ಶನಿವಾರ, ಫೆಬ್ರವರಿ 21, 2009

ಇಂದು ತಾಯ್ನುಡಿ ನಾಳು - ೨೧ ಪೆಬ್ರವರಿ ೨೦೦೯


ಇಂದು ಹಲವು ತಾಯಿನುಡಿಗಳು/ಆಡುನುಡಿಗಳು ಕಣ್ಮರೆ ಆಗಿವೆ/ಆಗುತ್ತಿವೆ. ಇದಕ್ಕೆ ಕೆಲವು ಅಂತೆ ಹೇಳುವ 'ದೊಡ್ಡ'(ಶಿಶ್ಟ) ನುಡಿಗಳು ಓಸುಗರವಾಗಿದೆ.
ಯುನೆಸ್ಕೊ ಇದರ ಬಗ್ಗೆ ಒಂದು ಬರಹ ಹೊರತಂದಿದೆ. ಇಲ್ಲಿಂದ ಪಿಡಿಎಪ್ ಅನ್ನು ಇಳಿಸಿ ನಮ್ಮ ನಾಡಿನಲ್ಲಿ ಕಾಣೆಯಾಗುತ್ತಿರುವ ನುಡಿಗಳ ಬಗ್ಗೆ ತಿಳಿದುಕೊಳ್ಳಬಹುದು.



ಅಲ್ಲಿ ಕೊಟ್ಟಿರುವಂತೆ ನಮ್ಮ ಕನ್ನಡನಾಡಿನಲ್ಲಿರುವ ಕೆಲವು ನುಡಿಗಳು ಇವೆ.
೧. ಕುರುಬ
೨. ಇರುಳ
೩. ತೋಡ (ಊಟಿ ಗುಡ್ಡ ಗಾಡಿನ ನುಡಿ)
೪. ಕೋಟ
೫. ತುಳು
೬. ಕೊಡಗು
೭. ಕೊರಗ
೮. ಬಳ್ಳಾರಿ ( ಈ ತೆರ ನುಡಿ ಇದೆ ಎಂದು ತಿಳಿದಿರಲಿಲ್ಲ)
೯. ಬಡಗ (ಊಟಿ ಗುಡ್ಡಗಾಡಿನ ನುಡಿ)

ಇದರಲ್ಲಿ ಯುನೆಸ್ಕೊದವರು ಹೇಳಿರುವಂತೆ ಕೇವಲ ಕೊಲೊನಿಯಲ್ ನುಡಿಗಳಾದ ಇಂಗಳೀಸ್,ಪ್ರೆಂಚ್,ಸ್ಪಾನಿಶ್ ನುಡಿಗಳು ಇತರೆ ನುಡಿಗಳನ್ನು ನುಂಗಿ ಹಾಕಿದೆ ಎಂದು ಹೇಳಲಾಗುವುದಿಲ್ಲ . ಇದಕ್ಕೆ ಹಲವು ಓಸುಗರಗಳು ಇದ್ದಿರಬೇಕು ಎಂದು ಆಸ್ಟ್ರೇಲಿಯಾದ ಒಬ್ಬ ನುಡಿಯರಿಗರು ಹೇಳಿದ್ದಾರೆ. ಇವುಗಳನ್ನು ಹುಡುಕುವುದೆ ಈ ಯುನೆಸ್ಕೊದವರು ಹಾಕಿಕೊಂಡಿರುವ ಕೆಲಸಗಳು. ಅವುಗಳಲ್ಲಿ ಕೆಲವು ನುಡಿಗಳು ಹಾಳಾಗುವ ಅಂಚಿನಲ್ಲಿವೆ. ಇನ್ನು ಕೆಲವು ಕೆಡುಕಿನ ಹಾದಿಯಲ್ಲಿವೆ. ಇವುಗಳಲ್ಲಿ ಕೊಡಗು, ತುಳು ಗಳ ಅಶ್ಟು ಹದಗೆಟ್ಟಿಲ್ಲ. ಆದರೆ ಇತರೆ ನುಡಿಗಳು ಮಾಡರನಯ್ಸೇಶನ್ ಹೊಳೆಯಲ್ಲಿ ಕೊಚ್ಚುವೋಗುತ್ತಿವೆ.

ಇವಲ್ಲದೆ ಆಂದ್ರ, ಬಿಹಾರ, ಒರಿಸ್ಸಾದ ಹಲವು ಗುಡ್ಡಗಾಡು ನುಡಿಗಳು ಮತ್ತು ಪಾಕಿಸ್ತಾನದಲ್ಲಿರುವ ಒಂದೇ ಒಂದು ದ್ರಾವಿಡ ನುಡಿ ಬ್ರಹೂಯಿ ಕೂಡ ಕೆಡುಕಿನ ದಾರಿ ಹಿಡಿದಿವೆ.

