ಸೋಮವಾರ, ಅಕ್ಟೋಬರ್ 10, 2016

ಎರೆಯ-ಎರತಿ

ಶ್ರೀಮಾನ್, ಶ್ರೀಮತಿ ಬದಲು ಕನ್ನಡದ್ದೇ ಆದ ಎರೆಯ, ಎರತಿ ಬಳಸಬಹುದು.

ಹುರುಳು - eṟeya master, king, husband; eṟati a mistress

ಬಳಕೆ:-

೧. ತಮ್ಮ ಬರವನ್ನು ಎದುರುನೋಡುವವರು,
      ಎರತಿ ಮತ್ತು ಎರೆಯ _______


೨. ಇಲ್ಲಿ ನೆರೆದಿರುವ ಎಲ್ಲ ಎರತಿ ಮತ್ತು ಎರೆಯರೆಲ್ಲರಿಗು ತುಳಿಲ್

ಎರಡು ವಿಶಯಗಳು

'ನಮ್ಮ ಮೆಟ್ರೊ'ದಲ್ಲಿ ಇಂದು ಕಂಡಿದ್ದು. ನಾವು ಹೇಳುತ್ತಾ ಬಂದಿರುವ ಎರಡು ವಿಶಯಗಳನ್ನು 'ಸರಿ' ಎಂದು ಇದು ಎತ್ತಿ ತೋರಿಸುತ್ತಿದೆ.
೧. ಮಹಾಪ್ರಾಣದ ತೊಂದರೆ - ಇಲ್ಲಿ 'ಆದ್ಯತೆ' ಎಂಬುದನ್ನು 'ಆಧ್ಯತೆ' ಎಂದು ಬರೆಯಲಾಗಿದೆ. ಸಂಸ್ಕ್ರುತದ ಮೂಲ ಪದದಲ್ಲೇ ಮಹಾಪ್ರಾಣ ಇಲ್ಲ.
೨. Priority Seating ಗೆ ಸಂಸ್ಕ್ರುತದ 'ಆಧ್ಯತೆಯ ಆಸನ' ಎಂಬುದರ ಬದಲಾಗಿ ಎಲ್ಲರಿಗೂ ತಿಳಿಯುವ ಹಾಗೆ 'ಮೀಸಲು ಸೀಟು' ಇಲ್ಲವೆ 'ಮೀಸಲು ಕೂರ್ಕೆ' ಎಂದು ಮಾಡಬಹುದಿತ್ತು
ಮೊದಲನೆಯದು, ಕನ್ನಡಕ್ಕೆ ಬೇಡವಾದ ಮಹಾಪ್ರಾಣವನ್ನು ಕಯ್ಬಿಡುವುದು
ಎರಡನೆಯದು, ಕನ್ನಡದ್ದೇ ಆದ/ ಸುಳುವಾದ ಪದಗಳನ್ನು ಬಳಸುವುದು
ಇಶ್ಟೇ

ಬದುಕು - ಪದ ಬಳಕೆ

ಬದುಕು - ಇದನ್ನು 'ವಸ್ತು'/'ಆಸ್ತಿ' ಎಂಬ ಹುರುಳಿನಲ್ಲಿ ಬಳಸುವ ವಾಡಿಕೆ ನಮ್ಮ ಮಂಡ್ಯ-ಮಯ್ಸೂರಿನ ಹಳ್ಳಿಗಳಲ್ಲಿ ಬಳಕೆಯಲ್ಲಿದೆ.
೧. ನಮ್ ಮನೆ ಬದುಕು -ತಾಡ! ವೊಯ್ತುದೆ ಬತ್ತದೆ ಅನ್ನಂಗಿಲ್ಲ..ಎಂಗ್ ಬಿಸಾಕ್ ಅವ್ನೆ ನೋಡು...ವಸಿ ಗ್ಯಾನ ಇದ್ದದ
ಆದರೆ ಬರಹಗನ್ನಡದಲ್ಲಿ ಈ ಪದ ಹುಡುಕಿದರೂ ಸಿಗುವುದಿಲ್ಲ. ನಾವು ಈಗ ಇದನ್ನು ಬಳಸ ಹೋದರೆ 'ಸಂಸ್ಕ್ರುತದ ವಸ್ತು ಎಂಬ ಪದವನ್ನು ತೆಗೆದುಹಾಕಿ ಬದುಕು ಎಂಬ ಪದವನ್ನು ಬಳಸುತ್ತಿದ್ದೀರಿ..ಸಂಸ್ಕ್ರುತ ವಿರೋದಿ' ಎಂದು ಬೊಬ್ಬೆ ಹೊಡೆಯುತ್ತಾರೆ!!
ಇದರಿಂದಲಾದರೂ ತಿಳಿಯುವುದಿಲ್ಲವೆ? ಬರಹಗನ್ನಡ ಹೇಗೆ ಮಾತಿನಿಂದ ದೂರ ಹೋಗುತ್ತಿದೆ ಎಂಬುದು.

ಪಸ್ - ಪದ ಬಳಕೆ

ಮಯ್ಸೂರು-ಮಂಡ್ಯ ಕಡೆ 'ಪಸ್ಕಂಡದೆ' ಅಂದರೆ 'ಸವೆದು ಸವೆದು ಹರಿದು ಹೋಗಿದೆ' ಅಂತ ಹುರುಳಿದೆ.
ಎತ್ತುಗೆಗೆ:
೧. ನಿನ್ ಶರ್ಟಿನ ಮೊಳಸಂದೆ ತಂವು ಪಸ್ಕಂಡದೆ
೨. ಏನ್ ಇಂಗ್ ಪಸ್ಕಂಡದೆ ? ನೋಡ್ನಿಲ್ವ?

ಪದನೆರಕೆಯಲ್ಲಿ ಸಿಗದ ಪದಗಳು -ವದಗು

ಮಂಡ್ಯದಲ್ಲಿ 'ಓಡು' ಎಂಬುದಕ್ಕೆ 'ಒದಗು/ವದಗು' ( ವದೀಕ - ಹಿಂಬೊತ್ತಿನ ರೂಪ)ಬಳಸಲಾಗುತ್ತದೆ. ಆದರೆ ಇದನ್ನು ನಾನು ಯಾವ ಪದನೆರಕೆಯಲ್ಲೂ ಕಂಡಿಲ್ಲ.
೧. 'ವದೀಕ/ಒದೀಕ ಬಂದೆ' (ಓಡಿಕೊಂಡು ಬಂದೆ)
೨. 'ಒದಗು!! ಒದಗು!! ವೊಲ್ದೊಳಿಕೆ ಮರಿ ನುಕ್ಕಂಡವೆ' (ಓಡು! ಓಡು! ಹೊಲದೊಳಗೆ ಮರಿಗಳು ನುಗ್ಗಿಕೊಂಡಿವೆ)

ಹೀಗೊಂದು ಪೇಚಾಟ

ಮಯ್ಸೂರಿನ ಒಂದು ತಿಂಡಿಮನೆಯಲ್ಲಿ ಟೀ ತಗೊಂಡು ಹೀರುತ್ತಾ ಆಚೆ ಬಂದೆ. ಅಲ್ಲಿ ಇನ್ನು ಮೂರು ಮಂದಿ ಕೆಲವು ಹಾಳೆಗಳನ್ನು ಹಿಡಿದುಕೊಂಡು ಮಾತಾಡುತ್ತಿದ್ದರು. ಅದು ಯಾವುದೊ ಒರೆತದ 'ಕೇಳ್ವಿ ಹಾಳೆ' ಅಂತ ನನಗೆ ಅನ್ನಿಸಿತು.
ಕೊಂಚ ಹೊತ್ತಿನಲ್ಲೇ ಅವರು ಹಯ್ ಸ್ಕೂಲಿನ ಕಲಿಸುಗರು ಎಂಬುದು ತಿಳಿಯಿತು. ಹುರುಪು ತಾಳಲಾರದೆ ನಾನು ಹಾಳೆಗಳನ್ನು ಅವರಿಂದ ಕೇಳಿ ಪಡೆದು ಕಣ್ಣಾಡಿಸಿದೆ. ಅದು ಹತ್ತನೆಯ ತರಗತಿಯ ಕೇಳ್ವಿಹಾಳೆ ಎಂಬುದು ತಿಳಿಯಿತು.
ಅದರ ತಲೆಬರಹದಲ್ಲಿದ್ದ 'ಸಂಕಲನಾತ್ಮಕ ಮೌಲ್ಯಮಾಪನ' ಸಾಲನ್ನು ನೋಡಿ ಏನೂ ತಿಳಿಯದೆ ಪೇಚಿಗೆ ಸಿಲುಕಿದೆ. ತಡೆಯಲಾರದೆ ಆ ಮೂರು ಮಂದಿಯ ಕಡೆ ತಿರುಗಿ-
"ಏನ್ ಸಾರ್, ಇದು ಸಂಕಲನಾತ್ಮಕ ಮೌಲ್ಯಮಾಪನ ಅಂದ್ರೆ ..ಇದುವರೆಗೂ ನಾನು ಕೇಳೇ ಇಲ್ಲ" ಅಂದೆ.
ಆ ಮೂವರಲ್ಲಿ ಇಬ್ಬರು ಮುಕ-ಮುಕ ನೋಡಿಕೊಂಡರು. ಕೊಂಚ ಹೊತ್ತು ಅವರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ನನ್ನ ಹಾಗೆ ಅವರು ಪೇಚಿಗೆ ಸಿಲುಕಿಕೊಂಡರು ಅಂತ ನನಗೆ ಅನ್ನಿಸಿತು.
ಆ ಇಬ್ಬರು ಮೂರನೆಯವರನ್ನು ಕೇಳಿದರು ..ಆಗ ಆ ಮೂರನೆಯವರು-
"ಅದೇ ಸಾರ್, ಇಂಗ್ಲಿಶಲ್ಲಿ Summative Evaluation ಅಂತ ಹೇಳ್ತಿವಲ್ಲ..ಅದೇ"
ತುಂಬ ಪೇಚಿಗೆ ಸಿಲುಕಿದ್ದ ನನಗೆ ಕೊಂಚ ಉಸಿರಾಡಿದಂತಾಯಿತು.
ಇಂಗ್ಲಿಶ್ ಪದಗಳಿಗೆ ಸಂಸ್ಕ್ರುತ ಪದವನ್ನು ಕಟ್ಟಿ ಕನ್ನಡಕ್ಕೆ ತಂದಿದ್ದೇವೆ ಅಂತ ತಪ್ಪು ತಿಳಿವಳಿಕೆಯಲ್ಲಿ ತೇಲುತ್ತಾ..ಕನ್ನಡವನ್ನು ಕನ್ನಡಿಗರಿಂದ ಇನ್ನಶ್ಟು ದೂರ ಮಾಡುತ್ತ... ನಮ್ಮ ನಾಲಿಗೆ, ಮೆದುಳುಗಳನ್ನು ನಾವೇ ಕತ್ತರಿಸಿಕೊಳ್ಳುತ್ತಾ ಇದ್ದೀವೆ ಅಂತ ಅನ್ನಿಸಿತು.
ಅಶ್ಟು ಹೊತ್ತಿಗೆ ಟೀ ಮುಗಿದಿತ್ತು... ಹೊಟ್ಟೆಯಲ್ಲಿ ಬೇವಸವಾಯಿತು.

