಲು) ಸುರಿದಂಥ ಬಟ್ಟೆಯಂತೆ (ಅಥವ ಹೂವಿನ ದಾರಿಯಂತೆ) ಆಕಾಶವು ತೋರುವುದು ಇದಕ್ಕೆ ಕಾರಣವಿರಬಹುದು. ಶಬ್ದಮಣಿದರ್ಪಣದ ಧಾತುಪ್ರಕರಣದಲ್ಲಿ ಅರಲ್ ಅನ್ನುವುದಕ್ಕೆ "ವಿಕಾಸೇ ಪುಷ್ಪೇ ಚ (ಹೂವು ಇತ್ಯಾದಿಗಳ ಅರಳುವಿಕೆ)" ಎಂಬ ನಿರ್ದೇಶನವಿದೆ. ಆದ್ದರಿಂದ ಅರಳ್ => ಅರಲ್ => ಅಱಲ್ => ಅಱಿಲ್ ಆಗಿರಬಹುದೆಂದು ಊಹಿಸಬಹುದು.

ಹೀಗೆ "ಅಱಿಲ್" ಎನ್ನುವುದು ಸರಿಯಾದ ಬಳಕೆಯೆಂದು ಗೊತ್ತುಪಡಿಸಿದಮೇಲೆ "ತಳ್ತಾಱಿಲ್" ಎಂಬುದರ ಸಂಧಿವಿಷಯವನ್ನು ತೀರ್ಮಾನಿಸಬೇಕಾಗುತ್ತದೆ. ನಿಮ್ಮ ಅನಿಸಿಕೆ ಸರಿ, ತಳ್ತು + ಅಱಿಲ್ ಅನ್ನುವುದು (ಅಥವ ತಳ್ತ + ಅಱಿಲ್ ಅಂದರೂ) "ತಳ್ತರಿಲ್" ಎಂಬ (ಉ ಅಥವ ಅಕಾರ) ಲೋಪಸಂಧಿಯೇ ಆಗಬೇಕಾಗುತ್ತದೆ. ಹಾಗಿದ್ದರೆ ಆಂಡಯ್ಯ ಛಂದಸ್ಸಿಗೋಸ್ಕರ ಸಂಧಿನಿಯಮವನ್ನು ಬಲಿಗೊಟ್ಟನೇ? ಬೇರುಪದಗಳ ವಿಷಯದಲ್ಲಿ ಕವಿ ಸಾಮಾನ್ಯವಾಗಿ ಈ ಸ್ವಾತಂತ್ರ್ಯವಹಿಸುತ್ತಾನೇನೋ (ವಿಠಲ = ವಿಠಲ್ಲ, ನಾರಾಯಣ = ನರಯಣ/ನಾರಯಣ ಇತ್ಯಾದಿ), ಆದರೆ ವ್ಯಾಕರಣದ ವಿಷಯದಲ್ಲಲ್ಲ - ಸಂಧಿಯ ವಿಷಯದಲ್ಲಂತೂ ಅಲ್ಲವೇ ಅಲ್ಲ. ಇಲ್ಲೂ ಕೂಡ ಲೋಪಸಂಧಿಯನ್ನು ಚಾಚೂತಪ್ಪದೆ ಪಾಲಿಸಲಾಗೇ ಇದೆ! ಅದನ್ನು ಬಿಡಿಸಬೇಕಾದ್ದು ಮಾತ್ರ ಹೀಗೆ:

ತಳ್ತ + ಆ + ಅಱಿಲ್ = ತಳ್ತಾಱಿಲ್.

ಇದೇ ರೀತಿ ಸೋಮೇಶ್ವರ ಶತಕದ ಈ ಸಾಲನ್ನು ಗಮನಿಸಿ:
"ಚರಿಪಾರಣ್ಯದ ಪಕ್ಷಿಗೊಂದು ತರು ಗೊಡ್ಡಾಗಲ್"
ಇಲ್ಲಿ ಚರಿಪ ಅರಣ್ಯದ ಪಕ್ಷಿ ಎಂದು ಬಿಡಿಸಿ ಚರಿಪರಣ್ಯ ಅಂದರೆ ಛಂದಸ್ಸು ಕೆಡುತ್ತದೆ. ಚರಿಪ ಅರಣ್ಯದ ಪಕ್ಷಿ = ಚರಿಪಾರಣ್ಯದ ಪಕ್ಷಿ ಅಂದರೆ ಸವರ್ಣದೀರ್ಘಸಂಧಿಯಾಗುತ್ತದೆ (ಅದು ತಪ್ಪು, ಏಕೆಂದರೆ ಚರಿಪ ಅನ್ನುವುದು ಕನ್ನಡ ಪದ). ಇಲ್ಲಿ ಚರಿಪ ಆ ಅರಣ್ಯದ ಪಕ್ಷಿ ಎಂದು ಬಿಡಿಸಿದರೆ ಪಕ್ಷಿಗೆ ಆ ಎನ್ನುವ ವಿಶೇಷಣ ಹೆಚ್ಚು ಅರ್ಥಕೊಡುತ್ತದೆ, ಅದೇ ಕವಿಯ ಉದ್ದೇಶ ಕೂಡ.6/6 (edited 6/6)DeleteUndo deleteReport spamNot spamHamsanandi ! - ಮೇಲಿನ ಎರಡೂ ಬರಹಗಳನ್ನು ನಿದಾನವಾಗಿ ಸ್ವಲ್ಪ ಓದಿ ಮನದಟ್ಟು ಮಾಡಿಕೊಳ್ಳುವ ಮೊದಲು, ತಕ್ಷಣ ಕಂಡುಬಂದ ಒಂದು ವಿಷಯದ ಬಗ್ಗೆ ಟಿಪ್ಪಣಿ ಅಷ್ಟೇ.

@ಮಂಜುನಾಥ

>>>ನಕ್ಷತ್ರಗಳಿಗೆ ಸ್ವಂತ ಬೆಳಕು/ಶಕ್ತಿಯಿದೆ ಆದರೆ ಗ್ರಹಗಳಿಗಿಲ್ಲ ಅನ್ನುವ ಅರಿವು ಇವತ್ತಿನದು, ಆಂಡಯ್ಯನ ಕಾಲದ್ದಲ್ಲ.

ಇದು ೧೦೦% ಸರಿ ಇಲ್ಲ - ಏಕೆಂದರೆ, ಆರ್ಯಭಟ, ವರಾಹ ಮಿಹಿರ ಮೊದಲಾದವರು "ಚಂದ್ರ" ಗ್ರಹವು ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತೆ ಅನ್ನುವುದನ್ನು ತಿಳಿದಿದ್ದರು. ಅವರು ಸೂರ್ಯನನ್ನೂ ಒಂದು ಗ್ರಹ ಎಂದು ಕರೆದಿದ್ದಾರೆ ಅನ್ನಿ. ಮತ್ತೆ ಬುಧ ಗುರು ಮೊದಲಾದ ಗ್ರಹಗಳಬಗ್ಗೆ ಅವರ ನಿಲುಮೆ ಏನಿತ್ತೋ ಎನ್ನುವುದು ಸ್ಪಷ್ಟವಾಗಿ ತಿಳಿವುದಿಲ್ಲ.

ಆದರೆ, ಕೆಲವು ಆಕಾಶಕಾಯಗಳಿಗೆ (ಉದಾ: ಸೂರ್ಯ, ಇತರ ತಾರೆಗಳು) ಸ್ವಂತ ಬೆಳಕಿರುವುದೂ, ಕೆಲವಕ್ಕೆ ಇಲ್ಲದಿರುವುದೂ (ಉ:ಚಂದ್ರ), ಆಂಡಯ್ಯನಿಗೆ ತಿಳಿದಿದ್ದಿರಬಹುದು.6/6DeleteUndo deleteReport spamNot spamBharath Kumar - ಹಂಸಾನಂದಿಯವರ ಹೇಳಿಕೆಗೆ ನನ್ನ ಒಪ್ಪಿಗೆಯಿದೆ. ವರಾಹ ಮಿಹಿರ, ಆರ್ಯಭಟ ಇವರುಗಳು ಆಂಡಯ್ಯನಿಗಿಂತ ಮೊದಲಿಗರು. ಅಂತ ನಾನು ತಿಳಿದಿದ್ದೇನೆ. ಆರಿಲ್ ಮತ್ತು ಗ್ರಹಗಳ ಇರುವ ಬೇರೆತನ ಗೊತ್ತಿಲ್ಲದಿದ್ದರೂ ಆಂಡಯ್ಯನಿಗೆ ಆರಿಲ್ ಗಳು ’energy centres' ಅನ್ನುವುದು ಗೊತ್ತಿತ್ತು ಅಂತ ಹೇಳುವುದರಲ್ಲಿ ಅಡ್ಡಿಯಿಲ್ಲ ಅಲ್ಲವೆ?Edit6/6 (edited 6/6)DeleteUndo deleteReport spamNot spamBharath Kumar - ಮಂಜುನಾಥರೆ,

ನನ್ನಿ,

ಮೊದಲಿಗೆ , ಕಬ್ಬಿಗರ ಕಾವನ್ ಪದ್ಯದ ೧೨೦ ನೇ ಪದ್ಯ ಈ ಎರಡು ಹೊತ್ತಗೆಗಳಿಂದ:-
೧. ಆಂಡಯ್ಯ ಕವಿಯ ಕಬ್ಬಿಗರ ಕಾವಂ (ಗದ್ಯಾನುವಾದ: ಆರ್. ವಿ. ಕುಲಕರ್ಣಿ) , ಕನ್ನಡ ಸಾಹಿತ್ಯ ಪರಿಷತ್ತು, ೨೦೦೯
೨. ಆಂಡಯ್ಯ ಮಹಾಕವಿ ಪ್ರಣೀತಂ ಕಬ್ಬಿಗರ ಕಾವಂ, ಪರಿಶ್ಕೃತ ತ್ರುತೀಯ ಮುದ್ರಣ, ಕರ್ನಾಟಕ ಕಾವ್ಯಮಂಜರಿಯ ಮತ್ತು ಕಾವ್ಯ ಕಲಾನಿದಿಯ ಪ್ರವರ್ತಕರೂ ರಾಮಾನುಜಯ್ಯಂಗಾರ್ಯರಿಂದ ಪರಿಶೋಧಿತವಾದುದು., ಮೈಸೂರು, ೧೯೩೦,

ಈ ಮೇಲಿನ ಎರಡು ಹೊತ್ತಗೆಗಳಲ್ಲಿ ’ತಳ್ತಾಱಿಲಂ" ಅಂತಾನೆ ಇದೆ.

ಜವನಂ ತುತ್ತುವೆನೊಂಬತುಂ ಗರಮನೆಣ್ಪುಂ ಗೊಂಟಿನೊಳ್ ಕಟ್ಟಿ ತೂ
ಗುವೆನ್ ಏೞುಂ ಕಡಲಂ ಕಡಂಗಿ ಕುಡಿವೆಂ ತಳ್ತಾಱಿಲಂ ಪೊಯ್ದುಂ ತೂ
ಱುವೆನ್ ಐದುಂ ಮೊಗಳ್ಳನಂ ಕೆಡಪುವೆಂ ನಾಲ್ಕುದೞಂ ನೂಂಕೆನ್
ಗುಣವೆನಾಂ ಮೂಱಡಿಯಿಟ್ಟ ನಚ್ಚಿಯರಡಂತೊಂದಾಗಿ ನೋೞ್ಪನ್ನೆಗಂ

ಇದಲ್ಲದೆ ೧ ನೇ ಪುಸ್ತಕದಲ್ಲಿ(ಆರ್. ವಿ.ಕುಲಕರ್ಣಿ) ಪುಟ ೯೭ ರಲ್ಲಿ ಕೊಟ್ಟಿರುವ ಅರ್ಥಕೋಶದಲ್ಲಿ ಹೀಗೆ ಕೊಟ್ಟಿದ್ದಾರೆ.
- *ಆ*ಱಿಲ್ = ನಕ್ಷತ್ರ, ತಾರೆ ಅಂದರೆ ’ಆ’- ಉದ್ದ ತೆರೆಯುಲಿಯನ್ನೇ ಕೊಟ್ಟಿದ್ದಾರೆ.