ಕೊನೆಯದಾಗಿ, ಯಾವುದೇ ನುಡಿ ಹಲವು ಗುಟ್ಟುಗಳನ್ನು ತನ್ನೊಳಗೆ ಮತ್ತು ಕೆಲವು ನಡಾವಳಿಗೆ, ಪರಿಸರಕ್ಕೆ ಹತ್ತಿರವಾದ ವಿಶಯಗಳನ್ನು ಅಡಗಿಸಿಕೊಂಡಿರುತ್ತವೆ. ಒಂದು ನುಡಿ ಸತ್ತರೆ ಅದರ ಜೊತೆಗಿರುವ ನಡಾವಳಿ, ಗುಟ್ಟುಗಳು, ಮನಕೆದುಕುವ ಹುರುಪಿನ ಸಂಗತಿಗಳು ಸತ್ತಂತೆ.

ಎಲ್ಲ ನುಡಿಗಳು ಬಾಳಿ ಬದುಕಲಿ ಎಂದು ನಂಬಿ ಬಯ್ಸೋಣ.

ಶುಕ್ರವಾರ, ಜನವರಿ 16, 2009

ಬೆಳಕುನೆಳಲಿನಾಟ

ಎಶ್ಟು ತೋಡಿದರೂ
ಸಿಗಲಿಲ್ಲ ಎನೂ
ಅಗೆಯುತ ಮೊಗೆಯುತ
ಅರಿವಿಗೆ ಬರಲಿಲ್ಲ ದಣಿತ
ಹುಡುಕ ಹೊರಟಿತ್ತು ನೆಮ್ಮದಿ
ಇಳಿದಿತ್ತು ಸುಳಿಯಲ್ಲಿ ಕಾಣದಿ
ಎಡೆಬಿಡದ ಬಾಳಹೋರಾಟ
ಸಾಗಲಿ ಬೆಳಕುನೆಳಲಿನಾಟ

ಸೋಮವಾರ, ಜನವರಿ 12, 2009

ಸುಳ್ಳಿನ ಬೇಲಿ

ಸುಳ್ಳಿನ ಬೇಲಿಯ ಮುಳ್ಳು
ಚುಚ್ಚುವುದೆಂದೆಂದೂ ಸುಳ್ಳಿನ
ಬೇಲಿಗಿಂತ ದಿಟದ
ಬಯಲೇ ಲೇಸು ಕೇಳೆನ್ನ ಬರತೇಶ

ಭಾನುವಾರ, ಜನವರಿ 04, 2009


ನಿನ್ನ ಎತ್ತರ ಬಾನಿನತನಕ
ಯಾವ ಕಲೆಗಾರನ ಕಯ್ಚಳಕ
ಸುತ್ತಿರುವ ಹಸಿರು ಪೂರಕ
ಮಯ್ಯೆಲ್ಲೆಲ್ಲಾ ಎನೋ ಪುಳಕ


ಚಿತ್ರ/ಪಾಪೆ :- ಗೋಪಾಲಸ್ವಾಮಿ ಬೆಟ್ಟದ ಗುಡಿಯ ಹತ್ತಿರ ಇರುವ ಬೆಟ್ಟ-ಗುಡ್ಡ-ಹಸಿರು

ನವಿರುನೇಸರ

ಎಳೆಯ ನವಿರುನೇಸರ
ಬಾನ ತುಂಬಿದ ಕೆಂಗದಿರ
ಈ ಚೆಲುವ ನೋಡಿದಿರಾ?
ಚಳಿಯಕೊಳೆಯ ನೀಗುವ
ಇಳೆಯಬೆಳೆಗೆ ಉಸಿರು ಕೊಡುವ
ಬೆಳ್ಳಂಬೆಳಿಗ್ಗೆಯ ನಲಿಸುವ ಎಲ್ಲವ

ಶನಿವಾರ, ಜನವರಿ 03, 2009

ಗಿಡ-ಮರ

ಹೀರಿ ಇಳೆಯ ಸಾರ
ಎದುರಿಸಿ ಬಿಸಿಲು ಬರ
ನೆನ್ನೆಯ ಗಿಡವಾಗಿದೆ ಮರ
ನೆರಳ ನೀಡುತ ನಿರಂತರ
ನಿನ್ನ ಬಾಳು ಸಾಗಿತು ಈ ತೆರ
ಹೆಸರಾಗಲಿ ಎಂದೆಂದಿಗೂ ನಿನ್ನ ಈ ಅಱ


ಅಱ = Ka. aṟa, aṟu virtue, charity, alms, law, dharma, Yama.? Cf. 405 Ta. āṟu. DED 262.