ಕಾಡಾರಂಬ ಮತ್ತು ನೀರಾರಂಬ

ನಂಜನಗೂಡಿನ ಹತ್ತಿರ ಇರುವ ಸುತ್ತೂರಿನಲ್ಲಿ ೧೫೮೬ ರಲ್ಲಿ ಕೆತ್ತಲಾಗಿದೆ ಎಂದು ಹೇಳಲಾದ ಈ ಕಲ್ಬರಹದಲ್ಲಿ 'ಕಾಡಾರಂಬ' ಮತ್ತು 'ನೀರಾರಂಬ' ಎಂಬ ಪದಗಳನ್ನು ಬಳಸಲಾಗಿದೆ.
ಕಾಡಾರಂಬ - Dry cultivation
ನೀರಾರಂಬ - Wet cultivation
ಅಂದರೆ ೧೬ನೇ ನೂರೇಡಿನ ಬರಹಗಳಲ್ಲೂ 'ವ್ಯವಸಾಯ', 'ಕೃಷಿ' ಎಂಬ ಸಂಸ್ಕ್ರುತ ಪದಗಳು ಬಳಕೆಯಲ್ಲಿರಲಿಲ್ಲ. ಅಂದಿಗೂ 'ಆರಂಬ' ಎಂಬ ಪದವೇ ಮಾತಿನಲ್ಲೂ ಬರಹದಲ್ಲೂ ಬಳಕೆಯಲ್ಲಿದ್ದಿರಬೇಕು


ಕಾರು ಮತ್ತು ಹಯನು

ಮಯ್ಸೂರು-ನಂಜನಗೂಡು-ಮಳವಳ್ಳಿ-ನರಸೀಪುರ-ಚಾಮರಜನಗರದ ಊರುಗಳಲ್ಲಿ ಸಿಕ್ಕಿರುವ ೧೫ ಮತ್ತು ೧೬ ನೇ ನೂರೇಡಿನ(ಅಂದರೆ ಕನ್ನಂಬಾಡಿ ಮತ್ತು ಕಬಿನಿ ಕಟ್ಟೆಗಳನ್ನು ಕಟ್ಟುವ ಮೊದಲೇ) ಕಲ್ಬರಹಗಳಲ್ಲಿ ಬತ್ತದ ಎರಡು ಬೆಳೆಯ ಬಗ್ಗೆ ಹೇಳಲಾಗಿದೆ. ಕಾರ್ ಬತ್ತ ಮತ್ತು ಹಯ್ನ್ ಬತ್ತ
೧. ಕಾರ್ ಬತ್ತ - ಹೆಸರು ಹೇಳುವಂತೆ ಮುಂಗಾರಿನ (ಮುನ್+ಕಾರ್) ಮಳೆಯ ಹುಯ್ಯುವ ಕಾಲದಲ್ಲಿ ಬೆಳೆಯುವ ಬತ್ತ (ಕಾರ್ತಿಕ ತಿಂಗಳಿ ಕಯ್ಯಿಗೆ ಬರುವ ಬೆಳೆ)
೨. ಹಯ್ನ್/ಅಯ್ನ್ ಬತ್ತ - ಮುಂಗಾರು ಮಳೆ ಇಲ್ಲದ ಹೊತ್ತಿನಲ್ಲಿ ಅಂದರೆ ಹಯ್ನ್/ಹಯಿನು ( < ಸಂ. ಪಯಸ್) ನೀರನ್ನು ಅಂದರೆ ಕೆರೆಯ ನೀರನ್ನು ಬಳಸಿಕೊಂಡು ಬೆಳೆಯುವ ಬತ್ತ (ವಯ್ಶಾಕ ತಿಂಗಳಿಗೆ ಕಯ್ಯಿಗೆ ಬರುವ ಬೆಳೆ)
ಅಂದರೆ ಸುಮಾರು ೧೫ನೇ ನೂರೇಡಿನಲ್ಲೇ ಕಾವೇರಿ-ಕಪಿಲೆಯ ಕಣಿವೆಯ ಈ ನಾಡಿನಲ್ಲಿ ಎರಡು ಬತ್ತದ ಬೆಳೆಯನ್ನು ತೆಗೆಯುತ್ತಿದ್ದರು ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು.

ಹಂಗಿಸು - ಇದರ ಬಗ್ಗೆ

ಹಂಗಿಸು/ಅಂಗಿಸು - ಇದ ಮಯ್ಸೂರು-ಮಂಡ್ಯದಲ್ಲಿ ಬಳಕೆಯಲ್ಲಿದೆ
೧. ಯಾಕ್ ಅಂಗ್ (ಹಂ)ಅಂಗಿಸ್ತಿಯ?
೨. ಹಂಗಿಸಿದರೂ ಮಂಗತನ ಬಿಡಲಿಲ್ಲ
೩. ಬೆಳೆ (i.e First crop or Kaaru Crop) ಹೊಗಳಿಸಿ ಉಣ್ಣಬೇಕು; ಹಯನು(i.e second crop) ಹಂಗಿಸಿ ಉಣ್ಣಬೇಕು
ಹಂಗಿಸು ಎಸಕಪದ
(ದೇ) ಮೂದಲಿಸು, ಹೀಯಾಳಿಸು, ಕೀಳಾಗಿ ಕಾಣು

ಶನಿವಾರ, ಸೆಪ್ಟೆಂಬರ್ 17, 2016

ಒಳ್ಳೆಯ ಬಾಳಾಟ ಎಂದರೇನು? ಹೇಗೆ?


 [ಈ ಬರಹದಲ್ಲಿ ಬರುವ ಬ್ರಾಹ್ಮಣ, ಶೂದ್ರ, ವೈಶ್ಯ ಮತ್ತು ಕ್ಶತ್ರಿಯ ಎಂಬ ಪದಗಳು ಯಾವುದೇ ವ್ಯಕ್ತಿ ಇಲ್ಲವೆ ಮಂದಿಗೆ ತಗುಲಿಹಾಕಿಕೊಂಡಿಲ್ಲ ಬದಲಾಗಿ ಅವುಗಳೆಲ್ಲವನ್ನು ಬೇರೆ ತೆರದಲ್ಲಿ ಇಲ್ಲಿ ನೋಡಲಾಗಿದೆ ಅಂದರೆ ಅವುಗಳನ್ನು ’ಕುರಿಪು’ಗಳು (concepts) ಎಂದು ಬಗೆದು ಈ ಬರಹವನ್ನು ಮಾಡಲಾಗಿದೆ]

ಅಡಿಮಟ್ಟದಲ್ಲಿ ಎಲ್ಲ ಮಾನವರು ಮಯ್(body) ಮತ್ತು ಮನಸ್ಸನ್ನು(mind) ಹೊಂದಿದವರಾಗಿದ್ದಾರೆಂದು ನಮಗೆಲ್ಲ ತಿಳಿದಿರುವ ವಿಶಯ. ನಾವು ನಮ್ಮ ಮಯ್ಯನ್ನು ಹದುಳವಾಗಿ ಇಟ್ಟುಕೊಳ್ಳಲು ಇಲ್ಲವೆ ಹಸಿವನ್ನು ನೀಗಿಕೊಳ್ಳಲು ನಮ್ಮ ನಮ್ಮ ಮಟ್ಟಿಗೆ ತಿಂಡಿ/ಊಟವನ್ನು ಮಾಡುತ್ತೇವೆ. ಹಾಗೆಯೇ ಮನಸ್ಸನ್ನು ಅಂಕೆಯಲ್ಲಿಟ್ಟುಕೊಳ್ಳಲು ಕೂಡಣದ ಮಟ್ಟದಲ್ಲಿ ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡು ಬದುಕು ನಡೆಸಿಕೊಂಡು ಬಂದಿದ್ದೇವೆ. ನಮ್ಮ ಸುತ್ತ ಇರುವ ಗಿಡ, ಮರ,ಕಾಡು, ಹೊಳೆ, ಗಾಳಿ, ಬೆಟ್ಟ, ಬೆಳೆ, ಕಾಳು, ಉಸುರಿಗಳು ಮತ್ತಿತರೆ ಬದುಕುಗಳು ನಮ್ಮನ್ನು ನೇರವಾಗಿ ಇಲ್ಲವೆ ನೇರವಲ್ಲದ ತರದಲ್ಲಿ ನಮ್ಮ ಊಟ-ತಿಂಡಿ, ನಡವಳಿಕೆ, ನಂಬಿಕೆಗಳ ಮೇಲೆ ತಮ್ಮ ಒತ್ತನ್ನು ಬೀರುತ್ತಾ ಬಂದಿವೆ. ಇತ್ತೀಚೆಗೆ, ಅಂದರೆ ೨೦-೩೦ ವರುಶಗಳಲ್ಲಿ ಕೂಡಣದ, ಹಣಕಾಸಿನ, ನಂಬಿಕೆಗಳ ಹೀಗೆ ಹತ್ತು ಹಲವು ವಲಯಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಕೆಲವರು ಈ ಬದಲಾವಣೆಗಳ ಪರವಿದ್ದರೆ ಇನ್ನು ಕೆಲವರು ಈ ಬದಲಾವಣೆಗಳ ಇದಿರಾಗಿ ನಿಂತಿದ್ದಾರೆ. ಹೆಚ್ಚಿನವರು ಈ ಬದಲಾವಣೆಗಳನ್ನು ಅರೆಬರೆ ತಿಳಿದುಕೊಂಡು ತೀರ ಗೋಜಿಗೆ ಹೋಗದೆ ಬರುವುದನ್ನು ಒಪ್ಪಿಕೊಂಡು ಹೊತ್ತನ್ನು ದೂಡುತ್ತಿದ್ದಾರೆ. ಈ ಬದಲಾವಣೆಗಳನ್ನು ಅರಿತುಕೊಳ್ಳಲು ಮತ್ತು ಅವುಗಳ ಮುಂದಿನ ಜಾಡನ್ನು ಪತ್ತೆ ಹಚ್ಚಲು ನಮಗೆ ಕೆಲವು ಕುರಿಪುಗಳ ನೆರವು ಬೇಕಾಗುತ್ತದೆ.  ಅಂತಹ ಕುರಿಪುಗಳ ಮೂಲಕ ಹೊಸನೋಟವನ್ನು ಮತ್ತು ಹೊಳಹುಗಳನ್ನು ನೀಡುವುದೇ ಈ ಬರಹದ ಮುಕ್ಯ ಗುರಿಯಾಗಿದೆ.