ಇಶ್ಟ್ರಾದರೂ ಬೇರೆ ಕೋಶಗಳಲ್ಲಿ (ಕಿಟ್ಟೆಲ್, DED) 'ಆಱಿಲ್’(ಉದ್ದ ತೆರೆಯುಲಿ) ಕೊಟ್ಟಿಲ್ಲದಿರುವುದರಿಂದ ಮತ್ತು ಅಱಿಲ್ (ಗಿಡ್ಡ ತೆರೆಯುಲಿಯೇ) ಕೊಟ್ಟಿರುವುದರಿಂದ ನೀವು ಹೇಳಿರುವ ತಳ್ತು+ಆ + ಅಱಿಲ್ = ತಳ್ತಾಱಿಲ್ ಒಪ್ಪಿಕೊಳ್ಳಬಹುದು.
ಆದರೂ ಮೂರು ಪದಗಳನ್ನು ಒಟ್ಟಿಗೆ ಸೇರಿಸುವ( ಸಂಧಿ ಮಾಡುವ) ಅಲುವಾಟ ಕನ್ನಡದ ಕಬ್ಬಗಳಲ್ಲಿ/ಮಾತಿನಲ್ಲಿ ತೀರ ಕಡಿಮೆಯೇ ಇರುವುದರಿಂದ ನಿಮ್ಮ ಬಿಡಿಸುವಿಕೆಯ ಮೇಲೆ ಅಯ್ಬು/ಅನುಮಾನ ಮುಂದುವರೆಯಬಹುದು.Edit6/6DeleteUndo deleteReport spamNot spamBharath Kumar - ಕುಲಕರ್ಣಿಯವರು ಕೊಟ್ಟಿರುವ ವಿವರಣೆ ಇದು:-
ಯಮನನ್ನೇ ನುಂಗುವೆನು, ಒಂಬತ್ತು ಗ್ರಹಗಳನ್ನು ಎಂಟು ದಿಕ್ಕುಗಳಿಗೆ ಕಟ್ಟಿ ತೂಗಿಬಿಡುವೆನ್, ಏಳು ಕಡಲುಗಳನ್ನು ರಬಸದಿಂದ ಕುಡಿದುಬಿಡುವೆನ್, (ಆಕಾಶದಲ್ಲಿ) ಹೊಂದಿಕೊಂಡ ನಕ್ಷತ್ರಗಳನ್ನು ಹೊಡೆದು ತೂರುವೆನು, ಐದು ಮೊಗವುಳ್ಳವನನ್ನು(ಶಿವನನ್ನು) ಕೆಡಹುವೆನು, ನನ್ನ ಚತುರಂಗ ಬಲ ನುಗ್ಗಲಾಗಿ ಮೂರು ಹೆಜ್ಜೆಯಿಟ್ಟವನ(ತ್ರಿವಿಕ್ರಮನ) ಕಣ್ಣುಗಳೆರಡು ಒಂದಾಗಿ ನೋಡುವಂತೆ ಮುನ್ನುಗ್ಗುವೆನು.Edit6/6DeleteUndo deleteReport spamNot spamManjunatha K.S - Hamsanandi ! ಆಸ್ಟ್ರಾನಮಿ ವಿಷಯಕ್ಕೆ ಬಂದಾಗ ನಿಮ್ಮಿಂದೊಂದು expert comment ಬರಬೇಕೆಂದು ನಿರೀಕ್ಷಿಸಿದ್ದೆ :)

ಕ್ಷಮಿಸಿ, ನನ್ನ ಕುಂದು. ಗ್ರಹ-ತಾರೆಗಳ ವ್ಯತ್ಯಾಸ ಸಾಮಾನ್ಯ ಅರಿವಿನ ಭಾಗವಾಗಿತ್ತೇ ಎಂದು ನನ್ನ ಪ್ರಶ್ನೆಯಿರಬೇಕಿತ್ತು; ವರಾಹಮಿಹಿರ ಇತ್ಯಾದಿಗಳ ವಿಜ್ಞಾನ ಅಂದಿಗೆ ವ್ಯವಹಾರ ಜ್ಞಾನದ ಮಟ್ಟಕ್ಕಿಳಿದಿತ್ತೇ; ಅದೊಂದು ಕವಿಸಮಯವಾಗುವಷ್ಟು? ಕವಿಯೊಬ್ಬ ಆ ಅರಿವಿನ ಆಧಾರದಮೇಲೆ ಹೊಸದೊಂದು ಪದವನ್ನು ಚಾಲ್ತಿಗೊಳಿಸಬೇಕಾದರೆ ಆ ಕಾನ್ಸೆಪ್ಟ್ ಜನಕ್ಕೆ ಬಹು ಪರಿಚಿತವಿರಬೇಕು, ಇಲ್ಲವೆಂದರೆ ಅಂಥಾ ಹೊಸಪದ ಕಾವ್ಯದಲ್ಲಿ ಸೋಲುತ್ತದೆ. ಆಂಡಯ್ಯ ಆರ್ ಇಲ್ ಎಂಬ ಹೊಸಪದವನ್ನು ಸೃಷ್ಟಿಸಿ ಅದು ಜನರಲ್ಲಿ ಅಭಿಪ್ರಾಯವಾಗಬೇಕೆಂದರೆ ಈ ಎರಡು ವಿಷಯಗಳು ಮೊದಲೇ ಸಿದ್ಧವಿರಬೇಕು:

೧) ಜನಸಾಮಾನ್ಯರ ಮಟ್ಟದಲ್ಲಿ ಯಾವುದು "ಆರಿಲ್ಲು"ಗಳು, ಯಾವುದು "ಆರಿಲ್ಲ"ಗಳು :) ಎಂಬ ಸ್ಪಷ್ಟ ಅರಿವಿರಬೇಕು

೨) ಸಾಮಾನ್ಯರಿಗೆ ಆಕಾಶದಲ್ಲಿ ಮಿನುಗುವ ವಸ್ತುಗಳನ್ನೆಲ್ಲಾ ಗ್ರಹ-ತಾರೆಗಳೆಂದು ಭೇದಮಾಡಿ ನೋಡುವ ಪರಿಪಾಠ ಸರ್ವವ್ಯಾಪಿಯಾಗಿ ಚಾಲ್ತಿಯಿದ್ದಿರಬೇಕು. ಆದರೆ ಇವತ್ತೂ ನಾವು (ಸಾಮಾನ್ಯವ್ಯವಹಾರದಲ್ಲಿ) ಬಾನಿನಲ್ಲಿ ಕಾಣುವ ಎಲ್ಲ ಚುಕ್ಕೆಗಳನ್ನೂ ನಕ್ಷತ್ರ/ತಾರೆಯೆಂದೇ ಹೆಸರಿಸುವುದು. ಇವತ್ತು ಗ್ರಹ-ತಾರೆಗಳ ಭೇದ ಜನಸಾಮಾನ್ಯರಲ್ಲಿ ಹೆಚ್ಚು ಸ್ಪಷ್ಟವಾಗಿದ್ದರೂ ಅವತ್ತು ಅದು ಕೇವಲ ವಿಜ್ಞಾನವಷ್ಟೇ ಆಗಿತ್ತೆನ್ನಬೇಕು. ಹೀಗೆ ಜನಕ್ಕೆ ಹೊಗದ ಹೊಸಪದವೊಂದನ್ನು ಸೃಷ್ಟಿಸುವ ಜರೂರಾದರೂ ಕವಿಗೆ ಏನಿತ್ತು? (ಅದರಲ್ಲೂ, ಅರಿಲ್ ಅನ್ನುವ ಪದ ಮೊದಲೇ ಇರುವಾಗ), ಇದು ನನ್ನ ಪ್ರಶ್ನೆ.6/6DeleteUndo deleteReport spamNot spamManjunatha K.S - @ ಬರತ,

ನಿಮ್ಮ ಎತ್ತುಗೆಯ ಸ್ವಾರಸ್ಯವನ್ನು ಗಮನಿಸುವುದಾದರೆ ಅಲ್ಲಿ ಒಂಬತ್ತರಿಂದ ಹಿಂದುಹಿಂದಾಗಿ ಒಂದರವರೆಗೂ ಹೋಗುವ ಚಮತ್ಕಾರವನ್ನು ಕವಿ ಮಾಡಿದ್ದಾನೆ. ಈ ಚಮತ್ಕಾರಕ್ಕಾಗಿಯೇ ನಕ್ಷತ್ರದ ಜಾಗದಲ್ಲಿ specific ಆಗಿ ಆಱನ್ನು ಹೋಲುವ ಪದ ಬರಬೇಕಾಗಿದ್ದು. ಇಲ್ಲಿ ಆ + ಅರಿಲ್ = ಆರಿಲ್ ಎಂದು ಸುಲಭವಾಗಿ ಛಂದಸ್ಸಿಗೂ ಚಮತ್ಕಾರಕ್ಕೂ ಹೊಂದಿಸುವ ಸೌಲಭ್ಯವನ್ನು ಕವಿ ಬಳಸಿಕೊಂಡಿದ್ದಾನೆ ಅಷ್ಟೇ; ಅದು ಬಿಟ್ಟು ನಕ್ಷತ್ರಗಳನ್ನು powerhouse ಆಗಿ ಚಿತ್ರಿಸುವ ಯಾವ ಇರಾದೆಯೂ ಕವಿಗಿದ್ದಂತೆ ಕಂಡುಬರುವುದಿಲ್ಲ. ಇಲ್ಲಿ ಕೇವಲ ಅಱಿಲ್ ಎಂದು ಬಳಸಿದರೆ ಛಂದಸ್ಸಿಗೂ ಎರವು, ಚಮತ್ಕಾರಕ್ಕೂ ಎರವು. ಆದ್ದರಿಂದ ಅವೆರಡಕ್ಕೂ ಹೊಂದುವಂತೆ, ಮತ್ತು ಅಱಿಲ್ ಎಂಬುದಕ್ಕೆ ತುಸು ಒತ್ತು ನೀಡಲು ಆ ಎನ್ನುವ ವಿಶೇಷಣವನ್ನು ಬಳಸಿಕೊಂಡಿದ್ದಾನೆ. ಆದ್ದರಿಂದ ಆ + ಅಱಿಲ್ = ಆಱಿಲ್.

ಹಾಗಲದೇ, ಇದು ಕವಿಯ ಹೊಸ ಪದವೆಂದರೆ ಅದು ಮುಂದಿನ ನುಡಿಗಂಟುಗಳಲ್ಲಿ ಸೇರ್ಪಡೆಯಾಗಬೇಕಿತ್ತು, ಮುಂದೆ ಕೆಲವೆಡೆಯಲ್ಲಾದರೂ ಆ ವಿಶೇಷಾರ್ಥದಲ್ಲಿ ಬಳಕೆಗೆ ಬರಬೇಕಿತ್ತು (ಆಂಡಯ್ಯನೇ ಆಱಿಲ್ ಎಂಬ ಪದವನ್ನು ಅದೇ ವಿಶೇಷಾರ್ಥದಲ್ಲಿ ಮತ್ತೆಲ್ಲಾದರೂ ಬಳಸಿದ್ದಾನೆಯೇ? ತಿಳಿದಿಲ್ಲ). ನನಗೆ ತಿಳಿದ ಎಲ್ಲಾ ನುಡಿಗಂಟುಗಳಲ್ಲೂ ಅಱಿಲ್ ಎಂಬ ಪದವಿದೆಯೇ ಹೊರತು ಆಱಿಲ್ ಎಂಬ ಪದವಿಲ್ಲ. ಕೇವಲ ಕರ್ನಾಟಕ ಸಹಕಾರಿ ಪ್ರಕಾಶನ ಮಂದಿರದವರು ಪ್ರಕಾಶಿಸಿದ ಕಾವ್ಯಪದಮಂಜರಿಯಲ್ಲಿ ಮಾತ್ರ ಆಱಿಲ್, ಮತ್ತು ಅಱಿಲ್ ಎರಡೂ ಪದ ಒಟ್ಟಿಗಿದ್ದು ಅರ್ಥ ನಕ್ಷತ್ರವೆಂದು ನಿರ್ದೇಶಿಸಲ್ಪಟ್ಟಿದೆ, ಆದರೆ ಅಲ್ಲೂ ಯಾವುದೇ ಎತ್ತುಗೆಯಾಗಲೀ ಬೇರು ವಿವರಣೆಯಾಗಲಿ ಇಲ್ಲ. ಆದರೆ ಅಱಿಲ್ ಗೆ ಮಾತ್ರ ನಾನು ಮೊದಲು ತಿಳಿಸಿದ ಬೇರು ವಿವರಣೆಗಳು ಅನೇಕ ಕಡೆ ಕಂಡುಬರುತ್ತವೆ. ಹೊಸಪದವೊಂದನ್ನು, ಅದರಲ್ಲೂ ಕಬ್ಬಿಗರ ಕಾವಂನಂಥ ವಿಶಿಷ್ಟ (ಸಂಪೂರ್ಣ ಕನ್ನಡ) ಕಾವ್ಯವೊಂದರಲ್ಲಿ ಬಳಕೆಗೆ ತಂದಾಗ ಅದು ಮುಂದಿನ ಯಾವ ಪದಗಂಟಿನಲ್ಲೂ ಕಾಣಸಿಗದಿದ್ದುದು ವಿಚಿತ್ರವಲ್ಲವೇ? ಈ ಪ್ರಶ್ನೆಗಳಿದ್ದಾಗ ಆಱಿಲ್ ಅನ್ನುವುದೇ ಮೂಲಪ್ರಯೋಗವೆನ್ನುವುದು ಎಷ್ಟು ಸರಿ? ಇದೇ ಕಾರಣದಿಂದಲೇ ಮೇಲೆ ಹೇಳಿದ ಕಾವ್ಯಪದಮಂಜರಿಯಂತೆ ಅರ್. ವಿ. ಕುಲಕರ್ಣಿಯವರ ಅರ್ಥವಿವರಣೆಯನ್ನೂ ಕೈಬಿಡಬೇಕಾಗುತ್ತದೆ (ಅಥವಾ ಈ ಬಗ್ಗೆ ಶ್ರೀ ಕುಲಕರ್ಣಿಯವರ ಬೇರೇನಾದರೂ ವಿವರಣೆಯಿದ್ದರೆ, ಎಲ್ಲಾದರೂ, ಇದನ್ನು ಮತ್ತೆ ನೋಡಬಹುದು). ಅಥವಾ ಆಱಿಲ್ ಅನ್ನುವ ಪದವನ್ನು ಒಪ್ಪಿದರೂ ಅದಕ್ಕೆ ನೀವು ಹೇಳಿದ ಅರ್ಥವಿವರಣೆಯನ್ನು ಒಪ್ಪುವುದು ಕಷ್ಟವಾಗುತ್ತದೆ (ಆಂಡಯ್ಯನ ಸಂದರ್ಭದಲ್ಲಿ ಮಾತ್ರ). ಹೆಚ್ಚೆಂದರೆ ಆಱಿಲ್ <= ಅಱಿಲ್ <= ಅರಲ್ ಎಂದು ಅದರ ಬೇರು ವಿವರಣೆಯನ್ನು ನೀಡಬೇಕಾಗುತ್ತದೆ.