ಗೆಲುವೆಂಬ ಪಲ

ಚುಚ್ಚಿದರೂ ನುಗ್ಗು ನೂರುಸಲ
ಕೆಚ್ಚಿರಲಿ ಬಗ್ಗುಬಡಿಯುವ ಬಲ
ಕಟ್ಟಿಕೊ ತಾಳ್ಮೆ ಎಲ್ಲಸಲ
ಮೆಟ್ಟಿ ನಿಲ್ಲಲು ಸೋಲ
ಕೊಟ್ಟೆ ಕೊಡುವ ಗೆಲುವೆಂಬ ಪಲ

ಕಡಲಾಟ

ನೋಟದಂಚಿನಾಗೆ ಎನೋ ಮಾಟ
ಕಡಲ್ಬಾನುಗಳ ಮುತ್ತಿಕ್ಕುವ ಆಟ
ನಲಿಯುತಿಹ ಅಲೆಗಳು ತಾಳವಾಕಿತು ತಟತಟ
ಓಡುತಿವೆ ಮೋಡಗಳು ಮುಟ್ಟಲು ಇಳೆಬಾನ್ಕೂಟ

ಮುಸ್ಸಂಜೆಯ ಬಳ್ಳಿ

ಮುಸ್ಸಂಜೆ ಹೊತ್ನಲ್ಲಿ
ಅಂದಚೆಂದದ ಹೂಬಳ್ಳಿ
ನಲಿಯುತ ನಿಂತಿತ್ತು ಬಿಂಕ ಚೆಲ್ಲಿ
'ನಲಿಯುವೆ ಏತಕೆ' ಕೇಳಲು ನಾನಲ್ಲಿ
ತಾಳಲಾರೆ ತಂಗಾಳಿಕಚಗುಳಿ
ಎಂದಾಗ ಆ ಬಳ್ಳಿ ನನ್ನಕೆನ್ನೆಯಲ್ಲಿ ಗುಳಿ

ಶುಕ್ರವಾರ, ಜನವರಿ 02, 2009

ಹಳ್ಳಿ-ಹಾಡು

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು
ಹೊಂಟ್ಯಾನ ಎನಗಂಡ ಹೊಲದೆಡೆಗೆ
ಹೊತ್ತು ಮುಳುಗೊ ಮುಂದ ಬಾರಪ್ಪ ಮನಿಗೆ

ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆಕಣಮ್ಮಿ
ಆಳು ಕಾಳು ಕಡ್ದಿನೆಲ್ಲ ಸಮರಿಯಲು
ಹೊತ್ತು ಮುಳುಗುವುದು ಎನ್ನೊಡತಿ

ಹೊತ್ತು ಮುಳುಗಿದ ಮ್ಯಾಲೆ ಗುಂಡಿಗಿ ನಡಗಯ್ತಿ
ನೀನಿಲ್ಲದ ಮನಿ ಹೂವಿಲ್ಲದ ಗಿಡದಂತಿ
ಲಗೂನ ಮನಿಗೆ ಬಂದ್ಸೇರು ನನಗೆ ನಿನ್ನ ಚಿಂತಿ

ಆಡಾಕ ಆಡ್ಮರಿಗಳು, ನೋಡಾಕ ಹೂದೊಟ
ಕೂಡಿ ಮಾತಾಡಾಕ ನೆರೆಹೊರೆಯವರ ಕೂಟ
ಹಂಗ್ಯಾಕ ಹುಲುಬುತಿ ನಾ ಬರಗಂಟ

ಗದ್ದೆಯ ತೆವರಿಯಲ್ಲಿ ನಲಿಯುತ ಬಂದವಳೆ
ಮುದ್ದೆ ಉಪ್ಪೆಸರು ಹೊತ್ತು ತಂದವಳೆ
ಯಾಕೀಟ್ ತಡವಾಯಿತು ನೀ ಹೇಳೆ

ಮನಿಯಾಗ ಮಗು ಅಳಾಕಹತ್ತಿತ್ತು
ಕಟ್ಟಿದ ಕರುವು ಹಗ್ಗವ ಬಿಡಿಸ್ಕೊಂಡಿತ್ತು
ಮಗುವನ್ನ ಮಲಗಿಸಿ, ಕರುವನ್ನ ಕಟ್ಟಾಕಿ
ಬರಾಕ ಹೊತ್ತಾತು, ಈ ಕೊಂಕು ಮಾತ್ಯಾಕ

ಗುರುವಾರ, ಜನವರಿ 01, 2009

ಕಣ್ ಸನ್ನೆಯಲಿ...