ಮೊದಲೇ ಹೇಳಿದಂತೆ ಬುಡಮಟ್ಟದಲ್ಲಿ ನಮಗಿರುವುದು ಮಯ್ ಮತ್ತು ಮನಸ್ಸು. ಅಂದರೆ ನಾವೆಲ್ಲರೂ ನಮ್ಮೊಳಗೆ ನಾವು ಶೂದ್ರ(body) ಮತ್ತು ಬ್ರಾಹ್ಮಣ(mind) ಎಂಬ ಕುರಿಪುಗಳನ್ನು ಒಳಗೊಂಡಿದ್ದೇವೆ. ನಮ್ಮ ಬದುಕನ್ನು ಚೆನ್ನಾಗಿ ನಡೆಸಲು ನಮಗೆ ಮಯ್ ಮತ್ತು ಮನಸ್ಸುಗಳೆರಡೂ ಬೇಕಾಗಿದೆಯಲ್ಲದೆ ಅವುಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ಒಂದು ತನ್ನೆದುರ‍್ತನವಿದೆ. ಅದೇನೆಂದರೆ ಒಂದಕ್ಕೆ ಗಮನ ಕೊಡಲು ಹೋದರೆ ಇಲ್ಲವೆ ಬಳಸಿಕೊಂಡರೆ ಇನ್ನೊಂದನ್ನು ಚನ್ನಾಗಿ ಬಳಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಆ ನಿಟ್ಟಿನಲ್ಲಿ ಇವುಗಳ ಬೇಕುಗಳು ಒಂದಕ್ಕೊಂದು ಇದಿರಾಗಿವೆ. ಎತ್ತುಗೆಗೆ, ನಾವು ಗುದ್ದಲಿ ತೆಗೆದುಕೊಂಡು ಹಳ್ಳವನ್ನು ತೋಡುವಾಗ ನಮಗೆ ಬೇರೆ ಚಿಂತನೆಗಳನ್ನು ನಡೆಸಲಾಗುವುದಿಲ್ಲ. ಅಂದರೆ ನಮ್ಮ ಮಯ್ಯನ್ನು ಹೆಚ್ಚು ಹೆಚ್ಚು ಬಳಸಿದಂತೆ, ದುಡಿಸಿಕೊಂಡಂತೆ ನಮ್ಮ ಮನಸ್ಸನ್ನು ಹೆಚ್ಚು ಹೆಚ್ಚು ಬಳಸಲಾಗುವುದಿಲ್ಲ. ಅಂದರೆ ದುಡಿಮೆಯನ್ನು ಮಾಡದೇ ನಮಗೆ ’ಹೇಳುವ’ವನೊಬ್ಬ ಬೇಕಾಗುತ್ತಾನೆ.  ಆ ಕಡೆಯಿಂದ ನೋಡಿದರೂ ಅಶ್ಟೆ, ಅಂದರೆ ನಾವು ಆಳವಾದ ಚಿಂತನೆಗಳನ್ನು ಗಮನವಿಟ್ಟು ಮಾಡಬೇಕಾಗಿ ಬಂದಾಗ ಯಾರೂ ಇಲ್ಲದೆ ಇರುವ ಒಂದು ಕಡೆ ಕುಳಿತು ಮಯ್ಯನ್ನು ಹೆಚ್ಚು ದುಡಿಸಿಕೊಳ್ಳದೇ ಇರಬೇಕಾಗುತ್ತದೆ. ಅಂದರೆ ನಮ್ಮೊಳಗಿರುವ ಶೂದ್ರ ಮತ್ತು ಬ್ರಾಹ್ಮಣಗಳೆಂಬ ಕುರಿಪುಗಳು ಅವುಗಳ ಬಳಕೆಯ ನೆಲೆಯಲ್ಲಿ ಒಂದಕ್ಕೊಂದು ಎದುರಾಗಿವೆ.

ಹಾಗಾದರೆ ನಾವು ಏನು ಮಾಡಬೇಕು? ಬರೀ ಮಯ್ಯನ್ನೇ ಬಳಸಿದರೆ ಮನಸ್ಸಿನ ಇಲ್ಲವೆ ಚಿಂತನೆಯ ಕಸುವನ್ನು ಚೆನ್ನಾಗಿ ಬಳಸಿಕೊಳ್ಳಲಾಗುವುದಿಲ್ಲ. ಇಲ್ಲವೆ ಮಯ್ಯನ್ನು ಬಳಸದೇ ಬರೀ ಮನಸ್ಸನ್ನು ಬಳಸುತ್ತಿದ್ದರೆ ನಮ್ಮ ಮಯ್ ಜಡ್ಡು ಹಿಡಿದು ಬೇನೆಗಳ ತುತ್ತಾಗುತ್ತದೆ. ನಾವು ದಿನಕ್ಕೆ ಒಂದು ಗಂಟೆ ನಡೆಯುವಶ್ಟಾದರೂ ಶೂದ್ರತನವನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಮಾಂಜುಗರು ಸಲಹೆ ನೀಡುತ್ತಾರೆ.  ತನ್ನೇಳಿಗೆ, ಮಯ್ಯೇಳಿಗೆ ಅಲ್ಲದೆ ಮತ್ತಿನ್ನಾವ ಕೋನದಿಂದ ನೋಡಿದರೂ ನಾವು ನಮ್ಮಲ್ಲಿರುವ ಶೂದ್ರ ಮತ್ತು ಬ್ರಾಹ್ಮಣ ಪರಿಚೆಗಳನ್ನು ಹದವಾಗಿ ಬೆರೆಸಿ ಜಾಣತನದಿಂದ ಅದನ್ನು ಬಳಸಿಕೊಳ್ಳಬೇಕಾಗುತ್ತದೆ.  ಇವೆರಡನ್ನು ಸರಿದೂಗಿಸುಕೊಂಡು ಹೋಗುವುದರಲ್ಲೇ ಇರುವುದು ಒಳ್ಳೆ ಬಾಳಾಟ ನಡೆಸುವ ಗುಟ್ಟು/ಜಾಣ್ಮೆ.

ಆದರೆ ಈಗ ನಡೆಯುತ್ತಿರುವುದೇ ಬೇರೆ. ಇತ್ತೀಚಿನ ೨೦-೩೦ ಏಡುಗಳಲ್ಲಿ ನಮ್ಮ ಮಯ್ಯ ಬಳಕೆ ತೀರ ಕಡಿಮೆಯಾಗಿದೆ ಅಲ್ಲದೆ ಮನಸ್ಸಿನ ಬಳಕೆ ಹೆಚ್ಚಾಗಿ ಹಲವು ಎಡವಟ್ಟುಗಳಿಗೆ ದಾರಿಮಾಡಿಕೊಟ್ಟಿದ್ದೇವೆ. ನಾವು ಹೇಗೆ ನಮ್ಮ ಸರಕೊಲವನ್ನು(materialism) ಇಲ್ಲವೆ ತೆವಲನ್ನು ತೀರಿಸಿಕೊಳ್ಳಬಹುದೆಂಬುದರ ಬಗ್ಗೆ ಹೆಚ್ಚು ಹೆಚ್ಚು ಚಿಂತನೆಯನ್ನು ನಡೆಸುತ್ತಿದ್ದೇವೆ. ಅಂದರೆ ನಮ್ಮಲ್ಲಿ ನಾವು ’ವೈಶ್ಯ’ (ಮಾರಾಟ, ವ್ಯಾಪಾರ, commerce) ಎಂಬ ಹೊಸ ಕುರಿಪನ್ನು ಬರಮಾಡಿಕೊಂಡಿದ್ದೇವೆ. ಈ ವೈಶ್ಯತನಕ್ಕೆ ಇಂಬುಕೊಡಲು ಇಲ್ಲವೆ ಅದನ್ನು ಕಾಪಾಡಿಕೊಂಡು ಹೋಗಲು ’ಕ್ಶತ್ರಿಯ’(ಆಳ್ಮೆ, ರಾಜಕೀಯ, politics) ಎಂಬ ಇನ್ನೊಂದು ಕುರಿಪನ್ನು ಸಾಕುತ್ತಿದ್ದೇವೆ. ಹೆಚ್ಚು ಹೆಚ್ಚು ಮಾರಾಟದಿಂದ ನಾವು ಸರಕುಗಳಿಗೆ ತೊತ್ತಾಗಿ ಸರಕುಗಳಲ್ಲಿ ’ದೈವತ್ವ’ವನ್ನು ಕಾಣಲು ಹೊರಟಿದ್ದೇವೆ. ಮಾರುಕಟ್ಟೆಯೇ ನೆಮ್ಮು, ಸರಕುಗಳೇ ದೇವರುಗಳು ಯಾಕಂದರೆ ಸರಕುಗಳಿಂದ ನಮಗೆ ಬೇಕಾದ ನಲಿವನ್ನು ಪಡೆದುಕೊಳ್ಳಬಹುದು ಎಂದು ನಾವು ನಂಬತೊಡಗಿದ್ದೇವೆ. ಮಾರುಕಟ್ಟೆಯಲ್ಲೇ ನಮ್ಮ ಎಲ್ಲ ತೊಂದರೆಗಳಿಗೆ, ಬೇಕುಗಳಿಗೆ ಬಗೆಹರಿಕೆಗಳು ಸಿಗುತ್ತವೆ ಎಂದು ನಂಬತೊಡಗಿದ್ದೇವೆ.