ಮೂರುಪದಗಳನ್ನು ಸೇರಿಸಿ ಸಂಧಿಮಾಡುವ ಬಳಕೆ ಕಾವ್ಯದಲ್ಲಿ ಕಡಿಮೆಯೇ ಇರಬಹುದು, ಆದರೆ ಹೊಸದೇನಲ್ಲ. ಅದಕ್ಕೆಂದೇ "ಚರಿಪಾರಣ್ಯದ ಪಕ್ಷಿ"ಯ ಉದಾಹರಣೆ. ಮತ್ತೂ ಅನೇಕ ಉದಾಹರಣೆಗಳಿರಬಹುದು, ಹುಡುಕಿದರೆ ಖಂಡಿತಾ ಸಿಗುತ್ತದೆ. ಅದೇನೇ ಇರಲಿ ಪ್ರಖ್ಯಾತವಾದ ನಾಮಪದದ ಹಿಂದೆ ಕಾವ್ಯದ ಸಂದರ್ಭದಲ್ಲಿ "ಆ" ವಿಶೇಷಣ ಬಳಸುವುದಂತೂ ತೀರ ಬಳಕೆಯೇ ಆಗಿದೆ - "ಆ ನೀರೊಳಗಿರ್ದುಂ", "ಹರಿಯುಂ ಮತ್ತಾ ಹರನಂ", "ವಧೂತ್ಕರಮಾ ಪುರುಷರ್ಗೆ" ಇತ್ಯಾದಿ. ಇಂಥೆಡೆಯಲ್ಲಿ ನೀರ್, ಹರನಂ, ಪುರುಷರ್ ಇತ್ಯಾದಿಗಳ ಬದಲಿಗೆ ಅಕಾರದಿಂದ ಮೊದಲಾಗುವ ಪದ ಬಂದರೆ ಅದರ ಲೋಪವಾಗುವುದು ಸಹಜವೇ ಆಗಿದೆ. ಆದ್ದರಿಂದ "ತಳ್ತ ಆ ಅಱಿಲಂ ಪೊಯ್ದು ತೂಱುವೆನ್" (ಆಕಾಶದಲ್ಲಿ ನೆಲೆಸಿದ ಆ ನಕ್ಷತ್ರಗಳನ್ನು ಒಡೆದು ತೂರುವೆ) ಎಂಬುದು ಸಹಜವಾಗೇ ಇದೆ.6/6 (edited 6/7)DeleteUndo deleteReport spamNot spamBharath Kumar - ನಿಮ್ಮ ವಿವರಣೆ ಸರಿಯಿದೆ ಅಂತ ಅನ್ನಿಸ್ತಾ ಇದೆ !! ಅದನ್ನ ನಾನು ಗಮನಿಸಿರಲಿಲ್ಲ!
ಒಂಬತ್ತು ಗ್ರಹ,
ಎಂಟು ದಿಕ್ಕು
ಏಳು ಕಡಲು,
ಆರು ಎಂಬುದಕ್ಕೆ ಆಂಡಯ್ಯನಿಗೆ ಯಾವುದು ಸಿಗಲಿಲ್ಲ ಅದಕ್ಕೆ ಆ +ಅರಿಲ್ ಅಂತ ಮಾಡಿರಲು ಸಾಕು
ಐದು ಮೊಗವುಳ್ಳವ
ನಾಲ್ಕು ದಳ (ಚತುರಂಗ)
ಮೂರು ಹೆಜ್ಜೆಯಿಟ್ಟವ( ತ್ರಿವಿಕ್ರಮ)
ಎರಡು ಕಣ್ಗಳ್
ಒಂದು ನೋಟ.

ಆಂಡಯ್ಯ ಸಕ್ಕತ್!

ಆದರೊ ಆರ್. ವಿ. ಕುಲಕರ್ಣಿಯವರೊ ಯಾಕೆ ’ಆಱಿಲ್’ ಅಂತ ಕೊಟ್ಟರೊ ತಿಳಿಯದು

ಆದರೂ ’ಆಱಿಲ್’ ಅಂತ ನಾನು ಪದವುಟ್ಟಿಸಿದರೆ ತಮಗೆ ಅದು ಒಪ್ಪಿಗೆಯಿದೆ ಅಂತ ಬಗೆದಿದ್ದೇನೆ.Edit6/7DeleteUndo deleteReport spamNot spamManjunatha K.S - ಆ ಸಂದರ್ಭಕ್ಕೆ ಆರು ಎಂಬ ದನಿ ಬೇಕಿತ್ತು, ಅರ್ಥವಿರಲೇಬೇಕಿಲ್ಲ, ಮತ್ತೆ ಮೊದಲೇ ಹೇಳಿದಂತೆ ಅದು ಆಱಿಲ್ ಅಲ್ಲ, ಆ ಅಱಿಲ್ (ಆರು ಅನ್ನುವ ಪದ ಕೊಡುತ್ತದಲ್ಲ), ಅಷ್ಟೇ.

ಮೊದಲೇ ಊಹಿಸಿದಂತೆ, ಕುಲಕರ್ಣಿಯವರು ಇದನ್ನು (ಆಱಿಲ್) ಗಮನಿಸಿರದಿರಬಹುದು, ಅಥವ ಅಱಿಲ್ => ಆಱಿಲ್ ಆಗಿರಬಹುದು; ಅವರ ಆಧಾರಗಳಾವುವೋ ತಿಳಿಯದು, ನಮಗಂತೂ ಆಧಾರಗಳಿಲ್ಲ, ಆಧಾರಗಳಿಲ್ಲದೇ ಬೇರುಪದಗಳನ್ನು ಒಪ್ಪುವಂತಿಲ್ಲ.

ನಿಮ್ಮ ಪದವುಟ್ಟು ಸರಿಯೇ, ಅದನ್ನು ಆಗಲೇ ಹೇಳಿದೆ. ನನ್ನ ತಕರಾರೇನಿದ್ದರೂ ಅದೇ ಆಂಡಯ್ಯನ ನೋಟವಾಗಿರಬಹುದು ಎಂಬುದಕ್ಕೆ.6/7DeleteUndo deleteReport spamNot spamHamsanandi ! - >> ಮೂರುಪದಗಳನ್ನು ಸೇರಿಸಿ ಸಂಧಿಮಾಡುವ ಬಳಕೆ ಕಾವ್ಯದಲ್ಲಿ ಕಡಿಮೆಯೇ ಇರಬಹುದು

ಕನ್ನಡಮೆನಿಪ್ಪಾನಾಡು ಚೆಲ್ವಾಯ್ತು - ಅನ್ನುವುದು ಇಂತಹ ಒಂದು ಉದಾಹರಣೆಯೇ?6/7DeleteUndo deleteReport spamNot spamManjunatha K.S - ಅದು ಎರಡು ಪದ "ಕನ್ನಡಮೆನಿಪ್ಪ ಆ"6/7DeleteUndo deleteReport spamNot spamPriyank Bhargav - ಮಂಜುನಾಥ ಅವರು ಮೊದಲ ಬಾರಿ ಹೇಳಿದ್ದು ಹೌದೆನ್ನಿಸಿತು.
ಆಮೇಲೆ ಹಂಸಾನಂದಿ ಅವರು ಹೇಳಿದ್ದೂ ಹೌದೆನ್ನಿಸಿತು :-)

ಆರ್ಯಬಟ ಅವರ ಅರಿಮೆ ಆಂಡಯ್ಯನವರಿಗೆ ಹರಿದು ಬಂದಿಲ್ಲದಿದ್ದರೂ, ಹೊಳೆಯುವ ಎಲ್ಲವಕ್ಕೂ ತನ್ನದೇ ಆದ ಶಕ್ತಿ ಇದೆ ಎನ್ನುವ ಅರಿಮೆ ಆಂಡಯ್ಯನವರಿಗೆ ಇದ್ದಿತು ಎಂದು ನಂಬಬಹುದು.
ಇರುಳು ಹೊತ್ತಿನಲ್ಲಿ ಗ್ರಹಗಳೂ ತುಸು ಹೊಳೆಯುವುದರಿಂದ, ಗ್ರಹಗಳೂ, ನಕ್ಷತ್ರಗಳೂ, ಎಲ್ಲವನ್ನೂ ಒಟ್ಟಾಗಿ 'ಆರಿಲ್' ಎಂದು ಕರೆದಿರಬಹುದಾ?6/7DeleteUndo deleteReport spamNot spamBharath Kumar - ಇದಲ್ಲದೆ ’ಮೀನ್’=star= ತಾರೆ... ಅನ್ನೊ ಪದವನ್ನು/ಅರಿತವನ್ನು ಕಿಟ್ಟೆಲ್ ನಿಗಂಟುವಿನಲ್ಲಿ ನಲ್ಲಿ ಕೊಡಲಾಗಿದೆ.Edit6/7DeleteUndo deleteReport spamNot spamManjunatha K.S - ಇದ್ದಿರಬಹುದು, ಆದರೆ ಯಾವ ಸಂದರ್ಭವೂ ಇಲ್ಲದೇ ಕೇವಲ ನಕ್ಷತ್ರಗಳು ಶಕ್ತಿಮೂಲಗಳೆನ್ನುವ ಕಾರಣಕ್ಕೆ ಹೊಸ ಪದವೊಂದನ್ನು ಹುಟ್ಟುಹಾಕುವ ಜರೂರು ಆ ಪದ್ಯದ ಸಂದರ್ಭದಲ್ಲಂತೂ ನನಗೆ ಕಾಣುತ್ತಿಲ್ಲ. ಹಾಗೊಂದುವೇಳೆ ಅದು ಆಂಡಯ್ಯನು ಹುಟ್ಟುಹಾಕಿದ ಪದವೇ ಆಗಿದ್ದರೆ, ಅದನ್ನವನು ಇದಕ್ಕೂ ಮೊದಲೇ ಬೇರೊಂದು ಕಾವ್ಯದ ಸಂದರ್ಭದಲ್ಲಿ ಹುಟ್ಟುಹಾಕಿದ್ದಿರಬೇಕು; ಮತ್ತು ಅದನ್ನು ಮತ್ತೆ ಹಲವೆಡೆ ಬಳಸಿರಬೇಕು. ಅದಿಲ್ಲದೇ ಕೇವಲ ಪ್ರಾಸ, ಎಣಿಕೆ, ಛಂದಸ್ಸಿಗೋಸ್ಕರವಷ್ಟೇ ಹೊಸಪದ ಹುಟ್ಟುತ್ತದೆಯೇ? ಇದು ಪ್ರಶ್ನೆ. ಸನ್ನಿವೇಶವನ್ನು ನೋಡಿ, ತರ್ಕಿಸಿ ಮುಡಿವುಮಾಡುವುದು ಕ್ರಮ; ಹಾಗಲ್ಲದೇ ಮೊದಲೇ ಮುಡಿವು ಮಾಡಿಕೊಂಡು, ಅನಂತರ ತರ್ಕಿಸಿ ಅದಕ್ಕೆ ತಕ್ಕ ಸನ್ನಿವೇಶವನ್ನು ಹುಡುಕುವುದೇ? ನಮ್ಮೆಲ್ಲ ಚರ್ಚೆಗಳೂ ಆರ್ ಇಲ್ ಆರಿಲ್ (ಶಕ್ತಿಮನೆ) = ನಕ್ಷತ್ರ ಎಂದು ಮುಡಿವು ಮಾಡಿಕೊಂಡು ಅದನ್ನು ಆಂಡಯ್ಯ ಸೃಷ್ಟಿಸಿದ್ದಾನೆಂದು ಸಾಧಿಸುತ್ತಿವೆಯಲ್ಲವೇ?6/7