ಕಣ್ ಸನ್ನೆಯಲಿ ನೀ ಕೊಂದುಬಿಡುವೆ
ಎಣಿಸಲು ಆಗದು ನಿನ್ನಾ ಒಲುಮೆ
ಬರೆದು ಕೊಡಲೆ ನನ್ನೆನಾ
ಕಟ್ಟ ಬೇಡ ಇದಕೆ ಬೆಲೆಯ

ತೊರೆದು ಹೋದರೆ ನೀ ನನ್ನ
ಮೊರೆತ ಕೇಳುವರ್ ಯಾರೆನ್ನ
ಬರಿದು ಮಾಡಬೇಡ ಬದುಕ
ತೆರೆದು ನೋಡಬೇಡ ಕೆದುಕಿ

ಪಾರು ಮಾಡೆನ್ನ ಈ ತೊಡರಿಂದ
ಸೊರಗುತಿದೆ ಈ ನನ್ನೊಡಲು
ಎಳಸುತಿದೆ ನಿನ್ನ ಆ ನಗೆಯು
ಬಳಸಬಿಡು ನನ್ನ ಎದೆಯನ್ನು

ಭಾನುವಾರ, ಡಿಸೆಂಬರ್ 28, 2008

ದಾರಿ ತಪ್ಪಿತೆ?

ಕಡಲಹಡಗಲ್ಲಿ ಕುಳಿತು
ನಾಡಗೊಡವೆ ಏತಕೆ
ಪಯಣ ದೂರದೂರಿಗೆಲ್ಲೊ
ಗುರಿಯು ತಪ್ಪಿತೆ?
ಒಂಟಿ ಕಾಲಲಿ ಕುಂಟುವ ಬಯಕೆಯ
ಸೊಂಟ ಮುರಿಯಿತೆ
ನೋವು ಬಿಕ್ಕಳಿಸಿ ನಸುನಗೆಯ
ಮೂಡಿಸಿತೆ
ಸಾವು ಪಕ್ಕದಲಿ ಸಿಕ್ಕಿಬಿಡಲು
ಚಿಂತೆ ಏತಕೆ?

ಶನಿವಾರ, ಡಿಸೆಂಬರ್ 27, 2008

ಹಾಡು ಮತ್ತು ಸಂಗೀತ

ಹಾಡು ಮತ್ತು ಸಂಗೀತ ಒಂದಕ್ಕೊಂದು ಜೊತೆಯಾಗೇ ಬರುವ ನಾವೇ ಕಂಡುಕೊಂಡ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ ಎರಡು ತೆಲೆಮೆಯ ಸರಕುಗಳು. ಆದರೆ ಇವುಗಳಲ್ಲಿ ಬೇರೆಬೇರೆಯಾಗಿ ಗುರುತಿಸಬಲ್ಲ ಹಲ ಅಂಶಗಳ ಬಗ್ಗೆ ನೋಡೋಣ.
ಹಳೇ ಕಾಲದಿಂದಲೂ ನಮ್ಮಲ್ಲಿ ಹಾಡು ಕಟ್ಟುವುದು, ಕುಣಿಯುವುದು ನಮ್ಮ ನಡಾವಳಿಯ ಒಂದು ಚೂರಾಗಿ ಬಂದಿದೆ. ಇದೇ ಈಗ ಬೆಳೆದು ಜನಪದವೆಂಬ ಹೆಮ್ಮರವಾಗಿ ನಮ್ಮ ಇಂದಿನ ಹಾಡು-ಕುಣಿತಕ್ಕೆ ತಳಪಾಯವಾಗಿ ನಿಂತಿದೆ.

"ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ - ಹೀಗೆಂದು ಕವಿರಾಜಮಾರ್ಗಕಾರನು ಕನ್ನಡಿಗರಿಗೆ ಹಾಡುಗಬ್ಬ, ಬಾಯಿಗಬ್ಬಗಳ ಬಗ್ಗೆ ಇರುವ ಒಲವನ್ನು ತೋರಿಸಿಕೊಟ್ಟಿದ್ದಾನೆ. ಆದರೆ ಹಾಡು ಎಂಬ ಕಲೆಯ ಬಗೆ ಉಂಟಾಗುವಾಗ, ಉಂಟಾಗುತ್ತಿರುವಾಗ ಅದು ಒಂದು ಮರುಕಳಿಕೆ(rhythm) ಹೊಂದಿಕೊಳ್ಳಬಲ್ಲ ಪದಕಂತೆಗಳಾಗಿ ಹೊರಹೊಮ್ಮುತ್ತಿದ್ದವು. ಆಗ ಈ ಶ್ರುತಿ, ತಾಳ ಇವುಗಳ ಬಗ್ಗೆ ಹಾಡು ಕಟ್ಟುವವರ ಅತವ ಹಾಡುವವರ ಅರಿವಿಲ್ಲದಂತೆ ಅವು ಹಾಡಿನೊಂದಿಗೆ ಬೆರೆತಿರುತ್ತಿದ್ದವು. ಅಂದರೆ ಆಗ 'ಇನಿ'/ಸಂಗೀತ(ನಯಗೊಳಿಸಿದ, ಒಪವೋರಣಗೊಳಿಸಿದ ಹಾಡು ಅಂತ ಇದರ ತಿರುಳಿರಬಹುದು. ಆದರೆ ಈ ತಿರುಳು ಅಶ್ಟು ಸರಿಯಾಗಿಲ್ಲವೆಂದು ಮುಂದೆ ತಿಳಿಸುವೆ) ಎನ್ನುವ ಕಲೆ ಇನ್ನು ಎಳೆಸಾಗಿ ಉಳಿದಿತ್ತು. ಅಂದರೆ ಹಾಡಿನಲ್ಲಿ ಮೊದಲು ಅದರಲ್ಲಿರುವ ಪದಗಳು ಮತ್ತು ಪದಗಳನ್ನು ಕಟ್ಟುವ ಬಗೆ, ಕಟ್ಟುವಾಗ ಹೇಗೆ ಅದನ್ನು ಮರುಕಳಿಸುವ ಬಗೆಯಲ್ಲಿ (ಲಯಬದ್ದ) ಅದನ್ನು ಹೇಳಬಹುದು/ಹಾಡಬಹುದು ಎಂಬುವುದರ ಮೇಲೆ ಹಾಡು ಕಟ್ಟುಗರು ಹಾಡುಗಳನ್ನು ಕಟ್ಟುತ್ತಿದ್ದರು ಎಂದು ಅಯ್ಬಿಲ್ಲದೆ ಹೇಳಬಹುದು. ಹಾಗದರೆ ಹಿಂದಿನಿಂದಲೂ ಹಾಡಿನಲ್ಲಿರುವ ಪದಗಳಿಗೆ( ಸಾಹಿತ್ಯಕ್ಕೆ) ಹೆಚ್ಚು ಒತ್ತೇ ಹೊರತು ಈಗಿನ ಕಾಲದ ಹಾಡಿಗೆ ಬೇಕಾದ ಶ್ರುತಿ, ತಾಳ ಇವುಗಳಲ್ಲ ಎಂದು ಹೇಳುವುದಕ್ಕೆ ಅಡ್ಡಿಯಿಲ್ಲ. ಈ ಮಾತು ಇಂದಿಗೂ ಜನರ ಬಾಯಲ್ಲಿ ನಲಿಯುವ ಹಾಡಿಗಳಿಗೂ ಹೊಂದುತ್ತದೆ ಏಕೆಂದರೆ ಒಂದು ಸಿನಿಮಾಹಾಡು ಮೇಣ್ ಅನಿಸುವಾಡು(ಬಾವಗೀತೆ) ಇವುಗಳಲ್ಲಿ ಹಾಡಿನ ಪದಗಳಿಗೇ ಹೆಚ್ಚು ಮನ್ನಣೆ ಹೊರತು ಸಂಗೀತಕ್ಕಲ್ಲ. ಸಂಗೀತವಿದ್ದರೂ ಅದು ಹಾಡಿನ ಅನಿಸು/ಪದಗಳನ್ನು ಇನ್ನು ಹೆಚ್ಚು ಮೇಲ್ಮೆಗೊಳಿಸುವಂತೆ ಮಾಡಲು ಮಾತ್ರ. ಈಗಲೂ ಹಾಡುಗಳಲ್ಲಿ ಬರುವ ಪದಗಳಲ್ಲಿ ತಪ್ಪುಗಳಾದರೆ ತಟ್ಟನೆ ಮಂದಿ ಅದನ್ನ ಎತ್ತಿ ತೋರಿಸುವರು ಆದರೆ ಶ್ರುತಿ, ತಾಳಗಳಲ್ಲಿ ತಪ್ಪುಗಳಾದರೆ ಹೆಚ್ಚು ಮಂದಿಗೆ ಆ ತಪ್ಪುಗಳನ್ನು ಎತ್ತಿ ತೋರಿಸಲಾಗುವುದಿಲ್ಲ. ಅಂದರೆ ಇಂದಿಗೂ ಹೆಚ್ಚು ಮಂದಿಯ ಮಟ್ಟಿಗೆ ಪದಗಳಿಗೆ ಹೆಚ್ಚು ಬೆಲೆ ಹೊರತು ಶ್ರುತಿ, ತಾಳಕ್ಕಲ್ಲ.
ಇಂದಿಗೂ ಜನಪದ ಹಾಡುಗಳು ಮಂದಿಯ ಮನಸ್ಸಿಗೆ ಹತ್ತಿರವಾಗಿರುವುದು ಇದಕ್ಕೋಸ್ಕರವಾಗಿಯೇ. ಹಾಡು ಕಟ್ಟುವುದು ನಮ್ಮ ಬುಡಕಟ್ಟಿಗೆ ಹೆಚ್ಚು ಪಳಗಿರುವ ಕಲೆ ಆದರೆ ಸಂಗೀತ ಹಾಡು ಕಟ್ಟುವುದಕ್ಕೆ ಹೋಲಿಸಿದರೆ ತೀರ ಇತ್ತೀಚಿನದು. ಅಂತೆ ಹೇಳುವ 'ಶಾಸ್ತ್ರೀಯ ಸಂಗೀತ'ವೆನ್ನುವುದು ಕೆಲವೇ ಮಂದಿಗೆ ಅರ್ತವಾಗುವ ಕಲೆಯಬಗೆ. ಮತ್ತು ಹಲವು ಬಾರಿ ನನಗೆ ಅದು ಕೆಲವೇ ಮಂದಿಗೋಸ್ಕರವಾಗಿಯೇ ಇದೆಯಂದೂ ನನ್ನ ಅಯ್ಬು.
ಕವಿರಾಜಮಾರ್ಗದಲ್ಲಿರುವಂತೆ ಹಾಡುಗಬ್ಬ(ಜನಪದ), ನೋಟಗಬ್ಬ(ಯಕ್ಸಗಾನ, ಬಯಲಾಟ) ಎಂಬೆರೆಡು ಕಲೆಬಗೆಗಳು ಬಹಳ ಹಿಂದಿನ ಕಾಲದಿಂದಲೂ ಬಳಕೆಗೆ ಬಂದಿದೆ.