ಹೀಗೆ, ಮಾರಾಟ(ವೈಶ್ಯ) ಮತ್ತು ಆಳ್ಮೆ(ಕ್ಶತ್ರಿಯ) ನಮ್ಮ ಇಂದಿನ ಬದುಕಿನಲ್ಲಿ ಹೆಚ್ಚುಗಾರಿಕೆಯನ್ನು ಪಡೆಯತೊಡಗಿವೆ. ಆದ್ದರಿಂದ ನಾವು ಇಲ್ಲವೆ ನಮ್ಮಲ್ಲಿ ಹೆಚ್ಚಿನವರು ನಮ್ಮಲ್ಲಿರುವ ’ಶೂದ್ರ’ ಎಂಬ ಕುರಿಪನ್ನು ಕಡೆಗೆಣಿಸಲು ಇಲ್ಲವೆ ಮರೆಯಲು ಶುರು ಮಾಡಿದ್ದೇವೆ.  ’ಶೂದ್ರ’ತನವನ್ನು ಮರೆಯುವುದು ಎಂದರೆ, ನಮ್ಮ ಮಯ್ಯಿಗೆ ಬೇಕಾದ ದುಡಿಮೆಯನ್ನು ಕೊಡದೆ ಅದು ಹಲವು ಬೇನೆಗಳ ತವರೂರಾಗುವಂತೆ ನಡೆದುಕೊಳ್ಳುವುದು ಎಂದು. ಬೇನೆಗಳನ್ನು ಸರಿಪಡಿಸಲು ಆರಯ್ಕೆ ಮತ್ತು ಮದ್ದುಗಳ ಮಾರಾಟದ ಏರ‍್ಪಾಟನ್ನು ಮಾಡಿಕೊಂಡಿದ್ದೇವೆ. ಕಯ್ಗೆ, ಕಾಲಿಗೆ, ಕರುಳಿಗೆ, ಉಗುರಿಗೆ, ತೊಗಲಿಗೆ, ಕಿವಿಗೆ ಒಬ್ಬೊಬ್ಬರಂತೆ ಮದ್ದುಗಾರರು ಇಲ್ಲವೆ ಮದ್ದುಗಳು ಇಂದು ದೊರೆಯುತ್ತಾರೆ/ತ್ತವೆ.

ಇದಲ್ಲದೆ ನಾವು ನಮ್ಮೊಳಗಿರುವ ’ಬ್ರಾಹ್ಮಣ’ ಎಂಬ ಕುರಿಪನ್ನು ಕೂಡ ಸರಿಯಾಗಿ ಬಳಸಿಕೊಳ್ಳದೆ ಹುಚ್ಚು ಹೊಳೆಯಂತೆ ಎಲ್ಲೆಂದರಂತೆ ನಮ್ಮ ಚಿಂತನೆಯನ್ನು ಹರಿಯಬಿಡುತ್ತಿದ್ದೇವೆ. ನಮ್ಮ ಚಿಂತನೆಗಳನ್ನು ಸರಿಯಾದ ತೆರದಲ್ಲಿ ಮತ್ತು ಸರಿಯಾದ ಗುರಿಯೆಡೆಗೆ ಕೊಂಡೊಯ್ಯಲು ನಮಗೆ ಆಗುತ್ತಿಲ್ಲ ಯಾಕಂದರೆ ನಾವು ಸರಕುಗಳ ಹೊಳೆಯಲ್ಲಿ ಮತ್ತು ಬಂದವರ ಹಾಗೆ ತೇಲುತ್ತಿದ್ದೇವೆ. ಹಾಗಾಗಿ ನಾವು ದಿಕ್ಕೆಟ್ಟವರಂತೆ ನಡೆದುಕೊಳ್ಳಲು ತೊಡಗಿದ್ದೇವೆ. ಸರಕುಗಳು ನಮ್ಮನ್ನು ಕುಣಿಸುತ್ತಿವೆ. ನಾವು ಅವುಗಳ ತೊತ್ತಾಗುತ್ತಿದ್ದೇವೆ.

ನಮ್ಮೊಳಗಿನ ಬ್ರಾಹ್ಮಣವನ್ನು ನಾವು ತನ್ನೇಳಿಗೆ(ಅದ್ಯಾತ್ಮ)ಗೆ ಬಳಸಿಕೊಳ್ಳಬೇಕಾಗಿತ್ತು ಆದರೆ ನಮ್ಮ ಚಿಂತನೆಗಳು ಸರಕುಗಳು ಮತ್ತು ಅವುಗಳ ಮಾರಾಟದ ಏರ‍್ಪಾಟುಗಳು ಮತ್ತು ಹೆಚ್ಚು ಹೆಚ್ಚು ಮಂದಿಯನ್ನು ಕೊಳ್ಳುಗರನ್ನಾಗಿಸುವತ್ತ ಸಾಗಿದೆ.  ಹೊಸಗಾಲದ ಅರಿಮೆ ಮತ್ತು ಚಳಕಗಳನ್ನು ಇದಕ್ಕಾಗಿ ಸಿದ್ದಪಡಿಸಲಾಗುತ್ತಿದೆ. ಕೊಳ್ಳುಬಾಕತನವು ನಮ್ಮನ್ನೇ ಕೊಳ್ಳುವ ಮಟ್ಟಕ್ಕೆ ನಾವೇ ದೂಡಿಕೊಳ್ಳುತ್ತಿದ್ದೇವೆ. ಹೀಗಿರುವಾಗ ಇದಕ್ಕೆಲ್ಲ ಪರಿಹಾರವೇನು ಎಂಬ ಕೇಳ್ವಿ ತಾನಾಗಿಯೇ ಏಳುತ್ತದೆ.

ಈಗಾಗಲೆ ನಮ್ಮ ಹಿರಿಯರು ಇದಕ್ಕೆ ಸರಿಯಾದ ದಾರಿಯನ್ನು ಹಾಕಿಕೊಟ್ಟು ಹೋಗಿದ್ದಾರೆ. ಆದರೆ ನಾವು ಆ ದಾರಿಯನ್ನು ತುಳಿಯದೇ ಇದ್ದುದರಿಂದ ಅಲ್ಲಿ ಗಿಡ-ಗಂಟೆ, ಮುಳ್ಳು, ಸೆತ್ತೆ-ಸೆದೆಗಳು ಬೆಳೆದುಕೊಂಡಿದೆ. ಅದನ್ನು ನಾವು ಕಿತ್ತು ಹಾಕಿ ಆ ದಾರಿಯನ್ನು ಮತ್ತೆ ಅಣಿಗೊಳಿಸಕೊಳ್ಳಬೇಕು. ಆ ದಾರಿಯನ್ನು ತುಳಿದು ತುಳಿದು ಮಟ್ಟ ಮಾಡಿ ಮುಂದೆ ಬರುವವರು ಕೂಡ ಆ ದಾರಿಗೆ ಬರಲು ಅನುವು ಮಾಡಿಕೊಡಬೇಕು. ಹಾಗಾದರೆ ಆ ದಾರಿಯೇನು?