- ಇಲ್ಲ ಮಂಜುನಾಥ್..... ಕುಲಕರ್ಣಿಯವರು ಹಾಗೆ ಕೊಟ್ಟಿದ್ದರಿಂದ ಆರಿಲ್ ಎಂಬ ಪದದ ಸಾದ್ಯತೆ ಬಂತೆ ಹೊರತು ನಮ್ಮ ಮುಡಿವನ್ನು ತುರುಕುವುದಕ್ಕಲ್ಲEdit6/7DeleteUndo deleteReport spamNot spamManjunatha K.S - ಕುಲಕರ್ಣಿಯವರು ಕೇವಲ ಪದದ ಅರ್ಥವನ್ನು ಕೊಟ್ಟಿದ್ದಾರೆಯೇ ಹೊರತು ಯಾವ ಆಕರ/ಎತ್ತುಗೆ/ವಿವರಗಳನ್ನೂ ಕೊಟ್ಟಿಲ್ಲ. ಆದರೆ ತಾರ್ಕಿಕವಾಗಿ ಅಱಿಲ್ ಅನ್ನುವ ಪದ ಸರಿಯಾಗಿಯೇ ಇರುವುದರಿಂದ (ಮತ್ತು ಅದಕ್ಕೆ ಬಳಕೆಯಲ್ಲಿರುವ ಎತ್ತುಗೆಗಳೂ ಇವೆ) ಈ ಸಂದರ್ಭಕ್ಕೆ ಕುಲಕರ್ಣಿಯವರ ವಿವರಣೆಯನ್ನು ಕಡೆಗಣಿಸಬಹುದೆಂದಿದ್ದು (ಅಥವ ಅವರ ವಿವರಣೆಯೇನಾದರೂ ಬೇರೆಡೆಯೆಲ್ಲಾದರೂ ದಕ್ಕಿದರೆ ಇದನ್ನು ಮತ್ತೆ ನೋಡಿದರಾಯಿತು

’ಆರ್ಯ’ ಪದ ಹೇಗೆ ಬಂತು?

1. Latin Canarese ( ಲತೀನ - ಕನ್ನಡ ನಿಗಂಟು 2010 - ಲೂಯಿ ಶಾರ್ಬೊನೊ) ನೋಡುತ್ತಾ ಇದ್ದೆ
ಈ ಪದಗಳು ಗಮನ ಸೆಳೆಯಿತು
೧. aratio (Latin) ಈ ಪದಕ್ಕೆ ಸಾಗುವಳಿ, ಉಳುವಿಕೆ
೨. arator (Latin) ಈ ಪದಕ್ಕೆ ಆರಂಬಕಾರ, ಒಕ್ಕಲಿಗ, ರೈತ, ಉಳುವವ
೩. aratr um(Latin) ಈ ಪದಕ್ಕೆ ಆರು, ಏರು, ನೇಗಿಲ್
- ಈ ಅರಿತಗಳನ್ನು ಕೊಟ್ಟಿದ್ದಾರೆ

2. ಇನ್ನೊಂದು ಹೊತ್ತಗೆ ಡಾ| ಎಸ್. ವೇಣುಗೋಪಾಲಾಚಾರ್ಯ ಎಂ.ಎ. ಪಿ.ಎಚ್.ಡಿ ಇವರು ಬರೆದಿರುವುದು- ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲಿಶ್ ಮತ್ತು ಹಿನ್ದಿ ಚೀಣೀ ಸ್ವಬೋಧಿನಿ’(1983) - ಇದರ ಮುನ್ನುಡಿಯಲ್ಲಿ ಬರೆಯುತ್ತ " ಹಿಂದಿ, ಇಂಗ್ಲಿಶ್, ಲ್ಯಾಟಿನ್, ಸಂಸ್ಕ್ರುತ, ಮುಂತಾದುವು ಆರ್ಯ ಬಾಶೆಗಳೆಂದೂ ಆರ್ಯ ಎಂಬುದು ಲ್ಯಾಟಿನ್ನಿನಲ್ಲಿ ’ಉಳುವನೇಗಿಲು’ ಎಂಬರ್ತವುಳ್ಳ ’AR' ಪದಾಂಶದಿಂದ ರಚಿತವಾದುದೆಂದು, ಕನ್ನಡ ನಾಡಿನ ಹಳ್ಳಿಹಳ್ಳಿಯ ರೈತರು ಬೆಳಿಗ್ಗೆ ಎದ್ದೊಡನೆ, ಎತ್ತಿಗೆ ನೇಗಿಲನ್ನು ಸೇರಿಸುವಾಗ ’ಏರ್’ ಕಟ್ಟುವುದಿಲ್ಲವೆ? ’ಏರ್’ ನ ಲ್ಯಾಟಿನ್ ಸಮಪದವಾದ ’ಆರ್’ ದ್ರಾವಿಡ ಶಬ್ದವಲ್ಲವೆ?" ಅಂತ ಹೇಳಿದ್ದಾರೆ
3. ಸೇಡಿಯಾಪು ಅವರ ಹೊತ್ತಗೆ ’ ಶಬ್ದಾರ್ತಶೋದ’ ದಲ್ಲಿಯೂ ಕೂಡ ’ಆರ್ಯ’ ಎಂಬುದಕ್ಕೆ ಉಳುವವ, ಕ್ರುಶಿಕಾರ ಎಂಬ ಅರಿತವನ್ನೇ ಪದೇ ಪದೇ ಹೇಳಿದ್ದಾರೆ.

ಹಾಗಾದರೆ ’ಆರ್ಯ’ ಎಂಬ ಪದವೇ ದ್ರಾವಿಡ ಬೇರಿನ ಪದವೆ? ’ಬಗೆ’( ಯೋಚನೆ)ಯಬೇಕಾದ ವಿಚಾರ.!!!

’ಆರಂಬ’ ಎಂಬ ಪದ ಹೇಗೆ ಬಂತು?

’ಆರಂಬ’ ಎಂಬ ಪದಬಳಕೆ ನಮ್ಮ(ಮಂಡ್ಯ, ಮೈಸೂರು) ಕಡೆ ಇದೆ.
ಏರಂಬ =ಆರಂಬ = ಉಳುಮೆ= ಬೇಸಾಯ
ಕನ್ನಡದಲ್ಲಿ *ಆರ್*/ಆರು (ಹಾಸನದ ಕಡೆ) ಮತ್ತು *ಏರ್*(ಮಂಡ್ಯ, ಮೈಸೂರು ಕಡೆ) ಪದಬಳಕೆಯೂ ಕೂಡ ಇನ್ನು ಇದೆ. ಇದಕ್ಕೆ ದ್ರಾವಿಡ ನಿಘಂಟಿನಲ್ಲಿ ಈ ಅರ್ಥ ಕೊಡಲಾಗಿದೆ. Ka. ēru, ār pair of oxen yoked to a plough.

ಇದನ್ನು ಬಿಡಿಸಲು ತಲೆಗೆ ಹುಳ ಬಿಟ್ಟುಕೊಂಡಾಗ ನನ್ನ ಚಿಕ್ಕ ತಿಳಿವಿಗೆ ಎಟಕಿದ್ದು ಇಶ್ಟು.
ಏರ್ಂ+ಪು = ಏರಂಪು =ಏರಂಬ
ಆರ್ಂ+ಪು = ಆರಂಪು =ಆರಂಬ

ಯಾಕಂದರೆ,
ತೆನ್=> ತೆನ್ಪು= ತೆಂಪು = ತೆಂಬು( ದಕ್ಷಿಣ)
ತೆಂಬು +ಎಲರ್ = ತೆಂಬೆಲರ್ = ತೆಂಕಣ ಗಾಳಿ ( ಮಲಯ ಮಾರುತ, ದಕ್ಷಿಣದಿಂದ ಬೀಸುವ ಗಾಳಿ)

ತೆಂಬೆಲರ್ ಎಂಬ ಪದ ಬಳಕೆ ಪಂಪನಿಂದ ಹಿಡಿದು ಆಂಡಯ್ಯನವರೆಗೂ ಹಲವು ಹಳಗನ್ನಡದ ಬರಹಗಳಲ್ಲಿ ಬಳಕೆಯಾಗಿದೆ

ನಮ್ಮ ಮನೆಯ ಹೂಗಳು/ಗಿಡಗಳು

ನಮ್ಮ ಮನೆಯ ಗಡಿಗೋಡೆಯ(compound) ಒಳಗೆ ಬೆಳೆಯುತ್ತಿರುವ ಗಿಡಗಳು/ಹೂವುಗಳ ಸರ್ವೆ /ಲೆಕ್ಕ ಮಾಡಿದಾಗ ಹೆಮ್ಮೆಯಾಯಿತು
೧. ಮಲ್ಲಿಗೆ
೨. ಸೂಜಿಮಲ್ಲಿಗೆ
೩. ಬಿಳಿ ಲಿಲ್ಲಿ
೪. ದೇವ ಕಣಗಿಲೆ
೫. ಬಿಳಿ ದಾಸವಾಳ
೬. ಕೆಂಪು ದಾಸವಾಳ
೭. ಕಡುಗೆಂಪು ಗುಲಾಬಿ
೮. ಹಳದಿ ಗುಲಾಬಿ
೯. ಪನ್ನೀರ್ ಗುಲಾಬಿ ( ಪಾಟಿಯಲ್ಲಿ/ಗಾತ್ರದಲ್ಲಿ ಚಿಕ್ಕದು)
೧೦. ನಸುಗೆಂಪು(ಪಿಂಕ್) ಗುಲಾಬಿ
೧೧. ತುಂಬೆ
೧೨. ಕನಕಾಂಬ್ರ
೧೩. ಆನ್ತೋರಿಯಂ
೧೪. ನಂದಿಬಟ್ಟಲು
೧೫. ಮೇ ಹೂವು ( may flower)
೧೬. ಕಾಡುಮಲ್ಲಿಗೆ ( ಕಂಪಿಲ್ಲದಿರುವುದು ಬಿಳಿ ಹೂವು)
೧೭. ಕಾಕಡ
೧೮. ಚೆಂಡು ಮಲ್ಲಿಗೆ
೧೯. ಕೆಂಪು ಹೂವು ( ಹೆಸರು ಗೊತ್ತಿಲ್ಲ)
೨೦. ಬ್ರೌನ್ ಬಣ್ಣದ ಹೂವು( ಹೆಸರು ಗೊತ್ತಿಲ್ಲ)
೨೧. ಗಂಟೆ ದಾಸವಾಳ

ಇದಲ್ಲದೆ ಟೊಮಾಟೊ ಹೂವು, ತೆಂಗಿನ ಹೂವು( ಹೊಂಬಾಳೆ) ಕಾಣಸಿಗುತ್ತವೆ. ಇದಲ್ಲದೆ ಗಡಿಗೋಡೆಯಿಂದ ಮಗ್ಗುಲಿನಲ್ಲಿ ಆಚೆಗೆ ಕಣಗಿಲೆ, ಸಂಪಿಗೆ, ಹೊಂಗೆ, ಬೇವಿನ ಗಿಡಮರಗಳಿವೆ.