ಕೊನೆಯದಾಗಿ, ಹಾಡುಗಬ್ಬಗಳು ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿಕೊಂಡ ಕಲೆ. ಇದು 'ಮಂದಿಯಾಳ್ವಿಕೆ' ಯ 'ಅರಿವಿನರಿಮೆ'ಗಳ ಹುರುಪಿಗೆ ಹೊಂದುತ್ತದೆ. ಹಾಗಾಗಿ ಪದಗಳಿಗೆ ಬೆಲೆಕೊಡುವ ಕಲೆಯಬಗೆಗಳು ಬಹಳ ಕಾಲ ಬಾಳುತ್ತವೆ ಎಂದು ಹೇಳಬಹುದು.

ಸಾಲು-ಹೊತ್ತಿಗೆ

ಸಾವಿರ ಸಾವಿರ ಸಾಲುಗಳಲ್ಲಿ
ಅಮ್ಮನಕ್ಕರೆಯ ಬಣ್ಣಿಸಲಾದೀತೇ?
ಹೊಸ ಹೊತ್ತಿಗೆಗಳನ್ನು ಹೊರತಂದರೇನು
ಅರಿವಿನ ಹಸಿವ ತೀರಿಸಲಾದೀತೆ
ಆದರೂ
ಸಾಲುಗಳೂ ಬೇಕು ಹೊತ್ತಿಗೆಗಳೂ ಬೇಕು
ಸಾಗಲು ಪಯಣ ಎಲ್ಲೆಯಿಲ್ಲದೆಡೆಗೆ
ನೆಟ್ಟಿ ನೋಟವ ಇಳೆಬಾನ್ಕೂಡಿನ ಕಡೆಗೆ

ಶುಕ್ರವಾರ, ಡಿಸೆಂಬರ್ 26, 2008

ಒಂದು ಸಿನಿಮಾ ಹಾಡಿನ ತರ...ಈ ಹಾಡು

ನಿನ್ನಂದಕೆ ಸೆರೆಯಾದನೆ..!!

ನಿನ್ನಂದಕೆ ಸೆರೆಯಾದನೆ...ಎ.ಎ.ಎ
ನಿನ್ನಡತೆಗೆ ಮಾರೋದೆನೆ .ಎ.ಎ.ಎ
ಜಾಣೆ ನಿನ್ನ ಕಣ್ಣು
ಹೊಳೆಯುವ ಹೊನ್ನು
ನಿನ್ನ ಬೆಡಗು...ಹೋ.ಹೋ \ಪಲ್ಲವಿ \

ಒಲವ ಮಳೆಯಲಿ ನೆನೆದು
ಚೆಲುವ ಹೊಳೆಯಲಿ ಮಿಂದು
ಪೊರೆಯ ಕಳಚಿ ಪೊಗರು ಮೂಡಿದೆ
ನಿನ್ನ ನಲುಮೆಯ ಸಿರಿಯುಂಡು \ಚರಣ \