ನಾವು ಬರಮಾಡಿಕೊಂಡಿರುವ ವೈಶ್ಯ ಮತ್ತು ಕ್ಶತ್ರಿಯ ಎಂಬ ಕುರಿಪುಗಳನ್ನು ನಾವು ಕೊಂದು ಹಾಕಬೇಕು; ಇಲ್ಲವಾದರೆ ಅವುಗಳ ಒತ್ತರವನ್ನು ತುಂಬ ಕಡಿಮೆ ಮಾಡಬೇಕು. ನಮ್ಮಲ್ಲಿರುವ ಶೂದ್ರತನಕ್ಕೆ ನಾವು ಸರಿಯಾದ ಮನ್ನಣೆ ಕೊಡಬೇಕು. ನಮ್ಮಲ್ಲಿರುವ ಶೂದ್ರತನವನ್ನು ಉಳಿಸಿಕೊಳ್ಳಬೇಕಾದರೆ ತಕ್ಕಮಟ್ಟಿಗಾದರೂ ನಾವು ಮಯ್ ದುಡಿಮೆಯನ್ನು ಮಾಡಲೇಬೇಕು. ಇದರಿಂದ ಮಾತ್ರ ನಾವು ನಮ್ಮ ಮಯ್ಯನ್ನು ಹದುಳವಾಗಿ ಇಟ್ಟುಕೊಳ್ಳಬಹುದು. ನಮ್ಮಲ್ಲಿರುವ ಬ್ರಾಹ್ಮಣತನಕ್ಕೆ ಸರಿಯಾದ ದಿಕ್ಕು ಮತ್ತು ಗುರಿಗಳನ್ನು ತೋರಬೇಕು ಅಂದರೆ ಮನಸ್ಸನ್ನು ಹೆಚ್ಚು ತನ್ನೇಳಿಗೆಯೆಡೆಗೆ ಕೊಂಡೊಯ್ಯಬೇಕು.  ತನ್ನೇಳಿಗೆಯಲ್ಲಿ ತನ್ನ ಸುತ್ತಲಿನ ಏಳಿಗೆಯನ್ನು ಒಳಗೊಳ್ಳುವಂತೆ ಮಾಡಬೇಕು. ತನ್ನೇಳಿಗೆಯಲ್ಲಿ ನೆಮ್ಮದಿಯಿದೆ; ತಣಿವಿದೆ; ತಾಳ್ಮೆಯಿದೆ. ಇದನ್ನೇ ಹನ್ನೆರಡನೇ ನೂರೇಡಿನ ಶರಣರು ಮಾಡಿ ತೋರಿಸಿದರು. ಈ ವಚನವು ಇದೇ ಚಿಂತನೆಯನ್ನು ಎತ್ತಿಹಿಡಿಯುತ್ತದೆ.
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ  
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ 
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ 
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
ಇದಲ್ಲದೆ, ಶರಣರಲ್ಲಿನ ಕಾಯಕವೇ ಕೈಲಾಸ(ದುಡಿಮೆ), ದಾಸೋಹ( ಹೆಚ್ಚಿನ ಹಣವನ್ನು/ಗಳಿಕೆಯನ್ನು ಇಲ್ಲದವರ ಬಳಕೆಗೆ ಕೊಡುವುದು), ಹೆಚ್ಚು ಗಳಿಕೆಗೆ ಆಸೆ ಪಡದಿರುವುದು, ತನ್ನೇಳಿಗೆಯ ಮಾತುಗಳನ್ನು ವಚನಗಳ ಮೂಲಕ ಕೂಡಣದಲ್ಲಿ ಹಂಚಿಕೊಳ್ಳುವುದು – ಇವೆಲ್ಲದರ ಮೂಲಕ ಎಲ್ಲರೂ ಅವರವರ ಬ್ರಾಹ್ಮಣ ಮತ್ತು ಶೂದ್ರತನಗಳ ಹದವಾದ ಬೆರಕೆಯನ್ನು ಸಾದಿಸಿವುದು. ಇದೇ ಶರಣರು ಕಂಡುಕೊಂಡ ಹೊಳಹು ಇಲ್ಲವೆ ಬಗೆಹರಿಕೆ.

ಆದರೆ, ಹೊಸಗಾಲದ ಅಳ್ಮೆ ಮತ್ತು ಮಾರಾಟಗಳು ಮತ್ತು ಅವುಗಳು ಕಟ್ಟಿಕೊಂಡಿರುವ ಏರ‍್ಪಾಟುಗಳು ಬುಡಮಟ್ಟದಲ್ಲಿ ಮನುಶ್ಯತನವನ್ನು ಅಲುಗಾಡಿಸಲು ತೊಡಗಿವೆ. ಅಲ್ಲದೆ ಈ ಏರ‍್ಪಾಟುಗಳು ಈ ನೆಲದ ತುಂಬಿರುವ ಬೇರ‍್ಮೆಯ ಮತ್ತು ಹಲತನದ ಅಳಿವಿಗೆ ಕಾರಣವಾಗಿವೆ. ಹಾಗಾಗಿ ಈ ಏರ‍್ಪಾಟುಗಳು ನಮ್ಮನ್ನು ತನ್ನೇಳಿಗೆಯ ದಾರಿಯೆಡೆಗೆ ಹೋಗಲು ಬಿಡುತ್ತಿಲ್ಲ. ಹಾಗಾದರೆ, ಈ ಏರ‍್ಪಾಟುಗಳು ಏಕೆ ಏರ‍್ಪಡುತ್ತಿವೆ? ಹೊಸಗಾಲದ ಮಾರಾಟದ ಏರ‍್ಪಾಟುಗಳು ದುರಾಸೆಯನ್ನು ಸಲಹುತ್ತದೆ. ಹೆಚ್ಚು ಹೆಚ್ಚು ಮಂದಿ ಕೊಳ್ಳುಗರಾದಶ್ಟು ಮಾರುಕಟ್ಟೆಗೆ ಇಲ್ಲವೆ ಮರಾಟಗಾರರಿಗೆ ಗಳಿಕೆ. ಹೆಚ್ಚು ಹೆಚ್ಚು ಮಂದಿ ಬಂದಾಗ ಏರ‍್ಪಾಟುಗಳು ಬೇಕಾಗುತ್ತವೆ. ಮಾರಾಟವನ್ನು ಸಲಹಲು ಮತ್ತು ಕಾಪಾಡಿಕೊಂಡು ಹೋಗಲು ಆಳ್ಮೆಯು ಇಲ್ಲವೆ ಅದರ ಏರ‍್ಪಾಟುಗಳು ಕಾಲಿಡುತ್ತವೆ. ದುರಾಸೆಯನ್ನು ತೂಗಿಸಿಕೊಂಡು ಹೋಗಲು ಈ ಏರ‍್ಪಾಟುಗಳು ತಲೆಯೆತ್ತುತ್ತವೆ. ಹಾಗಾಗಿ, ಇಂತಹ ಏರ‍್ಪಾಟುಗಳು ಮಾನವೀಯತೆಗೆ ತಕ್ಕಮೆಯನ್ನು ಇಲ್ಲವೆ ಬೆಲೆಯನ್ನು ನೀಡುವುದಿಲ್ಲ. ಇಲ್ಲಿ ಮಾನವೀಯತೆಯೆಂದರೆ ಶೂದ್ರ ಮತ್ತು ಬ್ರಾಹ್ಮಣವನ್ನು ಹದವಾದ ತೆರೆದಲ್ಲಿ ಬಳಸಿಕೊಂಡು ಹೋಗುವ ಒಂದು ಪಾಡು ಎಂದು ತಿಳಿಯಬಹುದು

ಶನಿವಾರ, ಮೇ 21, 2016

ಎತ್ತೆತ್ತಲ್...

ಹತ್ತಿ ಮರವ ಕಿತ್ತ ಹಣ್ಣನು
ಕಚ್ಚಿ ತಿನದಿದ್ದೊಡೆ
ಎತ್ತಿ ಮುದ್ದಾಡಲ್ ಮನೆಯೊಳ್
ಹೆತ್ತ ಮಕ್ಕಳ್ ಇಲದಿದ್ದೊಡೆ
ಮತ್ತೆಂತಯ್ಯ ನನ್ನ ಕಾಣ್ಕೆ ಮತ್ತಿತಾಳಯ್ಯ
ಎತ್ತೆತ್ತಲ್ ನಿನ್ನ ಕಾಣದಿದ್ದೊಡೆ

ಶನಿವಾರ, ಏಪ್ರಿಲ್ 30, 2016

’ರಾಶ್ಟ್ರೀಯತೆ’ಯ ಬಗೆಗಿನ ಚರ‍್ಚೆಗಳು - ಒಂದು ಸೀಳುನೋಟ

ಇತ್ತೀಚೆಗೆ ಕೆಲವು ಚಿಂತಕರು ’ರಾಶ್ಟ್ರೀಯತೆ’ ಎಂಬುದನ್ನು ಈ ನೆಲದ ಬೇರ‍್ಮೆ(Diversity)ಗಳಲ್ಲಿ ಹುಡುಕಲು ನೋಡುತ್ತಿದ್ದಾರೆ. ಹಾಗೆ ಮಾಡುವಾಗ ಇಂಡಿಯಾದ ನೆಲದಲ್ಲಿರುವ ಹಲವು ತೆರನಾದ ಬೇರ‍್ಮೆಗಳನ್ನು ಅವರು ಬರಹಕ್ಕಿಳಿಸುತ್ತಾ ಹೋಗುತ್ತಾರೆ. ಹೀಗೆ ಬೇರ‍್ಮೆಗಳನ್ನು ಬರಹಕ್ಕೆ ಇಳಿಸುವುದರಿಂದ ಅವುಗಳನ್ನು ಗುರುತಿಸಿದ ಹಾಗೆ ಆಗುತ್ತದೆಯೇ ಹೊರತು ’ರಾಶ್ಟ್ರೀಯತೆ’ಯನ್ನು ವಿವರಿಸಲಾಗುವುದಿಲ್ಲ. ಆದ್ದರಿಂದ ಬೇರ‍್ಮೆಗಳ ಮೂಲಕ ’ರಾಶ್ಟ್ರೀಯತೆ’ಯನ್ನು ಕಲ್ಪಿಸಿಕೊಳ್ಳುವುದು ಮಂದಿಗೆ ತೊಡಕು ತೊಡಕಾಗಿದೆ. ಅಲ್ಲದೆ ’ದೇಶ’ ಮತ್ತು ’ರಾಶ್ಟ್ರ’ ಎಂಬ ಪದಗಳನ್ನು ಒಂದರ ಬದಲು ಇನ್ನೊಂದನ್ನು ಸಲೀಸಾಗಿ ಬಳಸುವುದರಿಂದ ಚಿಂತನೆಗಳಲ್ಲಿ ಗೊಂದಲಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ರಾಶ್ಟ್ರೀಯತೆಯನ್ನು ಸರಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ.

ಮೊದಲನೆಯದಾಗಿ, ’ದೇಶ’ ಎಂಬುದನ್ನು ’country’ ಎಂಬುದಕ್ಕೂ, ’ರಾಶ್ಟ್ರ’ ಎಂಬುದನ್ನು ’Nation’ ಎಂಬುದಕ್ಕೂ ಬಳಸುವುದು ಸರಿ. ಅಲ್ಲದೆ ’ದೇಶ’ ಮತ್ತು ’ರಾಶ್ಟ್ರ’ ಎಂಬೆರಡು ಪದಗಳಲ್ಲಿರುವ ಬೇರೆತನವನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ದೇಶ ಎಂಬುದು ಆ ’ನೆಲ’ವನ್ನಶ್ಟೆ ಸೂಚಿಸುತ್ತದೆ ಆದರೆ ’ರಾಶ್ಟ್ರ’ ಅಂದರೆ ’ನೇಶನ್’ ಎಂಬುದು ಸೂಚಿಸುವುದು ನೆಲವನ್ನಲ್ಲ. ಅದರ ಗುರಿಗಳು ಬೇರೆಯೇ ಆಗಿವೆ.