ಅಚ್ಚಚ್ಚು ಬೆಲದಚ್ಚು...

ಇದು ಚಿಕ್ಕಂದಿನಲ್ಲಿ ನಾವು ಹಾಡುತ್ತಿದ್ದ ಹಾಡು

ಅಚ್ಚಚ್ಚು ಬೆಲದಚ್ಚು
ಅಲ್ಲಿ ನೋಡು ಕಾಗೆ ಗುಂಪು
ಇಲ್ಲಿ ನೋಡು ಕಾಗೆ ಗುಂಪು
ಯಾವ ಕಾಗೆ
ಕಪ್ಪು ಕಾಗೆ
ಯಾವ ಕಪ್ಪು
ಇಜ್ಜಿಲು ಕಪ್ಪು
ಯಾವ ಇಜ್ಜಿಲು
ಸವ್ದೆ ಇಜ್ಜಿಲು
ಯಾವ ಸವ್ದೆ
ಕಾಡು ಸವ್ದೆ
ಯಾವ ಕಾಡು
ಸುಡುಗಾಡು
ಯಾವ ಸೂಡು
ರೊಟ್ಟಿ ಸೂಡು
ಯಾವ ರೊಟ್ಟಿ
ತಿನ್ನೊ ರೊಟ್ಟಿ
ಯಾವ ತಿನ್ನ
ಏಟು ತಿನ್ನ
ಯಾವ ಏಟು
ದೊಣ್ಣೆ ಏಟು
ಯಾವ ದೊಣ್ಣೆ
ದಪ್ಪ ದೊಣ್ಣೆ
ಯಾವ ದಪ್ಪ
ನಿನ್ನೊಟ್ಟೆ ದಪ್ಪ ..!!!!!

ಒಂದಕ್ಕೊಂದು ಒಂದಕ್ಕೊಂದು ಪದಗಳನ್ನು ಮತ್ತು ಸುತ್ತಲಿರುವ ಪರಿಸರವನ್ನು ಬೆಸೆಯುವ ಈ ಹಾಡು ’ಕಾವ್ಯಪ್ರಯೋಗಮತಿಗಳ್’ ಎಂಬುದಕ್ಕೆ ಒಂದು ಒಳ್ಳೆಯ ಎತ್ತುಗೆ.

ಊಟದ ಹಾಡು

ಮಕ್ಕಳಿಗೆ ಊಟದ ಹಾಡು...ಚೆನ್ನಾಗಿರುತ್ತೆ. ನಾನು ಚಿಕ್ಕವನಾಗಿದ್ದಾಗ ಕೇಳಿದ್ದು/ಓದಿದ್ದು.

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಅನ್ನ ಹಾಕು
ಅಯ್ದು ಆರು
ಬೇಳೆ ಸಾರು
ಏಳು ಎಂಟು
ಪಲ್ಯಕೆ ದಂಟು
ಒಂಬತ್ತು ಹತ್ತು
ಉಂಡೆಲೆ ಎತ್ತು -> ಎಲೆ ಮುದಿರೆತ್ತು (ಈ ಸಾಲು ಸರಿಯಾಗಿದಿಯೋ ಇಲ್ವೊ ಗೊತ್ತಿಲ್ಲ)
ಒಂದರಿಂದ ಹತ್ತು (ಹೀಗಿತ್ತು)
ಊಟದ ಆಟವು ಮುಗಿದಿತ್ತು

ಅಂಕಿಗಳ ಜೊತೆಜೊತೆಗೆ ಒಳ್ಳೆಯ ಊಟದ ಪರಿಚಯವೂ ಮಕ್ಕಳಿಗೆ ಇದರ ಮೂಲಕ ಆಗುತೆ

ಡಾ| ಡಿ.ಎಸ್. ಶಿವಪ್ಪನವರ ಹೊತ್ತಗೆಗಳ ಬಗ್ಗೆ

ಕೆಲವು ದಿನಗಳ ಹಿಂದೆ ಬೆಂಗಳೂರು ಪ್ರಸರಾಂಗದ ಮಳಿಗೆ(ಸೆಂಟ್ರಲ್ ಕಾಲೇಜು)ಗಳಿಂದ ಕೆಲವು ಹೊತ್ತಗೆಗಳನ್ನು ಕೊಂಡ್ಕೊಂಡೆ.

೧. ವೈದ್ಯಕ ಪದಗಳ ಹುಟ್ಟು ಮತ್ತು ರಚನೆ - ಡಾ ಡಿ.ಎಸ್. ಶಿವಪ್ಪ
೨. ವೈದ್ಯರನ್ನು ಯಾವಾಗ ಕಾಣಬೇಕು - ಡಾ ಡಿ.ಎಸ್. ಶಿವಪ್ಪ
೩. ಮೊಳೆ ರೋಗ ಮತ್ತು ಗುದದ ಇತರ ಕಾಯಿಲೆಗಳು - ಡಾ ಡಿ.ಎಸ್. ಶಿವಪ್ಪ

(೧) ನೇ ಹೊತ್ತಗೆಯ ಮುನ್ನುಡಿಯಲ್ಲಿ ಡಾಶಿವಪ್ಪನವರು ಬರೆದಿರುವ ಸಾಲುಗಳು ನನ್ನ ಗಮನ ಸೆಳೆದವು:-

" ಅರೆ ಶತಮಾನಕ್ಕೂ ಹಿಂದೆ ಮೈಸೂರು ವೈದ್ಯ ಕಾಲೇಜಿನಲ್ಲಿ ನಾನು ಅಂಗಕ್ರಿಯೆ ಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಆ ವಿಷಯದ ಪರೀಕ್ಷೆ ಹತ್ತಿರವಾದಾಗ ಪ್ರಶ್ನೆಪತ್ರಿಕೆಯಲ್ಲಿ ಸಂಕ್ಷಿಪ್ತ ಟಿಪ್ಪಣಿಗಾಗಿ oestrogen, progesterone ಬರುವ ಸಂಭವದ ಸುಳಿವು ಸಿಕ್ಕಿತು. ನಾನು ಕೂಡಲೇ ಪುಸ್ತಕದಿಂದ ಅವುಗಳ ವಿಚಾರವಾಗಿ ವಿವರಗಳನ್ನು ಸಂಗ್ರಹಿಸಿದೆ. ಭರವಸೆಗಾಗಿ ನಮ್ಮ ತರಗತಿಯಲ್ಲಿ ಅತ್ಯಂತ ಮೇಧಾವಿ ಎನಿಸಿಕೊಂಡ ಸಹಪಾಠಿಗೆ ತೋರಿಸಿದಾಗ, ಎಲ್ಲ ಸರಿಯಾಗಿದೆ, ಆದರ ತಲೆಬರಹಗಳು ಅದಲುಬದಲಾಗಿವೆ ಎಂದಾಗ,
ನಾನು ಕೂಡಲೇ ಬದಲಾಯಿಸಿಬಿಟ್ಟೆ. ಏಕೆಂದರೆ ಆ ತಾಂತ್ರಿಕ ಪದಗಳು ನನಗೆ ಏನೂ ಅರ್ಥ ಕೊಡಲಿಲ್ಲ. ಆದರೀಗ ಗ್ರೀಕ್ oestrus ಅಂದರೆ ಬೆದೆಯಿಂದ oestrogen ಬೆದೆಜನಕವೆಂದೂ, ಲ್ಯಾಟಿನ್ನಿನ gestare ಅಂದರೆ (ಗರ್ಭದಲ್ಲಿ ಕೂಸನ್ನು) ಹೊರು ಎನ್ನುವುದಕ್ಕೆ
ಬಸಿರಿಗೆ ಅಣಿ ಮಾಡುವುದರಿಂದ progesterone ಬಸಿರಣಿಕವೆಂದೂ ಅಂದು ನನಗೆ ಗೊತ್ತಿದ್ದರೆ ನಾನು ಹಾಗೆ ಅದಲು ಬದಲು ಮಾಡುತ್ತಿರಲಿಲ್ಲ"

ಇದು ಓದಿದ ಮೇಲೆ ಶಿವಪ್ಪನವರು ಹೇಳಿರುವ ಹಾಗೆ ಬೆದೆಜನಕ ಮತ್ತು ಬಸಿರಣಿಕ ತೆರದ ಪದಗಳನ್ನು ಹುಟ್ಟಿಸಿ ಕನ್ನಡದಲ್ಲೇ MBBS ಮಾಡುವ ಹಾಗಿದ್ದರೆ ಎಶ್ಟು ಚೆನಾಗಿರುತ್ತಿತ್ತು ಅಂತ ಅನ್ನಿಸಿತು. ಹೇಗೆ ಪಾರಿಭಾಶಿಕ ಪದಗಳನ್ನು ಸುಲಬಗೊಳಿಸಿಕೊಳ್ಳುವುದರಿಂದ ಕಲಿಕೆಯ ವೇಗ ಮತ್ತು ಗುಣಮಟ್ಟ ಹೆಚ್ಚುತ್ತದೆ ಎಂಬುದಕ್ಕೆ ಶಿವಪ್ಪನವರ ಈ ಮೇಲಿನ ಪ್ರಸಂಗವೇ ಉದಾಹರಣೆಯಾಗಿದೆ ಎಂಬುದನ್ನ ನಾವು ಇದರಿಂದ ಅರಿತುಕೊಳ್ಳಬಹುದು.

ಅಲ್ಲಿ ಮಳಿಗೆಯವರನ್ನು ವಿಚಾರಿಸಿದಾಗ "ವೈದ್ಯಕ ಪದಗಳ ಹುಟ್ಟು ಮತ್ತು ರಚನೆ" -- ಈ ಹೊತ್ತಗೆಯನ್ನು ಮೈಸೂರಿನಿಂದ ಹಲವು ವೈದ್ಯರಗಳು ಬಂದು ೨೦-೩೦ ಹೊತ್ತಗೆಗಳನ್ನು ಒಮ್ಮೆಲೆ ಕೊಂಡು ಹೋಗುತ್ತಾರೆ ಮತ್ತು ಅವುಗಳನ್ನು ಆರೈಕೆಗಾರ್ತಿಯರಿಗೆ ಹಂಚುತ್ತಾರೆಂದು ತಿಳಿಸಿದರು

ಬೆಂಗಳೂರಿನ ತಿಂಡಿಗಳು

ಬನಶಂಕರಿಯ ಎಸ್ಸೆಲ್ವಿ ಮೆತ್ತಗಿರುವ ಅಕ್ಕಿ ಇಡ್ಲಿ ಚೆಂದ
ರಾಗಿಗುಡ್ಡದ ಎಸ್ಸೆಲ್ವಿಯ ರವೆ ಇಡ್ಲಿ ಅಂದ
ಕಾಮಾಕ್ಯದ ’ಮನೆತಿಂಡಿ’ಯ ತೆರೆದ(ಓಪನ್) ದೋಸೆ ಚೆಂದ
ಚಾಮ್ರಾಜ್ ಪೇಟೆಯ ’ಬಿಕೆಬಿ’ಯ ಅಕ್ಕಿ ಇಡ್ಲಿ ಬಲ್ ಮೆದು
ನರಸಿಂಹರಾಜ ಕಾಲೋನಿಯ ಕೊಟ್ಟೂರ್ ಬೆಣ್ಣೆ ಮಸಾಲೆ ಬಲು ಅಂದ
ವಿದ್ಯಾರ್ತಿ ಬವನದ ತುಪ್ಪದ ದೋಸೆ ಚೆಂದ
ಬಸವನಗುಡಿಯ ’ಹಳ್ಳಿತಿಂಡಿ’ಯ ಗಸಗಸೆ ಪಾಯಸ ಬಲ್ ಜೋರು

ಇವೆಲ್ಲಕ್ಕಿಂತ ನಮ್ ಮನೆ ಚಿಬ್ಲು ಇಡ್ಲಿ ಇನ್ನು ಚೆಂದ
ರಾಗಿ ಮುದ್ದೆ ಉಪ್ಪೇಸ್ರು ಬಲು ಮಹದಾನಂದ :)