ಮಿಡಿವ ನಾಡಿಗೆ ನೆತ್ತರಾದೆ
ಎಳೆವ ಉಸಿರಿಗೆ ಗಾಳಿಯಾದೆ
ಬಡಿವ ಎದೆಗೆ ಸದ್ದಾದೆ
ನನ್ನೊಳೇ ಬೆರೆತೆ ನೀ \ಚರಣ\

ಗುರುವಾರ, ಡಿಸೆಂಬರ್ 25, 2008

ಬೇರೆ ದಾರಿಯಿಲ್ಲ

ಏಳುವುದಕ್ಕೆ ಎಡೆಯಿಲ್ಲ
ಎಡವುದಕ್ಕೆ ಎಲ್ಲೆಯಿಲ್ಲ
ನೆಮ್ಮದಿಯ ಕುರುಹಿಲ್ಲ
ನೇರ ನಡೆಗೆ ಬೆಲೆಯಿಲ್ಲ
ಸುಳ್ಳೇ ಮೆರೆಯುತಿದೆಯಲ್ಲ
ಸಾವೂ ಕೂಡ ದೂರದಲೆಲ್ಲೊ ಇದೆಯಲ್ಲ
ಏನೂ ಮಾಡಲಾಗುತ್ತಿಲ್ಲ

ಮೇಲಿನ ಸಾಲುಗಳು ಪೋಲಾಯಿತಲ್ಲ !! :(
ಏನಾದರೂ ಎದುರಿಸಿದೆ ಬೇರೆ ದಾರಿಯಿಲ್ಲ !

ಶಂಕರಬಟ್ಟರ ಹೊತ್ತಿಗೆಗಳು ಮತ್ತು ಕನ್ನಡ ಸೊಲ್ಲರಿಮೆ

ಇತ್ತೀಚೆಗೆ ಬೆಳಕಿಗೆ ಬಂದಿರುವ ಶಂಕರಬಟ್ಟರ ಹೊತ್ತಿಗೆಗಳು ಕನ್ನಡ ನುಡಿಹುರುಪಿಗರಲ್ಲಿ ಹೊಸ ಉಂಕುಗಳ ಅಲೆ ಎಬ್ಬಿಸಿದೆ ಎಂದು ಹೇಳಬಹುದು. ಇದುವರೆಗೆ ಕನ್ನಡದಲ್ಲಿ ಬಂದ ನುಡಿಯರಿಗರ ಸೊಲ್ಲರಿಮೆ(ವ್ಯಾಕರಣ,grammar)ಯಲ್ಲಿರುವ ಕೊರತೆಗಳು ಮತ್ತು ಗೊಂದಲಗಳನ್ನು ಎತ್ತಿಹಿಡಿಯುವಲ್ಲಿ ಡಾಡಿ.ಎನ್.ಶಂಕರಬಟ್ಟರು ಬಹಳ ಮಟ್ಟಿಗೆ ಗೆದ್ದಿದ್ದಾರೆ. ನಮ್ಮ ನುಡಿಯಲ್ಲಿರುವ ಹಲವು ತಲೆಮೆಯ ವಿಶಯಗಳು ಹಿಂದಿನ ನುಡಿಯರಿಗರಿಗೆ ತಿಳಿಯದೇ ಇರುವುದು ಅಚ್ಚರಿ ಮತ್ತು ಅವರ ಸಕ್ಕದದ(ಸಂಸ್ಕ್ರುತ) ಸೊಲ್ಲರಿಮೆಯ ಕುರುಡು-ಕುರುಡಾಗಿ ಹಿಂಬಾಲಿಸಿರುವುದು ನಾಚಿಕೆಗೇಡು. ಕನ್ನಡಿಗರ ಬಾಯಲ್ಲಿ ಪದಗಳ,ಸೊಲ್ಲುಗಳ ಒಳಯೇರ್ಪಾಡು ಆಳವಾಗಿ ತಿಳಿಯಲು ಶಂಕರಬಟ್ಟರ ಹೊತ್ತಿಗೆಗಳನ್ನು ಓದಬೇಕು. ಒಂದು ತಲೆಮೆಯ ವಿಶಯ ಗೊತ್ತಾಗುವುದು ಕನ್ನಡದಂತ ನುಡಿಯಲ್ಲಿ ಅದರ ಆಡುಗರ ಬಾಯಲ್ಲಿ ಅದು ಹೇಗೆ ನಲಿಯುತ್ತದೆ ಎಂಬುದರ ಮೇಲೆ ಅದರ ಸೊಲ್ಲರಿಮೆ ಉಂಟಾಗುತ್ತದೆಯೆ ಹೊರತು ಬೇರೆ ಯಾವುದೋ ನಂಟಿಲ್ಲದ ನುಡಿ(ಸಕ್ಕದ)ಯಿಂದಲ್ಲ. ಕನ್ನಡದಂತ ನುಡಿ ಎಲ್ಲ ವರ್ಗದವರ ಮಾತಿನಲ್ಲಿ ಹೆಚ್ಚು ಪಳಗಿದ ನುಡಿ ಆದರೆ ಸಕ್ಕದ ಹಾಗಲ್ಲ ಅದು ಹೆಚ್ಚು ಮೇಲ್ವರ್ಗದವರ ಬರಹದಲ್ಲಿ( ಮಾತಿನಲ್ಲಿ ಕಡಿಮೆ)ದ್ದ ನುಡಿ. ಮತ್ತು ಅದರ ಸೊಲ್ಲರಿಮೆ ಪಾಣಿನಿ ಎಂಬ ನುಡಿಯರಿಗನ ಕಟ್ಟಳೆಯ ಮೇಲೆ. ಕನ್ನಡ ಜನರಿಂದ ಜನಪರವಾದ ನುಡಿ ಆದರೆ ಸಕ್ಕದ ಒಬ್ಬ ಸೊಲ್ಲರಿಗನ ಕಟ್ಟಳೆಯ ಮೇಲೆ ನಿಂತ ನುಡಿ. ಇದರಲ್ಲಿ ಯಾವುದು ಹೆಚ್ಚು-ಕಡಿಮೆಯಿಲ್ಲ ಆದರೆ ಹಲವರು ಕನ್ನಡದ ಮೇಲೆ ಸಕ್ಕದದ ಸೊಲ್ಲರಿಮೆಯೆಂಬ 'ಗದಾ ಪ್ರಹಾರ' ಮಾಡುತ್ತಿದ್ದಾರೆ. ಮತ್ತು ಸಕ್ಕದದ ಪದಗಳು ಮತ್ತು ಸೊಲ್ಲರಿಮೆ ಮಾತಿನಲ್ಲಿ ಬಳಸದ ಕನ್ನಡವನ್ನು ಕೀಳು ಎಂಬ ತಪ್ಪು ಅರಿವನ್ನು ಹೊಂದಿದ್ದಾರೆ.