ಎರಡೆನೆಯದಾಗಿ, ನೇಶನ್ ಎಂಬುದಕ್ಕೆ ಕನ್ನಡವೂ ಸೇರಿದಂತೆ ಇಂಡಿಯಾದ ಇತರೆ ನುಡಿಗಳಲ್ಲಿ ಸರಿಯಾದ ಪದವೇ ಇಲ್ಲ. ಅಂದರೆ ಈ ತಿಳುವಳಿಕೆ ಇಂಡಿಯ ದೇಶದಲ್ಲಿ/ನೆಲದಲ್ಲಿ ಹುಟ್ಟಿದ್ದಲ್ಲ; ಇದು ಹುಟ್ಟಿದ್ದು ಯೂರೋಪಿನ ನೆಲದಲ್ಲಿ. ಈ ತಿಳುವಳಿಕೆಯನ್ನು ಎರವಲು ಪಡೆದುಕೊಂಡು ಸಂಸ್ಕ್ರುತದ ’ರಾಶ್ಟ್ರ’ ಎಂಬ ಪದವನ್ನು ’ನೇಶನ್’ ಎಂಬುದಕ್ಕೆ ಸಾಟಿಯಾಗಿ ಬಳಸುವ ಪರಿಪಾಟ ಬೆಳೆದು ಬಂದಿದೆ. ಯೂರೋಪಿನಲ್ಲಿ ಹುಟ್ಟಿ ಬೆಳೆದ ಈ ನೇಶನ್ ಎಂಬುದನ್ನು ಒಂದು ನೆಮ್ಮು(religion), ಒಂದು ಜಾತಿ, ಒಂದು ನಡವಳಿ, ಒಂದು ಹಳಮೆ, ಒಂದು ನುಡಿಯನ್ನು ನೆಚ್ಚಿಕೊಂಡು ವಿವರಿಸಲು ಆಗುವುದಿಲ್ಲ. ಹಾಗೆ ವಿವರಿಸಲು ಹೋದರೆ ಇವತ್ತಿನ ಇಂಡಿಯ ಸೇರಿದಂತೆ ಹಲವು ’ನೇಶನ್’ಗಳ ಏರ್ಪಾಟುಗಳನ್ನು ಹೇಗೆ ವಿವರಿಸುತ್ತೀರಿ?
ಆದ್ದರಿಂದ ನೇಶನ್ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ನಾವು ರಬೀಂದ್ರನಾತ್ ಟಾಕೂರ್ ಅವರ ಚಿಂತನೆಗಳ ಮೊರೆ ಹೋಗಬೇಕಾಗುತ್ತದೆ. ಅವರು ತಮ್ಮ ’ನ್ಯಾಶನಾಲಿಸಮ್’[Nationalism - Rabindranath Tagore, 1917] ಎಂಬ ಹೊತ್ತಗೆಯಲ್ಲಿ ಹೀಗೆ ಹೇಳಿದ್ದಾರೆ - ’When this organization of politics and commerce, whose other name is Nation’ . ಇದರಲ್ಲಿ ನಮಗೆ ನೇಶನ್ ಎಂಬುದರ ಸರಿಯಾದ ಹುರುಳು ಸಿಗುತ್ತದೆ. ಅದೇನೆಂದರೆ ಆಳ್ಮೆ(ರಾಜಕೀಯ) ಮತ್ತು ಕೊಳುಕೊಡೆ(ವಾಣಿಜ್ಯ)ಗಳ ಒಂದು ಕೂಟಗೆಯೇ ನೇಶನ್ ಎಂಬುದನ್ನು ಇಲ್ಲಿ ಮನಗಾಣಬಹುದು. [ಇಲ್ಲಿ ’ಕೊಳುಕೊಡೆ’ ಎಂಬ ಪದವನ್ನು ಹಣಕಾಸಿನಿಂದ ನಡೆಯುವ ಸರಕುಗಳ ’ಮಾರಾಟ ಮತ್ತು ಅದರ ಏರ‍್ಪಾಟು’ ಎಂದು ತಿಳಿದುಕೊಳ್ಳಬೇಕು]

ಮೂರನೆಯದಾಗಿ, ನೇಶನ್ ಎಂಬುದರ ಗುರಿ ಈ ಎರಡು ಎಂಜಿನ್ಗಳಾದ ಅಂದರೆ ಆಳ್ಮೆ ಮತ್ತು ಕೊಳುಕೊಡೆಗಳನ್ನು ಹೇಗೆ ಚೆನ್ನಾಗಿ ನಡೆಸುವುದು ಎಂಬುದೇ ಆಗಿರುತ್ತದೆ. ಇದರಲ್ಲಿ ನೇರವಾಗಿ ಮಾನವೀಯ ಅಂಶಗಳಾದ ನುಡಿ, ನಡವಳಿ ಇವುಗಳಿಗೆ ಬೆಲೆಯಿಲ್ಲ. ಇಂಡಿಯಾದಲ್ಲಿ ಈ ಎರಡು ಎಂಜಿನ್ಗಳನ್ನು ದೆಹಲಿಯ ಆಳ್ವಿಕೆಯು ತನ್ನ ಅಂಕೆಯಲ್ಲಿಟ್ಟುಕೊಂಡಿದೆ. ರಾಜ್ಯಗಳ ಆಳ್ವಿಕೆಗಳು ಅವುಗಳನ್ನು ಪಾಲನೆ ಮಾಡುವುದಕ್ಕಶ್ಟೆ ಇರುವಂತೆ ಇವೆ. ಆಳ್ಮೆ ಮತ್ತು ಹಣಕಾಸಿಗೆ ನಂಟಿರುವ ಯಾವುದೇ ಕಟ್ಟಲೆಗಳನ್ನು ಕಟ್ಟುವುದರಲ್ಲಿ ಮತ್ತು ಅವುಗಳನ್ನು ರೂಪಿಸುವಲ್ಲಿ ಹೆಚ್ಚಾಗಿ ದೆಹಲಿ (ನೇಶನ್ ಎಂಬುದರ ಕೇಂದ್ರ) ಆಳ್ವಿಕೆಯ ಕಯ್ವಾಡವಿದೆ. ಸಂವಿದಾನದ ಪ್ರಕಾರವಾಗಿ ಇಂಡಿಯ ಎಂಬುದನ್ನು ಒಂದು ಒಪ್ಪುಕೂಟವೆಂದು ಹೇಳಿದ್ದರೂ ಒಪ್ಪುಕೂಟದ ಗುಣಗಳನ್ನು ಅದು ಹೊಂದಿಲ್ಲ.ಅದರ ಬದಲು ಹೆಚ್ಚಾಗಿ ’ನೇಶನ್’ ಎಂಬುದರ ಗುಣಗಳನ್ನು ಹೊಂದಿದೆ. ಅಂದರೆ ಆಳ್ಮೆ ಮತ್ತು ಕೊಳುಕೊಡೆಗಳನ್ನು ಒಂದು ಕೇಂದ್ರ ತಾಣದಿಂದ ನಿಯಂತ್ರಿಸಲಾಗುತ್ತಿದೆ.

ಯುವ ಚಿಂತಕರಾದ ಕಿರಣ್ ಬಾಟ್ನಿಯವರು ತಮ್ಮ ’The Pyramid of Corruption’ [Kiran Batni, 2014] ಎಂಬ ಹೊತ್ತಗೆಯಲ್ಲಿ ಬ್ರಿಟಿಶರು ಬರುವುದಕ್ಕೆ ಮುಂಚೆ ’ಇಂಡಿಯ’ ಎಂಬ ನೇಶನ್ ಇರಲಿಲ್ಲ. ಬ್ರಿಟಿಶರು ತಮ್ಮ ಗಳಿಕೆಗಾಗಿ ಈ ’ಇಂಡಿಯನ್ ನೇಶನ್’ ಎಂಬುದನ್ನು ಹುಟ್ಟುಹಾಕಿದರು ಎಂದು ಹೇಳುತ್ತಾರೆ. ಈ ನೇಶನ್ ಎಂಬುದು ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುವ ಹಲವು ಕಾಯ್ದೆ-ಕಾನೂನುಗಳನ್ನು ಅವರು ಮಾಡಿದರು. ಅಲ್ಲದೆ ಈ ನೇಶನ್ ಚೆನ್ನಾಗಿ ಕೆಲಸ ಮಾಡಿದಶ್ಟು ಹೆಚ್ಚು ಗಳಿಕೆ ಬ್ರಿಟಿಶರಗೆ ಆಗುತ್ತಿತ್ತಲ್ಲದೆ ಈ ನೆಲದ ಸಾಮಾನ್ಯ ಮಂದಿಯ ಏಳಿಗೆಯಲ್ಲ. ಈಗಲೂ ಹಾಗೆಯೇ ಆಗಿದೆ; ಆದರೆ ಬ್ರಿಟಿಶರ ಜಾಗಕ್ಕೆ ದೆಹಲಿ ಆಳ್ವಿಕೆ ನಡೆಸುತ್ತಿರುವವರು ಬಂದು ಕೂತಿದ್ದಾರೆ. ದೆಹಲಿ ಆಳ್ವಿಕೆಯಲ್ಲಿ ಯಾರ ಕಯ್ ಮೇಲಾಗಿದಿಯೋ ಅವರಿಗೆ ಈ ನೇಶನ್ನಿನಿಂದ ಬಳಕೆ ಮತ್ತು ಗಳಿಕೆಗಳೆರಡೂ ಇವೆ. ಹಾಗೆ ನೋಡಿದರೆ ದೆಹಲಿಯ ಆಳ್ವಿಕೆಯಲ್ಲಿ ಕನ್ನಡಿಗರ ಪಾಲು ತುಂಬಾ ಕಡಿಮೆ.