ಆರನೇ ತರಗತಿಯಿಂದ ಕಲಿಕೆಯಲ್ಲಿ ಇಂಗ್ಲಿಶ್ ಮಾಧ್ಯಮ- ಇದರ ಬಗ್ಗೆ

ಇಂದಿನ ಪ್ರಜಾವಾಣಿಯಲ್ಲಿ ಬಂದ ಡಾ ನಿರಂಜನಾರಾಧ್ಯ ಅವರ ’ಆಂಗ್ಲಭಾಷಾ ಭ್ರಮೆ ಮತ್ತು ಆಳುವ ಸರ್ಕಾರ ’ ಎಂಬ ಬರಹವನ್ನು ಬೆಂಬಲಿಸಿ ಈ ಪ್ರತಿಕ್ರಿಯೆ.
ತಾಯ್ನುಡಿಯಲ್ಲೆ ಎಲ್ಲ ಮಟ್ಟದ ಕಲಿಕೆಯೇ ಹೆಚ್ಚು ಪರಿಣಾಮಾಕಾರಿ ಎಂದು ಶಿಕ್ಷಣತಜ್ಞರು ಮತ್ತು ಭಾಷಾವಿಜ್ಞಾನಿಗಳು ಹೇಳಿರುವಾಗ ಕರ್ನಾಟಕ ಸರಕಾರ ಇಂಗ್ಲಿಶಿನಿಂದ ಮಾತ್ರ ಏಳಿಗೆ ಎಂದು ನಂಬಿರುವುದು ಮತ್ತು ಜನತೆಯನ್ನು ನಂಬಿಸುತ್ತಿರುವುದು ದುರಂತವೇ ಸರಿ. ಇಂಗ್ಲಿಶ್ ನುಡಿಯನ್ನು ಚೆನ್ನಾಗಿ ಕಲಿಯಬೇಕೆಂಬುದರಲ್ಲಿ ಎರಡು ಮಾತಿಲ್ಲ ಆದರೆ ಹೋಬಳಿ ಮಟ್ಟದಲ್ಲಿ ತಮ್ಮ ಪರಿಸರದಲ್ಲಿದ ಇಂಗ್ಲಿಶ್ ಮಾಧ್ಯಮದ ಮೂಲಕ ಕಲಿಕೆಯೇರ್ಪಾಡು ಮಾಡುವುದು ಅವೈಜ್ಞಾನಿಕ ಮಾತ್ರವಲ್ಲದೇ ಆಘಾತಕಾರಿಯೂ ಕೂಡ. ಯೂರೋಪಿನ ನಾಡುಗಳಲ್ಲಿ ಮೊದಲ ಕಲಿಕೆಯಲ್ಲದ ಉನ್ನತ ಮಟ್ಟದ ಕಲಿಕೆಯು(ಅಂದರೆ ಇಂಜಿನಿಯರಿಂಗ್ ಮತ್ತು ಮೆಡಿಕಲ್) ಕೂಡ ಅವರವರ ತಾಯ್ನುಡಿಯಲ್ಲೇ ಮಾಡುವ ಏರ್ಪಾಟು ಮಾಡಿಕೊಂಡಿರುವುದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅವರು ಬಹಳ ಮುಂದುವರೆದಿದ್ದಾರೆ. ಇದಕ್ಕೇ ಜರ್ಮನಿ, ಫಿನ್-ಲ್ಯಾಂಡ್, ಫ್ರಾನ್ಸ್ ದೇಶಗಳೇ ಅತ್ಯುತ್ತಮ ಉದಾಹರಣೆ.. ಪದೇ ಪದೇ ಕನ್ನಡ ಪರ ಸರ್ಕಾರ ಎಂದು ಘೋಷಿಸಿಕೊಳ್ಳುವ ಸರಕಾರವು ಮಾಧ್ಯಮಿಕ ಶಾಲೆಗಳನ್ನು ಆಂಗ್ಲ ಮಾಧ್ಯಮ ಮಾಡುವುದು ಯಾವ ’ಕನ್ನಡ ಪರ’ ನಡೆ ಎಂಬುದನ್ನು ಜನತೆಗೆ ತಿಳಿಯಪಡಿಸಲಿ. ಅಲ್ಲದೆ ಪಕ್ಕದ ತಮಿಳು ನಾಡಿನಲ್ಲೇ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಲಿಕೆಯನ್ನು ತಮಿಳು ಮಾಧ್ಯಮದಲ್ಲೇ ಮಾಡಲು ಮುಂದಾಗಿರುವಾಗ ಕರ್ನಾಟಕದ ಸರ್ಕಾರದ ಈ ನಡೆ ಅಚ್ಚರಿ ತಂದಿದೆ. ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲೂ ಉನ್ನತ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ನಡೆಯಬೇಕೆಂಬ ತೀರ್ಮಾನ ತೆಗೆದುಕೊಳ್ಳುವುದನ್ನ ಬಿಟ್ಟು ಮಾಧ್ಯಮಿಕ ಶಿಕ್ಷಣದಲ್ಲಿ ಇಂಗ್ಲಿಶ್ ಮಾಧ್ಯಮ ಹೇರುತ್ತಿರುವುದು ನಮ್ಮನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವುದಲ್ಲದೆ ಏಳೆಗೆಯೆಡೆಗೆ ಕೊಂಡೊಯ್ಯುವುದಿಲ್ಲ. ಇಂಗ್ಲಿಶ್ ಪರಿಸರವಿಲ್ಲದ ಕಡೆ ಇಂಗ್ಲಿಶ್ ಮಾಧ್ಯಮದಿಂದ ನಯಾಪೈಸೆ ಉಪಯೋಗವಾಗಲಿ ಮತ್ತು ಏಳಿಗೆಯಾಗಲಿ ಆಗುವುದಿಲ್ಲ ಎಂಬುದನ್ನು ಸರ್ಕಾರವು ಇನ್ನಾದರೂ ಅರಿಯಬೇಕು. ಈಗಾಗಲೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯೇರ್ಪಾಡು ಸರಿಯಿಲ್ಲದಿದ್ದರೆ ಅದನ್ನ ಮೇಲಕ್ಕೆ ಎತ್ತುವ ಮತ್ತು ಗುಣಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕೆ ಹೊರತು ಇಂಗ್ಲಿಶ್ ಮಾಧ್ಯಮಕ್ಕೆ ಜೋತು ಬೀಳುವುದು ಎಷ್ಟು ಸರಿ? ಕನ್ನಡ ಮಾಧ್ಯಮದ ಕಲಿಕೆಯಲ್ಲಿ ನಂಬಿಕೆಯಿಲ್ಲದಿದ್ದ ಮೇಲೆ ಮಾನ್ಯ ಕಲಿಕೆಯ ಸಚಿವರಾದ ಶ್ರೀ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ತಮ್ಮ ಮಕ್ಕಳನ್ನೇ ಹತ್ತನೇ ತರಗತಿಯವರಿಗೆ ಕನ್ನಡ ಮಾಧ್ಯಮದಲ್ಲಿ ಓದಿಸಿದ್ದಾದರೂ ಏತಕ್ಕೆ? ಎಂಬುದನ್ನು ಮಾನ್ಯ ಸಚಿವರು ಜನತೆಗೆ ತಿಳಿಯಪಡಿಸಲಿ

ಮಂಗಳವಾರ, ಏಪ್ರಿಲ್ 12, 2011

ಕಾವನ ಗೆಲ್ಲಂ ಮೆರೆಯುತಿರ್ಪುದು

ಹಸುಳೆ ಬಿಸಿಲ ಮಸಕದಿಂದ ಹೊಸ ತಾವರೆಯ ಎಸಳ್ ಮಿಸುಪ
ಅಸದಳಂ ಹಸೆಯೊಳ್ ಎಸೆವ ಸರಸತಿಯ ಅಡಿಗಳಿಗೆ ತಲೆದುಡುಗೆಯೆನ್ ಎ
ಹೆಸರ್ ಪಡೆವ ಬಿಜ್ಜೆವಳದಿಂ ಸಮೆದ ಕಾವನ ಗೆಲ್ಲಂ ಮೆಱೆಯುತಿರ್ಪುದು
- ಆಂಡಯ್ಯ

Rough translation to English :-

Shining Petals of Lotus basking in Sunlight of dawn ,
Stands the most beautiful Goddess Saraswati',
I put my cap to her feet, with my power of knowledge,
time tested "Kaavana Gellan"(Victory of Kaava) glitters forever

- Aandayya

ಮಂಗಳವಾರ, ಮಾರ್ಚ್ 22, 2011

ಆಂಡಯ್ಯನ ಕಬ್ಬಿಗರ ಕಾವನ್-ಇದರಲ್ಲಿ ಬಳಕೆಯಾಗಿರುವ ಅಣ್ಣೆಗನ್ನಡ ಪದಗಳು

ಮಿಳಿರ್ = flourish, prosper = ಏಳಿಗೆ, ಬಲ
ಜಗುೞ್ (ಜಗುಳ್) = slip, move off, slip, drop down,= ಜಾರು,
ಚೂಟಿ = ಸೂಟಿ = quick,smart
ನೀರಾ = Handsome Man
ನೀರೆ = beautiful woman, ಕಡುನೀಱೆ ( most beautiful woman)
ಪೊಣೆ = bond, bail
ಸುಸಿಲ್ = sexual embrace
ಸುಂದು = to lie down, repose, sleep
ಕಣ್ಮಲರ್ = ಕಣ್+ಮಲರ್ = ಕಣ್+ಹೂವು = ಹೂವಿನಂತ ಕಣ್ಣುಗಳು,
ಪೊಣರ್ = union
ದುಗುಲ = ನೆಯ್ದ ರೇಶಿಮೆ, woven silk, or fine cloth
ಅೞವೆ = mouth of a river in which the tide ebbs and flows, bar ( ತುಳು: ಅಲುವೆ )
ಸೇಸೆ = ಅಕ್ಶತೆ
ಮೇಲೂರ್ = ಸ್ವರ್ಗ
ಸಿರಿವೆಣ್ = ಲಕುಮಿ
ಬೆಂಚೆ = ಚಿಕ್ಕ ಕೊಳ
ಓವು = to take care of, protect
ಇರ್ಕೆವನೆ =ವಾಸದ ಮನೆ
ಪಗಲಾಣ್ಮ = ನೇಸರ, ಸೂರ್ಯ, sun
ಪಾಂಗು = ರೀತಿ
ಮಸಕ = passion, vehement emotion
ಮುನ್ನೀರ್ = ಕಡಲು

ಮಂಗಳವಾರ, ಮಾರ್ಚ್ 15, 2011

ಯಾವ ಬಾಶೆಯೂ ಕೊಲೆಗಡುಕ ಅಲ್ಲ

ಶ್ರೀ ಜಿ.ವೆಂಕಟಸುಬ್ಬಯ್ಯನವರು ಪದೆ ಪದೆ ಇಂಗ್ಲಿಶ್ ’ಕೊಲೆಗಡುಕ’(ಇವತ್ತಿನ, ೧೫-೩-೨೦೧೧ ವರದಿಯ ಕೊಂಡಿ) ಭಾಷೆ ಎಂದು ಹೇಳುತ್ತಿರುವುದು ಸರಿಯಲ್ಲ. ಯಾಕಂದರೆ:-