ಕನ್ನಡಿಗರ ಏಳಿಗೆ ದಿಟವಾದ ಕನ್ನಡದ ಏಳಿಗೆಯಿಂದ ಹೊರತು ಸಕ್ಕದದ ಏಳಿಗೆಯಿಂದಲ್ಲ. ಇದನ್ನು ನಾವು ಅರಿಯಬೇಕಿದೆ.

ಬುಧವಾರ, ಡಿಸೆಂಬರ್ 24, 2008

ಬಾಳಿಗೊಂದು ತಿರುಳು

ನಿನ್ನ ಬರುವಿಕೆಯ ಗುಂಗಲ್ಲೇ

ಕಾದು ಬಸವಳಿದೆ ನಾನಿಲ್ಲೇ

ದಟ್ಟ ಇರುಳು ಸುತ್ತೆಲ್ಲ

ಹಗಲುಗನಸು ದಿನವೆಲ್ಲ

ಸಾಗಬೇಕಿದೆ ಬದುಕಿನ ಸೆಲೆ

ಬಾಳಿಗೊಂದು ತಿರುಳು ನಿನ್ನಿಂದಲೆ

ಮಂಗಳವಾರ, ಡಿಸೆಂಬರ್ 23, 2008

ಹಣೆಬರಹ

ಅವಿತು ಕುಳಿತ ಹಣೆಯಬರಹವೆ
ನಿನ್ನ ಮರೆಯಬಾರದೆಂದು
ಆಗಾಗ ನೋವ-ನಲಿವ ಇಣುಕಿಸುವೆ
ಕೆಲವರು ನಿನ್ನ ತಿದ್ದಿ
ಮುಂದೆ ಬಂದು ಆದರು ಮುತ್ಸದ್ದಿ
ತಿದ್ದಲಾರದೆ, ನಿನ್ನ ಮೀರದೆ
ಕಾಲು ಹಿಡಿದರು ಕೆಳಗೆ ಬಿದ್ದಿ
ನೀನು ಏನೇ ಬಗೆದರೂ
ಕೆಚ್ಚೆದೆಗಾರರು ಮೊಗಸದೆ ಬಿಡರು
ನಿನ್ನ ಮೆಟ್ಟಿ ಮುಂದೆ ಬಂದೆ ಬರುವರು