ಆದರೆ ಈ ನೇಶನ್ ಎಂಬುದನ್ನು ಇಂಡಿಯದಂತಹ ಹಲತನವಿರುವ, ಬೇರ‍್ಮೆಯಿರುವ ನೆಲದಲ್ಲಿ ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಅದರ ಸ್ವರೂಪವೂ ಹೇಗಿರಬೇಕು ಎಂಬುದರ ಬಗ್ಗೆ ಚರ‍್ಚೆಗಳು ನಡೆಯಬೇಕಾಗಿದೆ. ಯೂರೋಪಿನಲ್ಲಿ ನುಡಿಯನ್ನು ಮುನ್ನೆಲೆಯಲ್ಲಿರಿಸಿ ಕಟ್ಟಿರುವ ನೇಶನ್ಗಳು ನಮ್ಮ ಕಣ್ಣಿಗೆ ರಾಚುತ್ತವೆ. ಅವುಗಳಿಂದ ನಾವು ಕಲಿತುಕೊಳ್ಳಬೇಕಾದುದು ಬಹಳಶ್ಟಿದೆ. ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತ ಮುಂದೆ ಮುಂದೆ ನೋಡುತ್ತಾ ನಮ್ಮ ನಾಳೆಗಳನ್ನು ಕಟ್ಟಿಕೊಳ್ಳಬೇಕಾಗಿದೆ.

ಬುಧವಾರ, ಮಾರ್ಚ್ 09, 2016

...ಎಡೆಬಿಡದೆ

ಬರತನ್ ಎಂಬರ್ ಎನ್ನ
ಅರಿತಮನ್ ಅಗೆಯುತಿರುವೆನ್
ಇರಿತಮನ್ ಬಗೆಯಲಾರೆನ್
ಹಿರಿತನದಿಂ ಅನಿಸುಂಗಳ ಅರುಹುವೆನ್
ಸಿರಿತನಮ್ ಅರಿದಲ್ಲಮ್ ಎನಗೆ
ಒರೆತನಮ್ ಹಿರಿದೆನಗೆ ಅರಿವಿನ
ಕೊರತೆಯನ್ ನೀಗಿಸಲ್ ದೂಸರಿನ
ಒರತೆಯನ್ ಅರಸುತಿರುವೆನ್
...................ಎಡೆಬಿಡದೆ

ಶನಿವಾರ, ಫೆಬ್ರವರಿ 06, 2016

'ಕಾವ್ಯ'ದ ಬಗೆಗಿನ ವಾದ

ಸಾಹಿತಿಗಳಲ್ಲಿ ಇಲ್ಲವೆ ಸಾಹಿತ್ಯ ವಲಯದಲ್ಲಿ ಈ ಬಗೆಯ ಒಂದು ವಾದವಿದೆ:-
'ಕಾವ್ಯ' ಎಂಬುದು ಸುಲಬದಲ್ಲಿ ದಕ್ಕುವ ಹಾಗೆ ಇರಬಾರದು. ಅದನ್ನು ಅರ್ತ ಮಾಡಿಕೊಳ್ಳುವುದಕ್ಕೆ ಆ ಕಾವ್ಯದ ಓದುಗನು ಹೆಣಗಾಡಬೇಕು. ಆದ್ದರಿಂದ ಸಂಸ್ಕ್ರುತದ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟು ಆ ಕಾವ್ಯವು ಕಶ್ಟವಾಗುತ್ತಾ ಹೋಗುತ್ತದೆ. ಆದ್ದರಿಂದ ಕಾವ್ಯದ 'ಕಾವ್ಯಾತ್ಮಕ' ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.
ಇದಕ್ಕೆ ನನ್ನ ಉತ್ತರ:-
ಈ ವಾದವನ್ನೇ ಮುಂದುವರೆಸಿ ಹೇಳುವುದಾದರೆ, ಬರೀ ಸಂಸ್ಕ್ರುತ ಪದಗಳನ್ನೇ ಬಳಸಿ ಕನ್ನಡದಲ್ಲಿ ಕಾವ್ಯವನ್ನು ಕಟ್ಟಿದರೆ ಅದನ್ನು ಅರ್ತ ಮಾಡಿಕೊಳ್ಳಲು ಕನ್ನಡಿಗರಿಗೆ ಆಗುವುದೇ ಇಲ್ಲ. ಆದ್ದರಿಂದ ಯಾವ ಕಾವ್ಯವು ಕನ್ನಡಿಗರಿಗೆ ತಿಳಿಯುವುದಿಲ್ಲವೊ/ಮುಟ್ಟುವುದಿಲ್ಲವೊ ಅದೇ 'ಕಾವ್ಯ' ಅನಿಸಿಕೊಳ್ಳುತ್ತದೆ. ಹಾಗಾಗಿ ಮೇಲಿನ ವಾದದಲ್ಲಿರುವ ವಿಪರ್ಯಾಸವನ್ನು ನಾವು ಗಮನಿಸಬಹುದು.
ಸಮಾದಾನವಾಗಿ ಹೇಳುವುದಾದರೆ, ಹವ್ದು - ಸಾಹಿತಿಗಳ ಮೇಲಿನ ವಾದದಲ್ಲಿ ಕೊಂಚ ಮಟ್ಟಿಗೆ ಹುರುಳಿದೆ. ಅಂದರೆ ಕಾವ್ಯ ಎನ್ನುವುದು ನಮ್ಮನ್ನು ಕಾಡಬೇಕು. ಅದರಲ್ಲೇನೊ ಒಂದು ವಿಶಯವು ಗುಟ್ಟಾಗಿರಬೇಕು. ಅದು ಕಶ್ಟವಾಗಿದ್ದಶ್ಟು ನಮಗೆ ಸವಾಲನ್ನು ಒಡ್ಡುತ್ತದೆ. ಆದರೆ ಇಂತಹವು ಕಾವ್ಯದ ಒಂದು ಬಗೆಯಶ್ಟೇ. ಇಂತಹ ಬಗೆಯೊಂದೇ 'ಕಾವ್ಯ'ವಲ್ಲ ಎಂಬುದನ್ನು ಗಮನಿಸಬಹುದು.
ಅಲ್ಲದೆ, ಈ ಬಗೆಯ ಕಾವ್ಯಕ್ಕೆ ಸಂಸ್ಕ್ರುತ ಪದಗಳ ಮೊರೆ ಹೋಗಬೇಕೆನ್ನುವುದು ಅಶ್ಟು ಸರಿಯಲ್ಲ. ಅದನ್ನು ನಾವು ಕನ್ನಡದ ಪದಗಳನ್ನೇ ಹೊಸ ಬಗೆಯಲ್ಲಿ ದುಡಿಸಿಕೊಳ್ಳುವ ಚಳಕಗಳನ್ನು ಕಂಡುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬಹುದು.
ಕೆಲವು ಸಾಹಿತಿಗಳು ಹೇಳುವಂತೆ ಸಿನಿಮಾ ಹಾಡುಗಳಿಗೆ ಅಂತಹ 'ಕಾವ್ಯಾತ್ಮಕ' ಗುಣವಿರುವುದಿಲ್ಲ. ಹವ್ದು -ಅದು ಅಲ್ಲಿ ಬೇಕಾಗಿಲ್ಲ, ಯಾಕಂದರೆ ಅದಕ್ಕೆ 'ಸಿನಿಮಾ'ದ ಬೆಂಬಲವಿದೆ. ಅದು ಆ ಹೊತ್ತಿಗೆ ನೋಡುಗನನ್ನು ತಣಿಸಿದರೆ ಸಾಕು.
ಕಾವ್ಯದ ಎಲ್ಲ ಬಗೆಗಳೂ/ರೂಪಗಳೂ ನಮಗೆ ಬೇಕು.

ಗುರುವಾರ, ಫೆಬ್ರವರಿ 04, 2016

ನಲ್ಗೊಳದ ಮೊಗದೊಳ್...

ನಲ್ಗೊಳದ ಮೊಗದೊಳ್
ನಸುಗೆಂಪಿನ ನನೆಹಲ್ಮರೆಯ
ನುಣ್ಣಿಂಪಿನ ಬಂಡನು ನೆನೆ
ನೆನೆದು ಬಗೆ ಸೊಂಪಾಗಿರಲ್

ಕೊಳಮೊಗದ ಚೆಲುವನೀರಲಿ
ಅಲೆನಗುವು ಮೆಲ್ಲಗೇಳುತಿರಲ್
ಒಲುಮೆ ಹೆರೆಯನು ಮಾರ‍್ವೊಳೆದು
ಬಳುಕುವನು ಸುಂಯ್ಯೆಲರ್ ಬೀಸುತಿರಲ್

ಶುಕ್ರವಾರ, ಜನವರಿ 08, 2016

Palatalization of *k- to c- in Tamil



From Dravidian Etymological Dictionary. 
PDr *k- is palatalized in Tamil before front vowels (an approximate statement); Tamil, therefore, in many forms has the initial phoneme c- when the reconstructed PDr form would have k-.

From the following table, its evident that Kannada preseves Proto Dravidian's (PDr) *k- as it is whereas Tamil has switched to 'c-'



However, when 'k' is followed by pattern [front vowel][retroflex], switching to 'c-' doesn't occur in Tamil.

Kannada  Tamil   English
kēḷ            kēḷ       to ask, to hear

Here ē is front vowel
        ḷ is a retroflex

ಮಂಗಳವಾರ, ನವೆಂಬರ್ 03, 2015

ನೆಲದ ಸೊಗಡು

ಮರಾಟಿನಾಡಿನಲ್ಲೊಂದು ಮನೆಯ ಮಾಡಿ ಮರಾಟಿ ಕಲಿಯದಿದ್ದೊಡೆ ಅದೆಂತಯ್ಯ?
ತಮಿಳುನಾಡಿನಲ್ಲೊಂದು ಮನೆಯ ಮಾಡಿ ತಮಿಳು ಕಲಿಯದಿದ್ದೊಡೆ ಅದೆಂತಯ್ಯ?
ಕನ್ನಡನಾಡಿನಲ್ಲೊಂದು ಮನೆಯ ಮಾಡಿ ಕನ್ನಡ ಕಲಿಯದಿದ್ದೊಡೆ ಅದೆಂತಯ್ಯ?
ಆಯ ನೆಲದ ಸೊಗಡಿಗೆ ಹೊಂದಿಕೊಂಡು ಬಾಳದ ಆ ಬಾಳು ಆ ಬದುಕು ಎಂತಯ್ಯ
ನಿಮ್ಮ ಆಣೆ! ಆ ಬದುಕಿಗೆ ಬೆಂಕಿ ಹಚ್ಚಯ್ಯ ಮತ್ತಿತಾಳಯ್ಯ
(ಅಕ್ಕನವರ ಸೂಳ್ನುಡಿಯನ್ನು ಬಳಸಿಕೊಂಡು...)