ದಿಟವಾಗಲೂ ಯಾವುದೇ ನುಡಿ ತನ್ನಿಂತಾನೆ ಕೊಲೆಗಡುಕ ಬಾಶೆ ಆಗುವುದಿಲ್ಲ. ಈವೊತ್ತು ಇಂಗ್ಲಿಶಿಗೆ ಹೆಚ್ಚಿನ ಗೌರವ, ಮನ್ನಣೆ ಸಿಗುತ್ತಿರುವುದು ಕೇವಲ ಆ ಬಾಶೆಯಿಂದಲ್ಲ ಬದಲಾಗಿ ಅದರ ಮೂಲಕ ಹುಟ್ಟುತ್ತಿರುವ ಹೊಸ ಹೊಸ ಅರಿವಿನ ಪ್ರಕಾರಗಳಿಂದ.
ಇಂದು ಅರಿಮೆ ಮತ್ತು ಹೊಚ್ಚ ಹೊಸ ತಂತ್ರದರಿಮೆಗಳು ಹೆಚ್ಚಿನವು ಇಂಗ್ಲಿಶಿನಲ್ಲಿವೆ, ಹಾಗಾಗಿ ಈ ಆದುನಿಕ ಯುಗದಲ್ಲಿ ಇಂಗ್ಲಿಶ್ ಕಲಿತರೆ ಸುಲಬವಾಗಿ ಕೆಲಸ ಸಿಗುತ್ತದೆ ಮತ್ತು ಅದರಿಂದ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು. ಇದೊಂದೆ ಅಲ್ಲದೆ ಕೆಲವರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಇಂಗ್ಲಿಶ್ ಬಾಶೆ ಗೊತ್ತಿರುವವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಹೊಗಳಿಕೆ ದೊರೆಯುತ್ತಿದೆ. ನಾವು ನಮ್ಮ ಕನ್ನಡ ನುಡಿಯಲ್ಲಿ ಇವತ್ತಿನ ಜಗತ್ತಿಗೆ ಬೇಕಾದ ಹೊಸ ಹೊಸ ಅರಿವಿನ ಪ್ರಕಾರಗಳನ್ನು ಹುಟ್ಟು ಹಾಕದೆ ಇನ್ನು ಸಾಹಿತ್ಯ ಮತ್ತು ಕವನಕ್ಕೆ ಕನ್ನಡವನ್ನು ಸೀಮಿತಗೊಳಿಸಿ ತಪ್ಪು ಮಾಡುತ್ತಿದ್ದೇವೆ. ಹಾಗಾಗಿ ಇಂಗ್ಲಿಶ್ ನಮ್ಮ ಬದುಕಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಾ ಇದೆ. ಇದಕ್ಕಿರುವ ಉಪಾಯವೆಂದರೆ ಕನ್ನಡವನ್ನು ತಂತ್ರಗ್ನಾನದ ಮತ್ತು ಮಾರುಕಟ್ಟೆಯ ನುಡಿಯಾಗಿ ನಾವು ಬೆಳಸಬೇಕಾಗಿದೆ. ಹೊಸ ಜಗತ್ತಿನ ’ಬೇಕು’(ಅಗತ್ಯ)ಗಳಿಗೆ ನಾವು ಕನ್ನಡವನ್ನು ಅಣಿಗೊಳಿಸದೆ ಬರಿ ಇಂಗ್ಲಿಶನ್ನು ದೂರುವುದು ಸರಿಯಲ್ಲ. ನಾವು ಮಾಡಿದ ತಪ್ಪುಗಳಿಗೆಲ್ಲಾ ಇಂಗ್ಲಿಶನ್ನು ಹೊಣೆಯಾಗಿಸಿ ಅದರ ಮೇಲೆ ಗೂಬೆ ಕೂರಿಸುವುದು ಯಾವ ರೀತಿಯಲ್ಲೂ ಒಪ್ಪತಕ್ಕದ್ದಲ್ಲ.

[ಇದೇ ಬರಹ ಓಲೆಯಾಗಿ ೧೮ ಮಾರ್ಚ್ ೨೦೧೧ ಪ್ರಜಾವಾಣಿಯ ’ವಾಚಕರವಾಣಿ’ಯಲ್ಲಿ ಬಂದಿದೆ]

ಮಿಂಬಲೆ

internet ಎಂಬ ಪದಕ್ಕೆ ಈಗ ಕನ್ನಡದಲ್ಲಿ ಬಳಕೆಯಲ್ಲಿರುವ ಪದ ’ಅಂತರ್ಜಾಲ’/ಅಂತರಜಾಲ. ಇದು ಸಂಸ್ಕ್ರುತ ಪದ.ಅದರ ಬದಲು ಕನ್ನಡದ್ದೇ ಆದ ’ಮಿಂಬಲೆ’ ಎಂಬ ಪದ ಬಳಸಬಹುದು. ಈಗಾಗಲೆ ಅದನ್ನ ಕೆಲವರು ಬಳಸುತ್ತಿದ್ದಾರೆ.

ಅದೇನೆಂದರೆ
ಮಿನ್+ಬಲೆ = ಮಿಂಬಲೆ

ಯಾಕಂದ್ರೆ
ಮಿನ್ ಎಂಬ ಪದದಿಂದ ಮಿಂ-ಚು, ಮಿನು-ಗು (ಮಿನ್ ಅಂದರೆ ಹೊಳೆಯುವುದು ಎಂಬ ತಿರುಳಿದೆ)
ಕೆನ್ ಎಂಬ ಪದದಿಂದ ಕೆಂ-ಚು (ಕೆನ್ ಅಂದರೆ ಕೆಂಪು)
ಹೆಣೆ ಎಂಬ ಪದದಿಂದ ಹೆಂ-ಚು (ಹೆಂಚುಗಳು ಒಂದಕ್ಕೊಂದು ಹೆಣೆದುಕೊಂಡಿರುವುದರಿಂದಲೇ ಅದಕ್ಕೆ ಆ ಪದ ಹುಟ್ಟಿರುವುದು)
ಕೀರ್ ಎಂಬ ಪದದಿಂದ್ ಕಿರ್-ಚು=ಕಿಚ್ಚು (ಬೆಂಕಿ) ಬಳಕೆ: ಕಡ್ಡಿ ಕೀರಿ ಒಲೆ ಹಚ್ಚಿದಳು

ತುಳುವಿನ ಕೆಲವು ನಿಬ್ಬರಗಳು

ತುಳುವಿನ ಕೆಲವು ನಿಬ್ಬರಗಳು:-
ತುಳುನಾಡಿನಲ್ಲಿ ಸೇಡಿಯಾಪು ಎಂಬ ಊರಿದೆ ಅನ್ಸುತ್ತೆ ( ’ಸೇಡಿಯಾಪು ಕೃಷ್ಣಬಟ್ಟ’ರು ಹೆಸರಿನಲ್ಲಿರುವಂತೆ)
ಸೇಡಿಯಾಪು = ಸೇಡಿ+ಕಾಪು = ಜೇಡಿ+ಕಾಪು ಅಂದರೆ ಜೇಡಿ ಮಣ್ಣಿನಿಂದ ಮಾಡಿದ ಕಾವಲು/ತಡೆ.

ಇಲ್ಲಿ ಪದಗಳ ಸೇರಿಕೆಯಾದ ಮೇಲೆ ’ಕ’ ಕಾರ ’ಯ’ಕಾರ ವಾಗಿರುವುದನ್ನ ಗಮನಿಸಿ. ಇದು ತುಳುವಿನ ನಿಬ್ಬರ.
ಕನ್ನಡದ ಸೇರಿಕೆ ಕಟ್ಟಿನ ಪ್ರಕಾರ ಅದು ಸೇಡಿಗಾಪು ಆಗಬೇಕಿತ್ತು.

ಅದೇ ತರ ತುಳುವಿನಲ್ಲಿ ಮಳೆ(ರೆ)+ಕಾಲ => ಮರ್ಯಾಲ ಆಗುತ್ತೆ ಹೊರತು ಮಳೆಗಾಲ ಆಗಲ್ಲ.

ತುಳು ಗೊತ್ತಿರುವವರು ಈ ತರ ಹೆಚ್ಚಿನ ಪದಗಳು ಗೊತ್ತಿದ್ದರೆ ತಿಳಿಸಿ

ಭಾನುವಾರ, ಮಾರ್ಚ್ 06, 2011

ಮರುಸೊಳ್ಳು/ಮರುಸೊಡರು ಅಂದರೇನು?

’ಮರ್ಸೊಳ್ಳು’, ’ಮರುಸೊಳ್ಳು’, ’ಮರುಸೊಡರು’ ಎಂಬ ಪದ ನಮ್ಮ ಕಡೆ ( ಮಯ್ಸೂರ್, ಮಂಡ್ಯ, ಚಾ.ನಗರ) ಬಳಕೆಯಲ್ಲಿದೆ.
ಮೊದಲೆಲ್ಲ ಮದುವೆ, ಹೆಸರಿಡುವುದು,ತೊಟ್ಟಿಲು ತರುವುದು ಮತ್ತಿತರ ಒಳ್ಳೆ ಕೆಲಸಗಳನ್ನು ಮನೆಯಲ್ಲೇ ನಡೆಸಲಾಗುತ್ತಿತ್ತು. ಆಗ ಮನೆಯಲ್ಲೇ ಆ ಹಬ್ಬದ ಇಲ್ಲವೆ ಒಳ್ಳೆಯ ಕೆಲಸದ ಹಗಲಿನಲ್ಲೂ ’ಸೊಡರು’/ದೀಪವನ್ನು (ಇದನ್ನು ದೀಪಾಲೆ ಕಂಬ ಅಂತನೂ ಹೇಳುತ್ತಾರೆ)ಹಚ್ಚಲಾಗುತ್ತಿತ್ತು.

ಒಳ್ಳೆ ದಿನದ(ಮದುವೆ ಇಲ್ಲವೆ ಹೆಸರಿಡುವುದು ಇಲ್ಲವೆ ತೊಟ್ಟಿಲು ತರುವುದು) ಮರುದಿನ ಕೆಲವು ಕಟ್ಟುಪಾಡುಗಳನ್ನು ನಮ್ಮ ಹಳ್ಳಿಯ ಮಂದಿ ಪಾಲಿಸುತ್ತಾರೆ. ಅವುಗಳಲ್ಲಿ
೧. ಆ ಒಳ್ಳೆಯ ಕೆಲಸದ ಮುಕ್ಯವಾದ ವ್ಯಕ್ತಿಗಳು ಅಂದರೆ ಮದುಮಕ್ಕಳು
೨. ತೊಟ್ಟಿಲು ತಂದ ಹಬ್ಬವಾದರೆ ಆ ಮಗುವು

’ಮರುಸೊಡರ’ನ್ನು ನೋಡಬಾರದು ಎಂಬ ನಂಬಿಕೆ ಇದೆ. ಅಂದರೆ ಸೊಡರು ಹಚ್ಚಿದ ದಿನದ ಮಾರನೆ ದಿನ ಆ ಸೊಡರು ಹಚ್ಚಿದ ಮನೆಯಲ್ಲಿ ಇರಬಾರದು ಅಂತ. ಹಾಗಾಗಿ ’ಮರುಸೊಡರು ನಾಳು’/ ಮರುಸೊಳ್ಳು/ಮರ್ಸೊಳ್ಳು ಎಂಬ ಪದ ಬಳಕೆಯಲ್ಲಿದೆ.

ಈವೊತ್ತಿನ ಸಾಪ್ತಾಹಿಕ ಪುರವಣಿಯಲ್ಲಿರುವ ತಪ್ಪುಗಳು/ಗೊಂದಲಗಳು

ಈವೊತ್ತಿನ((೬-೩-೨೦೧೧) ಸಾಪ್ತಾಹಿಕ ಪುರವಣಿಯಲ್ಲಿ ಬಂದಿರುವ ಬರಹಗಳಲ್ಲಿ ಆಗಿರುವ ತಪ್ಪುಗಳು ಮತ್ತು ಗೊಂದಲಗಳು ಎತ್ತಿ ತೋರಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ.

ಯು.ಬಿ.ಪವನಜ ಅವರ ಬರಹ(ನಮ್ಮ ಭಾಷೆಗೆ e ಭಾಷ್ಯ)ದಲ್ಲಿ " ಒಂದು ಭಾಷೆಯನ್ನು ವೈಜ್ಞಾನಿಕವಾಗಿ ವಿಂಗಡಿಸುವ ಸೂತ್ರವನ್ನು ಪ್ರಪಂಚದ ಯಾವುದೇ ಭಾಷೆಗೆ ಪ್ರಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ."
ಮೊದಲಿಗೆ, ಇಲ್ಲಿ ’ಪ್ರಪ್ರಥಮ’ ಎಂಬ ಪದದ ಬಳಕೆಯೇ ತಪ್ಪು ಯಾಕಂದರೆ ’ಪ್ರಥಮ’ ಇದು ಸಂಸ್ಕೃತ ಮೂಲದ ಪದ. ಕನ್ನಡದಲ್ಲಿ ಇರುವ ಪದಬಳಕೆಗಳಾದ ’ಮೊತ್ತಮೊದಲು’, ’ತುತ್ತತುದಿ’, ’ಕಟ್ಟಕಡೆ’ ಇವುಗಳಲ್ಲಿರುವ ಮೊದಲು, ಕಡೆ, ತುದಿ ಇವೆಲ್ಲ ಕನ್ನಡ ಬೇರಿನ ಪದಗಳು ಅದರ ನಿರುಕ್ತವನ್ನು ಹೀಗೆ ಬಿಡಿಸಬಹುದು.
ಮೊದಲು + ಮೊದಲು = ಮೊದಮೊದಲು ( ಇದನ್ನೇ ಒತ್ತಿ ಹೇಳಬೇಕಾದರೆ) => ಮೊತ್-ಮೊದಲು= ಮೊತ್ತಮೊದಲು. ಇಲ್ಲಿ ’ದ್’(ಕೊರಲಿಸಿದ)ಕ್ಕೆ ಬದಲಾಗಿ ಅದೇ ಗುಂಪಿನ ’ತ್’(ಕೊರಲಿಸದ) ಅಕ್ಷರವು ಬಂದಿದೆ. ಇದು ಕನ್ನಡದ್ದೇ ಆದ ಪದಗಳಿಗೆ ಒಗ್ಗುವ ಪದಬಳಕೆ. ಆದರೆ ಈ ಚಳಕ ಸಂಸ್ಕೃತ ಪದಗಳಾದ ’ಪ್ರಥಮ’ ಎಂಬುದಕ್ಕೆ ಒಗ್ಗುವುದಿಲ್ಲ. ಒಂದು ವೇಳೆ ಅದನ್ನ ಬಳಸಿದರೆ ಕನ್ನಡವೂ ಅಲ್ಲದ ಸಂಸ್ಕೃತವೂ ಅಲ್ಲದ ’ಎಡಬಿಡಂಗಿ’/’ತ್ರಿಶಂಕು’ ಪದಗಳೆಂದು ಕರೆಯಬೇಕಾಗುತ್ತದೆ.