ಅರಿವು-ಮರೆತ

ಅರಿಯುವುದು ಮರೆಯುವುದಕ್ಕಲ್ಲವೆ?
ಮರೆಯುವುದು ಅರಿಯುವುದಕ್ಕಲ್ಲವೆ?
ಅರಿತು ಮರೆವ ಮರೆತು ಅರಿವ ಈ
ಪರಿಗೆ ಬೆರಗಾದೆ ಕಾಣಾ
ನೆರೆಯರಿತು-ಮರೆವ ಮರುಪಾಳಿಯಲಿ
ನಲುಗಬೇಕಲ್ಲವೆ?
ನಲುಗಿ ನಿಲ್ಲಬೇಕಲ್ಲವೆ ಮತ್ತಿತಾಳಯ್ಯ

"ನೆನೆವುದೆನ್ನ ಮನಂ ಬನವಾಸಿ ದೇಸಮಂ" - ಇದರ ಬಗ್ಗೆ

"ನೆನೆವುದೆನ್ನ ಮನಂ ಬನವಾಸಿ ದೇಸಮಂ" - ಇದರ ಬಗ್ಗೆ
------------------------------------------------------
ದೇಸಮಂ ಅನ್ನುವುದನ್ನು 'ದೇಸಮಮ್' ಎಂದು ಹಲವರು ಓದುತ್ತಾರೆ. ಆದರೆ ಅದು 'ದೇಸಮಮ್' ಅಲ್ಲ, 'ದೇಸಮನ್'
'ದೇಸಮನ್' ಬಿಡಿಸಿದರೆ 'ದೇಸಮ್+ಅನ್' ಅಂದರೆ ಹೊಸಗನ್ನಡದಲ್ಲಿ 'ದೇಸವನ್ನು' ಎಂದಾಗುತ್ತದೆ.
ಹೊಸಗನ್ನಡ: ಎನ್ನ ಮನವು ಬನವಾಸಿ ದೇಸವನ್ನು ನೆನೆಯುವುದು


ತೀರಮೆಗಳು:-
೧. ಹೊಸಗನ್ನಡದ 'ಅನ್ನು' ಎಂಬ ಪತ್ತುಗೆ ಒಟ್ಟು (ವಿಬಕ್ತಿ ಪ್ರತ್ಯಯ) ಹಳೆಗನ್ನಡದಲ್ಲಿ 'ಅನ್' ಎಂದಾಗಿತ್ತು.
೨. ಹಳಗನ್ನಡದಲ್ಲಿ '೦' ಎನ್ನು 'ನ್' ಎಂದು ಬರೆಯುವುದಕ್ಕೂ ಬಳಸಲಾಗಿದೆ.
ಹಳಗನ್ನಡದ 'ಅಮ್' ಎನ್ನುವುದು ಹೊಸಗನ್ನಡದಲ್ಲಿ 'ಅನ್ನು' ಆಗಿದೆ ಎಂದು ಕೆಲವರು ಹೇಳುತ್ತಾರೆ.
ಆದರೆ ಹಳಗನ್ನಡದ 'ಅನ್' ಎಂಬುದೇ ಹೊಸಗನ್ನಡದಲ್ಲಿ 'ಅನ್ನು' ಆಗಿರುವ ಸಾದ್ಯತೆ ಹೆಚ್ಚು ಕಾಣುತ್ತಿದೆ.
ಅನ್ (ಹ) -> ಅನ್ನು (ಹೊ) - ಇದಕ್ಕೆ ಹಲವು ಎತ್ತುಗೆಗಳನ್ನು ಕೊಡಬಹುದು.
ಕಣ್ (ಹ) -> ಕಣ್ಣು (ಹೊ)
ಪೊನ್(ಹ) -> ಹೊನ್ನು(ಹೊ)
ಕೊಲ್ (ಹ) -> ಕೊಲ್ಲು(ಹೊ)
ಹಳಗನ್ನಡಲ್ಲಿ ಅದು 'ಅಮ್' ಆಗಿದ್ದರೆ ಹೊಸಗನ್ನಡದಲ್ಲಿ ಅದು 'ಅಮ್ಮು' ಆಗಬೇಕಿತ್ತು

'ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿ

ತಮಿಳಿನ ’ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿಯಲ್ಲಿರುವ ಹಲವು ಪದಗಳು ಅದೇ ಹುರುಳಿನಲ್ಲಿ ಬಳಕೆಯಾಗಿವೆ. ಆದರೆ ಅಲ್ಲೆಲ್ಲ ತಮಿಳಿನ ಆಡುನುಡಿಯಲ್ಲಿರುವ ಪದಗಳು ಬಳಕೆಯಾಗಿಲ್ಲ. ತಮಿಳಿನ ಮೇಲೆ ಹಳಗನ್ನಡ ಒತ್ತು(influence) ಇತ್ತೇ ಎಂಬ ಕೇಳ್ವಿ ಇದರಿಂದ ಏಳುವುದು.
ಎತ್ತುಗೆಗೆ (ನನಗೆ ಕಂಡವು ಇಶ್ಟು..ಹುಡುಕಿದರೆ ಇನ್ನೂ ಸಿಗಬಹುದು):-
೧. ಮಕ್ಕಳ್ - ಇಂದಿನ ಕನ್ನಡದ ಆಡುನುಡಿಯಲ್ಲಿ ಇದನ್ನು ’children' ಎಂಬ ಹುರುಳಲ್ಲಿ ಬಳಸಲಾಗುತ್ತದೆ. ಇದೇ ಪದ ತಮಿಳಿನಲ್ಲಿ ’people' ಎಂಬ ಹುರುಳಿನಲ್ಲಿ ಇಂದು ಬಳಕೆಯಾಗುತ್ತಿದೆ. ಆದರೆ ತಿರುವಳ್ಳುವರ್ ಚಿಕ್ಕಮಕ್ಕಳ ಬಗ್ಗೆ ಮಾತು ಬಂದಾಗಲೆಲ್ಲಾ ಬಳಸುವುದು ’ಮಕ್ಕಳ್’ ಎಂದೇ.
೨ ಮನೆ - ಇಂದಿಗೂ ಕನ್ನಡದಲ್ಲಿ ’house/home' ಎಂಬ ಹುರುಳಿನಲ್ಲಿ ಬಳಕೆಯಲ್ಲಿದೆ. ಆದರೆ ತಮಿಳಿನ ಆಡುನುಡಿಯಲ್ಲಿ ’ವೀಟ್ಟು’ ಬಳಕೆಯಲ್ಲಿದೆ. ಆದರೆ ತಿರುವಳ್ಳುವರ್ ಬಳಸುವುದು ’ಮನೈ’ ಎಂದೇ.
೩. ನೀರ್ - ಇಂದಿಗೂ ಕನ್ನಡದಲ್ಲಿ ’water' ಎಂಬ ಹುರುಳಿನಲಿ ಬಳಕೆಯಲ್ಲಿದೆ. ಆದರೆ ತಮಿಳಿನಲ್ಲಿ ಇದಕ್ಕೆ ’ತಣ್ಣಿ’ ಎನ್ನುತ್ತಾರೆ. ಆದರೆ ತಿರುವಳ್ಳುವವರು ಬಳಸುವುದು ’ನೀರ್’ ಎಂದೇ.

ಹಿಂದೆ ತಿಳಿಸಿದಂತೆ ಮತ್ತಶ್ಟು ಸಿಕ್ಕ ಪದಗಳು:-
೪. ಕೆಯ್/ಗೆಯ್(ಮಾಡು) - ತಿರುವಳ್ಳುವರ್ ಬಳಸುವುದು ಇದಕ್ಕೆ ಸಾಟಿಯಾದ ತಮಿಳು ರೂಪ 'ಶೆಯ್'( ತೆಲುಗಿನ ಚೆಯ್/ಚೆಯ್ಯಿ). ತಪ್ಪಿಯೂ ತಿರುವಳ್ಳುವರ್ ಇವತ್ತಿನ ತಮಿಳಿನಲ್ಲಿ ಬಳಸುವ 'ಪಣ್' ಬಳಸುವುದೇ ಇಲ್ಲ. ಆದರೆ ಕನ್ನಡದಲ್ಲಿ ಇಂದಿಗೂ 'ಗೆಯ್',ಗೆಯ್ಮೆ, ಕೇಮೆ(ಕ್ಯಾಮೆ) ಬಳಸಲಾಗುತ್ತಿದೆ.
೫. ತಿನ್, ಉಣ್ - ತಿರುವಳ್ಳುವರ್ 'ತಿನ್' ಒಮ್ಮೆ ಮತ್ತು 'ಉಣ್' ಎಂಬುದನ್ನು ಹಲವು ಕಡೆ ಬಳಸಿದ್ದಾರೆ. ಇವತ್ತಿನ ತಮಿಳಿನಲ್ಲಿ 'ಸಾಪಟ್' ಹೆಚ್ಚಾಗಿ ಬಳಕೆಯಲ್ಲಿದೆ. ಆದರೆ ಕನ್ನಡದಲ್ಲಿ 'ಉಂಡ್ಯ', ತಿಂದ್ಯ, ಉಣ್ಣು (> ಊಟ), ತಿನ್ನು(>ತಿಂಡಿ, ತಿನಿಸು) ಬಳಕೆಗಳು ಹೆಚ್ಚಾಗಿ ಬಳಕೆಯಲ್ಲಿವೆ.