ಎರಡನೆಯದಾಗಿ, ಇಲ್ಲಿ ’ವೈಙ್ಞಾನಿಕ ವಿಂಗಡಣೆ’ ಅಂದರೆ ಏನು ಎಂಬುದನ್ನ ಬರಹಗಾರರು ಹೇಳಿಲ್ಲ. ವೈಙ್ಞಾನಿಕವಾಗಿ ನೋಡಿದರೆ ಪಾಣಿನಿಯು ಬರೆದಿರುವ ವ್ಯಾಕರಣದಲ್ಲಿ ಲಿಂಗ ನಿರ್ಧರಿಸುವ ವಿಧಾನ ಸರಿಯಿಲ್ಲ. ದಾರಾ( ಹೆಂಡತಿ) ಎಂಬ ಪದ ’ಪುಲ್ಲಿಂಗ’ ಎಂದು ಹೇಳಲಾಗಿದೆ. (dara (p. 115) [ 2. dârá ] m. (gnly.) pl. wife: dârân pra kri, marry a wife). ಇದೇ ರೀತಿ ಸಂಸ್ಕೃತದ ವ್ಯಾಕರಣದಲ್ಲಿ ಆಗಿರುವ ಎಡವಟ್ಟುಗಳು ಹಲವಿವೆ. ಯಾವ ರೀತಿಯಲ್ಲಿ ಇದು ವೈಙ್ಞಾನಿಕ ?
ಹಾಗಾಗಿ ಆಯ ಭಾಷೆಯ ವ್ಯಾಕರಣ ಆ ಭಾಷೆಯ ಮಟ್ಟಿಗೆ ಸರಿಯಿರಬಹುದು. ಆದ್ದರಿಂದ ’ಒಂದು ಭಾಷೆಯನ್ನು ವೈಙ್ಜಾನಿಕವಾಗಿ ವಿಂಗಡಿಸುವ ಸೂತ್ರವನ್ನು ಯಾವುದೇ ಭಾಷೆಗೆ ಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ’ ಎಂದು ಹೇಳುವುದು ತಪ್ಪಾಗುತ್ತದೆ ಮತ್ತು ಹಲವು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ.

ಮೂರನಯದಾಗಿ, "ಆತನಿಗೆ ‘ಸಹಜಭಾಷಾ ಸಂಸ್ಕರಣೆ ಕ್ಷೇತ್ರದ ಜನಕ’ ಎಂಬ ಹೆಸರೂ ಇದೆ. "
ಪಾಣಿನಿಗೆ Natural Language Processing ಎಂದರೇನು ಎಂಬುದೇ ಗೊತ್ತಿರಲಿಲ್ಲ. ಇತ್ತೀಚೆಗೆ ಸುಮಾರು ೧೯೫೦ ರ ದಶಕದಲ್ಲಿ ಈ ಅರಿಮೆಯು ಅಂಬೆಗಾಲಿಡುತ್ತಿದ್ದುದನ್ನು ನಾವು wiki (http://en.wikipedia.org/wiki/Natural_language_processing) ಯಿಂದ ತಿಳಿದುಕೊಳ್ಳಬಹುದು. ಬರಹಗಾರರು ಹೇಗೆ ಪಾಣಿನಿಯನ್ನು ’ಸಂಸ್ಕರಣೆ ಕ್ಷೇತ್ರದ ಜನಕ’ ಎಂದು ಹೇಳಿದ್ದಾರೊ ತಿಳಿಯದು. ಇದಕ್ಕೆ ಅವರು ತಕ್ಕ ಪುರಾವೆಗಳನ್ನು ನೀಡಿಲ್ಲ.
ಇನ್ನು ಡಾ ಎ. ಸತ್ಯನಾರಾಯಣ ಅವರ ’ ಕನ್ನಡೀಕರಣ: ಆಗಿರುವುದೇನು? ಆಗಬೇಕಿರುವುದೇನು?’ ಎಂಬ ತಲೆಬರಹದಲ್ಲಿರುವ ’ಕನ್ನಡೀಕರಣ’ ಎಂಬ ಪದವೂ ತ್ರಿಶಂಕು/ಎಡಬಿಡಂಗಿ ಪದವಾಗಿದೆ.

ಕನ್ನಡ (ಕನ್ನಡದ್ದೇ ಆದ ಪದ) + ಕರಣ (ಸಂಸ್ಕೃತದ್ದೇ ಆದ ಪದ) => ಕನ್ನಡೀಕರಣ ಹೇಗೆ ಆಗುತ್ತದೆ? ಇದು ಯಾವ ಸಂಧಿ ಯಾರಿಗೆ ಗೊತ್ತು? ಇದರ ಬದಲು ಕನ್ನಡ+ಇಸು = ಕನ್ನಡಯಿಸು => ಕನ್ನಡಯ್ಸು=>ಕನ್ನಡಸು ಎಂಬ ಕನ್ನಡಕ್ಕೆ ಒಗ್ಗುವ ಪದವನ್ನು ಬಳಸಬಹುದು.
ಇದೇ ರೀತಿ ಇನ್ನೊಂದು ಪದ ಈಗಾಗಲೆ ಕನ್ನಡದಲ್ಲಿ ಬಳಕೆಯಲ್ಲಿದೆ , ಉದಾ: ಸೊಗ+ಇಸು = ಸೊಗಯಿಸು = ಸೊಗಸು

ಅನಂತ ಮೂರ್ತಿಯವರ ’ಅನುಸಂಧಾನ’ಕ್ಕೆ ಮಾರುಲಿ

ಮಾನ್ಯ ಶ್ರೀ ಅನಂತ ಮೂರ್ತಿಯವರು ಇತ್ತೀಚೆಗೆ ನಡೆದ ರಾಜ್ಯಸಬೆಯ ಚುನಾವಣೆಯಲ್ಲಿ ಕೆ.ಮರುಳಸಿದ್ದಪ್ಪನವರು ಸ್ಪರ್ದಿಸಿದುದನ್ನು ಸೆಕ್ಯುಲರ್ ಮಚ್ಚೆ, ಮಂಕುಬೂದಿ, ಚೇಶ್ಟೆ ಅಂತ ಪ್ರಜಾವಾಣಿಯ ’ಅನುಸಂಧಾನ’ ಎಂಬ ಅಂಕಣದಲ್ಲಿ ಹೀಗಳೆದಿದ್ದಾರೆ

ಆದರೆ ಕೆ.ಮರುಳಸಿದ್ದಪ್ಪನವರು ಒಬ್ಬ ಪಕ್ಶೇತರ ಅಭ್ಯರ್ತಿಯಾಗಿ ಸ್ಪರ್ದಿಸಿದ್ದರೆ ಹೊರತು ಕಾಂಗ್ರೆಸ್-ಜೆಡಿಎಸ್ ಪಕ್ಶಗಳಿಂದಲ್ಲ ಎಂಬುದನ್ನ ನಾವು ಗಮನಿಸಬೇಕು. ಅಲ್ಲದೆ ಒಕ್ಕೂಟ ವ್ಯವಸ್ತೆಯನ್ನು ಒಪ್ಪಿರುವ ನಾವು ರಾಜ್ಯಸಭೆಗೆ ಆಯ್ಕೆಯಾಗುವವರು
ಆಯ ರಾಜ್ಯದವರೇ ಆದ ಬುದ್ದಿ ಜೀವಿಗಳು ಇಲ್ಲವೆ ಆಯ ರಾಜ್ಯದ ನುಡಿ, ಸಂಸ್ಕೃತಿ ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರಿತವರು ಅಯ್ಕೆ ಆಗಿ ಬರಲಿ ಎಂಬುದು ಪ್ರಜಾಪ್ರಬುತ್ವದ ಸಿದ್ದಾಂತ ಮತ್ತು ಸಂವಿದಾನದ ಆಶಯ ಕೂಡ ಆಗಿರುವಾಗ ಮರುಳಸಿದ್ದಪ್ಪನವರು ಕಣಕ್ಕೆ ಇಳಿದದ್ದು ಸಮರ್ತನೀಯ. ರಾಶ್ಟ್ರೀಯ ಪಕ್ಶಗಳು ಒಕ್ಕೂಟ ವ್ಯವಸ್ತೆಯ ಆಶಯ ಮತ್ತು ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದಾಗ ಅದನ್ನು ವಿರೋದಿಸಿ ಮರುಳಸಿದ್ದಪ್ಪನವರು ಸೈದ್ದಾಂತಿಕ ನೆಲೆಯಲ್ಲಿ ಸ್ಪರ್ಧಿಸಿದರೆ ಹೊರತು ಚೇಶ್ಟೆಗಾಗಿ ಅಲ್ಲ. ಇಲ್ಲಿ ಸೋಲು-ಗೆಲುವು ಮುಕ್ಯವಲ್ಲ ಒಕ್ಕೂಟ ವ್ಯವಸ್ತೆಯ ಸೈದ್ದಾಂತಿಕ ನಿಲುವುಗಳನ್ನು ಎತ್ತಿ ಹಿಡಿಯುವ ಮತ್ತು ರಾಷ್ಟ್ರೀಯ ಪಕ್ಷಗಳ ’ಪ್ರಾದೇಶಿಕ ಆಶಯ’ಗಳ ವಿರೋಧಿ ನಿಲುವನ್ನು ಖಂಡಿಸುವ ವಿದಾನವಾಗಿ ಮರುಳಸಿದ್ದಪ್ಪನವರ ಸ್ಪರ್ಧೆಯನ್ನು ನಾವು ನೋಡಬೇಕಾಗುತ್ತದೆ. ಶಾಸಕರು ಕೂಡ ’ಮೊದಲು’ ಕನ್ನಡಿಗರೇ ಅಲ್ಲವೆ, ಆಮೇಲೆ ತಾನೆ ಬಿಜೆಪಿ ಇಲ್ಲವೆ ಕಾಂಗ್ರೆಸ್ಸಿನ ಪಕ್ಷದವರು; ಹಾಗಾಗಿ ’ಆತ್ಮಸಾಕ್ಶಿ’ ಆದಾರಿತ ವೋಟುಗಳನ್ನು ಕೇಳುವುದು ಕೆಟ್ಟ ರಾಜಕಾರಣವಾಗಲ್ಲ, ಅಲ್ಲದೆ ಇನ್ನೂ ’ಪ್ರಾದೇಶಿಕ ಆಶಯ’ದ ಮೇಲೆ ನಿಂತ ರಾಜಕಾರಣವಾಗಿ ಪ್ರಜಾಪ್ರಬುತ್ವದ ಮತ್ತು ಒಕ್ಕೂಟ ವ್ಯವಸ್ತೆಯ ಮೌಲ್ಯಗಳನ್ನು ಹೆಚ್ಚು ಗಟ್ಟಿಗೊಳಿಸುತ್ತದೆ.
ಇನ್ನು ಮುಂದಾದರೂ ರಾಶ್ಟ್ರೀಯ ಪಕ್ಶಗಳು ರಾಜ್ಯಸಬೆಗೆ ಅಭ್ಯರ್ತಿಗಳನ್ನು ಆರಿಸುವಾಗ ಎಚ್ಚರದಿಂದಿರಲಿ ಮತ್ತು ಒಕ್ಕೂಟ ವ್ಯವಸ್ತೆಗೆ ಬದ್ದವಾಗಿರಲಿ ಎನ್ನುವ ಎಚ್ಚರವನ್ನ ಮರುಳಸಿದ್ದಪ್ಪನವರು ಸ್ಪರ್ದಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಬಹುದು.